ರಾಘವೇಂದ್ರ ಅಡಿಗ ಎಚ್ಚೆನ್.
ಮಹಿಳೆಯರ ಆತ್ಮಗೌರವ, ಧೈರ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಸಾರುವ ‘ಬ್ಯೂಟಿ’ ಚಿತ್ರದ ಟ್ರೈಲರ್ ಪತ್ರಕರ್ತರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಪತ್ರಿಕೆ ಮುಖ್ಯಸ್ಥ ಭಾಷಾ ಟ್ರೈಲರ್ ಅನಾವರಣಗೊಳಿಸಿದ್ದು, ಚಿತ್ರದ ವಿಭಿನ್ನ ಕಥಾಹಂದರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಕಲ್ಪವೃಕ್ಷ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪಿ. ಮುರಳಿ ಕೃಷ್ಣ ಅರ್ಪಿಸುತ್ತಿದ್ದು, ರಾಜಾ ರವಿ ಕುಮಾರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ತನುಜಾ ಮುರಳಿ ಕೃಷ್ಣ ನಿರ್ಮಾಪಕರಾಗಿದ್ದು, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ನಾಯಕನಾಗಿ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ. ಪಾತ್ರಕ್ಕಾಗಿ ರವಿಕಾಂತ್ ವಿಶೇಷವಾಗಿ ಭರತನಾಟ್ಯ ತರಬೇತಿ ಪಡೆದಿದ್ದಾರೆ. ಮಾತನಾಡಿದ ಮಹಾಲಕ್ಷ್ಮಿ, “ಒಬ್ಬ ವ್ಯಕ್ತಿಯ ನಿಜವಾದ ಸೌಂದರ್ಯ ಅವನ ಅಥವಾ ಅವಳ ಮನಸ್ಸಿನಲ್ಲಿದೆ. ಉತ್ತಮ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಬೆಂಬಲ ನೀಡಬೇಕು,” ಎಂದು ಮನವಿ ಮಾಡಿದರು.
ನಿರ್ದೇಶಕ ರಾಜಾ ರವಿ ಕುಮಾರ್ ಮಾತನಾಡಿ, “‘ಬ್ಯೂಟಿ’ ಕೇವಲ ಮನರಂಜನೆಯ ಚಿತ್ರವಲ್ಲ; ಉತ್ತಮ ಸಂದೇಶವನ್ನೂ ಹೊಂದಿದೆ. ಕನ್ನಡಿಗರು ಕನ್ನಡ ಸಿನಿಮಾಗಳನ್ನು ಹೆಚ್ಚು ಪ್ರೋತ್ಸಾಹಿಸಿದರೆ ಮಾತ್ರ ಚಿತ್ರರಂಗ ಮತ್ತಷ್ಟು ಬೆಳೆಯುತ್ತದೆ,” ಎಂದರು.

ಚಿತ್ರದ ಬಹುತೇಕ ಚಿತ್ರೀಕರಣ ಮೇಲ್ಕೋಟೆ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ನಡೆದಿದ್ದು, ಟ್ರೈಲರ್ನ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ. ಬಾಗೂರು ಟಾಕೀಸ್ ಮೂಲಕ ಬಾಗೂರು ಪ್ರಶಾಂತ್ ವಿತರಣೆ ಮಾಡುತ್ತಿರುವ ಈ ಚಿತ್ರ ಜುಲೈ 10ರಂದು ಮೊದಲ ಹಂತದಲ್ಲಿ ಸುಮಾರು 35 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ವಿ. ಮನೋಹರ್, ಕುಶಾಲ್ ಕೃಷ್ಣ, ಕುಸುಮ ಕೃಷ್ಣ, ಅನ್ನಪೂರ್ಣ, ಅಂಜನಾ, ಶಿವಮೊಗ್ಗ ರಾಮಣ್ಣ, ಮನ್ಮೋಹನ್, ಚಕ್ರವರ್ತಿ ದಾವಣಗೆರೆ, ಮಹೇಶ್ ಕುಕ್ಕೆ, ಹೇಮಂತ್ ಕುಮಾರ್, ಸಿದ್ದಾರ್ಥ್ ಕಾರಟಗಿ, ರಾಗ್ವೀರ್ ಸುರಾಗ ಹಾಗೂ ಬೇಬಿ ಆಯುಷ್ಕ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
-





