– ರಾಘವೇಂದ್ರ ಅಡಿಗ ಎಚ್ಚೆನ್.
– ರಮೇಶ್ ಬೇಗಾರ್ ಮಲೆನಾಡ ಭಾಗದ ಬಲುದೊಡ್ಡ , 40 ವರ್ಷಗಳಿಂದ ಜನ ಜನಿತ ಸಾಂಸ್ಕೃತಿಕ ಹೆಸರು. ಯಕ್ಷಗಾನ, ರಂಗಭೂಮಿ, ಕಿರುತೆರೆ ಜೊತೆಗೆ ಸಿನಿಮಾ ನಿರ್ದೇಶನವೂ ಸೇರಿದಂತೆ ಬಹು ಮಾಧ್ಯಮದಲ್ಲಿ ಕೆಲಸ ಮಾಡಿರುವ ಅನುಭವಿ. ಈಗಾಗಲೇ ‘ ವೈಶಂಪಾಯನ ತೀರ ‘ ಮತ್ತು 2023 ರಲ್ಲಿ ಯಶಸ್ವಿ 50 ದಿನ ಪೂರೈಸಿದ ‘ಜಲಪಾತ ‘ಎಂಬ ಪರಿಸರ ಕಾಳಜಿಯ ಚಲನಚಿತ್ರಗಳಿಗೆ ಆಕ್ಷನ್ – ಕಟ್ ಹೇಳಿರುವ ರಮೇಶ್ ಬರಹಗಾರರಾಗಿಯೂ ಸುವಿಖ್ಯಾತರು. ಮಲೆನಾಡ ಪ್ರಸಿದ್ಧ ಸಾಹಿತಿಗಳ ಸಣ್ಣ ಕಥೆಗಳನ್ನು ತೆರೆ ಮತ್ತು ರಂಗಕ್ಕೆ ತಂದವರು.
ಇದೀಗ ಜಲಪಾತ ಸಿನಿಮಾ ನಿರ್ಮಿಸಿದ ಶ್ರೀ ಎಂಟರ್ಪ್ರೈಸಸ್ ಬ್ಯಾನರ್ನ ಜೊತೆಗೆ ಮತ್ತೊಂದು ಸಿನಿಮಾ ಕ್ಕೆ ರಮೇಶ್ ಸಿದ್ಧತೆ ನಡೆಸಿದ್ದು ಈಗಾಗಲೇ 4 ಹಂತ ದ ಚಿತ್ರೀಕರಣ ಪೂರೈಸಿದ್ದಾರೆ. ಪ್ರಸಿದ್ಧ ಪತ್ರಕರ್ತ, ಲೇಖಕ, ಮುಂಚೂಣಿ ಕನ್ನಡ ಹೋರಾಟಗಾರ ಜಾಣಗೆರೆ ವೆಂಕಟ ರಾಮಯ್ಯ ಇವರ ಕಾದಂಬರಿ ಯೊಂದನ್ನು ಆಧರಿಸಿದ ಈ ಸಿನಿಮಾ ಕೂಡಾ ನೀರಿನ ಮಹತ್ವ ಸಾರುವ ವಿಶಿಷ್ಟ ಕಥಾ ಹಂದರ ಹೊಂದಿದೆ.
ಇದೀಗ ಈ ವಿಭಿನ್ನ ಪ್ರಯೋಗದ ವಿಶಿಷ್ಟ ಸಿನಿಮಾ ಗೆ ಕನ್ನಡ ದ ಸೂಕ್ಷ್ಮ ಸಂವೇದನೆಗಳ ಪ್ರತಿಭಾವಂತ ನಟಿ, ಮೇಘನಾ ಗಾಂವ್ಕರ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಚಿತ್ರತಂಡ ನವರಾತ್ರಿ ಪರ್ವ ಕಾಲದಲ್ಲಿ ,ವೆಲ್ಕಮ್ ಆನ್ ಬೋರ್ಡ್ ಪೋಸ್ಟರ್ ಮೂಲಕ ಅವರನ್ನು ಭವ್ಯವಾಗಿ ಬರ ಮಾಡಿಕೊಂಡಿದೆ. ರಾಣಿ ಯ ಚಂದದ ನಿಲುವಿನಲ್ಲಿ ಅವರು ಹೊಸ ಗೆಟಪ್ ನಲ್ಲಿ ಗಮನ ಸೆಳೆದಿದ್ದಾರೆ.ಮೇಘನಾ ಪಾತ್ರಗಳ ವಿಷಯ ದಲ್ಲಿ ತುಂಬಾ ಅಳೆದು ತೂಗಿ ಆಯ್ಕೆ ಮಾಡುವ ಜ್ಞಾನ ಸಂಪನ್ನ ನಟಿ. ಇತ್ತೀಚಿಗೆ ಅವರು ಡಾಕ್ಟರೆಟ್ ಕೂಡಾ ಮಾಡಿದ್ದಾರೆ.
ಮೇಘನಾ ಈ ಸಿನಿಮಾದ ಎರಡು ಹಂತದ ಶೂಟಿಂಗ್ ನ್ನೂ ಕಂಪ್ಲೀಟ್ ಮಾಡಿದ್ದಾರೆ ಮತ್ತು ಮಲೆನಾಡ ಈ ಕಲಾತಂಡ ದ ಕಲಾತ್ಮಕತೆ, ಕ್ರಿಯಾಶೀಲತೆಯ ಜೊತೆಗೆ ಆಸಕ್ತಿಯಿಂದ ತೊಡಗಿಸಿಕೊಂಡಿರುವ ಮೇಘನಾ ತನ್ನ ವೃತ್ತಿ ಬದುಕಿನ ಅತ್ಯಂತ ವಿಶೇಷವಾದ ಪಾತ್ರ ಇದಾಗಿದ್ದು ಅಪಾರ ಶ್ರದ್ಧೆಯಿಂದ ನಿರ್ವಹಿಸಲು ಕಾತರಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ರಮೇಶ್ ಅವರ ಕಥನ ಕ್ರಮದಲ್ಲಿ ಭಾವನೆಗಳ ಕುಸುರಿ ಮತ್ತು ಬದ್ಧತೆ ಗೆ ಹೆಚ್ಚು ಆಯಾಮ ಇರುವುದು ಈಗಾಗಲೇ ಬಂದಿರುವ ಅವರ ಧಾರಾವಾಹಿ, ಕಿರುಚಿತ್ರ ಮತ್ತು ಸಿನಿಮಾ ಗಳಲ್ಲಿ ಕಾಣಬಹುದು. ಹಾಗಾಗಿ ಇವರ ಗರಡಿಯಲ್ಲಿ ಮೇಘನಾ ಅತೀ ವಿಶಿಷ್ಟ ವಾದ ಪಾತ್ರ ಪ್ರಸ್ತುತಿಯಲ್ಲಿ ತೆರೆಯ ಮೇಲೆ ಕಾಣಿಸಲಿದ್ದಾರಂತೆ. ಶೀಘ್ರದಲ್ಲಿ ಸಿನಿಮಾ ಶೀರ್ಷಿಕೆ, ನಾಯಕ ನಟ, ವಸ್ತು, ವಿಶೇಷತೆ ಮತ್ತು ಪೂರ್ಣ ಮಾಹಿತಿಯನ್ನು ಟೀಸರ್ ಮೂಲಕ ತಿಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಬಹುತೇಕ ಜಲಪಾತ ತಂಡವೇ ಇದೆ. ನಾಗಶ್ರೀ ಬೇಗಾರ್ ರ ಕ್ರಿಯಾತ್ಮಕ ನಿರ್ದೇಶನ ಇರುವ ಈ ಚಿತ್ರದಲ್ಲಿ ವೀರ್ ಸಮರ್ಥ್ – ಸಂಗೀತ, ಶಶಿರ ಶೃಂಗೇರಿ -ಛಾಯಾಗ್ರಹಣ , ಅವಿನಾಶ್ ಶೃಂಗೇರಿ – ಸಂಕಲನ, ಅಭಿಷೇಕ್ ಹೆಬ್ಬಾರ್ – ಕಲೆ, ರಚಿತಾ – ವಸ್ತ್ರ ಅಲಂಕಾರ, ಶೈಲೂ – ಮೇಕಪ್ , ಶ್ರೀನಿಧಿ – ಸಹ ನಿರ್ದೇಶನ ಕಾರ್ತಿಕ್ ಎ – ನಿರ್ವಹಣೆ ಇದೆ.