ಚಿನ್ನ’ ಎಂಬ ಈ ಎರಡಕ್ಷರದ ಹೆಸರೇ ಎಷ್ಟೊಂದು ಸುಂದರ. ಚಿನ್ನ ಎಂಬ ಈ ಹೆಸರಿನಲ್ಲಿ ಏನೋ ಒಂದು ಸೆಳೆತವಿದೆ. ಮಧುರ ಬಾಂಧವ್ಯವಿದೆ. ತಾಯಿ ತನ್ನ ಮಗುವಿಗೆ ಪ್ರೀತಿಯಿಂದ ಚಿನ್ನ ಎಂದು ಕರೆದಾಗ, ಆ ಮಗು ಪುಳಕಿತಗೊಂಡು ಮುಖದಲ್ಲಿ ಮಂದಹಾಸ ಬೀರುತ್ತದೆ. ಇನ್ನು ಪ್ರಿಯಕರ ತನ್ನ ಪ್ರೇಯಸಿಗೆ ಚಿನ್ನ ಎಂದು ಕರೆದಾಗ ಆಕೆ ನಸು ನಾಚಿ ಮುಖ ಕೆಂಪಾಗಿ ನಾಚುತ್ತಾಳೆ. ಹಾಗೆ ಗಂಡ ತನ್ನ ಹೆಂಡತಿಗೆ ಚಿನ್ನ ಎಂದು ಪ್ರೀತಿಯಿಂದ ಸಂಬೋಧಿಸಿದಾಗ ಆಕೆಯ ಆಯಾಸವೆಲ್ಲ ಕ್ಷಣ ಮಾತ್ರದಲ್ಲೇ ಕರಗಿ ಹೋಗಿ ಉಲ್ಲಾಸಭರಿತಳಾಗುತ್ತಾಳೆ. ಅಬ್ಬಾ! ಈ ಚಿನ್ನ ಎಂಬ ಹೆಸರಿಗೆ ಅಷ್ಟೊಂದು ಆಕರ್ಷಣೆ ಇದೆಯಾ?

ಭಾರತೀಯರ ಚಿನ್ನದ ನಂಟು ಲೋಹಗಳ ರಾಜ ಪ್ಲಾಟಿನಂ ತರುವಾಯ ಅತಿ ದುಬಾರಿಯಾದ ನಿಸರ್ಗದ ಖನಿಜ ಸಂಪತ್ತು ಎಂದರೆ `ಚಿನ್ನ’. ಲೋಹಗಳಲ್ಲಿ ಚಿನ್ನಕ್ಕೆ ಮಾತ್ರ ಅಗ್ರಸ್ಥಾನ. ಅದರ ಭೌತಿಕ ಗುಣಕ್ಕೆ ಸರಿಸಾಟಿ ಮತ್ತೊಂದಿಲ್ಲ. ಇದೊಂದು ಹಳದಿ ಲೋಹ. ಬಂಗಾರ, ಹೊನ್ನು. ಹೇಮ, ಸುವರ್ಣ, ಕನಕ, ಕಾಂಚನ, ಹಿರಣ್ಯ, ಅರಂ, ಸ್ವರ್ಣ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುತ್ತದೆ ಈ ಅಮೂಲ್ಯವಾದ ಧಾತು. ಈ ಹೆಸರಿನಲ್ಲಿ ಏನೋ ಒಂದು ಸೊಗಸು. ಈ ಹಳದಿ ಲೋಹ ಕೇವಲ ಅಂದ ಅಲಂಕಾರದ ವಸ್ತುವಲ್ಲ. ಬದಲಾಗಿ ಸೌಂದರ್ಯ ಹಾಗೂ ಭದ್ರತೆಯ ಸಂಗಮ. ಹಾಗಾಗಿ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದ್ದರೂ ಚಿನ್ನದೊಡವೆ ಕೊಳ್ಳುವವರಿಗೆ ಕೊರತೆಯೇ ಇಲ್ಲ.

ಶ್ರೇಷ್ಠತೆಯ ಸಂಕೇತ ಚಿನ್ನ

ಶುದ್ಧತೆ, ಸಾಮರ್ಥ್ಯ ಮತ್ತು ಶ್ರೇಷ್ಠತೆಯ ಸಂಕೇತವೂ ಹೌದು. ಅನುಪಮ ಸೌಂದರ್ಯಕ್ಕೂ ಚಿನ್ನವೇ ಆದರ್ಶ. ಕೌಟುಂಬಿಕ ಸಮಾರಂಭಗಳಲ್ಲಿ ಚಿನ್ನ ಧರಿಸಬೇಕೆಂಬ ಅಲಿಖಿತ ನಿಯಮ ಅನಾದಿಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು. ಸ್ತ್ರೀಗಂತೂ ಜೀವದಷ್ಟೇ ಪ್ರೀತಿಯ ವಸ್ತು. ಅವಳ ಸೌಂದರ್ಯ ಹಾಗೂ ವ್ಯಕ್ತಿತ್ವಕ್ಕೆ ಕಾಂತಿ ಕೊಡುವ ಸಾಧನ ಕೂಡ. ಈ ಹಳದಿ ಲೋಹದ ಆಕರ್ಷಣೆ ಅಂಥದ್ದು. ಮೈಮೇಲೆ ಧರಿಸಿದರೆ ಸೌಂದರ್ಯದ ಸೊಬಗು ಹೊರಸೂಸುತ್ತದೆ. ಹೆಣ್ಣಿಗೆ ಹಣೆಯ ಮೇಲಿನ ಕುಂಕುಮ ಹೇಗೆ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೋ ಹಾಗೆಯೇ ಅವಳ ಮೈಮೇಲೆ ಚಿನ್ನಾಭರಣಗಳು ವಿಶೇಷ ಶೋಭೆ ತರುತ್ತವೆ.

ನವ ಜೋಡಿಗೆ ಆಭರಣ

ಭಾರತೀಯರಿಗೆ ಚಿನ್ನದ ಮೇಲಿನ ಪ್ರೀತಿ ತುಂಬಾ ಹಿಂದಿನದು. ಮದುವೆ, ಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ಚಿನ್ನದ ಮೆರುಗು ಇಲ್ಲದೆ ಮುಗಿದಂತಾಗುವುದಿಲ್ಲ. ಚಿನ್ನವನ್ನು ಸಾಟಿಯಿಲ್ಲದ ಪ್ರೇಮದ ಕಾಣಿಕೆಯಾಗಿ ಹಿಂದಿನ ಕಾಲದಿಂದಲೂ ಇಂದಿನವರೆಗೂ ಭಾವಿಸುತ್ತಲೇ ಇದ್ದಾರೆ. ವಿವಾಹ ಎನ್ನುವುದು ಇಬ್ಬರ ಬಾಳನ್ನು ಒಂದಾಗಿಸುವ ಮಧುರವಾದ ಘಟ್ಟ. ಅವರ ಬಾಳಿನಲ್ಲಿ ಅತ್ಯಂತ ಪ್ರಾಮುಖ್ಯತೆ ಇರುವ ಸಂಬಂಧವಾಗಿರುತ್ತದೆ. ಈ ಜೀವಗಳನ್ನು ಒಂದಾಗಿಸುವ ಪ್ರೀತಿಗೆ ಚಿನ್ನದ ಉಂಗುರ, ತಾಳಿ, ಬಳೆ…… ತೊಡಿಸುತ್ತಾರೆ.

ವಿವಾಹಿತ ಮಹಿಳೆಯರ ಸಂಕೇತ

ಇಂದು ನಿಶ್ಚಿತಾರ್ಥ (ಎಂಗೇಜ್‌ ಮೆಂಟ್‌) ಎಂದ ಕೂಡಲೇ ಉಂಗುರಗಳನ್ನು ಬದಲಿಸಿಕೊಳ್ಳುವ ನಿಶ್ಚಿತಾರ್ಥಕ್ಕೆ ಬಹಳವಾದ ಅರ್ಥವಿದೆ. ಶಾಸ್ತ್ರರೀತ್ಯ ಪ್ರಾಮುಖ್ಯತೆ ಇದೆ. ಭಾವಿ ವಧುವರರು ಉಂಗುರವನ್ನು ಬದಲಾಯಿಸಿಕೊಳ್ಳುವ ಸಮಯ ವಿಶೇಷವಾದದ್ದು. ನಿಶ್ಚಿತಾರ್ಥ ಸಮಯದಲ್ಲಿ ಉಂಗುರಗಳನ್ನು ಬೆರಳಿಗೆ ತೊಡಿಸುವುದರಲ್ಲಿ ಒಂದು ರಹಸ್ಯವಿದೆ. ಈ ಉಂಗುರ ಬೆರಳಿನ ನರಕ್ಕೂ, ಹೃದಯಕ್ಕೂ ಅವಿನಾಭಾವ ಸಂಬಂಧ ಹೊಂದಿದೆ. `ನನ್ನ ಮನಸ್ಸೆಂಬ ಈ ಉಂಗುರನ್ನು ನಿನ್ನ ಬೆರಳಿಗೆ ತೋಡಿಸುತ್ತಿದ್ದೇನೆ. ಉಂಗುರದ ಬೆರಳಿಗೆ ಹಾಕಿದ ಉಂಗುರದ ಮೂಲಕ ನಿನ್ನ ಹೃದಯನ್ನು ಹೊಂದುತ್ತಿದ್ದೇನೆ,’ ಎಂದು ಈ ಕ್ರಿಯೆಗೆ ಅರ್ಥ. ನಂತರ ಮದುವೆಯಲ್ಲಿ ಚಿನ್ನದ ತಾಳಿ ಮುಖ್ಯವಾಗಿರುತ್ತದೆ. ತಾಳಿಯೆಂಬುದು ಭಾರತೀಯ ವಿವಾಹಿತ ಮಹಿಳೆಯ ಸಂಕೇತ. ಇದರಿಂದ ದಾಂಪತ್ಯದಲ್ಲಿ ಮಧುರ ಬಾಂಧವ್ಯಗಳು, ಪ್ರೇಮ ರಾಗಗಳನ್ನು ಹೆಚ್ಚಿಸುವುದಕ್ಕೆ ಇದು ಮುಖ್ಯ ಪಾತ್ರ ವಹಿಸುತ್ತದೆ.

ದೇವರಿಗೂ ಚಿನ್ನದ ಅಲಂಕಾರ

ಹಾಗೇ ದೇವಸ್ಥಾನಗಳಲ್ಲಿ ದೇವರಿಗೆ ಅಭಿಷೇಕ ಪೂಜೆ ಮಾಡಿ, ನಂತರ ಚಿನ್ನದ ಅಲಂಕಾರ ಮಾಡುತ್ತಾರೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಮೂರ್ತಿಯನ್ನು ಚಿನ್ನದ ರಥದಲ್ಲಿ ಇಟ್ಟು, ದೇವಸ್ಥಾನದ ಸುತ್ತ ಮೆರವಣಿಗೆ ಮಾಡುತ್ತಾರೆ. ಅಂದರೆ ಚಿನ್ನ ಅಷ್ಟೊಂದು ಮಹತ್ವದ ಸ್ಥಾನ ಪಡೆದಿದೆ.

ಚಿನ್ನಕ್ಕೆ ಚಿನ್ನವೇ ಸಾಟಿ

ಸಾಮಾನ್ಯವಾಗಿ ಚಿನ್ನದ ಶುದ್ಧತೆಯನ್ನು ಕ್ಯಾರೆಟ್‌ ಮಾನದಲ್ಲಿ ಅಳೆಯುತ್ತಾರೆ. ಬೇರೆ ಲೋಹಗಳ ಬೆರಕೆಯೇ ಇಲ್ಲದ ಚಿನ್ನವನ್ನು ಅಪರಂಜಿ ಎನ್ನುತ್ತಾರೆ. ಇಂತಹ ಅಪರಂಜಿಯನ್ನು 24 ಕ್ಯಾರೆಟ್‌ನಲ್ಲಿ ಗುರುತಿಸುತ್ತಾರೆ. ಈ ಅಪ್ಪಟ ಚಿನ್ನ ಸಾವಿರಪಟ್ಟು ಶುಭ್ರವಾಗಿರುತ್ತದೆ. ಆಭರಣ ತಯಾರಿಸಲು ಬಳಸುವ ಚಿನ್ನ 22 ಕ್ಯಾರೆಟ್‌ನದ್ದು. ಅಪರಂಜಿ ಅತ್ಯಂತ ಮೆದು ಖನಿಜ. ಈ ಲೋಹಕ್ಕೆ ಬೇರೆ ಖನಿಜಗಳನ್ನು ಬೆರೆಸಿದಾಗ ಅದಕ್ಕೆ ಗಡಸುತನ ಬರುತ್ತದೆ.

ಚಿನ್ನಕ್ಕೆ ಹಳದಿ ಲೋಹ ಎಂದು ಹೆಸರಿದ್ದರೂ ಹಸಿರು ಚಿನ್ನ, ಗುಲಾಬಿ ಚಿನ್ನ, ಬಿಳಿ ಚಿನ್ನ, ನೀಲಿ ಚಿನ್ನ ಹೀಗೆ ಹಲವು ರೀತಿಯ ಚಿನ್ನಗಳಿವೆ. ಚಿನ್ನಕ್ಕೆ ಬೇರೆ ಬೇರೆ ಲೋಹಗಳನ್ನು ಬೆರೆಸಿದಾಗ ಇಂಥ ಬಣ್ಣದ ಚಿನ್ನವನ್ನು ತಯಾರಿಸಬಹುದು, ಆಭರಣಗಳನ್ನೂ ತಯಾರಿಸಬಹುದು.

ಹೀಗೆ ಮುತ್ತು, ರತ್ನ, ವೈಢೂರ್ಯ ಯಾವುದೇ ಆಗಿರಲಿ ಚಿನ್ನದ ಚೌಕಟ್ಟು ಬೇಕೇ ಬೇಕು. ಚಿನ್ನ ವಿವಿಧ ರೂಪಗಳಲ್ಲಿ ಬಳಕೆಯಾಗುವ ಮುನ್ನ ಬೆಂಕಿಯಲ್ಲಿ ಹಾದು ಬಂದಿರುತ್ತದೆ. ಇದೇ ಕಾರಣಕ್ಕೆ ಚಿನ್ನದ ಶುದ್ಧತೆಗೆ ಬೇರಾವುದೂ ಸಾಟಿ ಇಲ್ಲ ಎನ್ನುವ ನಂಬಿಕೆ ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿ ಚಿನ್ನ ಇಡೀ ಜಗತ್ತಿನಲ್ಲಿ ಸೌರ್ವಭೌಮವಾಗಿ ರಾಜಾಜಿಸುತ್ತಿದೆ.

ಪತ್ಪಾಂಧವ

ಹಿಂದಿನ ಕಾಲದಲ್ಲಿ ಬಂಗಾರ ರಾಜರ ಲೋಹವಾಗಿತ್ತು. ಇಂದು ಆರ್ಥಿಕ ಸಮಸ್ಯೆಯಿಂದ ದೇಶವನ್ನು ಪಾರು ಮಾಡುವ ಲೋಹವಾಗಿದೆ. ವ್ಯಕ್ತಿ ಕುಟುಂಬದ ಸಂಕಟವನ್ನು ನಿವಾರಿಸುವ ಈ ಬಂಗಾರಕ್ಕಾಗಿ ಆದರಾತಿಥ್ಯ, ಆಪದ್ಬಾಂಧವನಂತೆ ಬಂದು ಕಾಪಾಡುವುದೇ ಈ ಚಿನ್ನ. ಹಾಗಾಗಿಯೇ ಇದು ಸದಾ ಅಗ್ರಸ್ಥಾನದಲ್ಲಿ ಅಡಗಿ ಕುಳಿತಿದೆ. ಯಾವ ಲೋಹಕ್ಕೂ ದೊರೆಯದ ಸ್ಥಾನಮಾನ ಈ ಲೋಹಕ್ಕೆ ದೊರತಿದೆ. ವಿಶೇಷವಾಗಿ ಇದು ಜಗತ್ತನ್ನೇ ಆಳುತ್ತಿದೆ. ಹಾಗಾಗಿ ಚಿನ್ನ ಶುದ್ಧತೆ, ಸಮೃದ್ಧತೆ ಮತ್ತು ಉತ್ತಮ ಭವಿಷ್ಯದ ಸಂಕೇತ ಎನ್ನುವ ನಂಬಿಕೆ ಪ್ರಚಲಿತದಲ್ಲಿ ಇದೆ.

ಈ ಚಿನ್ನ ಜಗದ ಜನರನ್ನು ಆಕರ್ಷಿಸಿದ್ದು, ತನ್ನ ಮಾಸದ ಹೊಂಬಣ್ಣದಿಂದ, ತುಕ್ಕು ಹಿಡಿಯದ, ಕಿಲುಬು ಕಟ್ಟದ ಎಂದೂ ತನ್ನ ಹೊಳಪು ಕಳೆದುಕೊಳ್ಳದ ಇದರ ಕಾಂತಿಗೆ ಯಾವ ಲೋಹ ಸರಿಸಾಟಿಯಾಗಲಾರದು. ಹಾಗಾಗಿ ಭಾರತೀಯರ ಮನದಲ್ಲಿ ಸಾವಿರಾರು ವರ್ಷಗಳಿಂದ ಚಿರಸ್ಥಾಯಿಯಾಗಿರುವ ಚಿನ್ನದ ವ್ಯಾಮೋಹವನ್ನು ಬದಲಾಯಿಸಲು ಮಾತ್ರ ಸಾಧ್ಯವಿಲ್ಲ. ಇದೆ ಚಿನ್ನದ ಮಾಂತ್ರಿಕ ಗುಣ.

ಚಿನ್ನ ಸೂರ್ಯ ದೇವರ ಸಂಕೇತ

`ಚಿನ್ನದಂಥ ಮನಸ್ಸು,’ `ಚಿನ್ನದಂಥ ವ್ಯಕ್ತಿ,’ ಬಂಗಾರದಂತಹ ಮನುಷ್ಯ’ ಎನ್ನುವ ಮಾತುಗಳಲ್ಲಿ ಚಿನ್ನದ ಹಿರಿಮೆ ಸಹಜವಾಗಿ ವ್ಯಕ್ತವಾಗುತ್ತದೆ. ಚಿನ್ನ ಸೂರ್ಯದೇವರ ಸಂಕೇತ. ಇದರ ಬಳಕೆಯಿಂದ ದೇಹ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆಂದು ನಮ್ಮ ಹಿಂದಿನ ಆಯುರ್ವೇದ ವೈದ್ಯ ಪಂಡಿತರು ಸಾರಿದ್ದಾರೆ. ತೊಲ ಚಿನ್ನದಲ್ಲಿ ಯಾವ ಆಭರಣಗಳನ್ನು ಮಾಡಿಸಿಕೊಳ್ಳಬೇಕೆಂದು ನಾವು ಯೋಚಿಸುತ್ತೇವೆ. ಆದರೆ ನಮ್ಮ ಪೂರ್ವಿಕರು ತೊಲ ಬಂಗಾರವನ್ನು ಯಾವ ಪದ್ಧತಿಯಲ್ಲಿ ಭುಜಿಸಬೇಕೆಂದು ಆಲೋಚಿಸುತ್ತಿದ್ದರು. ಆಭರಣಗಳನ್ನು ಧರಿಸುವುದು, ಅದೇ ರೀತಿ ಚಿನ್ನನ್ನು ಸೇವಿಸುವುದರ ಹಿಂದೆ ಅನೇಕ ಆರೋಗ್ಯಕರ ರಹಸ್ಯಗಳು ಅಡಗಿವೆ ಎಂದು ತಿಳಿಸಿದ್ದಾರೆ. ನಮ್ಮ ಹೆಣ್ಣುಮಕ್ಕಳಿಗೆ ರೂಪಿಸಲ್ಪಟ್ಟಿರುವ ವಿವಿಧ ಆಭರಣಗಳಲ್ಲಿ ಆರೋಗ್ಯ ಸಂಬಂಧಿ ರಹಸ್ಯಗಳು ಅಡಗಿವೆ.

ನಿಗೂಢ ಶಕ್ತಿ ಅಡಗಿದೆ

ಶರೀರದ ಮೇಲೆ ಧರಿಸುವ ಪ್ರತಿ ಚಿನ್ನದಿಂದ ಮಾಡಿದ ಆಭರಣದ ಹಿಂದೆ ನಿಗೂಢವಾದ ಶಕ್ತಿ ಅಡಗಿದೆ. ಚಿನ್ನ ಸೂರ್ಯ ಸಂಬಂಧಿತ ಲೋಹವಾದ್ದರಿಂದ ಚಿನ್ನವನ್ನು ಧರಿಸಿದರೆ ಸೂರ್ಯನ ಕಿರಣಗಳ ಸಂಯೋಗದಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆಂದು ಹಿಂದಿನವರು ಹೇಳಿದ್ದಾರೆ. ಮನಸ್ಸಿಗೆ ನೆಮ್ಮದಿಯನ್ನು ತಂದುಕೊಟ್ಟು, ಚಿತ್ತಚಂಚಲಗಳನ್ನು ನಿವಾರಿಸಿ, ಉತ್ತಮ ಆಲೋಚನೆಗಳನ್ನು ಉಂಟು ಮಾಡುತ್ತದೆಂದು ಹೇಳುತ್ತಾರೆ. ಅಲ್ಲದೆ ಕೈಗೆ ಬಳೆ, ಸೊಂಟಕ್ಕೆ ಡಾಬು ಹಾಕಿಕೊಳ್ಳುವುದರಿಂದ ನಾಡಿಗಳು ಉತ್ತಮಗೊಳ್ಳುತ್ತವೆ. ನಾಭಿಯ ಮೇಲೆ ಒತ್ತಡವುಂಟಾಗಿ ದೃಷಿ ದೋಷ ನಿವಾರಣೆಯಾಗುತ್ತದೆ ಹಾಗೂ ಇಂದ್ರಿಯ ನಿಗ್ರಹ ಉಂಟಾಗುತ್ತದೆ.

ರೋಗಗಳನ್ನು ಗುಣಪಡಿಸುತ್ತದೆ

ಇನ್ನು ಚಿನ್ನವನ್ನು ಶುದ್ಧಿ ಮಾಡಿ ಭಸ್ಮ ಮಾಡಿದರೆ ಒಗರು ಮಿಶ್ರಿತ ಕಹಿ ರುಚಿಯುಂಟಾಗಿರುತ್ತದೆ. ಇದನ್ನು ಸೇವಿಸುವುದರಿಂದ ಶರೀರ ಕಾಂತಿ, ಬುದ್ಧಿಶಕ್ತಿ, ಹೃದ್ರೋಗ, ಪಿತ್ತ, ಅಜೀರ್ಣ, ವಾತ, ಅತಿಸಾರ, ಕುಷ್ಠರೋಗ, ಉನ್ಮಾದ ರೋಗಗಳನ್ನು ಹೋಗಲಾಡಿಸುತ್ತದೆ.

ನೆನಪಿನ ಶಕ್ತಿಗೆ ಚಿನ್ನ

ಆಧುನಿಕ ಪ್ರಪಂಚದಲ್ಲಿನ ಮಾನವನಿಗಿರು ಅತಿ ದೊಡ್ಡ ಸಮಸ್ಯೆಗಳಲ್ಲಿ ಮರೆಗುಳಿತನ ಸಹ ಒಂದು. ಇದನ್ನು `ಅಲ್ಜೈಮರ್‌’ ಎನ್ನುತ್ತಾರೆ. ಆದರೆ ನಮ್ಮ ಭಾರತ ದೇಶದಲ್ಲಿ ಈ ರೋಗದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ಭಾರತದಲ್ಲಿ ಈ ರೋಗ ಪೀಡಿತ ಶೇಕಡವಾರು ತೀರಾ ಅತ್ಯಲ್ಪ. ಈ ಭಯಂಕರ ರೋಗದಿಂದ ನಮ್ಮ ದೇಶಿಯರನ್ನು ಕಾಪಾಡುತ್ತಿರುವುದು ಮಂಗಳಸೂತ್ರಗಳೇ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ತಾಳಿಯು ನಿರಂತರವಾಗಿ ಹೃದಯಕ್ಕೆ ತಾಕಿಕೊಂಡಂತೆ ಇರುವುದರಿಂದ ಚಿನ್ನದ ಔಷಧೀಯ ಗುಣಗಳು ಮಹಿಳೆಯ ಶರೀರಕ್ಕೆ ಸೇರುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮಕ್ಕಳಿಗೆ ಎದೆಹಾಲು ಕುಡಿಸುವ ಸಂಪ್ರದಾಯ ಭಾರತದಲ್ಲಿ ಹೆಚ್ಚು. ಭಾರತೀಯ ಔಷಧ ವಿಜ್ಞಾನ ತಾಯಿ ಹಾಲಿನ ಶ್ರೇಷ್ಠತೆಯನ್ನು ವಿವರಿಸುತ್ತದೆ. ತಾಯಿ ಹಾಲು ಕುಡಿದು ಬೆಳೆದ ಮಕ್ಕಳು ಆಯುಸ್ಸು, ಆರೋಗ್ಯಗಳಿಂದ ಕೂಡಿರುತ್ತಾರೆಂದು, ಈಗ ವಿದೇಶಿಯರೂ ಕೂಡ ಕಂಡುಕೊಂಡಿದ್ದಾರೆ. ತಾಯಿ ಹಾಲು ಕುಡಿದ ಮಕ್ಕಳಿಗೆ ಅಲ್ಜೈಮರ್‌ ರೋಗದ ಅಪಾಯ ಬಹಳ ಕಡಿಮೆ ಎಂದು ವಿಜ್ಞಾನ ನಿರ್ಣಯಿಸಿದೆ.

ಕ್ಯಾನ್ಸರ್‌ ಗೆ ಚಿಕಿತ್ಸೆ

ಚಿನ್ನ, ಸಕಲ ರೋಗಗಳಿಗೂ ಮದ್ದು ಎಂದರೆ ಹಿಂದೆ ಎಲ್ಲರೂ ಆಡಿಕೊಳ್ಳುತ್ತಿದ್ದರು. ಈಗ ಚಿನ್ನ ರೋಗ ನಿವಾರಕವೆಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವ ಜಗತ್ತಿಗೆ ಅತ್ಯಂತ ಭಯಂಕರ ತಲೆನೋವಾಗಿ ಪರಿಣಮಿಸಿರುವ ಮಹಾರೋಗ ಕ್ಯಾನ್ಸರ್‌ ಗೆ ಸಹ ಚಿನ್ನದಿಂದ ಅದ್ಭುತವಾದ ಚಿಕಿತ್ಸೆ ಮಾಡಬಹುದೆಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ. ನಾನಾ ಹಂತಗಳಲ್ಲಿ ಈ ಚಿನ್ನವನ್ನು ಬಳಸುವುದರಿಂದ ಕ್ಯಾನ್ಸರ್‌ ಕಾರಕ ಗುಣಗಳನ್ನು ನಿರ್ಜೀವಗೊಳಿಸಬಹುದೆಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಚಿನ್ನ ಯಾವಾಗ ಕೊಳ್ಳಬೇಕು

ಚಿನ್ನ ಕೊಳ್ಳುವುದಕ್ಕೆ ಯಾವುದೇ ಶುಭ ಘಳಿಗೆಯೂ ಇಲ್ಲ. ಇಷ್ಟು ಬೆಲೆಯುಳ್ಳ ಬಂಗಾರವನ್ನು ಖರೀದಿಸುವುದಕ್ಕೆ ಇದು ಒಳ್ಳೆಯ ಸಮಯವಾ? ಬೆಲೆಯುಳ್ಳದ್ದಾ? ಎಂದು ಮೀನಮೇಷಗಳನ್ನು ಲೆಕ್ಕಿಸುವುದೆಂದರೆ ಅದು ನಿಮ್ಮ ಬೆಲೆಯುಳ್ಳ ಸಮಯವನ್ನು ವ್ಯರ್ಥ ಮಾಡಿಕೊಂಡಂತೆಯೇ ಸರಿ. ಚಿನ್ನದ ಬೆಲೆ ಕಡಿಮೆಯಾಗಲಿದೆ ಎಂದು ಕಾದು ಕುಳಿತರು ಮೂರ್ಖರಷ್ಟೆ. ಚಿನ್ನ ಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ ಹಾಗೂ ಸರಿಯಾದ ದರ ಎಂದೇನಿಲ್ಲ. ಯಾವಾಗ ಕೊಂಡರೆ ಆಗಲೇ ಸರಿಯಾದ ಸಮಯ. ನೀವು ಎಷ್ಟಕ್ಕೇ ಕೊಂಡರೂ ಅದೇ ಸರಿಯಾದ ದರ. ಈ ಕ್ಷಣದಲ್ಲಿಯೇ ನೀವು ಚಿನ್ನವನ್ನು ಕೊಳ್ಳುವುದಕ್ಕೆ ಚಿನ್ನದ ಅಂಗಡಿಗೆ ಹೋದರೂ ಅದೇ ಶುಭ ಘಳಿಗೆ.

ಆರೋಗ್ಯಕ್ಕೂ, ಮನಸ್ಸಿಗೂ ಮುದ ನೀಡುವ ಚಿನ್ನ ಕೊಡುವ ನೆಮ್ಮದಿ ದೊಡ್ಡದು ಇಷ್ಟೊಂದು ದೊಡ್ಡ ಉಪಯೋಗವಿರುವ ಚಿನ್ನ ಮನೆಯಲ್ಲಿದ್ದರೆ ಚೆನ್ನ. ಚಿನ್ನ ಎಂದಿದ್ದರೂ ಚಿನ್ನ ಅಲ್ಲವೇ….. ಭಲೇ ಚಿನ್ನ!

– ರಾಜೇಶ್ವರಿ ವಿಶ್ವನಾಥ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ