
ಹಾಸ್ಯನಟರುಗಳಲ್ಲಿ ಎರಡು ಬಗೆಯದ್ದಾಗಿದೆ ಕೇವಲ ತಮ್ಮ ಸಂಭಾಷಣೆಯಿಂದ ಜನರನ್ನು ನಗಿಸುವವರು ಹೆಚ್ಚಿನ ಹಾಸ್ಯನಟರಾಗಿದ್ದರೇ ಇನ್ನು ಕೆಲವೇ ಕೆಲವು ಹಾಸ್ಯನಟರನ್ನು ನೋಡಿದಾಕ್ಷಣವೇ ಬಿದ್ದು ಬಿದ್ದು ನಗಬೇಕೇನಿಸುತ್ತದೆ. ಅವರು ಪರದೆಯ ಮೇಲೆ ಸುಮ್ಮನೇ ಬಂದು ನಿಂತು ತಮ್ಮ ಆಂಗಿಕ ಅಭಿನಯದಿಂದಲೇ ಪ್ರೇಕ್ಷಕರಲ್ಲಿ ನಗೆಯನ್ನು ಉಕ್ಕಿಸಿಬಿಡುತ್ತಾರೆ. ಅಂತಹವರಲ್ಲಿ ಪ್ರಮುಖರೆಂದರೆ, ಕನ್ನಡದಲ್ಲಿ ನರಸಿಂಹರಾಜು, ದ್ವಾರಕೀಶ್ ಅವರಾದರೆ, ತಮಿಳಿನಲ್ಲಿ ಹುಟ್ಟು ಕನ್ನಡಿಗರೇ ಆಗಿದ್ದ ತಾಯ್ ನಾಗೇಶ್, ಹಿಂದಿಯಲ್ಲಿ ಜಾನೀ ಲಿವರ್ ಅಗ್ರಗಣ್ಯರು. ಇಂತಹ ಮೇರು ನಟರ ಸಾಲಿನಲ್ಲಿಯೇ ನಿಲ್ಲಬಹುದಾಗಿದ್ದ ಮತ್ತೊಬ್ಬ ನಟರೆಂದರೆ ಅದು ಅರವಿಂದ್ ಎಂದರೂ ತಪ್ಪಾಗಲಾರದು.
ಕೇವಲ ಅರವಿಂದ್ ಎಂದಾಕ್ಷಣ ಜನರಿಗೆ ಥಟ್ ಅಂತಾ ನೆನಪಾಗೋದಿಲ್ಲ. ಅದರೆ ಶಂಖನಾದ ಅರವಿಂದ್ ಅಥವಾ ಅನುಭವ/ಬೆಟ್ಟದ ಹೂ ಅರವಿಂದ್ ಎಂದಾಕ್ಷಣ ಎಲ್ಲರ ಮುಖದಲ್ಲಿಯೂ ಪರಿಚಾಯಾತ್ಮಕ ನಗು ಸಹಜವಾಗಿಯೇ ಮೂಡುತ್ತದೆ ಎಂದರೆ ಆ ಸಿನಿಮಾಗಳಲ್ಲಿ ಅ ನಟನ ಪರಕಾಯ ಪ್ರವೇಶದ ಅರಿವಾಗುತ್ತದೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕ್ ಮಾಚಿಕೊಪ್ಪ ಗ್ರಾಮದವರಾಗಿದ್ದ ಅರವಿಂದ್ ರಂಗಭೂಮಿ ಕಲಾವಿದರು. ಎಪ್ಪತ್ತರ ದಶಕದಲ್ಲಿ ಕಾಶೀನಾಥ್ ಅವರ ಅಪರೂಪದ ಅತಿಥಿಗಳು ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅಲ್ಲಿಂದ ಮುಂದೆ ಕಾಶೀನಾಥ್ ಅವರ ಗರಡಿಯಲ್ಲಿ ಒಂದು ರೀತಿಯ ನಿಲಯದ ಕಲಾವಿದರೇ ಆಗಿ ಹೋಗಿ ಅವರ ಅಪರಿಚಿತ ಅನುಭವ ಮುಂತಾದ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದರು.. ಖ್ಯಾತ ನಟ, ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದ ದಿವಂಗತ ಕಾಶಿನಾಥ್ ಅವರ ಬಹುತೇಕ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಪಾತ್ರದ ಮೂಲಕ ಜನರನ್ನು ಮನರಂಜಿಸುವ ಮೂಲಕ ಎಂಭತ್ತರ ದಶಕದಲ್ಲಿ ಬಹು ಬೇಡಿಕೆಯ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಎಂಭತ್ತರ ದಶಕದಲ್ಲಿ ಅರವಿಂದ್ ಅವರನ್ನೇ ಪ್ರಮುಖರನ್ನಾಗಿಸಿಕೊಂಡು ತೆರೆಗೆ ಬಂದ ಶಂಖನಾದ ಸಿನಿಮಾ ಅವರ ಚಿತ್ರಬದುಕನ್ನೇ ಬದಲಿಸಿತು ಎಂದರೂ ತಪ್ಪಾಗಲಾರದು. ವರ್ಣ ವ್ಯವಸ್ಥೆಯಲ್ಲಿ ದಲಿತ ಸಮುದಾಯದ ಬದುಕು ಬಿಚ್ಚಿಟ್ಟಿದ್ದು ಶಂಖನಾದ ಸಿನಿಮಾದ ದಾಸಯ್ಯನ ಪಾತ್ರ. ಅದರಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಕುರಿತು ಇರುವ ಮೌಢ್ಯತೆಯನ್ನು ಹೊಡೆದುಹಾಕಿ ಜಾತ್ಯತೀತೆಯನ್ನು ಎತ್ತಿಹಿಡಿದಿತ್ತು. ಗಾರೆ ಕೆಲಸ ಕೂಲಿ ಮಾಡುತ್ತಾ ಸಮಯವಿದ್ದಾಗ ದಾಸಯ್ಯನಾಗಿಯೂ ಜನಪದ ಪೌರೋಹಿತ್ಯವನ್ನು ನಿಭಾಯಿಸುತ್ತಿದ್ದ ದಲಿತ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ತಾನೇ ಮನೆ ಮನೆಗೂ ಹೋಗಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಪಾತ್ರದಲ್ಲಿ ಅತ್ಯಧ್ಭುತವಾಗಿ ನಟಿಸಿದ್ದರು. ಏಳು ರಾಷ್ಟ್ರಪ್ರಶಸ್ತಿ ಬಾಚಿಕೊಂಡ ಆ ಸಿನಿಮಾದ ಮೂಲಕ ಕೇವಲ ಅರವಿಂದ್ ಎಂದಾಗಿದ್ದವರು ರಾತ್ರೋ ರಾತ್ರಿ ಶಂಖನಾದ ಅರವಿಂದ್ ಆಗಿ ಪ್ರಖ್ಯಾತರಾಗಿ ಹೋದರು.





