– ರಾಘವೇಂದ್ರ ಅಡಿಗ ಎಚ್ಚೆನ್.
ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಪ್ರೇಮ್ ಸೇರಿದಂತೆ ಕೆಲ ಚಿತ್ರರಂಗದ ಕಲಾವಿದರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಬೆನ್ನಲ್ಲೇ, ಇದೀಗ ನಿರ್ದೇಶಕ ಪ್ರೇಮ್ ಅವರು ಕನಕಪುರ ಶ್ರೀನಿವಾಸ್ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.
ಖುದ್ದಾಗಿ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನ ಹಾಗೂ ತಮ್ಮ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರೇಮ್, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಹೇಳಿಕೆಗಳು ತಮ್ಮ ಗೌರವ ಹಾಗೂ ವೃತ್ತಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರೇಮ್ ತಮ್ಮ ದೂರಿನಲ್ಲಿ, ಕಳೆದ 25 ವರ್ಷಗಳಿಂದ ನಿರ್ದೇಶಕ, ನಟ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು, ಇದುವರೆಗೂ ಯಾವುದೇ ವಿವಾದವಿಲ್ಲದೇ ಸದಾಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. 2004ರಲ್ಲಿ ನಿರ್ಮಾಪಕ ಆರ್.ಎಸ್. ಶ್ರೀನಿವಾಸ್ ಅವರು ಕೆ.ಪಿ. ಶ್ರೀಕಾಂತ್ ಎಂಬವರ ಮೂಲಕ ತಮ್ಮ ಬಳಿ ಬಂದು ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿಕೊಂಡು ಮುಂಗಡವಾಗಿ ₹9 ಲಕ್ಷ ನೀಡಿದ್ದರು ಎಂದು ವಿವರಿಸಿದ್ದಾರೆ.

ಈ ಮೊತ್ತದಲ್ಲಿ ₹5 ಲಕ್ಷ ಚೆಕ್ ಮೂಲಕ ಹಾಗೂ ₹4 ಲಕ್ಷ ನಗದು ರೂಪದಲ್ಲಿ ಪಡೆದ ನಂತರ, ಅವರಿಗಾಗಿ ಆಫೀಸ್ ತೆರೆಯಲಾಗಿದ್ದು, ತಂಡ ರಚಿಸಿ ಚಿತ್ರಕಥೆ ಹಾಗೂ ಚಿತ್ರಕಥೆ ಬರವಣಿಗೆ ಆರಂಭಿಸಲಾಗಿದೆ. ಆದರೆ ಕಥೆ ಸಿದ್ಧವಾದ ಬಳಿಕ ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಸಿಗದೇ, ಒಂದು ವರ್ಷಕ್ಕೂ ಹೆಚ್ಚು ಕಾಲ ತಮ್ಮ ಹಾಗೂ ತಮ್ಮ ತಂಡದ ಸಮಯ ವ್ಯರ್ಥವಾಯಿತು ಎಂದು ದೂರಿನಲ್ಲಿ ಪ್ರೇಮ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಆಫೀಸ್ ನಿರ್ವಹಣೆ, ಸಹ ನಿರ್ದೇಶಕರು ಹಾಗೂ ತಂಡದ ಖರ್ಚುಗಳನ್ನು ತಾವೇ ಭರಿಸಿದ್ದು, ವೈಯಕ್ತಿಕವಾಗಿ ₹15 ರಿಂದ ₹20 ಲಕ್ಷದವರೆಗೆ ನಷ್ಟ ಅನುಭವಿಸಿದ್ದೇನೆ ಎಂದು ಪ್ರೇಮ್ ಸ್ಪಷ್ಟಪಡಿಸಿದ್ದಾರೆ.





