ಮದುವೆಯ ಹೆಸರಿನಲ್ಲಿ ಜೀವನದಲ್ಲಿ ದುಃಖಪಡುವುದು ತಪ್ಪು. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿಕೊಂಡು ಅದನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಅರಿಯುವುದು ಅತ್ಯಗತ್ಯ………!
ರಂಜಿತ್ ಮತ್ತು ಅಕ್ಷತಾ ಪ್ರೇಮ ವಿವಾಹವಾಗಿ ಸುಮಾರು 4 ವರ್ಷಗಳಾಗಿದ್ದವು. ದಂಪತಿಗೆ ಚಿಕ್ಕ ಮಗಳಿದ್ದಳು. ಆದರೆ ಇಬ್ಬರ ನಡುವೆ ಇದ್ದ ಪ್ರೀತಿ ಎಲ್ಲಿ ಹಾರಿ ಹೋಯಿತು ಎಂಬುದೇ ಗೊತ್ತಾಗಲಿಲ್ಲ. ಇಬ್ಬರೂ ಶತ್ರುಗಳಂತೆ ಕೋಪದಲ್ಲಿ ಸದಾ ಕುದಿಯುತ್ತಿದ್ದರು. ಅವರಿಬ್ಬರ ಜಗಳ ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಶುರುವಾಗುತ್ತಿತ್ತು. ಇಬ್ಬರಿಗೂ ಕೋಪ ಬಂದಾಗ ತಾವು ಯಾರ ಮುಂದೆ ಜಗಳವಾಡುತ್ತಿದ್ದೇವೆ ಎಂಬ ಅರಿವು ಅವರಿಗೆ ಇರುತ್ತಿರಲಿಲ್ಲ. ಇವರ ಜಗಳವನ್ನು ಮಗಳು ಗಾಬರಿಯಿಂದ ನೋಡುತ್ತಿದ್ದಳು.
ಒಮ್ಮೆ ರಂಜಿತ್ತಾಯಿ ಮಗ ಸೊಸೆಯ ಮನೆಗೆ ಹೋಗಿದ್ದರು. ಮಗ ಸೊಸೆ ತಮ್ಮ ಅಭ್ಯಾಸದಂತೆ ತಾಯಿಯ ಎದುರೇ ಜಗಳವಾಡುತ್ತಿದ್ದರು. ಹೆಚ್ಚಿನ ವಾದಗಳು ಮನೆಯ ಕೆಲಸದ ಕುರಿತಾಗಿಯೇ ಇರುತ್ತಿದ್ದ. ರಂಜಿತ್ ಕೆಲಸಕ್ಕೆ ಹೋಗಬೇಕಿದ್ದರಿಂದ ಅಕ್ಷತಾ ತನಗೆ ಸಹಾಯ ಮಾಡಬೇಕು ಎಂದುಕೊಳ್ಳುತ್ತಿದ್ದ. ಆದರೆ ಅಕ್ಷತಾ ಯಾವಾಗಲೂ ತನಗೆ ಇಷ್ಟ ಬಂದಾಗ ಕೆಲಸ ಮಾಡುವ ಮನಸ್ಸಿನವಳಾಗಿದ್ದಳು. ಅವಳಿಗೆ ಮನಸ್ಸಿದ್ದರೆ ಕೆಲಸ ಮಾಡುತ್ತಿದ್ದಳು. ಇಲ್ಲದಿದ್ದರೆ ಆ ಕಡೆ ತಿರುಗಿ ನೋಡುತ್ತಿರಲಿಲ್ಲ.
ಇವರಿಬ್ಬರ ವೈಮನಸ್ಸಿನ ವಾತಾವರಣದಿಂದ ಭಯಗೊಂಡ ರಂಜಿತ್ ತಾಯಿ, “ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಆಗದಿದ್ದರೆ, ನೀವಿಬ್ಬರೂ ಬೇರೆಯಾಗಿ ವಾಸಿಸಬಹುದು. ಬಲವಂತವಾಗಿ ಒಟ್ಟಿಗೆ ಅತೃಪ್ತಿಯಿಂದ ಬದುಕುವ ಅಗತ್ಯವಿಲ್ಲ. ನಿಮ್ಮ ನಡವಳಿಕೆಗಳು ನಿಮ್ಮ ಮಗುವಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
“ನೀವಿಬ್ಬರೂ ಒಬ್ಬರನ್ನೊಬ್ಬರು ಯಾವ ಗುಣಗಳಿಂದಾಗಿ ಲವ್ ಮ್ಯಾರೇಜ್ ಮಾಡಿಕೊಂಡಿರಿ ಎಂಬ ಬಗ್ಗೆ ಮೊದಲು ಯೋಚಿಸಿ. ನೀವು ಪರಸ್ಪರ ಬಹಳ ಇಷ್ಟಪಡುತ್ತೀರ ಎಂದೇ ನಾವು ಭಾವಿಸಿದ್ದೆ. ಆದರೆ ಇಂದು ನಿಮ್ಮ ನಡವಳಿಕೆಗಳನ್ನು ನೋಡಿದರೆ ಹಾಗನ್ನಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಬೇರೆಯಾಗಿರುವುದು ಉತ್ತಮ,” ಎಂದು ಹೇಳಿದರು.
ನಂತರ ಇಬ್ಬರೂ ತಮ್ಮ ವಿರುದ್ಧವಾಗಿದ್ದ ಮನೋಭಾವವನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದರು. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಆರಂಭಿಸಿದರು. ಪರಸ್ಪರರ ಬಗ್ಗೆ ಸೂಕ್ಷ್ಮವಾಗಿ ನೋಡಿಕೊಂಡರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಚಿಕ್ಕಪುಟ್ಟ ವಿಷಯಗಳಿಗೆ ಜಗಳ
ಇಲ್ಲಿ ಇಬ್ಬರೂ ಒಂದೇ ರೀತಿಯ ಸ್ವಭಾವದವರಾಗಿದ್ದರು ಮತ್ತು ಆಕಸ್ಮಿಕವಾಗಿ ಘಟನೆಗಳು ಸಂಭವಿಸಿದವು. ಕೆಲವೊಮ್ಮೆ ದಂಪತಿಯಲ್ಲಿ ಒಬ್ಬ ವ್ಯಕ್ತಿ ತುಂಬಾ ಕೋಪದ ಸ್ವಭಾವ ಹೊಂದಿರುತ್ತಾರೆ. ಈ ಕೋಪದ ವರ್ತನೆ ಯಾರಿಗಾದರೂ ಸಂಭವಿಸಿಬಹುದು. ಅಂತಹ ನಡವಳಿಕೆಯನ್ನು ಹೊಂದಿರುವವರು ಇತರರ ಮೇಲೆ ಸಿಡುಕಲು ಆರಂಭಿಸುತ್ತಾರೆ. ಅಲ್ಲದೆ, ಚಿಕ್ಕಪುಟ್ಟ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಸಂಗಾತಿಯ ಎದುರು ಬಹಳ ಕೆಟ್ಟದಾಗಿ ವರ್ತಿಸುತ್ತಾರೆ. ಪ್ರೀತಿ, ಗೌರವ, ಕಾಳಜಿ ಮತ್ತು ಸಂವೇದನಾಶೀಲತೆ ಅವರ ನಿಘಂಟಿನಿಂದ ಕಾಣೆಯಾಗಿಬಿಟ್ಟಿರುತ್ತವೆ.
ಅನೇಕ ಬಾರಿ ಅಂತಹ ಗಂಡ ಅಥವಾ ಹೆಂಡತಿ ಇತರರ ಮುಂದೆ ಚೆನ್ನಾಗಿಯೇ ನಡೆದುಕೊಳ್ಳುತ್ತಾರೆ. ಇತರರೊಂದಿಗೆ ಅವರ ನಡವಳಿಕೆಯೂ ಸಹ ಪ್ರೀತಿಯಿಂದ ಕೂಡಿರುತ್ತದೆ. ಕೋಪಗೊಂಡ ಸಂಗಾತಿ ಎರಡು ರೀತಿಯಲ್ಲಿರುತ್ತಾರೆ. ಒಬ್ಬರು ಯಾವಾಗಲೂ ತಮ್ಮ ಸಂಗಾತಿಯ ಮೇಲೆ ಕೋಪಗೊಳ್ಳುವವರಾಗಿದ್ದರೆ, ಇನ್ನೊಬ್ಬರ ಕೋಪ ಅನಿರೀಕ್ಷಿತವಾಗಿರುತ್ತದೆ. ಅವರು ಯಾವುದಾದರೂ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಎರಡು ಪಾತ್ರೆಗಳು ಇರುವಲ್ಲಿ ಕೆಲವು ಘರ್ಷಣೆಗಳು ಉಂಟಾಗುತ್ತವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಕೆಲವು ವರ್ತನೆಗಳು ಹೆಚ್ಚು ಹೆಚ್ಚು ಪುನರಾವರ್ತನೆಯಾದಾಗ ಅದು ಚಿಂತನೆಯ ವಿಷಯವಾಗಿರುತ್ತದೆ.
ರಮ್ಯಾ ಮತ್ತು ಸಂದೀಪ್ ಮದುವೆಯಾಗಿ 4-5 ವರ್ಷಗಳಾಗಿದ್ದವು. ರಮ್ಯಾ ವಿದ್ಯಾವಂತ ಯುವತಿಯಾಗಿದ್ದರೂ, ಅತ್ತೆ ಮಾವಂದಿರ ಇಚ್ಛೆಗೆ ಮನ್ನಣೆ ನೀಡಿ, ಹೊರಗೆ ಕೆಲಸಕ್ಕೆ ಹೋಗದೆ, ಅವಿಭಕ್ತ ಕುಟುಂಬದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಲು ಮುಂದಾಗಿದ್ದಳು. ಸಂದೀಪನಿಗೆ ಮೂಗಿನ ಮೇಲೆಯೇ ಕೋಪ ಇರುತ್ತಿತ್ತು. ಒಬ್ಬನೇ ಮಗನಾಗಿದ್ದರಿಂದ ಅವನನ್ನು ಬಹಳ ಮುದ್ದಿನಿಂದ ಸಾಕಲಾಗಿತ್ತು. ಊಟದ ತಟ್ಟೆಯನ್ನು ಎಸೆದು ಕೆಲವೊಮ್ಮೆ ಪಾರ್ಟಿಗೆ ಹೋಗಲು ತಯಾರಾಗುತ್ತಿದ್ದ. ರಮ್ಯಾಳನ್ನು ಕುರೂಪಿ ಎಂದು ಜರಿಯುತ್ತಿದ್ದ. ಕೆಲವೊಮ್ಮೆ ಆಫೀಸಿನ ಸಿಟ್ಟನ್ನು ಮನೆಗೆ ತಂದು ಹೆಂಡತಿಯ ಮುಂದೆ ಹೊರಹಾಕುತ್ತಿದ್ದ. ಒಂದೆರಡು ಬಾರಿ ಸಂದೀಪ್, ರಮ್ಯಾ ಮೇಲೆ ಕೈ ಎತ್ತಿದ್ದ. ಅದಕ್ಕೆ ರಮ್ಯಾ ಅತ್ತೆ, “ಗಂಡಸು ಅಲ್ವಾ…. ಅವನಿಗೆ ನಿನ್ನ ಮೇಲೆ ಹಕ್ಕಿದೆ. ಏನು ಮಾಡುವುದು? ನಾವು ಹೆಂಗಸರು. ಏನೇ ಆದರೂ ಸಹಿಸಿಕೊಳ್ಳಲೇಬೇಕು,” ಎಂದು ಹೇಳುತ್ತಿದ್ದರು.
ರಮ್ಯಾ, ತನ್ನ ನಡವಳಿಕೆಯಿಂದ ತಾನು ಸಂದೀಪನ ಕಾಲಿಗೆ ಹಾಕುವ ಶೂಗಳಲ್ಲ ಎಂದು ಅರ್ಥ ಮಾಡಿಸಲು ಸಾಕಷ್ಟು ಪ್ರಯತ್ನಿಸಿದಳು. ಆದರೆ ಅದು ಸಂದೀಪ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕೊನೆಗೆ ರಮ್ಯಾ ರಹಸ್ಯವಾಗಿ ಕೆಲಸಕ್ಕೆ ಅರ್ಜಿ ಕಳುಹಿಸಲು ಪ್ರಾರಂಭಿಸಿದಳು. ತನಗೆ ಕೆಲಸ ಸಿಕ್ಕ ಕೂಡಲೇ ಯಾರ ಅನುಮತಿಯನ್ನೂ ಕೇಳದೆ ಕೆಲಸಕ್ಕೆ ಹೊರಡಲು ಆರಂಭಿಸಿದಳು. ಆತ್ಮಸ್ಥೈರ್ಯದ ಜೊತೆಗೆ ಮತ್ತೆ ಹೋರಾಡುವುದನ್ನೂ ಕಲಿತಳು.
ಸಂದೀಪ್ ಊಟದ ತಟ್ಟೆ ಎಸೆದು ಹೋದರೆ, ಅದನ್ನು ಸ್ವಚ್ಛಗೊಳಿಸುವುದಿರಲಿ, ತಿನ್ನಲು ಬೇರೇನಾದರೂ ಮಾಡಿಕೊಡಲೇ ಎಂದೂ ಸಹ ಕೇಳುತ್ತಿರಲಿಲ್ಲ. ಆ ಪರಿಸ್ಥಿತಿಯಿಂದ ದೂರ ಉಳಿಯಲು ಆರಂಭಿಸಿದಳು.
ಮದುವೆಯ ಅಡಿಪಾಯ
ಕೆಲವು ಮನೋರೋಗಿಗಳು ಅನುಮಾನ ಮತ್ತು ಅಸಮಾಧಾನದಿಂದ ತಕ್ಷಣವೇ ಆವೇಶಕ್ಕೆ ಒಳಗಾಗುತ್ತಾರೆ. ಆ ಕೋಪ ಕಡಿಮೆಯಾದಾಗ, ಪಶ್ಚಾತ್ತಾಪಡುತ್ತಾರೆ ಹಾಗೂ ಕ್ಷಮೆಯಾಚಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಮದುವೆಯ ಸಲಹೆಗಾರರನ್ನು ಅಥವಾ ಮನೋವೈದ್ಯರನ್ನು ಭೇಟಿ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು.
ಈ ರೀತಿಯಾಗಿ ಪ್ರತಿಯೊಂದು ಜೋಡಿಯೂ ವಿಭಿನ್ನವಾದ ಮನೋಭಾವ ಹೊಂದಿರುತ್ತಾರೆ. ಪ್ರತಿಯೊಬ್ಬರ ಕಥೆಯೂ ಒಂದೊಂದು ರೀತಿಯಲ್ಲಿ ಭಿನ್ನವಾಗಿರುತ್ತದೆ. ಕೋಪಗೊಂಡ ಸಂಗಾತಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಒಂದೇ ಸೂತ್ರವಿರುವುದಿಲ್ಲ. ವಿಚ್ಛೇದನ ದುಃಖದ ಪ್ರಕ್ರಿಯೆಯಾಗಿದೆ. ಸಾಧ್ಯವಾದಷ್ಟು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವುದೇ ಸೂಕ್ತ. ಆದರೆ, ಮದುವೆಯ ಹೆಸರಲ್ಲಿ ಜೀವನವನ್ನು ನರಕ ಮಾಡಿಕೊಳ್ಳುವುದು ತೀರಾ ತಪ್ಪು ನಿರ್ಧಾರವಾಗುತ್ತದೆ.
ಮದುವೆಯ ಅಡಿಪಾಯ ಪರಸ್ಪರ ಪ್ರೀತಿ ಮತ್ತು ಸಮನ್ವಯದ ಮೇಲೆ ನಿಂತಿದೆ. ಇಬ್ಬರು ವ್ಯಕ್ತಿಗಳು ಪರಿಚಯಸ್ಥರಾಗಿರಲಿ ಅಥವಾ ಸಂಪೂರ್ಣವಾಗಿ ಅಪರಿಚಿತರಾಗಿರಲಿ, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದಾಗ, ಕೆಲವು ಆರಂಭಿಕ ಸಮಸ್ಯೆಗಳು ಉದ್ಭವಿಸುತ್ತವೆ. ಅನೇಕ ಬಾರಿ, ಮದುವೆಯಾದ ಕೆಲವು ವರ್ಷಗಳ ನಂತರ, ಪ್ರಣಯದ ಏರಿಳಿತಗಳು ಕಡಿಮೆಯಾದಾಗ, ಸಂಗಾತಿಯ ವಿಭಿನ್ನ ರೂಪ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಜನರು ನಿಮ್ಮ ನಡತೆಯನ್ನು ನೋಡಿ ಉಗುಳುವಷ್ಟು ಕಹಿಯಾಗಬೇಡಿ ಹಾಗೂ ನುಂಗುವಷ್ಟು ಸಿಹಿಯಾಗಬೇಡಿ ಎಂದು ಹೇಳಲಾಗುತ್ತದೆ.
– ರೀಟಾ ಕೆ.





