ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ.
ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ ಸಂಗೀತವನ್ನು ಇಷ್ಟ ಪಡುತ್ತಿದ್ದವ. ಈ ಡೆಡ್ಲೀ ಕಾಂಬಿನೇಷನ್ನಿನಲ್ಲಿ ಅಂಜಲಿ ಎಂಬ ಚಿತ್ರ ಬಿಡುಗಡೆಯಾಗಿದ್ದನ್ನು ಕೇಳಿ ನಾನು ಮತ್ತು ನಮ್ಮ ಗೆಳೆಯರೆಲ್ಲಾ ಪಲ್ಲವಿ ಸಿನಿಮಾ ಮಂದಿರದಲ್ಲಿ ನೋಡಲು ಹೋಗಿದ್ದೆವು. ಈಗ ಆ ಚಿತ್ರಮಂದಿರವನ್ನು ಒಡೆದು ಹಾಕಲಾಗಿದೆ ಆದರೂ ಪಲ್ಲವಿ ಟಾಕೀಸ್ ಸ್ಟಾಪ್ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡು ಗತವೈಭವವನ್ನು ನೆನೆಪಿಸುತ್ತಿದೆ.
ಚಿತ್ರಮಂದಿರದಲ್ಲಿ, ಆರಂಭದಲ್ಲಿ ಮಣಿರತ್ನಂ ಅವರ ಚಿತ್ರ ಕಥೆ ಒಂದು ಕಡೆಯಾದರೆ, ತಮ್ಮ ಐನೂರನೇ ಸಂಗೀತ ಚಿತ್ರನಿರ್ದೇಶನದ ಚಿತ್ರದಲ್ಲಿ ಇಳೆಯರಾಜ ಒಂದಕ್ಕಿಂತ ಒಂದು ಅತ್ಯಮೋಘವಾದ ಹಾಡುಗಳು ಮನಸೂರೆ ಗೊಳ್ಳುತ್ತಿದ್ದಂತೆಯೇ, ಧುತ್ತೆಂದು ಸುಮಾರು ಎರಡು ಅಥವಾ ಎರಡೂವರೇ ವರ್ಷದ ಪುಟ್ಟ ಹುಡುಗಿಯ ಆಗಮನವಾಗುತ್ತಿದ್ದಂತೆಯೇ, ಆಕೆಯ ಮೇಲೆ ನೆಟ್ಟ ನಮ್ಮ ಕಣ್ಣುಗಳನ್ನು ಬೆರೆಡೆಯಲ್ಲಿ ಸರಿಸಲೇ ಆಗಲಿಲ್ಲ. ಅದಾಗಲೇ ಪ್ರಬುದ್ಧ ನಟ ನಟಿಯಾಗಿ ಹೆಸರುವಾಸಿಯಾಗಿದ್ದ ರಘುವರನ್ ಮತ್ತು ರೇವತಿಯವರಿಗಿಂತಲೂ ಒಂದು ಕೈ ಅಧಿಕವಾಗಿ, ಒಬ್ಬ ಮಾನಸಿಕವಾಗಿ ಅಷ್ಟೇನೂ ಬುದ್ಧಿ ಬೆಳಯದಿದ್ದ ಹುಡುಗಿಯ ಪಾತ್ರದಲ್ಲಿ ಯಾವುದೇ ಸಂಭಾಷಣೆಯೇ ಇಲ್ಲದೇ ತನ್ನ ಮನೋಜ್ಞ ಅಭಿನಯದಿಂದ ತನ್ನ ಚೊಚ್ಚಲು ಚಿತ್ರದಲ್ಲೇ ಎಲ್ಲರ ಮನಸ್ಸೂರೆಗೊಂಡಿದ್ದಳು ಬೇಬಿ ಶ್ಯಾಮಿಲಿ. ಆ ಚಿತ್ರದ ಉತ್ತಮ ಬಾಲನಟಿಯಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಜಿಕೊಳ್ಳುವ ಮುಖಾಂತರ ದಿನ ಬೆಳಗಾಗುವುದರೊಳಗೆ ವಿಶ್ವ ವಿಖ್ಯಾತಳಾಗಿ ಹೋದಳು.

ಜುಲೈ 10, 1987 ರಂದು ಬಾಬು ಮತ್ತು ಆಲಿಸ್ ದಂಪತಿಗೆ ಚೆನ್ನೈನಲ್ಲಿ ಜನಿಸಿದ ಬೇಬಿ ಶ್ಯಾಮಿಲಿಗೆ ಚಿತ್ರರಂಗವೇನೂ ಹೊಸದೇನೂ ಆಗಿರಲಿಲ್ಲ. ಆಕೆಯ ತಂದೆಯೂ ಸಹ ಚಲನಚಿತ್ರ ನಟನಾಗುವ ಹಂಬಲದಿಂದ ಮದ್ರಾಸ್ಗೆ ವಲಸೆ ಬಂದು ಅದು ಸಾಧ್ಯವಾಗದೇ ಹೋದಾಗ, ತಮ್ಮ ಮಕ್ಕಳ ಮೂಲಕ ಅವರ ಮಹತ್ವಾಕಾಂಕ್ಷೆಯನ್ನು ಈಡೇರಿಕೊಂಡವರು. ಶ್ಯಾಮಿಲಿಯ ಅಕ್ಕ ಶಾಲಿನಿ ಅದಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರಾಂತ ಬಾಲನಟಿಯಾಗಿ ಪ್ರಖ್ಯಾತಳಾಗಿದ್ದಳು ಮತ್ತು ಮುಂದೆ ಆಕೆ ದೊಡ್ಡವಳಾಗಿ ನಟ ಅಜಿತ್ ಅವರನ್ನು ವರಿಸಿದ್ದಾಳೆ. ಇನ್ನು ಸಹೋದರ ರಿಚರ್ಡ್ ರಿಷಿ ಕೂಡ ಚಲನ ಚಿತ್ರ ನಟನೇ ಹೌದು. ಹೀಗೆ ನಟ ನಟಿಯರೇ ಅವರ ಕುಟುಂಬದಲಿದ್ದಾರೆ.
1990 ರ ಅಂಜಲಿ ಚಲನಚಿತ್ರದಲ್ಲಿ ಮಾನಸಿಕ ಸವಾಲಿನ ಮಗುವಿನ ಪಾತ್ರದಲ್ಲಿ ಸೈ ಎನಿಸಿಕೊಂಡು ಹತ್ತು ಹಲವಾರು ಪ್ರಶಸ್ತಿಗಳನ್ನು ಚಾಜಿಕೊಂಡನೆಯೇ ಆಕೆಗೆ ದಕ್ಷ್ಣಿಣ ಭಾರತದ ಅಷ್ಟೂ ಭಾಷೆಯ ಚಿತ್ರರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿಯತೊಡಗಿತು. ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆಯುಳ್ಳ ಬಾಲ ನಟಿಯಾಗಿದ್ದಲ್ಲದೇ, ಆಕೆಯನ್ನು ಮನಸ್ಸಿನಲ್ಲಿಟ್ಟು ಕೊಂಡೇ ಅನೇಕ ಚಿತ್ರಕಥೆಗಳನ್ನು ಬರೆಯತೊಡಗಿದವು. ಜೆಸ್ಸಿಕಾ ಮೆಕ್ಕ್ಲೂರ್ ಆಧಾರಿತ ಭರತನ್ ಅವರ ಮಾಲೂಟ್ಟಿ ಎಂಬ ಮಲೆಯಾಳಿ ಚಿತ್ರದಲ್ಲಿ ಬೋರ್-ಬಾವಿಯೊಳಗೆ ಸಿಕ್ಕಿಬಿದ್ದ ಮಗುವಿನ ಆಕೆಯ ಅಭಿನಯಕ್ಕಾಗಿ ಆಕೆಗೆ ಕೇರಳ ರಾಜ್ಯದ ಅತ್ಯುತ್ತಮ ಬಾಲ ಕಲಾವಿದರಿಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತು. ಕನ್ನಡದಲ್ಲಿ ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಕೊತೆಯಲ್ಲಿ ಅಭಿನಯಿಸಿದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಅಭಿನಯಕ್ಕಾಗಿ ಶ್ಯಾಮಿಲಿಗೆ ಅತ್ಯುತ್ತಮ ಬಾಲ ಕಲಾವಿದರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು.





