ಬಾಲಿವುಡ್ ಬ್ಯೂಟಿ, ಫಿಟ್ನೆಸ್ ರಾಣಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ, ನೀಲಿ ಚಿತ್ರದ ಪ್ರಕರಣದಲ್ಲಿ ಜೈಲು ವಾಸಿಯಾಗಿದ್ದು ಎಲ್ಲರಿಗೂ ಗೊತ್ತಿದೆ. 2021ರ ಸಮಯದಲ್ಲಿ ಅಶ್ಲೀಲ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 63 ದಿನ ಬಂಧಿಸಿ ಇಡಲಾಗಿತ್ತು. ಈ ಸಂದರ್ಭ ಆತ್ಮಹತ್ಯೆಯ ಯೋಚನೆ ಬಂದಿದ್ದ ಬಗ್ಗೆ ಈಗ ರಾಜ್ ಕುಂದ್ರಾ ಮಾತನಾಡಿದ್ದಾರೆ. ಆ ದಿನಗಳು ತನ್ನ ಜೀವನದ ಅತ್ಯಂತ ಕಷ್ಟಕರ ಹಂತ ಎಂದು ವಿವರಿಸಿದ್ದಾರೆ.
ಇದಕ್ಕೆ ಕಾರಣ ನೀಡಿರುವ ಅವರು, ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ ಕೊಡಲಿದ್ದಾರೆ ಎನ್ನುವ ಸುದ್ದಿ ಬಂತು. ಇದನ್ನು ಕೇಳಿ ನೆಲವೇ ಕುಸಿದು ಹೋದಂತಾಗಿತ್ತು. ಸುದ್ದಿ ತಿಳಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದಿದ್ದಾರೆ ರಾಜ್ ಕುಂದ್ರಾ.
ಎಬಿಪಿ ನ್ಯೂಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿರುವ ರಾಜ್ ಕುಂದ್ರಾ, ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ನನ್ನನ್ನು ತೊರೆದಿದ್ದಾಳೆ ಮತ್ತು ಡಿವೋರ್ಸ್ ಪಡೆದುಕೊಳ್ಳಲಿದ್ದಾಳೆ ಎನ್ನುವ ಸುದ್ದಿ ಬಂತು. ನಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಏನಾಗುತ್ತಿದೆ ಎಂದು ನನಗೆ ಗೊತ್ತಾಗಲಿಲ್ಲ. ಆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ, ಈ ಸುದ್ದಿ ಕೇಳಿ ಶಾಕ್ ಆಯ್ತು. ಆದ್ದರಿಂದ ನನ್ನ ಜೀವನವನ್ನು ಕೊನೆಗೊಳಿಸಲು ಬಯಸಿದ್ದೆ. ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಾನು ಭಾವಿಸಿದೆ. ನನ್ನ ಹೆಂಡತಿ ಮತ್ತು ನನ್ನ ಕುಟುಂಬ ನನಗೆ ಅತ್ಯಂತ ಮುಖ್ಯ, ನಾನು ನನ್ನ ಜೀವನವನ್ನು ತ್ಯಜಿಸಲು ಬಯಸುತ್ತೇನೆ. ನಾನು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ ಎಂದಿದ್ದಾರೆ ರಾಜ್ ಕುಂದ್ರಾ.
ಮಾಧ್ಯಮಗಳಲ್ಲಿ ಡಿವೋರ್ಸ್ ಸುದ್ದಿ ಕೇಳುತ್ತಲೇ, ಶಿಲ್ಪಾ ಶೆಟ್ಟಿ ಅವರೂ ಆಘಾತಕ್ಕೆ ಒಳಗಾಗಿದ್ದರು. ನಾನು ಈ ಸುದ್ದಿಯನ್ನು ನಿಜ ಎಂದು ನಂಬಿ ಆಕೆ ಜೊತೆ ಫೋನ್ನಲ್ಲಿ ಮಾತನಾಡಿದೆ. ಇದು ನಿಜವಾಗಿ ಇದ್ದರೆ ಸಾಯುವ ನಿರ್ಧಾರ ಮಾಡಿದ್ದೆ. ಆಕೆ, "ಇದು ನಾನ್ಸೆನ್ಸ್ ನ್ಯೂಸ್. ನಾನು ನಿಮ್ಮ ಜೊತೆ ಇದ್ದೇನೆ. ನಾನು ನಿನ್ನನ್ನು ನಂಬುತ್ತೇನೆ. ಅದರ ಬಗ್ಗೆ ಚಿಂತಿಸಬೇಡ" ಎಂದು ಹೇಳಿದಳು. ಆಗ ನಾನು ನಿರಾಳನಾದೆ ಎಂದಿದ್ದಾರೆ ರಾಜ್ ಕುಂದ್ರಾ.
ಶಿಲ್ಪಾಳ ಈ ಮಾತು ನನಗೆ ಧೈರ್ಯ ತುಂಬಿತು. ಯಾರು ಏನೇ ಮಾಡಿದರೂ ನನ್ನ ಪತ್ನಿ ನನ್ನ ಜೊತೆ ಇದ್ದಾಳೆ ಎನ್ನುವ ನಂಬಿಕೆ ಬಂತು. ನಾನು ಇಡೀ ಜಗತ್ತನ್ನು ಎದುರಿಸಬಲ್ಲೆ. ನಾನು ಹೆದರುವುದಿಲ್ಲ ಎಂದುಕೊಂಡು ಸಾಯುವ ನಿರ್ಧಾರವನ್ನು ಬದಲಾಯಿಸಿದೆ ಎಂದಿದ್ದಾರೆ.
ಜೈಲಿನ ದಿನಗಳ ಸಿನಿಮಾ : ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಸಮಯವನ್ನು ನೆನಪಿಸಿಕೊಂಡ ರಾಜ್ ಕುಂದ್ರಾ, ಅಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿತ್ತು. ಜೈಲಿನ ತಿಂಡಿ ತಿನ್ನುವಂತಿರಲಿಲ್ಲ. 63 ದಿನಗಳಲ್ಲಿ ಹೆಚ್ಚಾಗಿ ಪಾರ್ಲೆ-ಜಿ ಬಿಸ್ಕತ್ತುಗಳು ಮತ್ತು ನೀರಿನಿಂದ ಬದುಕುಳಿದೆ. ಜೈಲಿನಲ್ಲಿ ತೂಕ ಸುಮಾರು 17-18 ಕೆಜಿ ಕಡಿಮೆಯಾಯಿತು. ಇವರ ಈ ಜೈಲಿನ ಚಿತ್ರಣ ಇರುವ, UT69 ಚಿತ್ರ 2023ರಲ್ಲಿ ಬಿಡುಗಡೆಯಾಗಿತ್ತು. ಇದು ರಾಜ್ ಕುಂದ್ರಾ ಜೈಲಿಗೆ ಹೋದ ಅನುಭವವನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.





