– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು, 26 ಮೇ, 2026: ಪ್ರತಿಷ್ಠಿತ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಹೃದ್ರೋಗ ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಶೇಷ ಟಿಎವಿಆರ್ ಸಾಧನವನ್ನು ಬಳಸಿಕೊಂಡು ಪ್ಯೂರ್ ನೇಟಿವ್ ಅಯೋರ್ಟಿಕ್ ವಾಲ್ವ್ ರಿಗರ್ಜಿಟೇಷನ್ ಗಾಗಿ ಭಾರತದ ಮೊದಲ ಟ್ರಾನ್ಸ್ ಕ್ಯಾತಿಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (ಟಿಎವಿಐ) ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿರಿಯ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್ವೆಂಷನ್ ಸ್ಪೆಷಲಿಸ್ಟ್ ಆದ ಡಾ. ಸೂರಜ್ ನರಸಿಂಹನ್ ಅವರು ಈ ಚಿಕಿತ್ಸೆಯನ್ನು ನಡೆಸಿದ್ದು, ಈ ಸಂಕೀರ್ಣ ಕವಾಟದ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಹೆಚ್ಚಿನ ಅಪಾಯದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಇದು ಪ್ರಮುಖ ಬದಲಾವಣೆಯನ್ನು ತಂದಿದೆ.
ಅಯೋರ್ಟಿಕ್ ಕವಾಟದ ಕಾಯಿಲೆಯನ್ನು ವಿಶಾಲವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಒಂದು, ಸ್ಟೆನೋಸಿಸ್. ಇದರಲ್ಲಿ ಕವಾಟದ ದ್ವಾರವು ಕ್ರಮೇಣ ಕಿರಿದಾಗುತ್ತದೆ. ಇನ್ನೊಂದು, ರಿಗರ್ಜಿಟೇಷನ್. ಇದರಲ್ಲಿ ಕವಾಟವು ಸಂಪೂರ್ಣವಾಗಿ ಮುಚ್ಚಲು ವಿಫಲವಾಗುತ್ತದೆ, ಇದರಿಂದಾಗಿ ರಕ್ತವು ಹೃದಯದ ಕಡೆಗೆ ಹಿಂದಕ್ಕೆ ಹರಿಯುತ್ತದೆ.
ಅಯೋರ್ಟಿಕ್ ರಿಗರ್ಜಿಟೇಷನ್ ಜಾಗತಿಕವಾಗಿ ಮೂರನೇ ಅತ್ಯಂತ ಸಾಮಾನ್ಯ ಕವಾಟದ ಕಾಯಿಲೆಯಾಗಿದೆ ಮತ್ತು ವಯಸ್ಸಾಗುತ್ತಿರುವ ಜನಸಂಖ್ಯೆಯೊಂದಿಗೆ ಇದರ ಪ್ರಮಾಣವು ಹೆಚ್ಚುತ್ತಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಜನರು ಮಧ್ಯಮ ಅಥವಾ ತೀವ್ರ ಸ್ವರೂಪದ ಎಆರ್ ಅನ್ನು ಹೊಂದಿರುತ್ತಾರೆ ಮತ್ತು ಒಮ್ಮೆ ಇದರ ಲಕ್ಷಣಗಳು ಕಾಣಿಸಿಕೊಂಡರೆ, ರೋಗಿಯ ಪರಿಸ್ಥಿತಿ ವೇಗವಾಗಿ ಕ್ಷೀಣಿಸುತ್ತದೆ. ಕಳೆದ ಒಂದೂವರೆ ದಶಕದಲ್ಲಿ ಟ್ರಾನ್ಸ್ ಕ್ಯಾತಿಟರ್ ತಂತ್ರಜ್ಞಾನಗಳು ಅಯೋರ್ಟಿಕ್ ಸ್ಟೆನೋಸಿಸ್ ಚಿಕಿತ್ಸೆಯ ಫಲಿತಾಂಶಗಳನ್ನು ಸಂಪೂರ್ಣವಾಗಿ ಬದಲಾಯಿಸಿದ್ದರೂ, ಮುಕ್ತ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ಗೆ ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟಕರವಾಗಿತ್ತು.
ಇದಕ್ಕೆ ಕಾರಣ ಮಾನವನ ದೇಹರಚನೆ. ಸ್ಟೆನೋಸಿಸ್ ಸಾಮಾನ್ಯವಾಗಿ ಕ್ಯಾಲ್ಸಿಯಂ ಶೇಖರಣೆಯನ್ನು ಒಳಗೊಂಡಿರುತ್ತದೆ, ಇದು ಟ್ರಾನ್ಸ್ ಕ್ಯಾತಿಟರ್ ಕವಾಟವನ್ನು ಸರಿಯಾದ ಜಾಗದಲ್ಲಿ ಭದ್ರಪಡಿಸಲು ಸಹಾಯ ಮಾಡುತ್ತದೆ. ಆದರೆ ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ನಲ್ಲಿ ಯಾವುದೇ ಕ್ಯಾಲ್ಸಿಯಂ ರಚನೆ ಇರುವುದಿಲ್ಲ, ಹೀಗಾಗಿ ಸಾಧನವನ್ನು ಭದ್ರವಾಗಿ ಕೂರಿಸಲು ಯಾವುದೇ ಕಠಿಣವಾದ ಆಧಾರ ಇರುವುದಿಲ್ಲ. ಈ ಶಾರೀರಿಕ ಸವಾಲಿನಿಂದಾಗಿ, ಈ ಕಾಯಿಲೆಗೆ ನಿರ್ದಿಷ್ಟವಾದ ಟ್ರಾನ್ಸ್ ಕ್ಯಾತಿಟರ್ ಪರಿಹಾರವನ್ನು ಅಭಿವೃದ್ಧಿಪಡಿಸುವುದು ವಿಳಂಬವಾಗಿತ್ತು.

ಹ್ಯಾಂಕರ್ ವಾಲ್ವ್ ಸಿಸ್ಟಮ್ ಅನ್ನು ನಿರ್ದಿಷ್ಟವಾಗಿ ಈ ಕೊರತೆಯನ್ನು ನೀಗಿಸಲು ವಿನ್ಯಾಸಗೊಳಿಸಲಾಗಿದೆ. ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ನ ವಿಶಿಷ್ಟ ಶಾರೀರಿಕ ಅಗತ್ಯಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಕವಾಟದಲ್ಲಿ ಕ್ಯಾಲ್ಸಿಯಂ ಇಲ್ಲದಿದ್ದರೂ ಸಹ ವಿಶ್ವಾಸಾರ್ಹ ಟ್ರಾನ್ಸ್ ಕ್ಯಾತಿಟರ್ ವಿಧಾನವನ್ನು ಇದು ಸಾಧ್ಯವಾಗಿಸುತ್ತದೆ. ಈ ವ್ಯತ್ಯಾಸವು ಅತ್ಯಂತ ಮಹತ್ವದ್ದಾಗಿದ್ದು, ಆರಂಭಿಕ ಹಂತದ ಸಾಮಾನ್ಯ ಸಾಧನಗಳೊಂದಿಗೆ ಪ್ಯೂರ್ ಎಆರ್ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇಕಡಾ 67% ರಷ್ಟಿತ್ತು. ಆದರೆ ಈ ವಿಶೇಷ ವ್ಯವಸ್ಥೆಗಳು ಆ ಅಂಕಿ-ಅಂಶವನ್ನು ಸರಿಸುಮಾರು ಶೇಕಡಾ 95%ಕ್ಕೆ ಹೆಚ್ಚಿಸಿವೆ. ಅಲ್ಲದೆ, ಕವಾಟವು ತನ್ನ ಜಾಗದಿಂದ ಜರುಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ ಮತ್ತು 30 ದಿನ ಹಾಗೂ ಒಂದು ವರ್ಷದ ಮರಣ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಈ ವಿಶೇಷ ಸಾಧನಗಳು ಭಾರತದಲ್ಲಿ ಲಭ್ಯವಿರಲಿಲ್ಲ. ನಾರಾಯಣ ಹೆಲ್ತ್ ಸಿಟಿಯು ಸರ್ಕಾರದ ವಿಶೇಷ ಅನುಮತಿಯೊಂದಿಗೆ ಈ ಸಾಧನಗಳನ್ನು ಆಮದು ಮಾಡಿಕೊಂಡಿದ್ದು, ಸಾಂಪ್ರದಾಯಿಕ ಮುಕ್ತ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅತಿ ಹೆಚ್ಚು ಅಪಾಯವಿದ್ದ ಇಬ್ಬರು ರೋಗಿಗಳಿಗೆ ಇದನ್ನು ಬಳಸಿದೆ.
80 ವರ್ಷ ಮತ್ತು 69 ವರ್ಷದ ಇಬ್ಬರು ಪುರುಷ ರೋಗಿಗಳು ತೀವ್ರವಾದ ಅಯೋರ್ಟಿಕ್ ರಿಗರ್ಜಿಟೇಷನ್ ನಿಂದ ಬಳಲುತ್ತಿದ್ದರು. ಹೆಚ್ಚು ವಯಸ್ಸು ಮತ್ತು ಇತರ ವೈದ್ಯಕೀಯ ಸಮಸ್ಯೆಗಳ ಕಾರಣದಿಂದಾಗಿ, ಮಲ್ಟಿಡಿಸಿಪ್ಲಿನರಿ ಹಾರ್ಟ್ ಟೀಮ್ (ವಿವಿಧ ವಿಭಾಗಗಳ ವೈದ್ಯರ ತಂಡ) ಇವರನ್ನು ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿರುವ ಅಭ್ಯರ್ಥಿಗಳು ಎಂದು ಮೌಲ್ಯೀಕರಿಸಿತು. ಸಿಟಿ-ಟಿಎವಿಐ ಪ್ರೋಟೋಕಾಲ್ ಇಮೇಜಿಂಗ್ ಸೇರಿದಂತೆ ಸಂಪೂರ್ಣ ಮೌಲ್ಯಮಾಪನದ ನಂತರ, ಇಬ್ಬರೂ ರೋಗಿಗಳು ಟ್ರಾನ್ಸ್ ಫೆಮೋರಲ್ ವಿಧಾನಕ್ಕೆ ಸೂಕ್ತವೆಂದು ನಿರ್ಧರಿಸಲಾಯಿತು. ಕಾರ್ಡಿಯಾಕ್ ಕ್ಯಾತಿಟೆರೈಸೇಶನ್ ಪ್ರಯೋಗಾಲಯದಲ್ಲಿ ಈ ಚಿಕಿತ್ಸೆಗಳನ್ನು ನಡೆಸಲಾಯಿತು. ಪ್ರತಿ ಪ್ರಕ್ರಿಯೆಯು ಸುಮಾರು 45 ರಿಂದ 60 ನಿಮಿಷಗಳಲ್ಲಿ ಪೂರ್ಣಗೊಂಡಿತು. ಯಾವುದೇ ಶಸ್ತ್ರಚಿಕಿತ್ಸೆಯ ಗಾಯ ಇಲ್ಲದೆ, ತೊಡೆಯ ಫೆಮೋರಲ್ ಅಪಧಮನಿಯ ಮೂಲಕ ಕವಾಟವನ್ನು ಒಳಗೆ ಸೇರಿಸಲಾಯಿತು. ಇಬ್ಬರೂ ರೋಗಿಗಳನ್ನು ಸ್ಥಿರಗೊಳಿಸಲಾಯಿತು ಮತ್ತು 48 ಗಂಟೆಗಳ ಅಲ್ಪಾವಧಿಯ ವೀಕ್ಷಣೆಯ ನಂತರ ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಲಾಯಿತು.
ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಹಿರಿಯ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್ವೆಂಷನ್ ಸ್ಪೆಷಲಿಸ್ಟ್ ಡಾ. ಸೂರಜ್ ನರಸಿಂಹನ್ ಅವರು, “ಹಲವು ವರ್ಷಗಳಿಂದ, ತೀವ್ರವಾದ ಅಯೋರ್ಟಿಕ್ ರಿಗರ್ಜಿಟೇಷನ್ ಹೊಂದಿರುವ ಮತ್ತು ಶಸ್ತ್ರಚಿಕಿತ್ಸೆಗೆ ಸೂಕ್ತವಲ್ಲದ ವಯಸ್ಸಾದ ರೋಗಿಗಳಿಗೆ ಅತ್ಯಂತ ಸೀಮಿತ ಆಯ್ಕೆಗಳಿದ್ದವು ಮತ್ತು ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿತ್ತು. ಸಾಂಪ್ರದಾಯಿಕವಾಗಿ ನಿರ್ವಹಿಸಲಾಗುವ ತೀವ್ರವಾದ ಎಆರ್ ರೋಗಿಗಳಲ್ಲಿ 2 ವರ್ಷಗಳ ಮರಣ ಪ್ರಮಾಣವು ಸುಮಾರು ಶೇಕಡಾ 50 ರಷ್ಟಿರುತ್ತದೆ. ಆದರೆ ಹ್ಯಾಂಕರ್ ವಾಲ್ವ್ ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈ ಪ್ರಕ್ರಿಯೆಯು ಈ ಹಿಂದೆ ಮುಕ್ತ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಚಿಕಿತ್ಸೆಯನ್ನು, ತೊಡೆಯಲ್ಲಿ ಒಂದು ಸಣ್ಣ ರಂಧ್ರದ ಮೂಲಕ, ಒಂದು ಗಂಟೆಯೊಳಗೆ ಒದಗಿಸುತ್ತದೆ. ಚಿಕಿತ್ಸೆ ಪಡೆದ 12 ಗಂಟೆಗಳ ಒಳಗೆ ರೋಗಿಗಳು ತಮ್ಮ ಕಾಲಿನ ಮೇಲೆ ನಿಲ್ಲಬಹುದು. ಇಂತಹ ರೋಗಿಗಳಿಗೆ ಇದು ನಿಜವಾದ ಮಹತ್ವದ ಬದಲಾವಣೆಯಾಗಿದೆ ಮತ್ತು ಈ ಹೊಸ ಅಧ್ಯಾಯವು ನಾರಾಯಣ ಹೆಲ್ತ್ ಸಿಟಿಯಲ್ಲಿ ಆರಂಭವಾಗಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ,” ಎಂದು ತಿಳಿಸಿದರು.
ಟಿಎವಿಐ/ಟಿಎವಿಆರ್ ಸ್ಟ್ರಕ್ಚರಲ್ ಚಿಕಿತ್ಸೆಗಳು ಮುಂದುವರಿದ ಹೃದಯ ಕವಾಟದ ಕಾಯಿಲೆಯ ಚಿಕಿತ್ಸೆಗಾಗಿ ಬಳಸಲಾಗುವ ಅತ್ಯಂತ ವಿಶೇಷವಾದ ಶಸ್ತ್ರಚಿಕಿತ್ಸೇತರ ವಿಧಾನಗಳಾಗಿವೆ. ಬೆಂಗಳೂರಿನ ನಾರಾಯಣ ಇನ್ ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಭಾರತದಲ್ಲೇ ಅತಿ ಹೆಚ್ಚು ಟಿಎವಿಐ/ಟಿಎವಿಆರ್ ಚಿಕಿತ್ಸೆಗಳನ್ನು ನಿರ್ವಹಿಸಿದ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಕೇಂದ್ರದ ಸ್ಟ್ರಕ್ಚರಲ್ ಹಾರ್ಟ್ ಡಿಸೀಸ್ ವಿಭಾಗವು ಇದುವರೆಗೆ 750 ಕ್ಕೂ ಹೆಚ್ಚು ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಜನಸಂಖ್ಯಾ ಪರಿಸ್ಥಿತಿ ಮತ್ತು ವಯಸ್ಸಾಗುತ್ತಿರುವ ಜನರ ಸಂಖ್ಯೆಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಈ ಚಿಕಿತ್ಸೆಗಳ ಬೇಡಿಕೆ ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ಸಾಧನೆಯ ಪ್ರಾಮುಖ್ಯತೆಯು ಕೇವಲ ಈ ಇಬ್ಬರು ರೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದಾದ್ಯಂತ ಕವಾಟದ ಹೃದ್ರೋಗ ಹೊಂದಿರುವ ಬಹಳಷ್ಟು ಸಂಖ್ಯೆಯ ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಾರೆ ಅಥವಾ ವಯಸ್ಸಿಗೆ ಸಂಬಂಧಿಸಿದ ಅಪಾಯಗಳು ಮತ್ತು ಇತರ ಕಾಯಿಲೆಗಳ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗೆ ನಿರಾಕರಿಸಲ್ಪಡುತ್ತಾರೆ. ಅಂತಹ ರೋಗಿಗಳಿಗೆ ಯಾವುದೇ ಸೂಕ್ತ ಮಾರ್ಗವಿರುವುದಿಲ್ಲ. ಈಗ ಅಯೋರ್ಟಿಕ್ ರಿಗರ್ಜಿಟೇಷನ್ ಗಾಗಿ ಈ ವಿಶೇಷ ಟ್ರಾನ್ಸ್ ಕ್ಯಾತಿಟರ್ ವೇದಿಕೆಯ ಯಶಸ್ವಿ ಬಳಕೆ ಈ ಗುಂಪಿನ ರೋಗಿಗಳಿಗೆ ಅತ್ಯಂತ ಮಹತ್ವದ ಚಿಕಿತ್ಸಾ ಆಯ್ಕೆಯನ್ನು ತೆರೆದಿದ್ದು, ಕಡಿಮೆ ಆಕ್ರಮಣಕಾರಿ, ಕಡಿಮೆ ಅಪಾಯದ ಪ್ರಕ್ರಿಯೆ ಮತ್ತು ದೈನಂದಿನ ಜೀವನಕ್ಕೆ ವೇಗವಾಗಿ ಮರಳುವ ಅವಕಾಶವನ್ನು ಇದು ಒದಗಿಸುತ್ತದೆ. ನಾರಾಯಣ ಹೆಲ್ತ್ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ಅವುಗಳನ್ನು ಸುರಕ್ಷಿತವಾಗಿ ಬಳಸಲು ಅಗತ್ಯವಿರುವ ಕ್ಲಿನಿಕಲ್ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ, ಜಾಗತಿಕವಾಗಿ ಲಭ್ಯವಿರುವ ಚಿಕಿತ್ಸೆಗಳು ಭಾರತದ ರೋಗಿಗಳಿಗೆ ಇಲ್ಲಿಯೇ ಲಭ್ಯವಾಗುವಂತೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.





