– ರಾಘವೇಂದ್ರ ಅಡಿಗ ಎಚ್ಚೆನ್.
‘ಟಗರು’, ‘ಸಲಗ’ ಹಾಗೂ ‘ಯುಐ’ ಚಿತ್ರಗಳನ್ನು ನಿರ್ಮಿಸಿರುವ ಕೆಪಿ ಶ್ರೀಕಾಂತ್ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವೀನಸ್ ಎಂಟರ್ಟೈನರ್ ಬ್ಯಾನರ್ ಅಡಿ ಮೂಡಿ ಬರ್ತಿರುವ ನಾಲ್ಕನೇ ಚಿತ್ರಕ್ಕೆ ‘ಹಲ್ಕಾ ಡಾನ್’ ಎಂಬ ಶೀರ್ಷಿಕೆ ಇಡಲಾಗಿದೆ.

ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಹಾಜರಿದ್ದ ಶಿವಣ್ಣ-ಗೀತಾ ದಂಪತಿ, ಸುದೀಪ್, ರಚಿತಾ ರಾಮ್, ದುನಿಯಾ ವಿಜಯ್, ವಿನಯ್ ರಾಜ್ಕುಮಾರ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಹಲವು ತಾರೆಯರು ಚಿತ್ರ ತಂಡಕ್ಕೆ ಶುಭ ಕೋರಿದರು. ಇದೇ ವೇಳೆ, ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿಕುಮಾರ್ ಅವರಿಗೆ ಚಿತ್ರತಂಡ ಸನ್ಮಾನಿಸಿತು.

ಕಿಚ್ಚ ಸುದೀಪ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ಗೀತಕ್ಕ ಹಾಗೂ ರಚಿತಾ ರಾಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ಶಿವಣ್ಣ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದರು. ‘ರತ್ನನ್ ಪ್ರಪಂಚ’ ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ, ಜ್ಯೋತಿ ರೈ ತಾರಾಬಳಗದಲ್ಲಿದ್ದಾರೆ

ಮುಹೂರ್ತದ ಬಳಿಕ ಚಿತ್ರದ ಕುರಿತು ಮಾತನಾಡಿದ ನಟ ದುನಿಯಾ ವಿಜಯ್, ಶ್ರೀಕಾಂತ್ ಸರ್ ಮೇಲೆ ಪ್ರೀತಿ, ಕೋಪ ಎರಡು ಇದೆ. ಸಿನಿಮಾ ಮಾಡದೇ ಇದ್ದಾಗ ಕೋಪ, ಮಾಡಿದಾಗ ಖುಷಿ ಇರುತ್ತದೆ. ನಾನು ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಶ್ರೀಕಾಂತ್ ಸರ್ ಬ್ಯಾನರ್ ಪ್ರಮುಖ ಕಾರಣ. ‘ಸಲಗ’ ಬಳಿಕ ‘ಭೀಮ’ ಸಿನಿಮಾ ನನಗೆ ಮತ್ತೊಂದು ಜನ್ಮ ಕೊಟ್ಟಿತು. ಈಗ ನಿರ್ಮಾಣಗೊಳ್ಳುತ್ತಿರುವ ‘ಹಲ್ಕಾ ಡಾನ್’ ಸಿನಿಮಾ ಸೂಪರ್ ಹಿಟ್ ಆಗಲಿ. ಈ ಚಿತ್ರದ ಕಾಂಬಿನೇಷನ್ ಸೂಪರ್ ಆಗಿದೆ. ಸತ್ಯ ಹೆಗ್ಡೆ ಹಾಗೂ ಸೂರಿ ಅವರನ್ನು ನಾನು ಯಾವತ್ತೂ ಮರೆಯುವ ಹಾಗಿಲ್ಲ. ಹರಿಕೃಷ್ಣ ಸೂಪರ್ ಹಿಟ್ ಹಾಡು ಕೊಟ್ಟವರು. ಗಾಂಧಿ ನಗರದಲ್ಲಿ ರೇಸ್ ಕುದುರೆಗಳ ಕರೆಕ್ಟ್ ಕುನ್ನಿಸ್ ಬಾಯಿ ಹಿಡಿಯುವವರು ಅಂದರೆ ಅದು ಶ್ರೀಕಾಂತ್ ಸರ್. ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಪ್ರಮೋದ್ ಅವರ ನಟನೆ ಚೆನ್ನಾಗಿ ಮೂಡಿ ಬಂದಿತ್ತು. ಈ ಚಿತ್ರಕ್ಕೂ ಕೂಡ ಒಳ್ಳೆಯದಾಗಲಿ ಎಂದರು.

ನಿರ್ಮಾಪಕ ಶ್ರೀಕಾಂತ್ ಮಾತನಾಡಿ, ‘ಹಲ್ಕಾ ಡಾನ್’ ಚಿತ್ರದ ಮುಹೂರ್ತದಿಂದ ನನಗೆ ಎನರ್ಜಿ ಬಂದಿದೆ. ಇದೇ ಎನರ್ಜಿಯಿಂದ ಮುಂದೆ ಶಿವಣ್ಣ ಹಾಗೂ ವಿಜಯ್ ಅವರ ಜೊತೆ ಸಿನಿಮಾ ಮಾಡುವೆ. ಅವರಿಬ್ಬರ ಜೊತೆ ಹರಿಕೃಷ್ಣ ಮ್ಯೂಸಿಕ್ ಇರಲಿದೆ. ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಸಿನಿಮಾ ನೋಡ್ಬಹುದು. ನಮ್ಮ ಸಂಸ್ಥೆಗೆ ವಿಜಿ ಸರ್ ಬೆನ್ನೆಲುಬು ಆಗಿ ನಿಂತಿದ್ದು, ನನ್ನ ಹಿಂದೆ ಒಳ್ಳೆ ತಂಡ ಇದೆ. ಎಲ್ಲರ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಆಗಲಿದೆ. ‘ಹಲ್ಕಾ ಡಾನ್’ ಎಂಬುದು ಆಡು ಭಾಷೆ. ಚಿತ್ರದಲ್ಲಿ ಪ್ರಮೋದ್ ಅವರು ಸಾಯಿಕುಮಾರ್ ಅವರ ಫ್ಯಾನ್ ಎಂದರು.

ನಾಯಕ ಪ್ರಮೋದ್ ಮಾತನಾಡಿ, ನನ್ನ ಮೊದಲ ಸಿನಿಮಾಗೆ ನಾನು ಇಷ್ಟು ಟೆನ್ಷನ್ ಮಾಡಿಕೊಂಡಿರಲಿಲ್ಲ. ಆದರೆ, ಈ ಸಿನಿಮಾದಲ್ಲಿ ಟೆನ್ಷನ್ ಜೊತೆಗೆ ಒಂದೊಳ್ಳೆ ವೈಬ್ರೇಷನ್ ಸಿಕ್ಕಿದೆ. ಶಿವಣ್ಣನ ಜೊತೆ ಸಿನಿಮಾ ಮಾಡುವಾಗ ನನ್ನನ್ನು ಹಾಕಿಕೊಳ್ಳುವಂತೆ ಶ್ರೀಕಾಂತ್ ಅವರಲ್ಲಿ ಕೇಳಿಕೊಂಡ ಪ್ರಮೋದ್, ನಾನು ಶಿವಣ್ಣ ಅವರಿಂದ ಏಟು ತಿನ್ನಬೇಕು. ಅಂದರೆ ಅವರ ಜೊತೆ ನಟಿಸಬೇಕು ಎಂಬ ಆಸೆ ಇದೆ. ಸುದೀಪ್ ಸರ್ ನನ್ನ ಆ್ಯಕ್ಟಿಂಗ್ ಬಗ್ಗೆ ಹೊಗಳಿದ್ದಕ್ಕೆ ನನಗೆ ಸಾರ್ಥಕತೆ ಅನ್ನಿಸುತ್ತಿದೆ. ವಿಜಿ ಸರ್, ಗಣೇಶ್ ಸರ್ ನಮಗೆಲ್ಲಾ ಕಾನ್ಫಿಡೆನ್ಸ್ ನೀಡುತ್ತಾರೆ. ನಾನು ಐದಾರು ಬಾರಿ ಈ ಸಿನಿಮಾದ ಕಥೆ ಕೇಳಿದ್ದೇನೆ. ಡೈರೆಕ್ಟರ್ ತುಂಬಾ ಚೆನ್ನಾಗಿ ಕಥೆ ಬರೆದಿದ್ದಾರೆ. ನನ್ನ ಈ ಜರ್ನಿಗೆ ಈ ಸಿನಿಮಾ ಸಪೋರ್ಟ್ ಆಗಲಿದೆ ಎಂಬ ನಂಬಿಕೆ ಇದೆ ಎಂದರು.

ನಟಿ ಅಮೃತಾ ಅಯ್ಯಂಗಾರ್ . ‘ಮೊದಲು ನಾನು ಟೈಟಲ್ ಕೇಳಿರಲಿಲ್ಲ. ಬರೀ ಕಥೆ ಕೇಳಿದ್ದೆ. ಇದು ಟೈಟಲ್ ಅಂತ ತಿಳಿದಾಗ ವಾವ್ ಎನಿಸಿತು. ಮಾಸ್ ನಿರ್ಮಾಪಕರ ಜೊತೆ ನಾನು ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ’ ಎಂದರು.
ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ‘ಹಲ್ಕಾ ಡಾನ್’ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಚಲಾ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.





