“ಮಕ್ಕಳು ನಮ್ಮವರೇ… ಆದರೆ ನಮ್ಮ ಸ್ವತ್ತು ಅಲ್ಲ!”
ಭಾರತೀಯ ಕುಟುಂಬ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು ಪ್ರೀತಿ, ಮಮತೆ, ತ್ಯಾಗ ಮತ್ತು ಬಾಂಧವ್ಯ. ನಮ್ಮ ಸಮಾಜದಲ್ಲಿ ಮಕ್ಕಳ ಮೇಲಿನ ಪ್ರೀತಿ ಎಷ್ಟು ಆಳವಾಗಿದೆಯೆಂದರೆ, ಮಗು ಹುಟ್ಟಿದ ಕ್ಷಣದಿಂದಲೇ ಅದರ ಭವಿಷ್ಯವೇ ಪೋಷಕರ ಬದುಕಿನ ಗುರಿಯಾಗಿಬಿಡುತ್ತದೆ. ಹೆಣ್ಣು ಮಕ್ಕಳಿಗೆ 22–23 ವರ್ಷ, ಗಂಡು ಮಕ್ಕಳಿಗೆ 26–27 ವರ್ಷ ಆಗುತ್ತಿದ್ದಂತೆ, “ಮದುವೆ ಯಾವಾಗ?” ಎಂಬ ಪ್ರಶ್ನೆ ಆರಂಭವಾಗುತ್ತದೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ, “ಏನಾದರೂ ವಿಶೇಷವಿದೆಯೇ?” ಎಂಬ ಮತ್ತೊಂದು ಪ್ರಶ್ನೆ. ಇದು ಕೇವಲ ಕುತೂಹಲವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಮುಂದುವರಿಕೆ, ವಂಶಪಾರಂಪರ್ಯ, ವೃದ್
ಮಕ್ಕಳಿಗಾಗಿ ಬದುಕುವ ಪೋಷಕರು

ನಮ್ಮ ದೇಶದಲ್ಲಿ ಅನೇಕ ಪೋಷಕರು ತಮ್ಮ ಜೀವನದ ಅತ್ಯುತ್ತಮ ವರ್ಷಗಳನ್ನು ಮಕ್ಕಳಿಗಾಗಿಯೇ ಮೀಸಲಿಡುತ್ತಾರೆ.
- ಉತ್ತಮ ಶಾಲೆ
- ಉತ್ತಮ ಕಾಲೇಜು
- ಉತ್ತಮ ಉದ್ಯೋಗ
- ಉತ್ತಮ ಭವಿಷ್ಯ
ಇವುಗಳಿಗಾಗಿ ತಮ್ಮ ಕನಸುಗಳನ್ನು ತ್ಯಜಿಸುತ್ತಾರೆ. ಸಾಲ ಮಾಡುತ್ತಾರೆ. ಹಗಲು-ರಾತ್ರಿ ದುಡಿಯುತ್ತಾರೆ. ತಮ್ಮ ಆಸೆಗಳನ್ನು ಮುಂದೂಡುತ್ತಾರೆ. ಆದರೆ ಇದೇ ಪ್ರೀತಿಯು ಅನೇಕ ಬಾರಿ ಅತಿಯಾದ ಅವಲಂಬನೆಯಾಗಿ ಮಾರ್ಪಡುತ್ತದೆ.
ಪಾಶ್ಚಾತ್ಯ ಸಂಸ್ಕೃತಿ ವಿರುದ್ಧ ಭಾರತೀಯ ಸಂಸ್ಕೃತಿ
ಒಂದು ಕಾಲದಲ್ಲಿ ನಾವು ಪಾಶ್ಚಾತ್ಯ ದೇಶಗಳನ್ನು ಟೀಕಿಸುತ್ತಿದ್ದೆವು. ಅವರು ಮಕ್ಕಳನ್ನು 18 ವರ್ಷವಾದ ಕೂಡಲೇ ಮನೆಯಿಂದ ಹೊರಗೆ ಕಳುಹಿಸುತ್ತಾರೆ. ಅವರಿಗೆ ಕುಟುಂಬದ ಮೌಲ್ಯವೇ ಇಲ್ಲ.ಎಂದು ಹೇಳುತ್ತಿದ್ದೆವು. ಆದರೆ ಅವರ ಉದ್ದೇಶ ಮಕ್ಕಳನ್ನು ದೂರ ಮಾಡುವುದು ಅಲ್ಲ.
ಸ್ವಾವಲಂಬಿಗಳನ್ನಾಗಿ ಮಾಡುವುದು. ಅವರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸುವುದು—
- ತಮ್ಮ ಬಟ್ಟೆ ತಾವೇ ತೊಳೆಯುವುದು
- ತಮ್ಮ ಖರ್ಚನ್ನು ತಾವೇ ನಿರ್ವಹಿಸುವುದು
- ಕೆಲಸ ಮಾಡುವುದು
- ತಪ್ಪುಗಳಿಂದ ಕಲಿಯುವುದು
- ಜೀವನದ ಹೊಣೆಗಾರಿಕೆಯನ್ನು ಸ್ವೀಕರಿಸುವುದು
ಇವೆಲ್ಲವೂ ಜೀವನ ಕೌಶಲ್ಯಗಳು.
ಇಂದಿನ ಭಾರತದ ವಾಸ್ತವ
ವಿಚಿತ್ರವೆಂದರೆ, ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬದ ಬಾಂಧವ್ಯ ಮತ್ತೆ ಬಲವಾಗುತ್ತಿರುವಾಗ, ಭಾರತದಲ್ಲಿ ಅನೇಕ ಯುವಕರು 18 ವರ್ಷ ದಾಟುತ್ತಿದ್ದಂತೆ “ನನ್ನ ಜೀವನ… ನನ್ನ ನಿರ್ಧಾರ…” ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲ. ಆದರೆ ಸಮಸ್ಯೆ ಏನೆಂದರೆ ಸ್ವಾತಂತ್ರ್ಯ ಬೇಕು… ಆದರೆ ಜವಾಬ್ದಾರಿ ಬೇಡ. ಅಪ್ಪಾ ಅಮ್ಮಂದಿರು ಮಾಡಿಟ್ಟ ಆಸ್ತಿ ಬೇಕು ಸಂಬಂಧ ಬೇಡ ಎನ್ನುವ ಮನಸ್ಥಿತಿ
ಪೋಷಕರ ತ್ಯಾಗಕ್ಕೆ ಬೆಲೆ ಎಲ್ಲಿದೆ?

ಒಂಬತ್ತು ತಿಂಗಳು ಹೊತ್ತು, ಹೆತ್ತು, ರಾತ್ರಿ-ಹಗಲು ನಿದ್ರೆ ಬಿಟ್ಟು ಸಾಕಿ… ತಮ್ಮ ಜೀವನವನ್ನೇ ತ್ಯಾಗ ಮಾಡಿ… ಉತ್ತಮ ಶಿಕ್ಷಣ ನೀಡಿ… ಮಕ್ಕಳ ಕನಸುಗಳನ್ನು ನನಸಾಗಿಸಿದ ನಂತರ, ಅನೇಕ ಪೋಷಕರಿಗೆ ಸಿಗುವುದು… ಒಂದು ವೀಡಿಯೋ ಕಾಲ್. ಅಥವಾ… ತಿಂಗಳಿಗೆ ಒಮ್ಮೆ ಫೋನ್. ಇಂದಿನ ಬಹುತೇಕ ಮಕ್ಕಳು ತಮ್ಮ ಪೋಷಕರ ಈ ತ್ಯಾಗಕ್ಕೆ ಕೊಂಚವೂ ಬೆಲೆ ಕೊಡದೇ, ತಮ್ಮ ಉಜ್ವಲ ಭವಿಷ್ಯ ಮತ್ತು ಐಶಾರಾಮಿ ಜೀವನಕ್ಕಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹಾರಿ ನಂತರ ಅಲ್ಲಿಯೇ ಕೆಲಸವನ್ನು ಗಿಟ್ಟಿಸಿಕೊಂಡು ಎರಡು ವರ್ಷಕ್ಕೋ ಇಲ್ಲವೇ ನಾಲ್ಕು ವರ್ಷಕ್ಕೂ ಒಮ್ಮೆ ಎರಡು ವಾರಗಳ ಕಾಲ ಭಾರತಕ್ಕೆ ಬಂದರೂ, ಬರುವ ಮತ್ತು ಹೋಗುವ ದಿನ ಮಾತ್ರ ಮನೆಯಲ್ಲಿ ಉಳಿದು ಉಳಿದ ದಿನಗಳಲ್ಲಿ ಆ ಯಾತ್ರೆ, ಈ ಯಾತ್ರೆ ಎಂದು ಕಳೆಯುವುದಾದರೆ ಯಾವ ಪುರುಷಾರ್ಥಕ್ಕಾಗಿ ಅಷ್ಟೋಂದು ಹಣವನ್ನು ಖರ್ಚು ಮಾಡಿ ಬರುತ್ತಾರೋ ಎಂದೆಸುತ್ತದೆ.





