ಅಯ್ಯೋ… ಶೀರ್ಷಿಕೆ ಓದಿ ನಾವಿಲ್ಲಿ ಯಾರೋ ಗುರೂಜಿ ಬಗ್ಗೆ ಹೇಳುತ್ತಿದ್ದೇವೆ ಅಂದುಕೊಳ್ಳಬೇಡಿ. ಬದಲಿಗೆ ಗುರು ರಂಧಾ ಬಗ್ಗೆ ಹೇಳ್ತಿದ್ದೇವೆ. `ಕುಛ್ ಖಟ್ಟಾ ಹೋ ಜಾಯೆ’ ಚಿತ್ರದಿಂದ ಗುರು ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ. ಈತನಿಗೆ ಸಾಥ್ನೀಡುತ್ತಿದ್ದಾಳೆ ದಬಂಗ್ ಗರ್ಲ್ ನಂಬರ್-2, ಅಂದ್ರೆ ಸಯೀ ಮಂಜ್ರೇಕರ್. ಅಸಲಿ ಗುರು ಅಂದ್ರೆ ಸಲ್ಲು, ಇದು ಆತನ ಪ್ರೊಡಕ್ಷನ್ ಆದ್ದರಿಂದ, ಇವಳು ಇಲ್ಲಿ ಗೆಲ್ಲುತ್ತಾಳೋ ಇಲ್ಲವೋ, ಈ ಚಿತ್ರದ ಯಶಸ್ಸು ನಿರ್ಧರಿಸಬೇಕಷ್ಟೆ.

ನೋರಾ ಕಲಿಯುವುದು ಇನ್ನೂ ಬೇಕಾದಷ್ಟಿದೆ!
`ಕ್ರಾಕ್’ ಚಿತ್ರ ಬಿಡುಗಡೆ ಆದಾಗ ಎಲ್ಲರ ನೋಟ ವಿದ್ಯುತ್ ನ ಮೈಕಟ್ಟು, ಜಬರ್ದಸ್ತ್ ಆ್ಯಕ್ಷನ್ ಗಳತ್ತಲೇ ಇತ್ತು. ಈ ಚಿತ್ರದ ನಾಯಕಿ ಎನಿಸಿರುವ ನೋರಾ ಎಷ್ಟು ಮಾತ್ರ ನಟನೆ ಮಾಡಿದ್ದಾಳೋ…. ಈ ಚಿತ್ರ ಕಂಡವರಿಗೇ ಗೊತ್ತು! ನೋರಾಳ ಡೈಲಾಗ್ಸ್ ಎತ್ತಲೋ ಹೋಗುತ್ತಿದ್ದರೆ, ಇವಳ ಹಾವಭಾವ ಇನ್ನೇನೋ ಹೇಳುತ್ತಿವೆ! ಹೇಗೋ ಮೈ ಕುಲುಕಿಸುತ್ತಾ ಡ್ಯಾನ್ಸ್ ಮಾಡಿಬಿಡಬಹುದು, ಹಾಗಿರುವಾಗ ಅದರ ಮುಂದೆ ನಟನೆ ಏನು ಮಹಾ ಎಂದು ಈಕೆ ಲೆಕ್ಕ ಹಾಕಿರಬಹುದು. ಅಯ್ಯೋ ತಾಯಿ, ಏನೋ ಅದೃಷ್ಟಶಾತ್ ಒಂದು ಚಿತ್ರದಲ್ಲಿ ಹೀಗೆ ಅವಕಾಶ ಸಿಕ್ಕಿರಬಹುದು, ಆದರೆ ನಿನ್ನ ನಟನೆಯಲ್ಲಿ ಸತ್ವ ಇದ್ದರೆ ತಾನೇ ಜನ ಮತ್ತೊಂದು ಚಿತ್ರದಲ್ಲಿ ನಿನ್ನನ್ನು ನೋಡ ಬಯಸುವುದು ಎನ್ನುತ್ತಿದ್ದಾರೆ ಹಿತೈಷಿಗಳು. ಈಕೆ ನಟನೆ ಕಲಿತಳೋ ಸರಿ, ಇಲ್ಲದಿದ್ದರೆ `ಹಾಯ್ ಗರ್ಮಿ…..’ ಎಂಬಂಥ ಕೀಳುಮಟ್ಟದ ಐಟಂಗಳಿಗೆ ಕುಣಿಯುತ್ತಾ ಅದರಲ್ಲಿ ತೃಪ್ತಿ ಕಾಣಬೇಕಷ್ಟೆ.

ಮತ್ತೆ ವಾಪಸ್ ಬರ್ತಾಳಾ ರಾಶೀ?
ಎಷ್ಟೋ ದಿನಗಳ ನಂತರ ರಾಶೀ ಖನ್ನಾ `ಯೋದ್ಧಾ’ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ದಿಶಾರ ಜೊತೆಗೆ ತೆರೆ ಹಂಚಿಕೊಂಡಿದ್ದಾಳೆ. ಅಂತೂ ಇಲ್ಲಿ ರಾಶೀಗೆ ಸಿಕ್ಕಿರುವ ಪಾತ್ರ ಅನ್ನುವಂತಿದೆ. ಏಕೆಂದರೆ ಸೈನಿಕನ ಕಥೆಯಾದ್ದರಿಂದ ಸಿದ್ದಾರ್ಥನಿಗೆ ಮೊದಲ ಮಣೆ, ಮೊದಲ ಹೀರೋಯಿನ್ ದಿಶಾ ಪಠಾಣಿಗೆ 2ನೇ ಅವಕಾಶ, ಅಳಿದುಳಿದದ್ದು ರಾಶೀ ಪಾಲಾಗಿದೆ. ದಿಶಾ ಅಂತೂ ಬಿಚ್ಚಮ್ಮನಾಗಿ ಗ್ಲಾಮರ್ ನ ಎಲ್ಲಾ ಗಡಿರೇಖೆಗಳನ್ನೂ ಮೀರಿದ್ದಾಳೆ, ಹೀಗಾಗಿ ಅವಳ ಕೆರಿಯರ್ ದೋಣಿ ದಡ ಕಂಡಿದೆ. ಪಾಪ, ರಾಶೀಗೆ ಅಂಥ ದುಸ್ಸಾಹಸ ಮಾಡಲು ಆಗಲಿಲ್ಲ. ಏಕೆಂದರೆ, ದಿಶಾ ಮುಂದೆ ಇವಳು ತುಸು ಮಂಕಾದಳು. ಶಾಹೀದ್ ಜೊತೆ `ಫರ್ಝೀ’ ವೆಬ್ ಸೀರೀಸ್ ನಲ್ಲಿ ಮಿಂಚಿದಂತೆ ಇಲ್ಲಿ ಮಿಂಚಲಾಗಿಲ್ಲ. ಏನೂ ಪರವಾಗಿಲ್ಲ, ಮರಳಿ ಯತ್ನ ಮಾಡು ರಾಶೀ, ಎನ್ನುತ್ತಿದ್ದಾರೆ ಹಿತೈಷಿಗಳು.

ಸ್ವಲ್ಪ ಹುಷಾರು ಕಣಪ್ಪ ರಣದೀಪ್
ಮದುವೆಯ ನಂತರ ನಟ ರಣದೀಪ್ ಹುಡ್ಡಾ, ನಿರ್ದೇಶಕರ ಕುರ್ಚಿ ಮೇಲೆ ಕೂರುವ ಅವಸರದಲ್ಲಿದ್ದಾನೆ. ಈತನ ನಿರ್ದೇಶನದ ಮೊದಲ ಚಿತ್ರ ಅಂದ್ರೆ `ಸ್ವತಂತ್ರ ವೀರ ಸಾವರ್ಕರ್.’ ರಾಮ ಮಂದಿರದ ನಿರ್ಮಾಣದ ನಂತರ, ತನ್ನ ವಿಚಾರಧಾರೆಯ ಬಗ್ಗೆ ಪಲ್ಟಿ ಹೊಡೆದ ಈತ, ಈ ಬಯೋಪಿಕ್ ಮೂಲಕ ಸಾವರ್ಕರ್ ಅವರಿಗೆ ತಗುಲಿದ್ದ ಆ್ಯಂಟಿ ಮುಸ್ಲಿಂ ಟ್ಯಾಗ್ ನ್ನು ಹೋಗಲಾಡಿಸಲು ಯತ್ನಿಸಿದ್ದಾನೆ. ಅಂದಹಾಗೆ ಪ್ರಸಕ್ತ ಸಂದರ್ಭದಲ್ಲಿ ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡುವುದು ಬಿಟ್ಟು ಈತ ಹಿಂದುತ್ವ, ಆ್ಯಂಟಿ ಮುಸ್ಲಿಂನಂಥ ಸಬ್ಜೆಕ್ಟ್ ಆರಿಸಿಕೊಂಡದ್ದು ಏಕೆ? ಭಗವಾಧಾರಿಗಳು ಈಗಾಗಲೇ ಯುವಜನತೆಯನ್ನು ದಾರಿ ತಪ್ಪಿಸಲು ಕಡಿಮೆ ಶ್ರಮಿಸಿದ್ದಾರೇನು? ಇಂಥ ವಿಷಯ ಆರಿಸಿಕೊಂಡಿದ್ದೇಕೆ ರಣದೀಪ್, ಸ್ವಲ್ಪ ಹುಷಾರಪ್ಪ, ಈ ದಾರಿ ತುಂಬಾ ಮುಳ್ಳಿದೆ ಅಂತಿದ್ದಾರೆ ಹಿತೈಷಿಗಳು.





