ತವರು ಮನೆ ಕೇವಲ ಒಂದು ಸಂಬಂಧವಲ್ಲ. ಹೆಣ್ಣುಮಗಳ ಬದುಕಿನ ಭದ್ರತಾ ಕವಚ
ಇತ್ತೀಚೆಗೆ ನನ್ನ ಆತ್ಮೀಯ ಗೆಳೆಯನೊಬ್ಬರ ಮಗಳ ಮದುವೆಗೆ ಹೋಗುವ ಸಂದರ್ಭ ಒದಗಿತ್ತು. ನನ್ನ ಗೆಳೆಯ ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ. ಆದರೆ ಅವನ ಹೃದಯವಂತಿಕೆ, ಮಾನವೀಯತೆ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಗುಣವೇ ಅವನ ನಿಜವಾದ ಸಂಪತ್ತು. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಪರ್ಕ ಹಿಂದಿನಷ್ಟು ಇರದಿದ್ದರೂ, ಸ್ನೇಹವನ್ನು ಮರೆಯದೆ ಮಗಳ ಮದುವೆಗೆ ಆಹ್ವಾನಿಸಿದ್ದರಿಂದ ಸಂತೋಷದಿಂದ ಹಾಜರಾದೆ. ಮದುವೆ ಮಂಟಪ ಸುಂದರವಾಗಿ ಅಲಂಕರಿಸಲಾಗಿತ್ತು. ಸಂಭ್ರಮ, ಸಡಗರ, ಬಂಧು-ಬಳಗ, ನಗು, ಸಂತೋಷ ಎಲ್ಲವೂ ಸೇರಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಧಾರೆ ಮುಗಿದ ನಂತರ ನವದಂಪತಿಗಳಿಗೆ ಆಶೀರ್ವದಿಸಿ, ಉಡುಗೊರೆ ನೀಡಿ ಊಟಕ್ಕೆ ಕುಳಿತೆವು.

ಅಷ್ಟರಲ್ಲಿ ಹಿರಿಯರೊಬ್ಬರು ಪ್ರತಿಯೊಬ್ಬರ ಬಳಿಗೂ ಬಂದು, ಎರಡೂ ಕೈ ಮುಗಿದು,“ಸರ್… ಸಂಕೋಚಪಡಬೇಡಿ. ಹೊಟ್ಟೆತುಂಬಾ ಊಟ ಮಾಡಿ. ಇನ್ನೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ” ಎಂದು ಅತ್ಯಂತ ವಿನಯದಿಂದ ಕೇಳಿಕೊಳ್ಳುತ್ತಿದ್ದರು. ಅವರ ಮಾತು ಕೇಳಿದ ಕ್ಷಣಕ್ಕೆ ನನ್ನ ಮನಸ್ಸು ಏನೋ ಹೇಳಲಾರದ ಭಾವದಿಂದ ತುಂಬಿತು. ಇತ್ತೀಚಿನ ದಿನಗಳಲ್ಲಿ ಯಾವುದೇ ಮದುವೆ ಅಥವಾ ಸಮಾರಂಭಕ್ಕೆ ಹೋದರೂ ಇದೇ ರೀತಿಯ ಮಾತು ಕೇಳಿಬರುತ್ತದೆ. ಆದರೆ ಆ ಮಾತು ಕೇಳಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಎರಡು ಪ್ರಶ್ನೆಗಳು ಮೂಡುತ್ತವೆ. “ತನ್ನ ಮಗಳ ಮದುವೆಗಾಗಿ ಜೀವನಪೂರ್ತಿ ಬೆವರು ಸುರಿಸಿ ದುಡಿದು, ಕೆಲವೊಮ್ಮೆ ಸಾಲಮಾಡಿ, ತನ್ನ ಕನಸುಗಳನ್ನೇ ಬದಿಗಿಟ್ಟು ಊಟ ಮಾಡಿಸುತ್ತಿರುವ ತಂದೆಯ ಶ್ರಮಕ್ಕೆ ನಾನು ಊಟ ಮಾಡಲು ನಿಜವಾಗಿಯೂ ಅರ್ಹನೇ?” ಅದೇ ರೀತಿಯಾಗಿ “ನಾಳೆ ನಮ್ಮ ಮಗಳ ಮದುವೆಯಲ್ಲೂ ಇದೇ ರೀತಿ ಕೈಮುಗಿದು ನಿಂತು ಅತಿಥಿಗಳಿಗೆ ಊಟ ಮಾಡಿ ಎಂದು ಕೇಳಬೇಕಾಗುತ್ತದೆಯೇ?” ಈ ಯೋಚನೆ ನನ್ನ ಮನಸ್ಸನ್ನು ಹಲವಾರು ಬಾರಿ ಕಾಡಿದೆ.
“ನಾನು ಹುಡುಗಿಯ ಸೋದರಮಾವ ಸರ್…”
ಆ ಹಿರಿಯರು ಎಲ್ಲರನ್ನೂ ಅತ್ಯಂತ ಆತ್ಮೀಯವಾಗಿ ವಿಚಾರಿಸಿಕೊಳ್ಳುತ್ತಿರುವುದನ್ನು ನೋಡಿ ಕುತೂಹಲದಿಂದ “ನೀವು ಹುಡುಗಿಗೆ ಏನಾಗಬೇಕು?” ಎಂದು ಕೇಳಿದ್ದಕ್ಕೆ, ಅವರು ಮೃದುವಾಗಿ ನಗುತ್ತಾ ಉತ್ತರಿಸಿದರು. “ನಾನು ಹುಡುಗಿಯ ಸೋದರಮಾವ ಸರ್.” ಎಂದಾಗ, ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾಕೆಂದರೆ ಆ ಕುಟುಂಬದ ಬಹುತೇಕ ಸದಸ್ಯರು ನನಗೆ ಪರಿಚಿತರಾಗಿದ್ದರು. ಸ್ವಲ್ಪ ವಿಚಾರಿಸಿದಾಗ ಅವರು ನಗುತ್ತಾ ಹೇಳಿದರು.
“ಸರ್… ನಾನು ಈ ಮದುವೆಯ ಅಡುಗೆ ಕಾಂಟ್ರಾಕ್ಟರ್. ಹುಡುಗಿಯ ತಂದೆ ನನ್ನ ಆತ್ಮೀಯ ಸ್ನೇಹಿತ. ಹುಡುಗಿಯೂ ಚಿಕ್ಕಂದಿನಿಂದಲೇ ನನ್ನನ್ನು ‘ಮಾವ… ಮಾವ…’ ಎಂದೇ ಕರೆಯುತ್ತಾಳೆ. ಇಂದು ಅವರೆಲ್ಲರೂ ಮದುವೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರತರಾಗಿರುವುದರಿಂದ, ನಾನು ಮನೆಯಲ್ಲಿ ಸೋದರಮಾವನಂತೆ ಜವಾಬ್ದಾರಿ ತೆಗೆದುಕೊಂಡು ಎಲ್ಲರನ್ನೂ ವಿಚಾರಿಸಿಕೊಳ್ಳುತ್ತಿದ್ದೇನೆ.”
ಆ ಮಾತು ಕೇಳಿದ ಕ್ಷಣಕ್ಕೆ ನನ್ನ ಕಣ್ಣಲ್ಲಿ ನೀರು ತುಂಬಿತು. ಇಂದಿನ ಯಾಂತ್ರಿಕ ಬದುಕಿನ ಮಧ್ಯೆಯೂ ಸಂಬಂಧವನ್ನು ಕೇವಲ ರಕ್ತದಿಂದಲ್ಲ, ಹೃದಯದಿಂದ ಬದುಕುವ ಇಂತಹ ಜನರು ಇನ್ನೂ ಇದ್ದಾರೆ ಎಂಬ ಅರಿವು ಮನಸ್ಸನ್ನು ಸ್ಪರ್ಶಿಸಿತು.
ನಮ್ಮ ಸಂಸ್ಕೃತಿಯಲ್ಲಿ ಸೋದರಮಾವನಿಗೆ ಇಷ್ಟೊಂದು ಮಹತ್ವ ಏಕೆ?
ಈ ಒಂದು ಸಣ್ಣ ಘಟನೆ ನನ್ನನ್ನು ಬಹಳ ಆಳವಾದ ಚಿಂತನೆಗೆ ಕರೆದೊಯ್ದಿತು.
ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ, ತಂದೆ-ತಾಯಿಯ ನಂತರ ಹೆಣ್ಣುಮಗಳ ಬದುಕಿನಲ್ಲಿ ಅತ್ಯಂತ ಗೌರವದ ಸ್ಥಾನ ಪಡೆದಿರುವ ವ್ಯಕ್ತಿ ತಾಯಿಯ ಸಹೋದರ – ಸೋದರಮಾವ. ಇದು ಕೇವಲ ಒಂದು ಸಂಬಂಧವಲ್ಲ. ಇದು ತಾಯಿಯ ಮನೆಯ ಜೀವಂತ ಪ್ರತಿನಿಧಿ. ನಮ್ಮ ಹಿರಿಯರು ಈ ಸಂಬಂಧವನ್ನು ಕೇವಲ ಬಂಧುತ್ವವಾಗಿ ಅಲ್ಲ, ಹೆಣ್ಣುಮಗಳ ಬದುಕಿಗೆ ಅಗತ್ಯವಾದ ಭದ್ರತಾ ವ್ಯವಸ್ಥೆಯಾಗಿ ರೂಪಿಸಿದ್ದರು.
ತಾಯಿ ಇಲ್ಲದಿದ್ದರೂ ಮಾವ ಇದ್ದಾನೆ ಎಂಬ ಭರವಸೆ
ನಾವು ತಂದೆಯ ಗೋತ್ರವನ್ನು ಪಡೆಯುತ್ತೇವೆ. ಆದರೆ… ತಾಯಿಯ ರಕ್ತವನ್ನೇ ಹೊತ್ತು ಜನಿಸುತ್ತೇವೆ. ತಂದೆಯ ವಂಶ ನಮಗೆ ಹೆಸರು ನೀಡಿದರೆ, ತಾಯಿಯ ಮನೆ ನಮಗೆ ಪ್ರೀತಿಯ ನೆಲೆ ನೀಡುತ್ತದೆ. ಹಿಂದಿನ ಕಾಲದಲ್ಲಿ ಅಕಾಲಿಕ ಮರಣಗಳು ಸಾಮಾನ್ಯವಾಗಿದ್ದವು. ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಆ ಮಗುವಿನ ಪಾಲಿಗೆ ಆಶ್ರಯವಾಗುತ್ತಿದ್ದವನು ಮಾವ. ಆದ್ದರಿಂದಲೇ ಹಿರಿಯರು ತಾಯಿ ತಂದೆಯ ಜೊತೆ ಸೋದರಮಾವನೂ ಚನ್ನಾಗಿರಲಿ ಆಶೀರ್ವದಿಸುತ್ತಿದ್ದರು. ಅದು ಕೇವಲ ಆಶೀರ್ವಾದವಲ್ಲ. ಒಂದು ಸಾಮಾಜಿಕ ಭದ್ರತಾ ವ್ಯವಸ್ಥೆ. ಭೈರಪ್ಪ ಅವರ ಆದಿಯಾಗಿಯಾಗಿ ನೂರಾರು ಖ್ಯಾತ ಬರಹಗಾರರು, ಸಂಗೀತಗಾರರ ಜೀವನ ಚರಿತ್ರೆಯನ್ನು ಓದಿದಾಗ, ಅವರಲ್ಲಿ ಬಹುತೇಕರು ತಮ್ಮ ಹುಟ್ಟೂರಿನಲ್ಲಿ ಬಾಲ್ಯ ಕಳೆದ ನಂತರ ಹೆಚ್ಚಿನ ವಿದ್ಯಾಭ್ಯಾಶಕ್ಕೆ ಆಶ್ರಯಿಸಿದ್ದೇ ಸೋದರಮಾವನ ಮನೆಯನ್ನೇ. ಹೀಗೆ ತಂದೆಯ ನಂತರ ಕುಟುಂಬದ ಜವಾಬ್ಧಾರಿ ಯಾರು ಎಂದು ನೋಡಿದರೆ, ನಿಸ್ಸಂದೇಹವಾಗಿ ಅದ್ದು ಸೋದರ ಮಾವನದ್ದಾಗಿರುತ್ತದೆ.
ಚಂದಾಮಾಮನೇ ಮೊದಲ ಸೋದರಮಾವ!

ಬಹುತೇಕ ಭಾರತೀಯ ಮಕ್ಕಳಿಗೆ ತಮ್ಮ ನಿಜವಾದ ಸೋದರಮಾವನಿಗಿಂತಲೂ ಮೊದಲು ಪರಿಚಯವಾಗುವ ‘ಮಾವ’ ಎಂದರೆ ಚಂದಾಮಾಮ! ಚಿಕ್ಕವಯಸ್ಸಿನಲ್
ಆದರೆ ‘ಮಾವ’ ಎಂಬ ಪದದ ಹಿಂದೆ ಇನ್ನೊಂದು ಸಾಮಾಜಿಕ ಅರ್ಥವೂ ಅಡಗಿದೆ.
ಇಂದಿನಂತೆ ಮನೆಗೆ ಬರುವ ಪ್ರತಿಯೊಬ್ಬ ಪುರುಷನನ್ನೂ ‘ಅಂಕಲ್’ ಎಂದು ಕರೆಯುವ ಪದ್ಧತಿ ಸಾಮಾನ್ಯವಾಗಿರದ ಕಾಲದಲ್ಲಿ, ಪರಿಚಯವಿಲ್ಲದ ವ್ಯಕ್ತಿಯೊಬ್ಬರು ಮನೆಗೆ ಬಂದರೆ ಮನೆಯ ಹಿರಿಯರು ಮಕ್ಕಳಿಗೆ, “ನೋಡು, ಮಾವ ಬಂದಿದ್ದಾರೆ”, ಅಥವಾ “ಮಾವ ಬಂದರು” ಎಂದು ಪರಿಚಯಿಸುತ್ತಿದ್ದರು. ಇದು ಕೇವಲ ಸಂಬೋಧನೆಯಲ್ಲ. ಸಂಬಂಧವನ್ನು ಸೃಷ್ಟಿಸುವ ಒಂದು ಸಾಮಾಜಿಕ ತಂತ್ರವೂ ಆಗಿತ್ತು. ಹೊರಗಿನಿಂದ ಬಂದ ವ್ಯಕ್ತಿಯನ್ನು ‘ಮಾವ’ ಎಂದು ಕರೆಯುವುದರ ಮೂಲಕ, ಅವರನ್ನು ಕುಟುಂಬದ ಆತ್ಮೀಯ ಬಂಧುವಿನ ಸ್ಥಾನಕ್ಕೆ ತಂದು ನಿಲ್ಲಿಸಲಾಗುತ್ತಿತ್ತು. ಅದರ ಹಿಂದೆ ಗೌರವ, ಆತ್ಮೀಯತೆ ಮಾತ್ರವಲ್ಲದೆ, ಸಾಮಾಜಿಕ ಸುರಕ್ಷತೆಯ ಒಂದು ಸೂಕ್ಷ್ಮ ಪರಿಕಲ್ಪನೆಯೂ ಇತ್ತು. “ಇವರು ನಮ್ಮ ಮನೆಯವರು; ಇವರೊಂದಿಗೆ ನಮ್ಮದು ಬಂಧುತ್ವ” ಎಂಬ ಭಾವನೆ ಮೂಡಿಸುವ ಮೂಲಕ, ಅಪರಿಚಿತನನ್ನೂ ಒಂದು ಪರಿಚಿತ ಸಂಬಂಧದ ಚೌಕಟ್ಟಿನೊಳಗೆ ತರುವ ಪ್ರಯತ್ನವದು.
ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಮಕ್ಕಳನ್ನು ಒಳಗೊಂಡ ಕುಟುಂಬಗಳಲ್ಲಿ, ಹೊರಗಿನ ಪುರುಷರನ್ನು ‘ಮಾವ’, ‘ಅಣ್ಣ’, ‘ಅಪ್ಪ’ ಮುಂತಾದ ಸಂಬಂಧದ ಮೂಲಕ ಸಂಬೋಧಿಸುವ ಪದ್ಧತಿ ಗೌರವದ ಗಡಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಭಾವನೆಯನ್ನು ಬಲಪಡಿಸುತ್ತಿತ್ತು. ಹೀಗಾಗಿ, ನಮ್ಮ ಹಿರಿಯರು ಸಂಬಂಧಗಳನ್ನು ಕೇವಲ ರಕ್ತಸಂಬಂಧಗಳಲ್ಲೇ ಸೀಮಿತಗೊಳಿಸಿರಲಿಲ್ಲ. ಮಾತಿನ ಮೂಲಕವೂ ಸಂಬಂಧಗಳನ್ನು ನಿರ್ಮಿಸಿ, ಆ ಸಂಬಂಧಗಳ ಮೂಲಕ ಸಮಾಜದಲ್ಲಿ ವಿಶ್ವಾಸ, ಗೌರವ ಮತ್ತು ಸುರಕ್ಷತೆಯ ವಾತಾವರಣವನ್ನು ಕಟ್ಟುವ ಪ್ರಯತ್ನ ಮಾಡಿದ್ದರು.
ಪ್ರತಿಯೊಂದು ಶುಭಕಾರ್ಯದಲ್ಲೂ ಮೊದಲ ಆಹ್ವಾನ ಮಾವನಿಗೆ

ಹೆಣ್ಣುಮಗು ಆಗಲಿ, ಗಂಡುಮಗು ಆಗಲಿ… ಜೀವನದ ಪ್ರತಿಯೊಂದು ಶುಭಾರಂಭದಲ್ಲೂ ತಾಯಿಯ ಮನೆಯ ಆಶೀರ್ವಾದ ಇರಬೇಕು ಎಂಬುದು ನಮ್ಮ ಸಂಸ್ಕೃತಿಯ ನಂಬಿಕೆ. ಆ ಆಶೀರ್ವಾದದ ಸಂಕೇತ ಮತ್ತು ಸಂಬಂಧದ ಬೆಸುಗೆಯ ಕೊಂಡಿಯೇ ಸೋದರ ಮಾವ.
- ಮಗುವಿಗೆ ಮೊದಲ ಬಟ್ಟೆ ತರುವುದು.
- ನಾಮಕರಣದಲ್ಲಿ ಮಡಿಲಿನಲ್ಲಿ ಕೂರಿಸುವುದು.
- ಅನ್ನಪ್ರಾಶನದಲ್ಲಿ ಭಾಗವಹಿಸುವುದು.
- ಅಕ್ಷರಾಭ್ಯಾಸದಲ್ಲಿ ಮೊದಲ ಅಕ್ಷರ ಬರೆಯಿಸುವುದು.
- ಚೌಲ ಮತ್ತು ಉಪನಯನ ಸಂಸ್ಕಾರದಲ್ಲಿ ಉಪಸ್ಥಿತರಿರುವುದು.
ಇನ್ನು ಮಗುವು ಹೆಣ್ಣಾಗಿದ್ದಲ್ಲಿ,
- ಆ ಕಂದನಿಗೆ ಕಿವಿ ಚುಚ್ಚುವಾಗ
- ಅವಳು ಋತಿಮತಿಯಾದಾಗ
- ಆಕೆಯ ಮದುವೆಯಂದು ಧಾರೆ ಮಂಟಪಕ್ಕೆ ಹೊತ್ತು ತಂದು ಜೀರಿಗೆ ಬೆಲ್ಲ ಸುರಿಸುವಾಗ
- ಮದುವೆಯಲ್ಲಿ ಸಂಪ್ರದಾಯದ ಕರ್ತವ್ಯಗಳನ್ನು ನೆರವೇರಿಸುವುದು.
ಇವೆಲ್ಲದ್ದಕ್ಕೂ ತಂದೆಗಿಂತಲೂ ಮಾವನದ್ದೇ ಮೊದಲ ಪ್ರಾಶಸ್ತ್ಯ. ಈ ಎಲ್ಲಾ ಕಾರ್ಯಗಳಲ್ಲೂ ತನು ಮನ ಧನಗಳಿಂದ ಮಾವನದ್ದೇ ಸಾರಥ್ಯ ಈ ಎಲ್ಲದರ ಮೂಲಕ ಒಂದು ಸಂದೇಶ ನೀಡಲಾಗಿದೆ. “ತಾಯಿಯ ಮನೆ ಸದಾ ನಿನ್ನ ಜೊತೆಯಲ್ಲಿದೆ.”
ತವರು ಮನೆಯ ಸೀರೆ – ಹೆಣ್ಣುಮಗಳ ಭಾವನಾತ್ಮಕ ಸಂಪತ್ತು
ಹೆಣ್ಣುಮಗಳು ಎಷ್ಟೇ ಶ್ರೀಮಂತ ಮನೆಗೆ ಮದುವೆಯಾಗಿ ಹೋದರೂ, ತವರುಮನೆಯಿಂದ ಬರುವ ಒಂದು ಸೀರೆಯ ಬೆಲೆ ಬೇರೆ. ಅದು ಕೇವಲ ಬಟ್ಟೆಯಲ್ಲ. ಅದು ಒಂದು ಭರವಸೆ. “ನೀನು ಎಲ್ಲಿದ್ದರೂ, ಈ ಮನೆ ನಿನ್ನದೇ.” ಆ ಸಂದೇಶವನ್ನು ತಂದುಕೊಡುವವನು ಮಾವ. ಹಾಗೆಯೇ ಅರಿಶಿನ-ಕುಂಕುಮ. ಗಂಡನ ಮನೆಯ ಅರಿಶಿನ ಅಲಂಕಾರವಾದರೆ, ತವರುಮನೆಯ ಅರಿಶಿನ ಆಶೀರ್ವಾದ. ಗಂಡನ ಮನೆಯಲ್ಲಿ ಎಷ್ಟೇ ಸಿರಿತನವಿದ್ದು, ಕೈತುಂಬಾ ಚಿನ್ನದ ಬಳೆಯನ್ನು ತೊಟ್ಟಿದ್ದರೂ, ಗೌರಿ ಹಬ್ಬದಂದು ತವರು ಮನೆಯಿಂದ ಬಳೆ ತೊಟ್ಟಿಕೊಡಲು ಕೊಡುವ ಹಣ ಮತ್ತು ಬಾಗಿಣಕ್ಕೆ ಹೆಣ್ಣು ಮಕ್ಕಳು ಕಾಯುತ್ತಿರುತ್ತಾರೆ. ಪಂಚಮಿ ಹಬ್ಬಕ್ಕೆ ಕರೆಯೋದಿಕ್ಕೆ ಇನ್ನೂ ತವರಿನಿಂದ ಅಣ್ಣಾ ಯಾಕೆ ಬರಲಿಲ್ಲಾ ಎಂಬೀ ಹಾಡು ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಪಂಚಮಿ ಹಬ್ಬಾ ಉಳಿತವ್ವ ದಿನ ನಾಕ ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ ।
ಕೊನೆಯ ಸೀರೆಯಲ್ಲೂ ತವರುಮನೆಯ ಪ್ರೀತಿ
ನ
ಮ್ಮ ಸಂಸ್ಕೃತಿಯ ಅತ್ಯಂತ ಭಾವನಾತ್ಮಕ ಆಚರಣೆಗಳಲ್ಲಿ ಇದೂ ಒಂದು. ಸೌಭಾಗ್ಯವತಿಯಾದ ಮಹಿಳೆ ನಿಧನರಾದರೆ, ಅವಳಿಗೆ ಹೊದಿಸುವ ಕೊನೆಯ ಸೀರೆ ತವರು ಮನೆಯಿಂದಲೇ ಬರಬೇಕು ಎನ್ನುವ ಪದ್ಧತಿ ಅನೇಕ ಕುಟುಂಬಗಳಲ್ಲಿ ಇಂದಿಗೂ ಜೀವಂತವಾಗಿದೆ. ಆ ಸೀರೆ ಹೇಳುವ ಸಂದೇಶ ಒಂದೇ. “ಬಾ ಮಗಳೇ… ನಿನ್ನ ಮನೆಗೆ ಬಾ…” ಹುಟ್ಟಿನಿಂದ ಆರಂಭವಾದ ತಾಯಿಯ ಮನೆಯ ಪ್ರೀತಿ, ಕೊನೆಯ ಕ್ಷಣದಲ್ಲೂ ಅವಳನ್ನು ಬಿಡುವುದಿಲ್ಲ.
ಮಾವ – ಹೆಣ್ಣುಮಗಳ ಮೊದಲ ರಕ್ಷಕ

ಹಿಂದಿನ ಸಮಾಜದಲ್ಲಿ ಹೆಣ್ಣುಮಗಳಿಗೆ ಯಾವುದೇ ಸಂಕಷ್ಟ ಎದುರಾದರೆ, ಮೊದಲು ನೆನಪಾಗುತ್ತಿದ್ದ ವ್ಯಕ್ತಿ ಮಾವ. ಗಂಡನ ಮನೆಯಲ್ಲಿ ತೊಂದರೆ ಬಂದಾಗ, ಅವಳಿಗೆ ಧೈರ್ಯ ಹೇಳುತ್ತಿದ್ದವನು. ಅವಳ ಮಾತು ಕೇಳುತ್ತಿದ್ದವನು. ಅವಳ ಗೌರವಕ್ಕಾಗಿ ನಿಂತುಕೊಳ್ಳುತ್ತಿದ್ದವನು. ಇದಕ್ಕಾಗಿಯೇ ಕನ್ನಡದಲ್ಲಿ ಒಂದು ಸುಂದರ ನುಡಿ ಇದೆ. “ತವರಿನ ನೆರಳು ಮಾವನ ರೂಪದಲ್ಲಿ ಬರುತ್ತದೆ.”
ಸೋದರ ಮಾವನ ಕುಟುಂಬವೇ ಮೊದಲ ಆಯ್ಕೆ
ಹಿಂದೆ ಅನೇಕ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ಕ್ಷಣದಿಂದಲೇ, ಈ ಮಗಳನ್ನು ನಮ್ಮ ತಮ್ಮನಿಗೇ ಅಥವಾ ಮಾವನ ಮಗನಿಗೇ ಕೊಡಬೇಕು” ಎಂದು ತೊಟ್ಟಿಲಿನಲ್ಲೇ ನಿಶ್ಚಯವಾಗುತ್ತಿತ್ತು. ಇದರ ಹಿಂದಿನ ಉದ್ದೇಶ ಕೇವಲ ಮದುವೆಯಲ್ಲ; ತಲೆಮಾರುಗಳಿಂದ ಬಂದ ತವರುಮನೆಯ ಕರುಳಬಳ್ಳಿಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು. ಒಂದು ವೇಳೆ ಬಾಲ್ಯದಲ್ಲೇ ಇಂತಹ ನಿರ್ಧಾರವಾಗದಿದ್ದರೂ, ಮಗಳು ವಿವಾಹಯೋಗ್ಯ ವಯಸ್ಸಿಗೆ ಬಂದಾಗ ಆಕೆಗೆ ವರನನ್ನು ಹುಡುಕುವ ಸಂದರ್ಭದಲ್ಲಿ ಸೋದರ ಮಾವನ ಕುಟುಂಬವೇ ಮೊದಲ ಆಯ್ಕೆಯಾಗುವುದು ಅನೇಕ ದಕ್ಷಿಣ ಭಾರತೀಯ ಸಮುದಾಯಗಳಲ್ಲಿ ಸಾಮಾನ್ಯವಾಗಿತ್ತು. ಏಕೆಂದರೆ ಆ ಕುಟುಂಬದ ಸ್ವಭಾವ, ಸಂಸ್ಕಾರ, ಆಚರಣೆ, ವಂಶಪಾರಂಪರ್ಯ, ಆರೋಗ್ಯ, ಜೀವನಶೈಲಿ ಎಲ್ಲವೂ ಈಗಾಗಲೇ ಪರಿಚಿತವಾಗಿರುತ್ತಿತ್ತು. ಇದರಿಂದ ಮಗಳ ಭವಿಷ್ಯದ ಬಗ್ಗೆ ತಾಯಿ-ತಂದೆಯರಲ್ಲಿ ವಿಶ್ವಾಸ ಹೆಚ್ಚಾಗುತ್ತಿತ್ತು. ಜೊತೆಗೆ, ಮಗಳು ಮದುವೆಯಾದ ನಂತರವೂ ತವರುಮನೆಯ ಬಾಗಿಲು ಆಕೆಗೆ ಸದಾ ತೆರೆದಿರುತ್ತದೆ ಎಂಬ ಭದ್ರತೆಯ ಭಾವನೆಯೂ ಉಳಿಯುತ್ತಿತ್ತು. ಇದೇ ಕಾರಣಕ್ಕೆ ಸೋದರ ಮಾವನ ಸಂಬಂಧವನ್ನು ನಮ್ಮ ಹಿರಿಯರು ಕೇವಲ ಬಂಧುತ್ವವಲ್ಲ, ಬದುಕಿನ ಭರವಸೆಯಾಗಿ ಕಂಡಿದ್ದರು.
ಮದುವೆ ಮನೆಯಲ್ಲಿ ಸೋದರ ಮಾವನ ಜವಾಬ್ದಾರಿ

ಹಿಂದೆ ಮನೆಗೆ ಮಗಳು ಅಥವಾ ಮಗನಿಗೆ ಮದುವೆ ನಿಶ್ಚಯವಾಯಿತು ಎಂದರೆ, ಆ ಸಂತಸದ ಸುದ್ದಿಯನ್ನು ಮೊದಲು ತಿಳಿಸುತ್ತಿದ್ದದ್ದು ಗಂಡನ ಅಣ್ಣ-ತಮ್ಮಂದಿರಿಗಲ್ಲ, ಸೋದರ ಮಾವನಿಗೇ. ಏಕೆಂದರೆ ಮದುವೆ ಎಂದರೆ ಅದು ಕೇವಲ ಒಂದು ಕುಟುಂಬದ ಕಾರ್ಯಕ್ರಮವಲ್ಲ; ತವರುಮನೆಯ ಗೌರವ, ಪ್ರೀತಿ ಮತ್ತು ಜವಾಬ್ದಾರಿಯ ಸಂಕೇತವೂ ಆಗಿತ್ತು. ಸುದ್ದಿ ತಿಳಿದ ತಕ್ಷಣವೇ ಸೋದರ ಮಾವ ತನ್ನ ಊರಿನಿಂದಲೇ ಮದುವೆಗೆ ಬೇಕಾಗುವಷ್ಟು ಸಾಮಗ್ರಿಗಳನ್ನು, ತಮ್ಮ ಕೈಲಾದ ಕಾಣಿಕೆಗಳನ್ನು ಮತ್ತು ಕುಟುಂಬದವರಿಗೆ ಉಡುಗೊರೆಗಳನ್ನು ಸಿದ್ಧಪಡಿಸಿಕೊಂಡು, ಮದುವೆಗೆ ಒಂದು ವಾರದ ಮೊದಲೇ ಮನೆಗೆ ಬಂದು ಸೇರುತ್ತಿದ್ದರು. ಆ ದಿನದಿಂದ ಮದುವೆ ಮುಗಿಯುವವರೆಗೂ ಅವರು ಅತಿಥಿಯಲ್ಲ; ಮನೆಯ ಹಿರಿಯ ಜವಾಬ್ದಾರಿಯುತ ವ್ಯಕ್ತಿ. ಚಪ್ಪರ ಕಟ್ಟಿಸುವುದರಿಂದ ಆರಂಭಿಸಿ, ಅರಿಶಿನ ಕುಟ್ಟುವ ಶಾಸ್ತ್ರ, ಬಂಧು-ಬಳಗದ ಸ್ವಾಗತ, ಮದುವೆಯ ಸಿದ್ಧತೆ, ಅಡುಗೆ ವ್ಯವಸ್ಥೆ, ಬರುವ-ಹೋಗುವ ಅತಿಥಿಗಳ ಯೋಗಕ್ಷೇಮ, ಧಾರ್ಮಿಕ ವಿಧಿವಿಧಾನಗಳ ವ್ಯವಸ್ಥೆ—ಹೀಗೆ ಪ್ರತಿಯೊಂದು ಕೆಲಸದಲ್ಲೂ ಸೋದರ ಮಾವ ಮುಂಚೂಣಿಯಲ್ಲಿರುತ್ತಿದ್ದರು.
ಮದುವೆಯ ದಿನ ಎಲ್ಲರೂ ವರ-ವಧುವನ್ನು ನೋಡುತ್ತಿದ್ದರೆ, ಸೋದರ ಮಾವ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ. ಯಾರಿಗೆ ಊಟ ಆಯಿತೇ? ಯಾರು ಬಂದರು? ಯಾರನ್ನು ಕರೆತರಬೇಕು? ಏನು ಕಡಿಮೆಯಾಗಿದೆ? ಎಂಬ ಚಿಂತೆಯಲ್ಲೇ ಓಡಾಡುತ್ತಿರುತ್ತಿದ್ದರು. ಅವರ ಸಂತೋಷ ತಮ್ಮ ಸಹೋದರಿಯ ಮನೆಗೆ ಮದುವೆ ಯಶಸ್ವಿಯಾಗಿ ನಡೆಯುವುದರಲ್ಲೇ ಇರುತ್ತಿತ್ತು. ಅದಕ್ಕಾಗಿಯೇ ನಮ್ಮ ಹಿರಿಯರು “ಮಾವ ಬಂದರೆ ಮದುವೆ ಮನೆಗೆ ಬಲ ಬಂದಂತೆ” ಎಂದು ಹೇಳುತ್ತಿದ್ದರು.
ಸಂಸ್ಕೃತಿಯ ಹಿಂದೆ ಅಡಗಿರುವ ಸಮಾಜಶಾಸ್ತ್ರ

ನಮ್ಮ ಹಿರಿಯರು ಈ ಸಂಪ್ರದಾಯಗಳನ್ನು ಕಾರಣವಿಲ್ಲದೆ ರೂಪಿಸಿಲ್ಲ. ಹೆಣ್ಣುಮಗಳು ಮದುವೆಯಾದ ನಂತರ ತನ್ನ ಹೊಸ ಕುಟುಂಬದಲ್ಲಿ ಸಂಪೂರ್ಣವಾಗಿ ಬೆರೆತುಹೋಗುತ್ತಿದ್ದರೂ, ಅವಳು ತನ್ನ ತವರು ಮನೆಯೊಂದಿಗಿನ ಭಾವನಾತ್ಮಕ ನಂಟನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದಲೇ ಮಾವನ ಪಾತ್ರವನ್ನು ಬಲಪಡಿಸಿದರು. ಇದು ಕುಟುಂಬಗಳ ನಡುವೆ ಸಂಬಂಧವನ್ನು ಗಟ್ಟಿಗೊಳಿಸುವ ಅತ್ಯುತ್ತಮ ಸಾಮಾಜಿಕ ವ್ಯವಸ್ಥೆಯಾಗಿತ್ತು.
ಬಾಲ್ಯದ ಸೋದರ ಮಾವನ ನೆನಪು
“ಮಾವ” ಎಂಬ ಪದ ಕಿವಿಗೆ ಬಿದ್ದ ಕೂಡಲೇ ನನ್ನ ಬಾಲ್ಯದ ಅನೇಕ ಸಿಹಿ ನೆನಪುಗಳು ಒಂದೊಂದಾಗಿ ಕಣ್ಮುಂದೆ ಬರುತ್ತವೆ. ಚೀಲ ತುಂಬಿಕೊಂಡು ಮನೆಗೆ ಬರುತ್ತಿದ್ದ ನುಗ್ಗೇಕಾಯಿ, ನೆಲ್ಲಿಕಾಯಿ, ಬೆಟ್ಟದ ಹುಣಸೆಹಣ್ಣು, ಮಲ್ಲಿಗೆ ಮೊಗ್ಗುಗಳು, ದೇವರ ಪೂಜೆಗೆ ಬತ್ತಿ ಮಾಡುವ ಹತ್ತಿ—ಇವೆಲ್ಲವೂ ಇಂದಿಗೂ ನನ್ನ ಬಾಲ್ಯದ ಸುವಾಸನೆಯಾಗಿ ಮನಸ್ಸಿನಲ್ಲಿ ಉಳಿದಿವೆ.

ನಮ್ಮ ಅಜ್ಜಿಗೆ ಎಂಟು ಗಂಡು ಮಕ್ಕಳು ಮತ್ತು ಐದು ಹೆಣ್ಣುಮಕ್ಕಳು. ಆದರೆ ವಿಧಿಯಾಟದಿಂದ ಕೊನೆಗೆ ಬದುಕಿ ಉಳಿದಿದ್ದು ಒಬ್ಬನೇ ಗಂಡು ಮಗ. ಅವರೇ ನಮ್ಮ ಸೋದರ ಮಾವ. ನಾನು ಕುಟುಂಬದ ಮೊದಲ ಮೊಮ್ಮಗನಾಗಿದ್ದರಿಂದ, ಅಜ್ಜಿಯ ಮನೆಯ ಪ್ರೀತಿಯೂ, ಸೋದರ ಮಾವನ ಮಮತೆಯೂ ನನಗೆ ಸ್ವಲ್ಪ ಹೆಚ್ಚಾಗಿಯೇ ಸಿಕ್ಕಿತ್ತು ಎಂದು ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮಾವ ನಮ್ಮನ್ನು ಮುದ್ದಾಡುವಾಗ ಕೆನ್ನೆಗೆ ನಯಸ್ಸಾಗಿ ಸವರುತ್ತಲೋ, ಇಲ್ಲವೇ ಗುದ್ದುತ್ತಲೋ ಹೇಳುತ್ತಿದ್ದ ಪ್ರೀತಿಯ ಚುಟುಕು ದಾಲ, ದೋಲ, ದುಮ್ಮ, ಪನ್ನಾಲೋ, ಪನ್ನಿಕೋ, ಪಚ್ಚಮಕ್ಕೋ, ದಾಲುಮಾ, ದಾಲ್ಮಕೋ, ದಾಲುಮಾ ಚುಟುಕ ಅದೇ ರೀತಿಯಲ್ಲೇ ಆಫ್ ಫಾರ್ ಸಿಕ್ಸ್, ಟಿಮ್ ಬಾಕ್ಸ್ ಜಾನ್, ಎಕ್ಸಾಟ್ಲಿ ಫಿಟಿಂಗ್, ಎಕ್ಸಾಟ್ಲಿ ಕಟಿಂಗ್, ಟುಫಾನ್ ಕ್ವೀನ್ ಎನ್ನುವ ಮತ್ತೊಂದು ಚುಟುಕದ ಅರ್ಥ ಇಂದಿಗೂ ನಮ್ಮ ಮಾವನಿಗೂ ಗೊತ್ತಿರಲಿಲ್ಲ ಎಂದೆನಿಸುತ್ತದೆ. .
ನನಗೆ ಬುದ್ಧಿ ಬಂದ ದಿನಗಳಿಂದಲೇ, ಪ್ರತಿವರ್ಷ ಬೇಸಿಗೆಯ ರಜೆ ಬಂದರೆ ಸಾಕು, ತಂಗಿಯರ ಹತ್ತಾರು ಮಕ್ಕಳು ಸೇರಿ ಮಾವನ ಮನೆಗೆ ಹೋಗುವುದು ನಮ್ಮ ಪಾಲಿಗೆ ಒಂದು ಹಬ್ಬವೇ ಆಗಿತ್ತು. ಹತ್ತು-ಹನ್ನೆರಡು ಮಕ್ಕಳು ಮನೆ ತುಂಬಿದ್ದರೂ, ಮಾವನ ಮುಖದಲ್ಲಿ ಬೇಸರ ಎಂಬುದೇ ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್
ಪ್ರತಿದಿನ ಸಂಜೆ ಹೊರಗಿನಿಂದ ಬರುತ್ತಿದ್ದಾಗ ಏನಾದರೂ ಒಂದು ತಿಂಡಿ ಅಥವಾ ಹಣ್ಣುಗಳನ್ನು ತರುತ್ತಿದ್ದರು. ಕೆಲವೊಮ್ಮೆ ಮಾರುಕಟ್ಟೆಗೆ ಕರೆದುಕೊಂಡು ಹೋಗಿ, “ಮನೆಯಲ್ಲಿ ಯಾರಿಗೂ ಹೇಳಬೇಡ…” ಎಂದು ಕಿವಿಯಲ್ಲಿ ಹೇಳುತ್ತಾ ಮಸಾಲೆ ದೋಸೆ ತಿನ್ನಿಸುತ್ತಿದ್ದ ಆ ಕ್ಷಣಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿವೆ. ರಜೆ ಮುಗಿದು ನಾವು ನಮ್ಮ ನಮ್ಮ ಊರುಗಳಿಗೆ ಹಿಂದಿರುಗುವಾಗ, ಪ್ರತಿಯೊಬ್ಬರಿಗೂ ಹೊಸ ಬಟ್ಟೆ ಕೊಡಿಸಿ ಕಳುಹಿಸುತ್ತಿದ್ದ ಅವರ ಔದಾರ್ಯವನ್ನು ಮರೆಯುವುದು ಅಸಾಧ್ಯ.
ಒಮ್ಮೆ ನಾನು ಸೈಕಲ್ ಕಲಿಯುತ್ತಿದ್ದೇನೆ ಎಂಬ ವಿಷಯ ಮಾವನಿಗೆ ತಿಳಿಯಿತು. ಸೈಕಲ್ ಕಲಿಯುವಾಗ ಬೀಳುವುದು ಸಹಜವೆಂದು ತಿಳಿದಿದ್ದ ಅವರು, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಡೆಟಾಲ್, ಆಯಿಂಟ್ಮೆಂಟ್, ಹತ್ತಿ, ಬ್ಯಾಂಡೇಜ್ ಎಲ್ಲವನ್ನೂ ಕಳುಹಿಸಿಕೊಟ್ಟಿದ್ದರು. ಇಂದು ಕೂಡ ಡೆಟಾಲ್ನ ಆ ವಿಶಿಷ್ಟ ವಾಸನೆ ಮೂಗಿಗೆ ಬಡಿದಾಗ, ನನ್ನ ಗಾಯಗಳಿಗಿಂತ ಹೆಚ್ಚು ಕಾಳಜಿ ವಹಿಸಿದ್ದ ಆ ಸೋದರ ಮಾವನ ಪ್ರೀತಿಯೇ ನೆನಪಾಗುತ್ತದೆ.
ಇಂದು ಕಾಲ ಬದಲಾಗಿದೆ. ಸಂಬಂಧಗಳ ರೂಪ ಬದಲಾಗಿದೆ. ಆದರೆ ನನ್ನ ಬಾಲ್ಯವನ್ನು ನೆನೆಸಿಕೊಳ್ಳುವಾಗ, “ಮಾವ” ಎಂದರೆ ಕೇವಲ ಸಂಬಂಧವಲ್ಲ; ಅದು ತವರಿನ ಪ್ರೀತಿ, ಭದ್ರತೆ, ಮಮತೆ ಮತ್ತು ನಿಸ್ವಾರ್ಥ ಕಾಳಜಿಯ ಮತ್ತೊಂದು ರೂಪ ಎಂಬ ಸತ್ಯ ಮತ್ತೆ ಮತ್ತೆ ಮನಸ್ಸಿನಲ್ಲಿ ಮೊಳಗುತ್ತದೆ.
ಇಂದಿನ ಕಾಲದಲ್ಲಿ ಈ ಸಂಬಂಧದ ಅಗತ್ಯ ಇನ್ನಷ್ಟು
ಇಂದು ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿವೆ. ಸಂಬಂಧಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಸೀಮಿತವಾಗುತ್ತಿವೆ. ಹಬ್ಬಗಳು ಕುಟುಂಬಗಳಿಗಿಂತ ಹೋಟೆಲ್ಗಳಲ್ಲಿ ನಡೆಯುತ್ತಿವೆ. ಆದರೆ… ಹೆಣ್ಣುಮಗಳಿಗೆ ಜೀವನದಲ್ಲಿ ಯಾವಾಗಲಾದರೂ ಒಂಟಿತನ ಬಂದರೆ, ಅವಳಿಗೆ ಇನ್ನೂ ಧೈರ್ಯ ನೀಡುವುದು ತವರು ಮನೆಯ ಪ್ರೀತಿಯೇ. ಆ ಪ್ರೀತಿಯ ಪ್ರತಿನಿಧಿ ಮಾವ. ಹೀಗಾಗಿ ಈ ಸಂಬಂಧವನ್ನು ಉಳಿಸಿಕೊಳ್ಳುವುದು ಕೇವಲ ಸಂಪ್ರದಾಯವಲ್ಲ, ಸಂಸ್ಕೃತಿಯ ಸಂರಕ್ಷಣೆಯೂ ಹೌದು. ಅದೇ ನಮ್ಮ ಸನಾತನ ಧರ್ಮದ ಕೌಟುಂಬಿಕ ಮೌಲ್ಯಗಳ ತಳಹದಿಯಾಗಿದೆ.
ಕೊನೆಯ ಮಾತು
ಮಾವ ಎನ್ನುವುದು ಕೇವಲ ಒಂದು ಸಂಬಂಧದ ಹೆಸರು ಅಲ್ಲ. ಅದು ಒಂದು ಜೀವನಪರ್ಯಂತದ ಜವಾಬ್ದಾರಿ. ಇಂತಹ ಸಂಬಂಧವನ್ನು ರೂಪಿಸಿದ ನಮ್ಮ ಹಿರಿಯರ ದೂರದೃಷ್ಟಿಗೆ ಎಷ್ಟು ಕೃತಜ್ಞರಾಗಿದ್ದರೂ ಕಡಿಮೆ. ಇಂದು ಸಮಾಜ ವೇಗವಾಗಿ ಬದಲಾಗುತ್ತಿದೆ. ಆದರೆ ಸಂಬಂಧಗಳ ಮೌಲ್ಯಗಳು ಕಳೆದುಹೋಗಬಾರದು. ಏಕೆಂದರೆ… ಕುಟುಂಬವನ್ನು ಕಟ್ಟುವುದು ರಕ್ತಸಂಬಂಧವಲ್ಲ. ಜವಾಬ್ದಾರಿ, ಪ್ರೀತಿ, ವಿಶ್ವಾಸ ಮತ್ತು ಸಂಸ್ಕೃತಿ. ಅದಕ್ಕಾಗಿಯೇ ನಮ್ಮ ಹಿರಿಯರು ಹೇಳುತ್ತಿದ್ದರು— “ಮೊದಲು ಮಾವನಿಗೆ ತಿಳಿಸಿ, ನಂತರ ಉಳಿದ ಕೆಲಸ ಮಾಡಿ.”
ಇಂದು ನಮ್ಮ ಸಮಾಜದಲ್ಲಿ ಸೋದರಮಾವನಂತಹ ಸಂಬಂಧಗಳ ಮೌಲ್ಯವನ್ನು ಉಳಿಸಿಕೊಂಡಿದ್ದೇವೆಯೇ? ಅಥವಾ ಅವು ಕೇವಲ ಆಚರಣೆಗಳಾಗಿ ಮಾತ್ರ ಉಳಿದುಬಿಟ್ಟಿವೆಯೇ? ಸೋದರಮಾವನ ಇಷ್ಟೆಲ್ಲಾ ಮಹತ್ವವನ್ನು ತಿಳಿದ ನಂತರ ಸ್ವಲ್ಪ ಸಮಯ ಮಾಡಿಕೊಂಡು ಸೋದರ ಮಾವನವರನ್ನು ಭೇಟಿ ಮಾಡಿ ಅವರೊಂದಿಗೆ ಈ ಲೇಖನವನ್ನು ಹಂಚಿಕೊಂಡು ಅವರಿಗೆ ನಮ್ಮ ಪರವಾಗಿಯೂ ಒಂದು ನಮಸ್ಕಾರಗಳನ್ನು ತಿಳಿಸಿಬಿಡಿ. ಅಕಸ್ಮಾತ್ ಸೋದರ ಮಾವ ಇಲ್ಲದೇ ಹೋದಲ್ಲಿ ಅವರ ಮನೆಗಾದರೂ ಭೇಟಿ ನೀಡಿ ತಾಯಿಯ ತವರು ಮನೆಯವರೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಆ ಸುಂದರ ಅನುಭವ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ಹಂಚಿಕೊಳ್ಳಿ . ಇಂತಹ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





