- ಡಾ. ಸುನೀಲ್ ಭಟ್,
ನಿರ್ದೇಶಕರು ಮತ್ತು ಕ್ಲಿನಿಕಲ್ ಹೆಡ್, ಆಂಕಾಲಾಜಿ ಮತ್ತು ಪೀಡಿಯಾಟ್ರಿಕ್ ಹೆಮಟಾಲಜಿ-ಆಂಕಾಲಜಿ, ನಾರಾಯಣ ಹೆಲ್ತ್, ಬೆಂಗಳೂರು.
ಹಿಮೋಫಿಲಿಯಾ ಸಮಸ್ಯೆ ಕೊಂಚ ಕಳವಳಕಾರಿಯಾಗಿರುವ ಸಮಸ್ಯೆ. ಅಲ್ಲದೇ, ಈ ಹಿಮೋಫಿಲಿಯಾ ರೋಗಪತ್ತೆ ತಡವಾದರೆ ಇನ್ನಷ್ಟು ಆತಂಕಕಾರಿಯಾಗಿದೆ. ಏಕೆಂದರೆ ಇದರ ಪರಿಣಾಮಗಳು ಜೀವನಪರ್ಯಂತ ಇರುತ್ತವೆ. ಹಿಮೋಫಿಲಿಯಾ ಎನ್ನುವುದು ಒಂದು ಆನುವಂಶಿಕ ರಕ್ತಸ್ರಾವದ ಅಸ್ವಸ್ಥತೆಯಾಗಿದ್ದು, ಇದು ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಅಂಶಗಳ ಕೊರತೆಯಿಂದ ಉಂಟಾಗುತ್ತದೆ. ಈ ಅಂಶಗಳು ಕಡಿತ, ಗಾಯ ಮತ್ತು ಪೆಟ್ಟುಗಳಿಂದ ಉಂಟಾಗುವ ರಕ್ತಸ್ರಾವವನ್ನು ತಡೆಯುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ, ಹಿಮೋಫಿಲಿಯಾ ಹೊಂದಿರುವ ವ್ಯಕ್ತಿಗಳು ಸಣ್ಣ ಗಾಯಗಳಿಂದಲೂ ನಿರಂತರ ರಕ್ತಸ್ರಾವವನ್ನು ಹೊಂದಬಹುದು. ಆದರೆ ಸೌಮ್ಯ ಅಥವಾ ಮಧ್ಯಮ ಮಟ್ಟದ ತೀವ್ರತೆ ಹೊಂದಿರುವವರಲ್ಲಿ, ಇದರ ಲಕ್ಷಣಗಳು ವರ್ಷಗಳ ಕಾಲ ಪತ್ತೆಯಾಗದೆ ಉಳಿಯಬಹುದಾಗಿದೆ.
ಹಾಗಾಗಿ ಹಿಮೋಫಿಲಿಯಾ ಸಮಸ್ಯೆಯು ಪತ್ತೆ ಮಾಡುವುದು ವಿಳಂಬವಾದಾಗ, ಅದರ ಹಾನಿಯು ಕೇವಲ ತತ್ಕ್ಷಣಕ್ಕೆ ಸೀಮಿತವಾಗಿರದೆ ಜೀವನಪರ್ಯಂತ ಇರುತ್ತದೆ. ಕೀಲುಗಳು, ಚಲನೆ, ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಿಮೋಫಿಲಿಯಾದ ಮೊದಲ ಲಕ್ಷಣಗಳು ಸಾಮಾನ್ಯವಾಗಿ ಶಿಶುವಾಗಿದ್ದಾಗಲೇ ಅಥವಾ ಬಾಲ್ಯದ ಆರಂಭದಲ್ಲಿ ಕಂಡುಬರುತ್ತವೆ. ಯಾವುದೇ ಪೆಟ್ಟು ಬೀಳದಿದ್ದರೂ ತಾನಾಗಿಯೇ ಮೈಮೇಲೆ ಮೂಡುವ ಗಾಯದ ಗುರುತುಗಳು, ಕೀಲುಗಳ ಬಾವು ಮತ್ತು ಸಣ್ಣ ಗಾಯಗಳು ಅಥವಾ ಲಸಿಕೆ ಹಾಕಿಸಿಕೊಂಡ ನಂತರ ಉಂಟಾಗುವ ವಿಪರೀತ ರಕ್ತಸ್ರಾವ ಇದರ ಲಕ್ಷಣಗಳಾಗಿವೆ. ಆದರೆ ಇವುಗಳನ್ನು ಹೆಚ್ಚಾಗಿ ಸಾಮಾನ್ಯ ಬಾಲ್ಯದ ಸಮಸ್ಯೆಗಳೆಂದು ನಿರ್ಲಕ್ಷಿಸಲಾಗುತ್ತದೆ.
ಕುಟುಂಬದಲ್ಲಿ ಈ ಮೊದಲೆಲ್ಲೂ ಈ ಕಾಯಿಲೆ ಇಲ್ಲದೇ ಇದ್ದಾಗ, ತಮ್ಮ ಮಗುವಿಗೆ ಹಿಮೋಫಿಲಿಯಾ ಇರುವುದು ಎಷ್ಟು ಗಂಭೀರವಾದ ವಿಚಾರ ಎಂಬುದು ಬಹುತೇಕ ಪೋಷಕರಿಗೆ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ, ಮಗುವಿಗೆ ಹಲ್ಲಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಿದಾಗ ಮಾತ್ರ ಈ ಸಮಸ್ಯೆ ಬೆಳಕಿಗೆ ಬರುತ್ತದೆ.
ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ರೋಗನಿರ್ಣಯ ವಿಳಂಬವಾಗಲು ಮುಖ್ಯ ಕಾರಣವೆಂದರೆ, ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕಾಯಿಲೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು. ಸಾಮಾನ್ಯ ವೈದ್ಯರು ಕೂಡ ಅಸ್ಪಷ್ಟ ಲಕ್ಷಣಗಳ ಆಧಾರದ ಮೇಲೆ ಇದನ್ನು ಗುರುತಿಸಲು ವಿಫಲರಾಗಬಹುದು, ಇದು ತಪ್ಪು ರೋಗನಿರ್ಣಯಗಳಿಗೆ ಕಾರಣವಾಗುತ್ತದೆ.
ವಿಳಂಬಿತ ರೋಗನಿರ್ಣಯದ ಗಂಭೀರ ಪರಿಣಾಮಗಳು
ತಡವಾಗಿ ರೋಗನಿರ್ಣಯ ಮಾಡುವುದರಿಂದ ಉಂಟಾಗುವ ವೈದ್ಯಕೀಯ ಪರಿಣಾಮಗಳು ಅತೀವವಾಗಿರುತ್ತವೆ. ಇವುಗಳಲ್ಲಿ ಪ್ರಮುಖವಾದುದು ಕೀಲುಗಳ ಹಾನಿ, ಅಂದರೆ ಪದೇ ಪದೇ ಕೀಲುಗಳಲ್ಲಿ ರಕ್ತಸ್ರಾವವಾಗುವುದು (ಹೀಮರ್ಥ್ರೋಸಿಸ್). ಇದರಿಂದ ನಿರಂತರ ಅಸ್ವಸ್ಥತೆ ಉಂಟಾಗುತ್ತದೆ ಮತ್ತು ಚಲನೆ ಮಾಡಲಾಗದಂತೆ ಮಾಡಿ, ವ್ಯಕ್ತಿಯನ್ನು ಶಾಶ್ವತವಾಗಿ ವಿಕಲಚೇತನರನ್ನಾಗಿ ಮಾಡಬಹುದು. ಒಮ್ಮೆ ಓಡಾಟದ ಸಾಮರ್ಥ್ಯ ಕಡಿಮೆಯಾದಾಗ ಮಾತ್ರ ಈ ಹಾನಿಯ ತೀವ್ರತೆ ಅರಿವಿಗೆ ಬರುತ್ತದೆ. ಚಿಕಿತ್ಸೆಯು ಲಕ್ಷಣಗಳನ್ನು ಅಥವಾ ನೋವನ್ನು ಕಡಿಮೆ ಮಾಡಬಹುದೇ ಹೊರತು, ಕೀಲುಗಳಿಗೆ ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸಲು ಅಸಾಧ್ಯ.





