ಪ್ರೀತಿ…. ಪ್ರೇಮ…. ಪ್ರಣಯ….. ಯೌವನಕಾಲದ ಸುಂದರ ಸೋಪಾನಗಳು. ಪ್ರತಿ ವ್ಯಕ್ತಿಯೂ ಈ ಹಂತವನ್ನು ದಾಟದೆ ಮುಂದುವರಿಯಲಾರ, ಕೆಲವರಿಗೆ ಅದು ಜೀವನದ ಸುಖ ಸೋಪಾನಾಗಳಾಗಿ ಮದುವೆಯಲ್ಲಿ ಮುಗಿದರೆ, ಹಲವರಿಗೆ ನಡು ದಾರಿಯಲ್ಲೇ ಮೊಟಕಾಗಿ ನಿರಾಸೆಗೆ ದೂಡುತ್ತವೆ, ಕೆಲವಂತೂ ಬೆಳವಣಿಗೆಯ ಮೊದಲ ಹಂತದಲ್ಲೇ ಚಿವುಟಿ ಹೋಗುತ್ತದೆ. ಏನೇ ಇರಲಿ, ಇದರ ಉದ್ದೇಶ ಸುಖಾಂತ್ಯದ ಮದುವೆ!
`ಪ್ರೇಮ ವಿವಾಹ’ ಎಂದಾಗ ಈಗಲೂ ಕೆಲವು ಕಡೆ ಕಿರಿಕಿರಿ ತಪ್ಪಿದ್ದಲ್ಲ. ಅದನ್ನು ಯಶಸ್ವಿಯಾಗಿ ಮಾಡಿಕೊಳ್ಳುವುದು, ಜೀವನವಿಡೀ ಸಂಗಾತಿ ಪರಸ್ಪರ ಒತ್ತಾಸೆಯಾಗಿ ವೈವಾಹಿಕ ಜೀವನ ಉಳಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. ಈಗಿನ ಫಾಸ್ಟ್ ಲೈಫ್ ಬಯಸುವ ಯುವಜನತೆ, ಹಿಂದಿನವರಂತೆ ಕಷ್ಟಸಹಿಷ್ಣುಗಳೂ, ಸಹನೆಯುಳ್ಳವರೂ ಅಲ್ಲ. ಹೀಗಾಗಿ ಪ್ರೇಮ ವಿವಾಹದ ಅನೇಕ ವೈಫಲ್ಯಗಳು ಕಾಣಬರುತ್ತವೆ. ಹೀಗಾಗದೆ ಅದು ಸುಂದರ ಸುಖೀ ವಿವಾಹದಲ್ಲಿ ಕೊನೆಯಾಗಲು ವಹಿಸಬೇಕಾದ ಮುನ್ನೆಚ್ಚರಿಕೆಗಳು ಏನು?
ಸಹಕಾರದೊಂದಿಗೆ ಚಾಲೆಂಜ್ ಸ್ವೀಕಾರ
ಮದುವೆ ಆಗಿಹೋದ ಮಾತ್ರಕ್ಕೆ ಎಲ್ಲವೂ ಶುಭಂ, ಸಂತಸಮಯಂ ಆಗಿಹೋಗುವುದಿಲ್ಲ. ಮದುವೆ ಎಂದರೆ ಯಾಂತ್ರಿಕ ಜೀವನ ನಡೆಸಲು ಜೊತೆಗೆ ಇದ್ದುಬಿಟ್ಟರೆ ಆಗಿಹೋಗಲಿಲ್ಲ. ಅದರಲ್ಲೂ ಈ ಮಧ್ಯಮ ವರ್ಗದ ಕೌಟುಂಬಿಕ ಜೀವನ ಮಹಾ ಅತಂತ್ರ. ಇಲ್ಲಿ 108 ಸವಾಲುಗಳನ್ನು ಇಬ್ಬರೂ ಎದುರಿಸ ಬೇಕಾಗುತ್ತದೆ. ಇವು ಕೌಟುಂಬಿಕ, ಆರ್ಥಿಕ, ಆರೋಗ್ಯ ಕುರಿತಾದ, ಮಾನಸಿಕ ಇತ್ಯಾದಿ ಯಾವುದೇ ಬಗೆ ಇರಬಹುದು. ಹೀಗಾಗಿ ಸಂಗಾತಿಯ ಸಹಕಾರವಿಲ್ಲದೇ ಒಬ್ಬರೇ ಇದನ್ನು ನಿಭಾಯಿಸಲಾಗದು. ಕೋಪತಾಪ ಬದಿಗಿಟ್ಟು ಇಬ್ಬರೂ ಇದನ್ನು ಚರ್ಚಿಸಿ ಈ ಸವಾಲುಗಳನ್ನು ಎದುರಿಸಬೇಕು.
ಎಷ್ಟೋ ದಂಪತಿಗಳಲ್ಲಿ ಒಬ್ಬ ವ್ಯಕ್ತಿ ಜವಾಬ್ದಾರಿಗಳಿಂದ ಓಡಿಹೋಗುತ್ತಾರೆ. ಮದುವೆಗೆ ಮೊದಲು ಇಂತಹ ಜಂಜಾಟಗಳ ಬಗ್ಗೆ ತಿಳಿದೇ ಇರಲಿಲ್ಲವಲ್ಲ ಎಂದು ಗೊಂದಲಕ್ಕೆ ಈಡಾಗುತ್ತಾರೆ. ಈಗಿಂಥ ಹೊರಲಾಗದ ಈ ಹೊರೆ ಯಾರಿಗೆ ಬೇಕು ಎಂದು ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ. ಹೀಗಾಗಿ ಇಂದಿಗೂ ಪ್ರೇಮವಿವಾಹ ವಿಫಲಗೊಳ್ಳುವುದೇ ಹೆಚ್ಚು. ಇಲ್ಲಿ ಎರಡೂ ಕಡೆ ಹಿರಿಯರ ಸಹಕಾರ, ಮಾರ್ಗದರ್ಶನ ಇರುವುದಿಲ್ಲ. ಇದು ಇವರೇ ಮಾಡಿಕೊಂಡ ಸಂಬಂಧ, ಹೀಗಾಗಿ ಪ್ರೇಮಿಗಳು ತಾವೇ ಅದನ್ನು ಕೊನೆಯವರೆಗೂ ನಿರ್ವಹಿಸಬೇಕು.
ಎಂಥ ವಿವಾಹವೇ ಇರಲಿ, ಎಲ್ಲರ ಜೀವನ ಒಂದೇ ಸರಳರೇಖೆಯಂತೆ ನೇರ್ಪಾಗಿ ಇರುವುದಿಲ್ಲ. ಇಂದು ನಿಮ್ಮ ಸಂಗಾತಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಾಳೆ ನೀವು ಬೇರೊಂದು ವಿಧದಲ್ಲಿ ಎದುರಿಸ ಬೇಕಾಗಬಹುದು ಹೀಗಾಗಿ ಸಮಸ್ಯೆಗಳಿಂದ ತಕ್ಷಣ ಓಡಿಹೋಗುವ ಬದಲು, ಇಬ್ಬರೂ ಕೂಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ.
ಕೌಟುಂಬಿಕ ಕಲಹಗಳು
ಇದು ಯಾರ ಜೀವನದಲ್ಲಿ ತಾನೇ ಇಲ್ಲ? ಅರೇಂಜ್/ಲವ್ ಮ್ಯಾರೇಜ್ ಯಾವುದೇ ಇರಲಿ, ಈ ಕಲಹಗಳು ತಪ್ಪಿದ್ದಲ್ಲ, ಅವುಗಳ ಪರಿಹಾರ ಸಂಗಾತಿಗಳ ಐಕ್ಯತೆಯಲ್ಲಿದೆ. ಇದು ಇವರಿಬ್ಬರ ಜಗಳ ಮಾತ್ರವಾಗದೆ, ಇವರಿಬ್ಬರ ಕುಟುಂಬಗಳ ತಿಕ್ಕಾಟಕ್ಕೂ ಕಾರಣವಾಗುತ್ತದೆ. ಆದರೆ ಮದುವೆಯಾದ ನಂತರ ಈ ಇಬ್ಬರ ಕುಟುಂಬಗಳೂ, ಇವರ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಾಗಿ ಮೂಗು ತೂರಿಸುತ್ತಿದ್ದರೆ, ಇವರಿಬ್ಬರ ಸಂಬಂಧ ಕಿತ್ತು ಹೋಗುವ ಹಂತ ತಲುಪಿದರೂ ಆಶ್ಚರ್ಯವಿಲ್ಲ. ಹೀಗಾಗಿ ಮದುವೆಗೆ ಮೊದಲೇ ಈ ಕುರಿತು, ಇಬ್ಬರ ಕುಟುಂಬದವರೂ ದಿನೇ ದಿನೇ ಬಂದು ಮೂಗು ತೂರಿಸಬಾರದೆಂದು ಇಬ್ಬರೂ ಮಾತನಾಡಿಕೊಳ್ಳಿ. ಜೊತೆಗೆ ನಿಮ್ಮಿಬ್ಬರಲ್ಲಿ ನಡೆಯುವ ಪ್ರತಿ ಸಣ್ಣಪುಟ್ಟ ವಿಷಯಗಳ ವರದಿಗಳನ್ನೂ ಎರಡೂ ಮನೆಗಳಿಗೆ ತಲುಪಿಸಬೇಕಾದ ಅಗತ್ಯವಿಲ್ಲ ಎಂದು ನೆನಪಿಡಿ.
ಅದರಲ್ಲೂ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು (ಮಕ್ಕಳಾದ ಮೇಲೂ ಸಹ), ಗಂಡನ ಮನೆಯಲ್ಲಿ ನಡೆಯುವ ಪ್ರತಿ ಸಣ್ಣ ವಿಷಯವನ್ನೂ ಉತ್ಪ್ರೇಕ್ಷಿಸಿ ತವರಿಗೆ ತಲುಪಿಸದಿದ್ದರೆ ನೆಮ್ಮದಿ ಕಾಣಲಾರರು. ಇದರಿಂದಾಗಿ ಅಳಿಯನ ಕುರಿತಾಗಿ ಅತ್ತೆಮನೆಯಲ್ಲಿ ಅತಿ ಸಲುಗೆ, ಸದರ ಬೆಳೆದು ನಗಣ್ಯ ಎನಿಸುತ್ತಾನೆ. ಇದೇ ತರಹ ಗಂಡ ಸಹ ಹೆಂಡತಿ ಜೊತೆಗಿನ ಸಣ್ಣಪುಟ್ಟ ವೈಷಮ್ಯವನ್ನು ತನ್ನ ಮನೆಯವರಿಗೆ ತಿಳಿಸಬಾರದು, ಇದರಿಂದ ಅತ್ತೆ ಮನೆಯವರಿಗೆ ಸೊಸೆ ಸರಿ ಇಲ್ಲ ಎಂಬ ಭಾವನೆ ಬರಬಾರದು. ಇದರಿಂದ ಇಬ್ಬರ ನಡುವೆ ಬಾಂಧವ್ಯ ಹೆಚ್ಚುವ ಬದಲು ಅಂತರ ಹೆಚ್ಚಾಗುವಂತೆ ಆಗಬಾರದು. ಹೀಗಾಗಿ ಮದುವೆಗೆ ಮೊದಲೇ ನಿಮ್ಮ ವ್ಯಾಲೆಂಟೈನ್ಸ್ ಡೇಟ್ ನಲ್ಲಿ, ಇಬ್ಬರೂ ಮುಂದೆ ಸಮಸ್ಯೆಗಳನ್ನು ಕೂಡಿ ಪರಿಹರಿಸೋಣ, ಯಾರಿಗೂ ವರದಿ ಸಲ್ಲಿಸುವುದು ಬೇಡ ಎಂದು ನಿಶ್ಚಯಿಸಿಕೊಳ್ಳಿ.
ಮದುವೆ ನಂತರದ ಜೀವನ
ಸಾಮಾನ್ಯವಾಗಿ ಮದುವೆ ಅಂದ್ರೆ ಅದು ತಮ್ಮೆಲ್ಲ ವೈಯಕ್ತಿಕ ಸ್ವಾತಂತ್ರ್ಯಕ್ಕೂ ಧಕ್ಕೆ ಎಂದೇ ಇಂದಿನ ಯುವಜನತೆ ಭಾವಿಸುತ್ತದೆ. ಮದುವೆ ಫಿಕ್ಸ್ ಆಯ್ತು ಎಂದ್ರೆ, ಗಂಡು ಬಿದ್ದ ಹಳಕ್ಕೆ ಎಂಬುದು ಸಾಮಾನ್ಯ ಜೋಕ್ ಆಗಿಹೋಗಿದೆ. ಮದುವೆ ನಂತರ ಫ್ರೆಂಡ್ಸ್ ಜೊತೆ ಹರಟೆಗೆ ಕುಳಿತಾಗ, `ನೋಡು, ಈಗ ಕಾಲ್ ಬರುತ್ತೆ. ಮಹಾರಾಯ ಒಂದೇ ಓಟ….!” ಎಂದು ರೇಗಿಸುತ್ತಾರೆ. ಹೀಗಾಗಿ ಇಬ್ಬರೂ ಈ ಕುರಿತು ಮಾತನಾಡಿಕೊಂಡು, ಮದುವೆ ನಂತರ ಫ್ರೆಂಡ್ಸ್ ಸರ್ಕಲ್ ಜೊತೆ ಹಾಗೇ ಸ್ನೇಹ ಮುಂದುವರಿಸಬಹುದು ಎಂಬುದನ್ನು ಕ್ಲಿಯರ್ ಆಗಿ ಚರ್ಚಿಸಿ. ಯಾವ ಸಂಬಂಧ ಮದುವೆಯ ಆರಂಭದಲ್ಲಿ ಅತಿ ಸಿಹಿಯಾಗಿತ್ತೊ, ಸ್ನೇಹಿತರಿಂದ ದೂರ ಆಗಿಸುವ ಮಾಧ್ಯಮವಾಗಿ ಅದು ಕಹಿ ಆಗಿಹೋಗಬಾರದು.
ಹೀಗಾಗಿ ಮದುವೆ ಒಂದು ಪವಿತ್ರಬಂಧನ ಹೌದು, ಆದರೆ ಅದು ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥದ್ದಲ್ಲ ಎಂಬುದನ್ನು. ಇಬ್ಬರೂ ಮೊದಲೇ ಮಾತನಾಡಿಕೊಳ್ಳಿ. ಜೀವನ ಸಂಗಾತಿ ಎಂದರೆ, ನಿಮ್ಮ ಎಂದಿನ ಸ್ವಾತಂತ್ರ್ಯದ ಜೊತೆ ಪ್ರಾಕ್ಟಿಕಲ್ ಲೈಫ್ ಎದುರಿಸಲು ಸಾಥ್ ನೀಡುವರು ಎಂಬುದನ್ನು ಮರೆಯದಿರಿ. ನಿಮ್ಮ ಭಾವಿ ಸಂಗಾತಿಯನ್ನು ಫ್ರೆಂಡ್ಸ್ ಗೆ ಪರಿಚಯಿಸಿ, ಆಗ ಅವರೂ ಸಹ ನಿಮ್ಮ ಫ್ರೆಂಡ್ಸ್ ಸರ್ಕಲ್ ನ ಭಾಗವಾಗುತ್ತಾರೆ.
ಸಂತಾನದ ಕುರಿತು ಇಬ್ಬರಿಗೂ ಸಮ್ಮತಿ
ಇದನ್ನು ನೀವು ಎಷ್ಟೇ ಪರ್ಸನಲ್ ಎಂದುಕೊಂಡರೂ, ಅಗತ್ಯವಾಗಿ ನೀವಿಬ್ಬರೂ ಈ ಕುರಿತು ಮುಕ್ತವಾಗಿ ಮಾತನಾಡಲೇಬೇಕು. ಈ ಚರ್ಚೆಯಲ್ಲಿ ತುಸು ಹಿಂಜರಿಕೆ ಸಹಜ, ಆದರೆ ಓಪನ್ ಮೈಂಡೆಡ್ ಆಗಿ ಈ ಕುರಿತು ಚರ್ಚಿಸದಿದ್ದರೆ ಮುಂದೆ ಇಬ್ಬರಲ್ಲೂ ವಿರಸ ಮೂಡಬಹುದು. ಮದುವೆ ಆಗಿ 1-2 ವರ್ಷ ಕಳೆಯುತ್ತಿದ್ದಂತೆ, ಇನ್ನೂ ಗುಡ್ ನ್ಯೂಸ್ ಇಲ್ಲಿ ಎಂದು ಸೊಸೆಯನ್ನು ನೇರವಾಗಿ ಅಥವಾ ಸುತ್ತಿಬಳಸಿ ಅತ್ತೆ ಮನೆಯವರು ಕೇಳದೆ ಇರಲಾರರು. ಹಾಗೆಯೇ ನೆಂಟರಿಷ್ಟರೂ ಸಹ. ಹೀಗಾಗಿ ಮದುವೆಗೆ ಮುನ್ನವೇ ನಿಮ್ಮ ಭವಿಷ್ಯದ ಕನಸು, ಮಕ್ಕಳ ಕುರಿತು ಎಲ್ಲವನ್ನೂ ಇಬ್ಬರೂ ಮುಕ್ತವಾಗಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ನಂತರ ಬೇರೆಯವರು ಏನೇ ಕೇಳಿದರೂ, ಒಗ್ಗಟ್ಟಾಗಿ ನೀವು ನಿಮ್ಮ ನಿರ್ಧಾರದಂತೆ ಮುನ್ನಡೆಯಿರಿ.
ಇದರಲ್ಲಿ ನಾಚಿಕೆ, ಸಂಕೋಚದ ಪ್ರಶ್ನೆಯೇ ಬೇಡ. ಹಾಗೆ ಮಾಡಿದರೆ ಮುಂದೆ ನಿಮಗೆ ಕಷ್ಟ ತಪ್ಪಿದ್ದಲ್ಲ. ಗರ್ಭಾವಸ್ಥೆಯ ಹೊಣೆಗಾರಿಕೆ, ನಂತರ ಮಗು ಹುಟ್ಟಿದಾಗಿನಿಂದ ಅದನ್ನು ಬೆಳೆಸಿ ದೊಡ್ಡದಾಗಿಸುವಲ್ಲಿ ದಂಪತಿಗಳ ಇಬ್ಬರ ಪಾತ್ರ ಹಿರಿದು. ಹೀಗಾಗಿ ನಿಮ್ಮ ಕನಸಿನ ಪ್ರಕಾರ, ಇಬ್ಬರೂ ಕುಟುಂಬದ ಭವಿಷ್ಯ ಹೇಗಿರಬೇಕೆಂದು ಮೊದಲೇ ಚರ್ಚಿಸಿ ಒಮ್ಮತಕ್ಕೆ ಬನ್ನಿ.
ಮದುವೆ ನಂತರ ಕೆರಿಯರ್
ಹಿಂದೆಲ್ಲ ಮದುವೆ ಆದ ತಕ್ಷಣ, ಹುಡುಗಿ ಕೆಲಸದಲ್ಲಿದ್ದರೂ ಅದನ್ನು ಬಿಡಲೇಬೇಕು, ಕುಟುಂಬದ ಜವಾಬ್ದಾರಿ ಹೊರಬೇಕು ಎಂದೇ ಹೇಳಲಾಗುತ್ತಿತ್ತು, ಆದರೆ ಇಂದಿನ ಆರ್ಥಿಕ ಪರಿಸ್ಥಿತಿ ಎಷ್ಟು ಕ್ಲಿಷ್ಟಕರ ಎಂದರೆ, ಇಬ್ಬರೂ ಕೈ ತುಂಬ ದುಡಿದರೂ ಮಧ್ಯಮ ವರ್ಗದ ದೋಣಿಯನ್ನು ದಡ ಸೇರಿಸುವುದು ಕಷ್ಟಕರವೇ ಸರಿ. ಹಾಗಿರುವಾಗ ವಧು ಕೆಲಸ ಬಿಡುವ ಪ್ರಶ್ನೆಯೇ ಇಲ್ಲ. ಅಂದ ಮಾತ್ರಕ್ಕೆ ಹೆಣ್ಣು ಹೊರಗೂ ಒಳಗೂ ದುಡಿಯುತ್ತಾ ಹೈರಾಣಾಗುವುದೊಂದೇ ದಾರಿ ಎಂದಾಗಬಾರದು, ಅದರಿಂದ ಸಂಸಾರದ ಗಾಡಿ ಹಳಿ ತಪ್ಪೀತು.
ಇಂದಿನ ಆಧುನಿಕ ಕುಟುಂಬ ನಡೆಸಲು ಗಂಡು ಹೆಣ್ಣು ಕೂಡಿ ದುಡಿಯುವುದು ಅನಿವಾರ್ಯ ಆಗಿರುವಂತೆಯೇ, ಕೌಟುಂಬಿಕ ಕೆಲಸಗಳಲ್ಲಿ ಪತ್ನಿಗೆ ನೆರವಾಗುವುದು ಪತಿಯ ಜವಾಬ್ದಾರಿಯಾಗಿದೆ. ಈ ಕುರಿತು ಇಬ್ಬರೂ ನಿಮ್ಮ ದೃಷ್ಟಿಕೋನವೇನು ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಯಿರಿ. ಮದುವೆಗೆ ಮುಂಚೆ ಆಡಿದ ಈ ಮಾತುಗಳೇ, ಮುಂದೆ ಶಾಶ್ವತವಾಗಿ ಉಳಿಯುವಂತಾಗಬೇಕು, ಆಗ ಮಾತ್ರ ಅದು ಯಶಸ್ವೀ ದಾಂಪತ್ಯ ಎನಿಸಲು ಸಾಧ್ಯ.
ಮುಂದೆ ಕೆಲಸಕ್ಕೆ ಹೋಗುವುದಿರಲಿ ಅಥವಾ ಬಿಸ್ ನೆಸ್ ಸಂಭಾಳಿಸುವುದಿರಲಿ, ಎಲ್ಲದರ ಬಗ್ಗೆಯೂ ಇಬ್ಬರೂ ತೆರೆದ ಮನದಿಂದ ಒಂದೇ ಅಭಿಪ್ರಾಯಕ್ಕೆ ಬಂದ ನಂತರವೇ ಮದುವೆಗೆ ಮುಂದಿನ ಪ್ಲಾನಿಂಗ್ ನಡೆಯಲಿ. ಯಾವುದೇ ಸಂದರ್ಭದಲ್ಲೂ ಮುಂದೆ ಅದು, ಎತ್ತು ಏರಿಗೆಳೆಯಿತು ಎಂದರೆ ಕೋಣ ನೀರಿಗೆಳೆಯಿತು ಎಂದಾಗಬಾರದು. ಹ್ಯಾಪಿ ವ್ಯಾಲೆಂಟೈನ್ಸ್ ಡೇ!
– ಕೃತ್ತಿಕಾ ಕುಮಾರ್





