- ರಾಘವೇಂದ್ರ ಅಡಿಗ ಎಚ್ಚೆನ್.
ವಿವಾದಿತ ಹೇಳಿಕೆ ನೀಡಿ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅಡ್ಡಿಯಾಗಿದ್ದ ಕಮಲ್ ಹಾಸನ್ ಮತ್ತು ಚಿತ್ರತಂಡಕ್ಕೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಪ್ರಕರಣಕ್ಕೆ ಮುಕ್ತಿ ಸಿಕ್ಕಿದ್ದು, ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಗುಂಪು, ಗೂಂಡಾಗಿರಿ ಬೀದಿಗೆ ಬಂದು ಆಕ್ರಮಣ ಮಾಡಲು ಸಾಧ್ಯವಿಲ್ಲ, ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕು. ಸಿಬಿಎಫ್ಸಿ ಸರ್ಟಿಫಿಕೇಟ್ ಇದ್ದ ಚಿತ್ರವನ್ನು ಪ್ರತಿ ರಾಜ್ಯದಲ್ಲೂ ಬಿಡುಗಡೆ ಮಾಡಬೇಕು ಎಂದು ಕಾನೂನಿನ ನಿಯಮ ಹೇಳುತ್ತದೆ. ಚಿತ್ರ ಬಿಡುಗಡೆಗೆ ತಡೆ ನೀಡಿ ಜನರನ್ನು ಭಯಭೀತರನ್ನಾಗಿ ಮಾಡುವುದು, ಚಿತ್ರಮಂದಿರಗಳನ್ನು ಸುಡುವ ಬೆದರಿಕೆಗೆ ಅವಕಾಶವಿಲ್ಲ. ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ಅವರಿಂದ ಕ್ಷಮೆಯಾಚನೆ ಕೇಳಬಾರದಿತ್ತು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ. ‘ಥಗ್ ಲೈಫ್’ಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸಿದ್ದಕ್ಕೆ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನು ಸಿನಿಮಾವನ್ನು ನೋಡಬೇಕೆ ಬೇಡವೆ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ಆದರೆ ಒತ್ತಾಯಪೂರ್ವಕವಾಗಿ ಅದನ್ನು ಬಿಡುಗಡೆ ಮಾಡದಂತೆ ತಡೆಯುವುದು ಸೂಕ್ತ ಅಲ್ಲ. ‘ಮಿ ನಾಥೂರಾಮ್ ಬೋಲ್ಟೋಯ್’ ನಾಟಕ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಭಿನ್ನ ಅಭಿಪ್ರಾಯದ ಕಾರಣಕ್ಕೆ ನಿಷೇಧ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರೋಧ ಎಂದಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಇದೀಗ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗಬೇಕಿದೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದ ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರ ಪೊಲೀಸ್ ಭದ್ರತೆ ಒದಿಗಿಸಬೇಕಿದೆ.