ಸಂಸ್ಕೃತಿ ಎಂಬುದು ಅತಿ ತೂಕದ ಪದ. ಇದರ ವ್ಯಾಖ್ಯಾನ ಸುಲಭವಲ್ಲ. ನಮ್ಮ ಜೀವನದ ಹಾಸುಹೊಕ್ಕಾಗಿರುವ ಸಂಸ್ಕೃತಿ, ಹಿರಿಯ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಿದು ಬರುತ್ತದೆ. ಇಂದಿನ ಆಧುನಿಕ ನಿಟ್ಟಿನಲ್ಲಿ ಇದರಲ್ಲಿಯ ಬದಲಾವಣೆ ಎಷ್ಟು ಅನಿವಾರ್ಯ ಎಂಬುದನ್ನು ವಿವರವಾಗಿ ಗಮನಿಸೋಣವೇ.......?
ಸಂಸ್ಕೃತಿ ಎಂದರೇನು?
ಇದನ್ನು ವ್ಯಾಖ್ಯಾನಿಸುತ್ತಾ ಹೋದರೆ ಅರ್ಥ ಮಾಡಿಕೊಳ್ಳುವುದೇ ಬಹಳ ಕ್ಲಿಷ್ಟ ಎನಿಸಬಹುದು. ಹಾಗಾದರೆ ಸರಳವಾಗಿ ಹೇಳಬೇಕೆಂದರೆ ಯಾವುದೇ ಪ್ರದೇಶದ ನಡೆನುಡಿ, ಜೀವನ ಶೈಲಿಯನ್ನೂ ಸಂಸ್ಕೃತಿ ಎಂದು ಅರ್ಥೈಸಬಹುದು. ಪ್ರಸಿದ್ಧ ಮಾನವ ಶಾಸ್ತ್ರಜ್ಞ ಎಡ್ವರ್ಡ್ ಟೇಲರ್ ಪ್ರಕಾರ ಸಂಸ್ಕೃತಿ ಎನ್ನುವುದರಲ್ಲಿ ಜ್ಞಾನ, ನಂಬಿಕೆ, ಕಲೆ, ನೀತಿ, ನ್ಯಾಯ, ಸಂಪ್ರದಾಯ ಈ ಎಲ್ಲವೂಉ ಒಳಗೊಂಡಿರಬೇಕು ಎಂದು ಅರ್ಥೈಸಬಹುದು.
ಭಾರತೀಯ ಸಂಸ್ಕೃತಿ ಎಂದಾಗ ಇಲ್ಲಿನ ವಸ್ತ್ರ ವಿನ್ಯಾಸ, ಹಬ್ಬಗಳು, ಭಾಷೆಗಳು, ಧರ್ಮ, ಸಂಗೀತ, ನೃತ್ಯ, ಕಲೆ, ಶಿಲ್ಪಕಲೆ, ಆಹಾರ ಎಲ್ಲ ಒಳಗೊಂಡಿರುತ್ತದೆ. ಅಂತೆಯೇ ಕೆಲವು ಕಟ್ಟುಪಾಡುಗಳೂ ಇವೆ. ಆದರೆ ಇಲ್ಲಿ ನಮ್ಮ ಪ್ರಶ್ನೆ ಭಾರತೀಯ ಸಂಸ್ಕೃತಿಯಲ್ಲಿ ಏನು ಬದಲಾವಣೆಯಾಗಿದೆ, ಅದು ಬರಿಯ ಬದಲಾವಣೆಯೋ, ಪತನವೋ ಅಥವಾ ನಿರ್ಲಕ್ಷ್ಯತನವೋ ಎನ್ನುವುದು ನಿಜಕ್ಕೂ ಚರ್ಚಾಸ್ಪದ ವಿಷಯ.
ಈ ಬಗ್ಗೆ ವಿಭಿನ್ನ ವ್ಯಕ್ತಿಗಳನ್ನು ಮಾತನಾಡಿಸಿದಾಗ ಬೇರೆ ಬೇರೆ ಅಭಿಪ್ರಾಯಗಳು ಮೂಡಿಬಂದವು.
ಯುವ ಜನತೆ ಏನಂತಾರೆ....?
24 ವರ್ಷದ ಯುವ ವಕೀಲೆ ಪ್ರಖ್ಯಾತಿ, ``ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೆಣ್ಣುಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಉದ್ಯೋಗವನ್ನು ಮಾಡುತ್ತಿದ್ದಾರೆ. ಎಲ್ಲಾ ರಂಗಗಳ್ಲೂ ಅವಳ ಪ್ರವೇಶವಾಗಿದೆ. ಅಂತೆಯೇ ಹಿಂದಿನಂತೆ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಶೋಷಣೆಯನ್ನು ಸಹಿಸಲಾರಳು. ಅಗತ್ಯವಿದ್ದರೆ ಮದುವೆ ಎನ್ನುವ ಸಂಕೋಲೆಯಿಂದ ಹೊರಬರಲು ಅವಳು ಸಿದ್ಧಳಾಗಿದ್ದಾಳೆ. ಉದಾ. ಹಿಂದೆ ಮದುವೆಯಾಗಿಬಿಟ್ಟರೆ ಆಯಿತು. ಕಷ್ಟವೋ, ಸುಖವೋ ಅವಳು ಅಲ್ಲಿ ಇರಲೇ ಬೇಕು. ಅವಳು ಎಷ್ಟೇ ಹಿಂಸೆಯನ್ನು ಅನುಭವಿಸುತ್ತಿದ್ದರೂ, ಅವಳಿಗೆ ಅಲ್ಲಿಂದ ಬಿಡುಗಡೆಯೇ ಇರಲಿಲ್ಲ. ಆದರೆ ಈಗ ಅವಳು ಇಷ್ಟವಿಲ್ಲದ ಮದುವೆಯಿಂದ ಬಿಡುಗಡೆ ಹೊಂದಲು ಪೋಷಕರು ಮತ್ತು ಸರ್ಕಾರ ಸಹಾಯ ಮಾಡುತ್ತದೆ. ಯಾವ ವಿಷಯಕ್ಕಾದರೂ ಬದಲಾವಣೆ ಅನಿವಾರ್ಯ. ಆಯಾ ಸಮಯಕ್ಕೆ ಅನುಗುಣವಾಗಿ ಸಂಪ್ರದಾಯಗಳನ್ನು ಸೃಷ್ಟಿಸಲಾಗಿದೆ. ಅಂದ ಮಾತ್ರಕ್ಕೆ ಕಣ್ಣು ಮುಚ್ಚಿಕೊಂಡು ಅವಕ್ಕೆ ಜೋತು ಬೀಳುವ ಅಗತ್ಯವಿಲ್ಲ. ಬದಲಾವಣೆ ಅಭಿವೃದ್ಧಿಯ ಸಂಕೇತ, ಅದರ ಬಗ್ಗೆ ವಿರೋಧವಾದರೂ ಏಕೆ? ಅಲ್ಲವೇ?'' ಎನ್ನುತ್ತಾರೆ.
ಹಿರಿಯರ ಮನದಲ್ಲಿ......
ಅದೇ ಕೆಲವು ಹಿರಿಯ ಮಹಿಳೆಯರನ್ನು ಮಾತನಾಡಿಸಿದಾಗ ಬಂದ ಅಭಿಪ್ರಾಯ. ಹಿಂದೆ ಬೆಳಿಗ್ಗೆ ಎದ್ದು ಮನೆಯ ಮುಂದೆ ನೀರು ಹಾಕಿ, ರಂಗೋಲಿ ಇಡುತ್ತಿದ್ದರು. ಅದಕ್ಕೊಂದು ಅರ್ಥವಿತ್ತು. ಸ್ನಾನ ಮಾಡಿಯೇ ನಂತರ ಎಲ್ಲಾ ಕೆಲಸಗಳು. ಆದರೆ ಈಗ ಯಾರು ಅದನ್ನು ಪಾಲಿಸುತ್ತಾರೆ? ಹೆಣ್ಣು ಸ್ವತಂತ್ರಳು ಖಂಡಿತ. ಅಂದಮಾತ್ರಕ್ಕೆ ಅವರ ನಡೆ ನುಡಿಯಲ್ಲಿ ಗಾಂಭೀರ್ಯ ಅಗತ್ಯ ಎನ್ನುತ್ತಾರೆ. ಯುವ ಜನತೆ ಧರಿಸುವ ವಸ್ತ್ರಗಳ ಬಗ್ಗೆಯೂ ಅವರ ಮಾತಿನಲ್ಲಿ ಆಕ್ಷೇಪಣೆ ಎದ್ದು ಕಾಣುತ್ತದೆ.
ಕೂಪ ಮಂಡೂಕದಿಂದ ಹೊರಗೆ.....