- ರಾಘವೇಂದ್ರ ಅಡಿಗ ಎಚ್ಚೆನ್.
ಮಂಡ್ಯದ ಯುವರೈತ ಚೇತನ್ಗೌಡ ಅವರು ನಾಯಕನಾಗಿ ನಟಿಸುತ್ತಿರುವ ದೇವಿ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ನಡೆಯುತ್ತಿದೆ, ಬಿಗ್ಬಾಸ್ ಬೆಡಗಿ ಭವ್ಯಗೌಡ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ದೇವಿ ಶೀರ್ಷಿಕೆಯಡಿ ಅಮ್ಮ ಅಂದ್ರೆ ತುಪ್ಪ, ಅಮ್ಮನ್ ಅಂದ್ರೆ ಹಾಲು ತುಪ್ಪಾ ಎನ್ನುವ ಅಡಿ ಬರಹವಿದೆ. ಚೇತನ್ಗೌಡ ಅವರೇ ಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಪ್ರಕಾಶ್ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಲಗ್ಗೆರೆಯ ಆಕಾಶ್ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದ ದರ್ಶನ್ರ ೫೦ ಅಡಿ ಎತ್ತರದ ಕಟೌಟ್ ಮುಂದೆ ಈ ಚಿತ್ರದ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ, ದಿಲೀಪ್ ಅವರು ಸಾಹಸ ದೃಶ್ಯವನ್ನು ಕಂಪೋಜ್ ಮಾಡುತ್ತಿದ್ದಾರೆ. ನಾಯಕ ಚೇತನ್ಗೌಡ ಹಾಗೂ ನೂರಾರು ಸಹ ಕಲಾವಿದರಲ್ಲದೆ ಹಾಸ್ಯನಟರಾದ ಹುಲಿ ಕಾರ್ತೀಕ್, ಜಗ್ಗ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಕೂಡ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು,

ಈ ವೇಳೆ ಚಿತ್ರೀಕರಣ ವೀಕ್ಷಿಸಲು ಆಗಮಿಸಿದ್ದ ಮಾಧ್ಯಮದ ಜತೆ ಮಾತನಾಡಿದ ನಾಯಕನಟ ಚೇತನ್ಗೌಡ ಸಾಧನೆ ಮಾಡಲೆಂದು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನೊಬ್ಬ ಸಂದರ್ಭದ ಸುಳಿಗೆ ಸಿಕ್ಕು ರೌಡಿಸಂಗೆ ಇಳಿಯುವ ಕಥೆಯಿದು, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರ್ತಿದೆ, ನಾನು ದರ್ಶನ್ ಅವರ ಅಭಿಮಾನಿ, ಚಿತ್ರದಲ್ಲೂ ದರ್ಶನ್ ಅವರ ಫ್ಯಾನ್ ಆಗೇ ನಟಿಸಿದ್ದೇನೆ, ಶಾಸ್ತ್ರಿ ಸಿನಿಮಾ ರಿರಿಲೀಸ್ ಆಗಿರುತ್ತೆ, ನಾಯಕ ಸಿನಿಮಾ ನೋಡಲು ಥೇಟರಿಗೆ ಬಂದಾಗ ವಿಲನ್ಗಳ ಜತೆ ನಡೆಯುವ ಫೈಟ್ ಸೀನನ್ನು ಇಲ್ಲಿ ಚಿತ್ರೀಕರಿಸುತ್ತಿದ್ದೇವೆ, ಶರತ್ಬಾಬು ಅವರು ಚಿತ್ರದ ಮೇನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಈಚೆಗೆ ಶಿವಮೊಗ್ಗ ಜೈಲಲ್ಲೂ ಒಂದು ಫೈಟ್ಸೀನ್ ಮಾಡಿಕೊಂಡು ಬಂದಿದ್ದೇವೆ, ಶಾಸ್ತ್ರಿ ನಿರ್ಮಾಪಕರಾದ ಅಣಜಿ ನಾಗರಾಜ್ ಕೂಡ ನಮಗೆ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು,

ಚಿತ್ರದ ನಿರ್ದೇಶಕ ಪ್ರಕಾಶ್ಕುಮಾರ್ ಮಾತನಾಡುತ್ತ ಇದು ಚಿತ್ರದ ಪ್ರಮುಖ ಸಾಹಸ ದೃಶ್ಯ, ಈಗಗಲೇ ಏಳೆಂಟು ದಿನಗಳ ಶೂಟಿಂಗ್ ಆಗಿದ್ದು ಇನ್ನೂ 45 ದಿನ ಬಾಕಿ ಇದೆ, ನಾಯಕ ದರ್ಶನ್ ಅಭಿಮಾನಿ, ಆತನ ಕೈಲಿ ಮಚ್ಚು ಹಿಡಿಸಿಲ್ಲ, ಆದರೆ ದರ್ಶನ್ ಅವರ ಮ್ಯನರಿಸಂ ಆತನಿಗಿರುತ್ತದೆ. ಬಹುತೇಕ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ, ಮಂಡ್ಯದಲ್ಲಿ 10 ದಿನ, ನಂತರ ಮತ್ತೆ ಶಿವಮೊಗ್ಗದಲ್ಲಿ ಚಿತ್ರೀಕರಿಸಲಾಗುವುದು ಎಂದರು,

ನಟ ಯಶ್ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರ ಮಾಡಿದ್ದೇನೆ, ಆರಂಭದಲ್ಲಿ ಕೆಟ್ಟವನಾಗಿದ್ದ ನಾನು ನಂತರ ಒಳ್ಳೆಯವನಾಗುತ್ತೇನೆ ಎಂದರು, ಹುಲಿ ಕಾರ್ತೀಕ್ ಮಾತನಾಡಿ ಇವತ್ತು ಸಿನಿಮಾಗಳು ನಡೆಯೋದೇ ಕಮ್ಮಿ, ಚೇತನ್ಗೌಡರಂಥ ನಟ, ನಿರ್ಮಾಪಕರು ಬೆಳೆಯಬೇಕು ಎಂದರು. ಉಳಿದಂತೆ ಜಗ ಮಮ್ಮಿ, ಕಾಕ್ರೋಚ್ ಸುಧಿ, ನಾಯಕಿಯ ಸ್ನೇಹಿತೆಯಾಗಿ ನಟಿಸಿರುವ ಶ್ರೇಯಾ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಆಕ್ಷನ್, ತಾಯಿ ಸೆಂಟಿಮೆಂಟ್ ಸೇರಿದಂತೆ ಹಲವವಾರು ಅಂಶಗಳನ್ನು ಒಳಗೊಂಡ ಚಿತ್ರವಿದು. ಅಜಿತ್ಕುಮಾರ್ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ, ಮಾಸ್ತಿ ಅವರ ಸಂಭಾಷಣೆ ದೇವಿ ಚಿತ್ರಕ್ಕಿದೆ.





