ಭಾವನಾತ್ಮಕ ಫಿಕ್ಷನ್ ಧಾರಾವಾಹಿಗಳು ಹಾಗೂ ಸೂಪರ್ ರಿಯಾಲಿಟಿ ಶೋಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈಗ ಎರಡು ವಿಶಿಷ್ಟ ಶೋಗಳನ್ನು ಪ್ರಾರಂಭಿಸುತ್ತಿದೆ. ಜೂನ್ 14ರಂದು ರಾತ್ರಿ 7:30ಕ್ಕೆ ‘ಮಹಾನಟಿ ಸೀಸನ್ 2’ ಹಾಗೂ ಜೂನ್ 16 ರಿಂದ ಪ್ರತಿದಿನ ರಾತ್ರಿ 8ಕ್ಕೆ ಹೊಸ ಧಾರಾವಾಹಿ ‘ಕರ್ಣ ಪ್ರಸಾರವಾಗಲಿದೆ. ಕರ್ಣ ತ್ಯಾಗ ಪ್ರೀತಿ ಮತ್ತು ಭಾವನೆಗಳಿಗೆ ಒತ್ತು ಕೊಟ್ಟರೆ, ಮಹಾನಟಿ ಸೀಸನ್ 2 ಮಹಾನಟಿ ಕನಸು, ಫೇಮ್ ಬಗ್ಗೆ ಇದೆ.

ಮಹಾನಟಿ ಸೀಸನ್ 1 ರ ಯಶಸ್ಸಿನ ನಂತರ ಈಗ  ‘ಮಹಾನಟಿ ಸೀಸನ್ 2′ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಮೊದಲ ಆವೃತ್ತಿಯ ವಿಜೇತೆ ಪ್ರಿಯಾಂಕಾ,  ಸ್ಯಾಂಡಲ್​ವುಡ್​  ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಈ ಶೋನ ಯಶಸ್ಸಿಗೆ ಒಂದು ಉತ್ತಮ ಉದಾಹರಣೆ.ಜೂನ್ 14ರಂದು ರಾತ್ರಿ 7:30ಕ್ಕೆ ಪ್ರಾರಂಭವಾಗಲಿರುವ ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಭಾಗವಹಿಸಲಿದ್ದಾರೆ. ಇನ್ನು 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ತರಬೇತಿ ಸಿಗಲಿದೆ.  ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು  ಈ ಶೋ ನ ತೀರ್ಪುಗಾರರಾಗಿದ್ದು ಎವರ್​ಗ್ರೀನ್ ನಟ ರಮೇಶ್ ಅರವಿಂದ್ ಅವರು ಮಾಸ್ಟರ್ ಮೈಂಡ್ ಆಗಿ ಇವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಕನ್ನಡದ ಅಚ್ಚುಮೆಚ್ಚಿನ ನಿರೂಪಕಿ ಈ ಶೋನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಕನಸುಗಳು ಹೇಗೆ ನನಸಾಗುತ್ತೆ ಅನ್ನೋದಕ್ಕೆ ಮಹಾನಟಿ ರಿಯಾಲಿಟಿ ಶೋ ಒಂದು ಉತ್ತಮ ಉದಾಹರಣೆ.

ಪ್ರತಿಷ್ಠಿತ ಕುಟುಂಬದ ರಾಮಕೃಷ್ಣ ವಸಿಷ್ಠ ಅನಾಥವಾಗಿ ಬಿದ್ದಿದ್ದ, ಕಸದಬುಟ್ಟಿಯಿಂದ ರಕ್ಷಿಸಿದ ಮಗುವೇ ‘ಕರ್ಣ’. ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಜನಪ್ರಿಯ ಸ್ತ್ರೀರೋಗ ತಜ್ಞ ಆಗಿರುವ ಈತ ಬಡವರಿಗಾಗಿ ತೋರಿಸುವ ಕಾಳಜಿ, ವೃತ್ತಿಪರ ನಿಷ್ಠೆ ಎಲ್ಲರಿಗೂ ಮಾದರಿಯಾಗಲಿದೆ. ಇದು ‘ಕರ್ಣ’ ಕಥೆಯ ಮುಖ್ಯ ಹಂದರವಾಗಿದ್ದು ಜನರ ಮನಗೆಲ್ಲೋದರಲ್ಲಿ ಎರಡು ಮಾತಿಲ್ಲ.  ಕಿರುತೆರೆಯಲ್ಲಿ ತನ್ನದೇ  ಆದ ಛಾಪು  ಮೂಡಿಸಿರುವ ನಟ ಕಿರಣ್ ರಾಜ್ ಕರ್ಣನಾಗಿ ಈ ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೊ ಹಾಗೂ ವಿಶೇಷ ಗೀತೆಯಲ್ಲಿ ಭವ್ಯ ಗೌಡ ಹಾಗು ಕಿರಣ್ ರಾಜ್ ಅವರ  ಜೋಡಿ ಪ್ರೇಕ್ಷಕರ ಮನ ಗೆದ್ದಿದೆ. ಜೊತೆಗೆ ನಮ್ರತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಂದನವನದ ಹಿರಿಯ ಕಲಾವಿದರಾದ ನಾಗಭರಣ, ಅಶೋಕ್ ಮತ್ತು ಮಹಾಲಕ್ಷ್ಮಿ ವಸಿಷ್ಠ ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದ ಮೂಲಕ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ