ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅದ್ಯಾಕೋ ಬ್ಯಾಡ್ ಟೈಂ ಶುರುವಾದಂತಿದೆ. ಇತ್ತೀಚೆಗೆ ಕಾಂತಾರ-1 ಚಿತ್ರದ ಇಬ್ಬರು ಕಲಾವಿದರು ಬ್ಯಾಕ್ ಟು ಬ್ಯಾಕ್ ತೀರಿಕೊಂಡಿದ್ದಾರೆ. ಇದೀಗ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರಕ್ಕೂ ಕುತ್ತು ಬರುವಂತಿದೆ. ಬಾಲಿವುಡ್ನಲ್ಲಿ ಮತ್ತೊಂದು ಶಿವಾಜಿ ಸಿನಿಮಾ ಅನೌನ್ಸ್ ಆಗಿದ್ದು, ಅಕ್ಷರಶಃ ಶಾಕ್ನಲ್ಲಿದ್ದಾರೆ ರಿಷಬ್ ಶೆಟ್ಟಿ.ಕರಾವಳಿಯ ಕುವರ, ಹೆಮ್ಮೆಯ ಕನ್ನಡಿಗ, ಕಾಂತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ವಿಶ್ವಸಂಸ್ಥೆವರೆಗೂ ಕೊಂಡೊಯ್ದ ಅತ್ಯದ್ಭುತ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ. ಡಿವೈನ್ ಸ್ಟಾರ್ ಆಗಿ ಇಡೀ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಕಾಂತಾರ ಬಳಿಕ ಇವರ ಕಾಂತಾರ ಪ್ರೀಕ್ವೆಲ್ ಹಾಗೂ ಮುಂದಿನ ನಡೆ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿದೆ.
ಕಾಂತಾರ ಚಿತ್ರ ತೆರೆಕಂಡು ಮೂರು ವರ್ಷಗಳು ಮುಗಿಯುತ್ತಿದ್ದು, ಅಂದಿನಿಂದ ಕಾಂತಾರ ಪ್ರೀಕ್ವೆಲ್ನಲ್ಲಿಯೇ ಬ್ಯುಸಿ ಆಗಿದ್ದಾರೆ ರಿಷಬ್. ಆದರೆ ಈ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಪಂಜುರ್ಲಿ ದೈವ ಭವಿಷ್ಯ ನುಡಿದಂತೆ ರಿಷಬ್ಗೆ ಶತ್ರುಗಳ ಕಾಟ ಜಾಸ್ತಿ ಆಗ್ತಿದೆ. ಅದೇ ಕಾರಣದಿಂದ ತನ್ನ ಕಾಂತಾರ ಚಾಪ್ಟರ್-1ನ ಇಬ್ಬರು ಕಲಾವಿದರು ಚಿತ್ರ ಬಿಡುಗಡೆಗೆ ಮೊದಲೇ ತೀರಿಕೊಂಡರು.
ಈ ಮಧ್ಯೆ ರಿಷಬ್ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅನೌನ್ಸ್ ಆಗಿದ್ದವು. ಅವುಗಳಲ್ಲಿ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಒಂದಾದ್ರೆ, ಸಂದೀಪ್ ಸಿಂಗ್ ನಿರ್ದೇಶನದ ಛತ್ರಪತಿ ಶಿವಾಜಿ ಮಹಾರಾಜ್ ಮತ್ತೊಂದು. ಆದರೀಗ ಶಿವಾಜಿ ಮಹಾರಾಜರ ಕುರಿತ ಸಿನಿಮಾ ರಿಷಬ್ ಮಾಡುತ್ತಾರೆಯೋ, ಇಲ್ಲವೋ ಅನ್ನೋದೇ ಡೌಟ್ ಎನ್ನುವಂತಾಗಿದೆ. ಅದಕ್ಕೆ ಕಾರಣ ಬಾಲಿವುಡ್ ಅಂಗಳದಲ್ಲಿ ಅನೌನ್ಸ್ ಆಗಿರೋ ಮತ್ತೊಂದು ಶಿವಾಜಿ ಸಿನಿಮಾ.
ಹೌದು…ಬಾಲಿವುಡ್ ನಟ ರಿತೇಶ್ ದೇಶಮುಖ್ ರಾಜ ಶಿವಾಜಿ ಟೈಟಲ್ನಲ್ಲಿ ಹೊಸ ಸಿನಿಮಾ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್ ಹಾಗೂ ಮುಂಬೈ ಫಿಲ್ಮ್ ಕಂಪೆನಿ ಜೊತೆಗೂಡಿ ರಿತೇಶ್ ದೇಶಮುಖ್ ಶಿವಾಜಿ ಸಿನಿಮಾನ ಆರಂಭ ಮಾಡುತ್ತಿದ್ದು, ಟೈಟಲ್ ರೋಲ್ನಲ್ಲಿ ಬಣ್ಣ ಹಚ್ಚೋದ್ರ ಜೊತೆಗೆ ತಾವೇ ಅದಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳುತ್ತಿದ್ದಾರೆ.
2026ಕ್ಕೆ ಮಹಾರಾಷ್ಟ್ರ ದಿನವಾದ ಮೇ 1ರಂದು ರಾಜ ಶಿವಾಜಿ ಸಿನಿಮಾನ ರಿಲೀಸ್ ಮಾಡೋದಾಗಿ ಅನೌನ್ಸ್ ಕೂಡ ಮಾಡಿದ್ದಾರೆ ರಿತೇಶ್. ಆದ್ರೆ 2027ರ ಜನವರಿ 21ರಂದು ರಿಷಬ್ ನಟನೆಯ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ತೆರೆಗೆ ಬರೋದಾಗಿ ಅನೌನ್ಸ್ ಮಾಡಿತ್ತು ರಿಷಬ್ ಟೀಂ. ಆದರೆ ಈಗ ಅದಕ್ಕೂ ಮೊದಲೇ ರಿತೇಶ್ ನಟನೆಯ ಶಿವಾಜಿ ಪ್ರೇಕ್ಷಕರ ಮುಂದೆ ಬರಲಿದೆ.
ಸ್ವರಾಜ್ಯಕ್ಕಾಗಿ ಹೋರಾಡಿದ ಅಪ್ರತಿಮ ಐತಿಹಾಸಿಕ ವೀರ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಸಿನಿಮಾಗಾಗಿ ಇಡೀ ಭಾರತ ಎದುರು ನೋಡುತ್ತಿದೆ. ಆದರೆ ಇವರಿಬ್ಬರ ನಡುವೆ ಈ ಚಿತ್ರಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಇಬ್ಬರೂ ಶಿವಾಜಿ ಸಿನಿಮಾ ಮಾಡುತ್ತಾರೆಯೇ ಅಥವಾ ಪರಸ್ಪರ ಮಾತುಕತೆ ಮೂಲಕ ಒಬ್ಬರು ಅದನ್ನ ಕೈಬಿಡ್ತಾರಾ ಅನ್ನೋದು ಕಾದು ನೋಡಬೇಕಿದೆ.