ಉಪ್ಪು ಹುಳಿ ಖಾರ
ನಿರ್ದೇಶಕ ಇಮ್ರಾನ್ ಸರ್ದಾರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಉಪ್ಪು ಹುಳಿ ಖಾರ' ಚಿತ್ರ ಕಾಂಟ್ರೋವರ್ಸಿಯೊಂದಿಗೆ ಶುರುವಾಗಿ ಕಡೆಗೆ ಸಿಹಿಯೋದಿಗೆ ಮುಕ್ತಾಯವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಲಾಶ್ರೀ ಈ ಚಿತ್ರವನ್ನು ಸವಾಲಾಗಿ ಸ್ವೀಕರಿಸಿ ಕೋಪಿಸಿಕೊಂಡು ಹೋದಾಕೆ ಪುನಃ ಮರಳಿ ಬಂದಿದ್ದರು. ನನ್ನಿಂದ ಯಾರಿಗೂ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ದರು. ಇಂದು ಮಾಲಾಶ್ರೀ ಮತ್ತು ಇಮ್ರಾನ್`ಉಪ್ಪು ಹುಳಿ ಖಾರ' ಚಿತ್ರದ ಚಿತ್ರೀಕರಣದಲ್ಲಿ ಒಳ್ಳೆ ಸ್ನೇಹಿತರಾಗಿ ಚಿತ್ರ ಚೆನ್ನಾಗಿ ಬರಲು ಎಲ್ಲ ತರಹದಲ್ಲೂ ಉತ್ಸಾಹ ತೋರುತ್ತಿದ್ದಾರೆ. ಆ್ಯಕ್ಷನ್ ಕ್ವೀನ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಇತ್ತೀಚೆಗೆ ತನ್ನ ಇಮೇಜಿನಿಂದ ಹೊರಬಂದು ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಚಿತ್ರಗಳಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಟಿ.ವಿ. ಶೋ ಜಡ್ಜ್ ಆಗಿ ಇನ್ನಷ್ಟು ಜನಪ್ರಿಯರಾಗುತ್ತಿದ್ದಾರೆ. ಅದೃಷ್ಟ ದೇವತೆ ಒಲಿದಾಳೋ ಅಥವಾ ಮಾಲಾಶ್ರೀ ಹವಾ ಶುರುವಾಗಿದೆಯೋ ಗೊತ್ತಿಲ್ಲ. ಅಂತೂ ಈ ಕನಸಿನ ರಾಣಿ ಸಖತ್ ಬಿಜಿ.
ಹರ್ಷಿಕಾ ಮಿಂಚಿಂಗ್
ಹರ್ಷಿಕಾ ಪೂಣಚ್ಚ ನಟಿಯಾಗಷ್ಟೇ ಅಲ್ಲ, ಒಳ್ಳೆ ಮಾಡೆಲ್ ಆಗಿಯೂ ಮಿಂಚುತ್ತಿರುವಂಥ ಬೆಡಗಿ. `ಬೀಟ್' ಚಿತ್ರದ ನಂತರ ಇನ್ನಷ್ಟು ಹೊಸ ಚಿತ್ರಗಳತ್ತ ಹೆಜ್ಜೆ ಹಾಕುತ್ತಿರುವ ಹರ್ಷಿಕಾ ತನ್ನ ಮಾಡರ್ನ್ ಉಡುಗೆ ತೊಡುಗೆಯಿಂದ ಸದಾ ಮಿಂಚುತ್ತಲೇ ಇರುತ್ತಾಳೆ. ಇತ್ತೀಚೆಗೆ ಸೈಮಾ 2016 ಅವಾರ್ಡ್ ಸಮಾರಂಭದಲ್ಲಿ ಹರ್ಷಿಕಾ ಉದ್ದನೆಯ ಗೌನ್ ಧರಿಸಿ ಎಲ್ಲ ನಟಿಯರೂ ತಿರುಗಿ ನೋಡುವಂತೆ ಮಾಡಿದ್ದಳು. ತನ್ನ ಮೆಚ್ಚಿನ ನಾಯಕ ವಿಕ್ರಮ್ ಜೊತೆ ಸೆಲ್ಛಿ ತೆಗೆಸಿಕೊಂಡು ಖುಷಿಪಟ್ಟಳು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಹರ್ಷಿಕಾ ಗ್ಲಾಮರ್ ತಾರೆಯಾಗಿಯೂ ಮಿಂಚಬಲ್ಲಳು. ಹಾಗೆಯೇ ಕಲಾತ್ಮಕ ಚಿತ್ರದಲ್ಲೂ ನೈಜತೆ ತೋರಬಲ್ಲಳು. ಕನ್ನಡದ ಈ ಹುಡುಗಿ ಇನ್ನಷ್ಟು ಒಳ್ಳೆ ಪಾತ್ರಗಳ ಮೂಲಕ ಮಿಂಚಲಿ!
ಮರಳಿ ಬಂದ ನಿಧಿ
ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ಪ್ರೇಕ್ಷಕರ ಮನಗೆದ್ದಂಥ ನಟಿ. ಕನ್ನಡದಲ್ಲಿ ಒಳ್ಳೆ ಚಿತ್ರಗಳು ಸಿಗುತ್ತಿರುವಾಗಲೇ ಮುಂಬೈಗೆ ಹಾರಿಹೋಗಿದ್ದ ನಿಧಿ ಅಲ್ಲಿಯೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದಳು. ಬಾಲಿವುಡ್ಮಹಾಸಾಗರ. ಅಲ್ಲಿ ದಿನಕ್ಕೆ ಸಾವಿರಾರು ಕಲಾವಿದರು ಬಂದು ಹೋಗುತ್ತಾರೆ. ನಿಧಿಗೆ ಒಳ್ಳೆ ಅವಕಾಶಗಳು ಪ್ರಾರಂಭದಲ್ಲಿ ಸಿಕ್ಕರೂ ನಿರೀಕ್ಷಿಸಿದ ಹಾಗೆ ಬೆಳೆಯಲಿಲ್ಲ. ಈಗ ಕನ್ನಡಕ್ಕೆ ನಿಧಿ ಮರಳಿ ಬಂದಿದ್ದಾಳೆ. ಈ ತಾರೆಯನ್ನು ಕರೆತಂದಿದೆ `ನನ್ನ ನಿನ್ನ ಪ್ರೇಮಕಥೆ' ಚಿತ್ರತಂಡ. ವಿಜಯ ರಾಘವೇಂದ್ರ ಜೋಡಿಯಾಗಿ ನಿಧಿ ನಟಿಸುತ್ತಿದ್ದಾಳೆ. ನಿಧಿ ಸುಬ್ಬಯ್ಯ ಕನ್ನಡದಲ್ಲಿ ತನ್ನ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾಳೆ. ಪಂಚರಂಗಿಯ ಈ ತಾರೆ ಮತ್ತೆ ಮಿಂಚಬಲ್ಲಳೇ? ಕಾದು ನೋಡೋಣ.
ಗೋಲ್ ಮಾಲ್ ಬ್ರದರ್ಸ್
ಸೃಜನ್ ಲೋಕೇಶ್ ಹುಟ್ಟುಹಬ್ಬವನ್ನು ಈ ಬಾರಿ ಜೋರಾಗಿಯೇ ಆಚರಿಸಲಾಯಿತು. ಅವರು ಟಾಕಿಂಗ್ ಸ್ಟಾರ್ ಆದಾಗಿನಿಂದ ಚಿತ್ರಗಳಲ್ಲಿ ಆಫರ್ಗಳು ಹೆಚ್ಚಾಗುತ್ತಿವೆ. ಹುಟ್ಟುಹಬ್ಬದ ಪ್ರಯುಕ್ತ `ಗೋಲ್ ಮಾಲ್ ಬ್ರದರ್ಸ್' ಚಿತ್ರ ಸೆಟ್ಟೇರಿತ್ತು. ಚಿತ್ರವನ್ನು ದೇವರಾಜ್ ಕುಮಾರ್ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮುಹೂರ್ತಕ್ಕೆ ಸೃಜನ್ ಗೆಳೆಯ ದರ್ಶನ್ ಆಗಮಿಸಿದ್ದು ವಿಶೇಷ. ಗೆಳೆಯನ ಚಿತ್ರಕ್ಕೆ ಕ್ಲಾಪ್ ಮಾಡಲು ಬಂದಿದ್ದರು. ಈ ಚಿತ್ರದಲ್ಲಿ `ಗೋಲ್ ಮಾಲ್ ಬ್ರದರ್ಸ್' ಆಗಿ ಸೃಜನ್ ಮತ್ತು ಚಿಕ್ಕಣ್ಣ ಜೊತೆಗೆ ರೂಪ್ಶೆಟ್ಟಿ ಕೂಡ ಇದ್ದಾರೆ. ಅವರಿಗೆ ನಾಯಕಿಯಾಗಿ ನಿಖಿತಾ ನಾರಾಯಣ್, ಚಿರಶ್ರೀ, ಶಿವಪ್ರಕಾಶ್ ರಾಯ್ ನಟಿಸುತ್ತಿದ್ದಾರೆ. ಮೂರು ಸ್ನೇಹಿತರ ಕಥೆಯಾಗಿದ್ದು, ಎಲ್ಲ ಗೋಲ್ ಮಾಲ್ ಮಯ. ಹಾಸ್ಯಕ್ಕಿಲ್ಲಿ ಕೊರತೆ ಇರೋದಿಲ್ಲ ಅನಿಸುತ್ತೆ. ಮೂವರು ಸ್ನೇಹಿತರು ಹುಟ್ಟು ತರಲೆಗಳು. ಟೋಪಿ ಹಾಕೋಕೆ ಅರಿರೋದು ಎಂದು ಸೃಜನ್ ಹೇಳುತ್ತಾರೆ. ಚಿಕ್ಕಣ್ಣನ ಸಲುವಾಗಿ ಮುಂಬೈನಿಂದ ಹೀರೋಯಿನ್ ಕರೆತರಲಾಗಿದೆಯಂತೆ. ಒಟ್ಟಿನಲ್ಲಿ ಇಡೀ ತಂಡ ಖುಷಿ ಖುಷಿಯಾಗಿ ಈ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ.