ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು. ಅದೇರೀತಿ, ಚಿತ್ರಗಳಲ್ಲಿ ಹಾಡಿ ಪರಿಶ್ರಮವಿರುವವರಿಗೆ, ಶಾಸ್ತ್ರೀಯಗಾಯನವೂ ಕಷ್ಟವೇ. ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ ಮೊದಲಾದವರು ಎಷ್ಟೇ ಒಳ್ಳೆಯ ಗಾಯಕರಾದರೂ, ಪಕ್ಕಾ ಶಾಸ್ತ್ರ್ರೀಯ ಸಂಗೀತಕ್ಕೆ ಅವರ ಕಂಠಸಿರಿ ಅಷ್ಟಾಗಿ ಒಪ್ಪದು. ಈ ದಿಸೆಯಲ್ಲಿ ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕ ಎಂದರೆ ಅದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಶಾಸ್ತ್ರ್ರೀಯ, ಅರೆ-ಶಾಸ್ತ್ರ್ರೀಯ, ಮತ್ತೆ ಪಕ್ಕಾ ಫಿಲ್ಮೀ ಗೀತೆಗಳನ್ನು - ಹೀಗೆ ಎಲ್ಲ ಬಗೆಯ ಹಾಡುಗಳನ್ನು ಹಾಡುವುದರಲ್ಲಿ, ಅವರಷ್ಟು ಎತ್ತಿದ ಕೈ ಯಾರೂ ಇಲ್ಲ ಎಂದು ನನ್ನ ಭಾವನೆ. ಹಾಗಾಗಿ, ಅವರು ಹಾಡಿರುವ ಕೆಲವು ಶಾಸ್ತ್ರೀಯ ಗೀತೆಗಳನ್ನು ನೆನೆಸಿಕೊಳ್ಳೋಣ ಎನ್ನಿಸಿತು. ಅದೇಕೋ, ಮ್ಯೂಸಿಕ್ ಇಂಡಿಯಾ ತಾಣ ನನಗೆ ಕೆಲಸ ಮಾಡುತ್ತಿಲ್ಲ. ಆದರೆ, ನಾನೀಗ ಹೇಳುತ್ತಿರುವುದೆಲ್ಲ ಬಹಳ ಪ್ರಸಿದ್ಧ ಗೀತೆಗಳೇ,ಎಲ್ಲರಿಗೂ ತಿಳಿದುರುವಂತಹವೇ. ನಾನು, ಅಲ್ಲಲ್ಲಿ ಅದು ಯಾವ ರಾಗ ಎಂದು ಹೇಳುತ್ತೇನೆ ಅಷ್ಟೇ. ಈದನ್ನು ಓದುತ್ತ, ಆ ಗೀತೆಗಳನ್ನು ಮೆಲುಕಿ ಹಾಕಿದರೆ, ಬಹಳ ಚೆನ್ನು!

ನನ್ನ ಮಟ್ಟಿಗೆ ಹೇಳುವುದಾದರೆ,ರಾಜ್‍ಕುಮಾರ್ ಅವರ ಹಾಡುಗಾರಿಕೆ, ಅತಿ ಉತ್ತಮ ಶ್ರೇಣಿಯದು. ಪೂರ್ಣಕಂಠದಲ್ಲಿ ಹಾಡುವ ಅವರ ರೀತಿ ಬಹುಶಃ ನಾಟಕರಂಗದಲ್ಲಿ ಅವರಿಗಿದ್ದ ಅನುಭವದ ಕಾರಣದಿಂದ ಎನಿಸುತ್ತೆ. ಹಾಗೆಂದೇ, ಬಹಳ ಒಳ್ಳೆಯ ಶಾಸ್ತ್ರೀಯ ಸಂಗೀತದ ಆಧಾರಿತ ಗೀತೆಗಳನ್ನು ಹಾಡಲು ಅವರಿಗೆ ಸಾಧ್ಯವಾಯಿತು. ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ, ನೋಡುಗರ ಪ್ರೀತಿಯ ಪ್ರಶಸ್ತಿ ಅವರಿಗೆ ಯಾವಾಗಲೂ ಸಿಕ್ಕರೂ, ಅವರ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಲೇ ಇಲ್ಲ; ಆದರೆ, ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಸಿಕ್ಕದ್ದನ್ನು ನಾವಿಲ್ಲಿ ಮರೆಯುವಂತಿಲ್ಲ. ಹಾಗೆ ಅತ್ಯುತ್ತಮ ಗಾಯಕ ಪಟ್ಟ ಅವರಿಗೆ ಸಿಕ್ಕಿದ್ದು ಒಂದು ಪಕ್ಕಾ ಶಾಸ್ತ್ರೀಯ ಗೀತೆಗೆ. ತೋಡಿ ರಾಗದ ನಾದಮಯ ಈ ಲೋಕವೆಲ್ಲ ಎಂಬ ಗೀತೆ ಅವರ ಕರ್ನಾಟಕ ಸಂಗೀತ ಜ್ಞಾನಕ್ಕೊಂದು ಕನ್ನಡಿ.

rajkumar 1

ಕೆಲವು ದಿನಗಳ ಹಿಂದೆ ಉದಯ ಟಿವಿಯಲ್ಲಿ ಬಂದ ಸಂದರ್ಶನವೊಂದರಿಂದ, ರಾಜ್ ಅವರು ಪಾರ್ವತಮ್ಮ ಅವರ ತಂದೆಯಿಂದ ಸ್ವಲ್ಪ ದಿನ ಶಾಸ್ತ್ರೀಯ ಸಂಗೀತ ಕಲಿತಿದ್ದರು ಎಂದು ತಿಳಿದೆ. ಎಷ್ಟು ಕಾಲ ಅವರು ಕಲಿತಿದ್ದರೋ ತಿಳಿಯೆ. ಆದರೆ, ನಾಟಕಗಳಲ್ಲಿ ಅಭಿನಯಿಸುವಾಗ ಅದರ ಅಭ್ಯಾಸದಲ್ಲಿ, ಅವದ ಕಂಠ ಬಹಳ ಪಳಗಿತು ಎಂದು ಕಾಣುತ್ತೆ. ಆಗ ನಾಟಕ ಮಾಡುತ್ತಿದ್ದವರಿಗೆಲ್ಲ ಅಭಿನಯದ ಜೊತೆಗೆ ಸಂಗೀತ ಚೆನ್ನಾಗಿ ಬರಬೇಕಾಗಿತ್ತು. ೯೦ರ ದಶಕದಲ್ಲಿ ಬಂದ ಆಕಸ್ಮಿಕ ಚಿತ್ರದಲ್ಲಿ, ನಾಟಕದ ಮಟ್ಟಿನ ಒಂದು ಸುಂದರ ಗೀತೆಯನ್ನು ಅವರು ಹಾಡಿದ್ದಾರೆ. ನೆನಪಿಗೆ ಬಂತೇ? ಅನುರಾಗದಾ ಭೋಗ ಅನ್ನುವ ಗೀತೆ, ಸುಂದರ ಪಲುಕಿನಿಂದ ಕೂಡಿದ್ದು, ಅದರಲ್ಲಿನ ಸಂಗತಿಗಳು ಯಾವುದೇ ಕೃತಿಗೂ ಕಡಿಮೆ ಇಲ್ಲ! ಈ ಹಾಡು ಶುದ್ಧಸಾವೇರಿ ರಾಗದಲ್ಲಿರುವ ಗೀತೆ. ನೆನಪಾದಾಗ, ಇದೇ ರಾಗದಲ್ಲಿರುವ ಇನ್ನೊಂದು ಹಾಡನ್ನು ಹೇಳಿಬಿಡುತ್ತೇನೆ - ಅದಾವುದು ಗೊತ್ತೇ? ಹೇಳಿದೆನಲ್ಲ? ಎಲ್ಲಿ ಎಂದಿರಾ? ಅದು "ಇದೇ ರಾಗದಲ್ಲಿ, ಇದೇ ತಾಳದಲ್ಲಿ" ಎಂಬ ಶ್ರಾವಣ ಬಂತು ಚಿತ್ರದ ಗೀತೆ 🙂 ಕರ್ನಾಟಕ ಸಂಗೀತದ ಶುದ್ಧಸಾವೇರಿಗೂ, ಹಿಂದೂಸ್ತಾನಿಯ ದುರ್ಗಾ ರಾಗಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಇನ್ನೊಂದು ಬಾರಿ ಈ ಹಾಡುಗಳನ್ನು ಕೇಳಿದಾಗ ಈ ರಾಗಗಳ ಹೆಸರನ್ನೊಮ್ಮೆ ನೆನೆಯಿರಿ. ನಾಟಕದ ಶೈಲಿಯ ಇನ್ನೊಂದು ಪ್ರಸಿದ್ಧ ಗೀತೆ ರವಿಚಂದ್ರ ಚಿತ್ರದ ಸತ್ಯಭಾಮೆ ಸತ್ಯಭಾಮೆ ಎನ್ನುವ ಹಾಡು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ