ಫ್ಲಾಪ್‌ ಅಂದ್ರೆ ಭಯ

`ಜುಮ್ಮಂದಿ ನಾದಂ` ತೆಲುಗು ಚಿತ್ರದಿಂದ ಕೆರಿಯರ್‌ ಆರಂಭಿಸಿದ ತಾಪಸಿ ಪನ್ನು, ತಮಿಳಿನ `ಆಡುಕಾಲಂ’ ಚಿತ್ರದಿಂದ ಸ್ಟಾರ್‌ ಎನಿಸಿದಳು. `ಚಶ್ಮೆ ಬಹದ್ದೂರ್‌’ನಿಂದ ಬಾಲಿವುಡ್‌ನಲ್ಲಿ ಎಂಟ್ರಿ ಪಡೆದ ಈ ಬೆಡಗಿ ಪಿಂಕ್‌, ಬೇಬಿ ಚಿತ್ರಗಳಲ್ಲಿ ಮಿಂಚಿ ಈಕೆ ಇದೀಗ `ನಾವ್‌ ಶಬಾನಾ’ದ ಸ್ಟಂಟ್‌ಗಳ ಮೂಲಕ ಬಹು ಚರ್ಚೆಯಲ್ಲಿದ್ದಾಳೆ. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸುವ ತಾಪಸಿಗೆ ಫ್ಲಾಪ್‌ ಎಂದರೆ ಭಯವಂತೆ, “ನನ್ನ ಪ್ರತಿ ಚಿತ್ರ ರಿಲೀಸ್‌ ಆಗುವಾಗಲೂ ಪರೀಕ್ಷೆಯ ಫಲಿತಾಂಶ ಎದುರಿಸುವ ವಿದ್ಯಾರ್ಥಿಯಂತೆ ಚಡಪಡಿಸುತ್ತೇನೆ. ಬಾಕ್ಸ್ ಆಫೀಸ್‌ ವರದಿ ನೆಗೆಟಿವ್‌ ಆದೀತೆಂಬ ಭಯದಿಂದ ನಾನು ಊಟ ಸಹ ಮಾಡಲ್ಲ ಗೊತ್ತಾ…?” ಎನ್ನುತ್ತಾಳೆ.

ಶ್ರದ್ಧಾಳ ಕಿತಾಪತಿ

ಫರ್‌ಹಾನ್‌ ಮನೆ ಹೊಕ್ಕಿದ್ದ ಶ್ರದ್ಧಾಳನ್ನು ಬಲವಂತಾಗಿ ವಾಪಸ್ಸು ಮನೆಗೆ ಕರೆಸಿದ ಸುದ್ದಿ, ನಂತರ ಎಕ್ಸ್ ಮತ್ತು ಪ್ರೆಸೆಂಟ್‌ ಬಾಯ್‌ಫ್ರೆಂಡ್‌ಗಳ ನಡುವೆ ಮಾರಾಮಾರಿ…. ಈ ಸುದ್ದಿಗಳಿಂದ ಶ್ರದ್ಧಾಳಿಗಾಗಿ ಇಂದಿನ ಯುವಕರು ಎಷ್ಟು ಶ್ರದ್ಧೆಯಿಂದಿದ್ದಾರೆ ತಿಳಿಯುತ್ತದೆ. `ಆಶಿಕಿ-2′ ಚಿತ್ರದ ಆದಿತ್ಯ-ಶ್ರದ್ಧಾರ ಜೋಡಿ ಆ ಕಾಲಕ್ಕೆ ಹಿಟ್‌ ಎನಿಸಿತ್ತು. ನಂತರ `ರಾಕ್‌ಆನ್‌-2′ ಚಿತ್ರದ ನಂತರ ಫರ್‌ಹಾನ್‌-ಶ್ರದ್ಧಾರ ಲಿಪ್‌ಲಾಕ್‌ ಭಾರಿ ಸುದ್ದಿ ಆಯ್ತು. ಆತ ಪತ್ನಿಯನ್ನು ಬಿಟ್ಟಿದ್ದೇ ಈಕೆಯಿಂದ ಎಂದಾಗಿತ್ತು. ಇದೀಗ ಹೊಸ ಚಿತ್ರದ ನಂತರ ಮತ್ತೆ ಆದಿ ಜೊತೆ ಇವಳ ಸುತ್ತಾಟ ತಾರಕಕ್ಕೇರಿದೆ. ಆದಿತ್ಯನಿಗಿಂತ ಸೀನಿಯರ್‌ ಆದ ಫರ್‌ಹಾನ್‌ಗೆ ಉರಿಉರಿ ಆಗದಿದ್ದೀತೇ? ಇತ್ತೀಚೆಗೆ ಆಕೆ ಆದಿ ಜೊತೆ ಮಹೇಶ್‌ ಭಟ್‌ರ ಪಾರ್ಟಿಯಲ್ಲಿ ಕೈಕೈ ಬೆಸೆದು ಕಾಣಿಸಿದಾಗ, ಫರ್‌ಹಾನ್‌ ಆದಿ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ. ಅವರನ್ನು ಹೊಡೆದಾಡಲು  ಬಿಟ್ಟು ಈಕೆ ಅಲ್ಲಿಂದ ಪರಾರಿ ಆಗುವುದೇ….?

ಇರ್ಫಾನ್‌-ಸಬಾರಿಗಾಗಿ ಹಾಡುವ ಗುರು

ಇಂದಿನ ಪಡ್ಡೆಗಳ ಹಾರ್ಟ್‌ ಥ್ರೋಬ್‌ ಪಾಪ್‌ ಸಿಂಗರ್‌ ಎನಿಸಿರುವ ಗುರು ರಂಧಾವಾ ಬಾಲಿವುಡ್‌ನಲ್ಲಿ ಎಂಟ್ರಿ ಪಡೆದದ್ದೇ ದೊಡ್ಡ ಸುದ್ದಿ! ಇರ್ಫಾನ್‌-ಸಬಾ ಕರೀಂ ನಟಿಸಿರುವ `ಹಿಂದಿ ಮೀಡಿಯಂ’ ಚಿತ್ರದಲ್ಲಿ ಆತನದೇ ಹಾಡುಗಾರಿಕೆ. ಹಳೆ ಹಾಡು ಇಲ್ಲಿ ರಿಪೀಟ್‌ ಆಗುತ್ತಿರುವ ಬಗ್ಗೆ ಗುರು, “ಈ ಹಾಡು ನನಗೇನೋ ಬಹಳ ಇಷ್ಟ. ಹಿಂದೆ ಕೆಲವರನ್ನು ಮಾತ್ರ ತಲುಪಿದ್ದ ಈ ಹಾಡು ಈಗ ಅಂತಾರಾಷ್ಟ್ರೀಯ  ಮಟ್ಟ ತಲುಪಲಿದೆ. `ಹಿಂದಿ ಮೀಡಿಯಂ’ ಚಿತ್ರ ಖಂಡಿತಾ ಆ ಎತ್ತರಕ್ಕೇರಲಿದೆ,” ಎನ್ನುತ್ತಾನೆ.

ಸನೀ ಕಲಿಯುತ್ತಿದ್ದಾಳೆ ಹೊಸ ಕೋರ್ಸ್

ತನ್ನ ಹಾಟ್‌ನೆಸ್‌ ಎಲ್ಲಾ ಕಾಲಕ್ಕೂ ಎತ್ತಿ ಹಿಡಿಯಲಾರದು ಎಂಬುದನ್ನು ಮನಗಂಡಿರುವ ಸನೀ ಲಿಯೋನ್‌, ಬಾಲಿವುಡ್‌ನಲ್ಲಿ ಒಂದು ಸ್ಥಾನ ಗಳಿಸಬೇಕೆಂದರೆ, ನಟನೆ ಅನಿವಾರ್ಯ ಎಂಬುದನ್ನು ಮನಗಂಡಿದ್ದಾಳೆ. ಇದನ್ನು ಸೀರಿಯಸ್‌ ಆಗಿ ಭಾವಿಸಿದ ಈಕೆ, ಲಾಸ್‌ ಏಂಜಲೀಸ್‌ಗೆ ಹೋಗಿ ಸ್ಕ್ರಿಪ್ಟ್ ರೈಟಿಂಗ್‌, ಎಡಿಟಿಂಗ್‌ ಕೋರ್ಸ್‌ ಕಲಿಯುತ್ತಿದ್ದಾಳಂತೆ. ಈಕೆ ಶಾರೂಖ್‌ ಜೊತೆ `ರಯೀಸ್‌’ ಚಿತ್ರದ `ಲೈಲಾ ಓ ಲೈಲಾ….’ ಐಟಂ ನಂತರ ಮತ್ತೆಲ್ಲೂ ನಟಿಸಲಿಲ್ಲ. ನಂಬಲರ್ಹ ಮೂಲಗಳ ಪ್ರಕಾರ, ಸನೀ ಲಾಸ್‌ ಏಂಜಲೀಸ್‌ನಲ್ಲಿ ಸೀರಿಯಸ್‌ ಆಗಿ ಕಲಿಯುತ್ತಿರುವುದು ನಿಜವಂತೆ. ಅದೇನೂ ಮಾಡದಿದ್ದರೆ ತಾನು ಇಲ್ಲಿ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಅರಿತಿದ್ದಾಳೆ.

ಅರೇ…. ಇದೇನಾಗಿ ಹೋಯ್ತು!

ಇದೇನು ಬಿಂದು…. ಅಲ್ಲಲ್ಲ, ಪರಿಣಿತಿ ರಾಂಪ್‌ ನೋಡಿ ಹೆದರಿದ್ದಾಳಾ? ಈಕೆಯ ಈ ಅವತಾರವನ್ನು ಮೋಸ್ಟ್ ಸ್ಟೈಲಿಶ್‌ ಅವಾರ್ಡ್ಸ್  ಸಂದರ್ಭದಲ್ಲಿ ಕಾಣಬಹುದಾಗಿತ್ತು. ವೀಕ್ಷಕರು ಸಹ ಒಂದು ಕ್ಷಣ ಏನಾಯ್ತೋ ಎಂದು ದಂಗುಬಡಿದುಹೋದರು. ಪರಿಣಿತಿ-ಆಯುಷ್ಮಾನ್‌ ಇದೀಗ `ಮೇರಿ ಪ್ಯಾರಿ ಬಿಂದು’ ಚಿತ್ರದಲ್ಲಿ ಒಟ್ಟಾಗಿದ್ದಾರೆ. ಈ ಚಿತ್ರದ ಟೀಸರ್‌ 4 ಸ್ಟೆಪ್ಸ್ ನಲ್ಲಿ ರಿಲೀಸ್‌ ಆಗುತ್ತಿದೆ. ಪ್ರತಿ ಸ್ಟೆಪ್‌ನಲ್ಲೂ ಇಬ್ಬರ ಬೊಂಬಾಟ್‌ ಕೆಮಿಸ್ಟ್ರಿ ಕಾಣಸಿಗಲಿದೆ, ಸಾಲದ್ದಕ್ಕೆ ಈಕೆ ಈ ಚಿತ್ರದಲ್ಲಿ ಹಾಡಿದ್ದಾಳೆ ಕೂಡ.

ಅವರವರ ಭಾವಕ್ಕೆ….

ಮೇಡಂ, ನೀವು ಇಂಥ ಭಾರಿ ಒಡವೆ, ಈ ಗಾಡಿ ಕಾಂಜೀವರಂ ಸೀರೆಗಳನ್ನು ಹೇಗಪ್ಪಾ ಉಡ್ತೀರಿ? ನನಗಂತೂ ನೋಡಿದ್ರೇನೇ ಬೆವರು ಬರುತ್ತೆ. ಅದೇಮ್ಮ ಜ್ಯಾಕ್ಲೀನ್‌, ಈ ವಿಷಯದಲ್ಲಿ ಮಾತ್ರ ನಾನು ಬಪ್ಪಿಲಹರಿಯ ಪಟ್ಟ ಶಿಷ್ಯೆ! ಮೇಡಂ, ನಾನಂತೂ ಏನೂ ಧರಿಸೋದೇ ಇಲ್ಲಪ್ಪ….ಯಾಕೆ ಸುಳ್ಳು ಹೇಳ್ತಿ? ಇಂಥ ಒಳ್ಳೆ ಡ್ರೆಸ್‌ ಧರಿಸಿದ್ದಿ ಮತ್ತೆ……

ಕಾಜೋಲ್  V/S ಕರಣ್

ಪ್ರೊಫೆಶನಲ್ ವಾರ್‌ ಹೇಗಿರುತ್ತೆ ಅಂದ್ರೆ, ಯಾವಾಗ ದೋಸ್ತ್ ದುಶ್ಮನ್‌ ಆಗ್ತಾರೆ ಅನ್ನೋದೇ ಗೊತ್ತಾಗೋಲ್ಲ. ಅಂದ ಕಾಲತ್ತಿಲೆ… ಗುಡ್‌ ಫ್ರೆಂಡ್ಸ್ ಆಗಿದ್ದ ಕರಣ್‌ ಜೋಹರ್‌-ಕಾಜೋಲ್ ಇದೀಗ ಬೀದಿ ಜಗಳಕ್ಕೆ ಇಳಿದಿದ್ದಾರೆ. ಕಾಜೋಲ್ ಕರಣ್‌ ಕಡೆ ಹಲ್ಲು ಮಸೆಯುತ್ತಾ, “ಕೆಲವರಂತೂ ತೋರಿಕೆಗಾಗಿಯೇ ಪ್ರಾಮಾಣಿಕತೆಯ ನಾಟಕವಾಡುತ್ತಾರೆ. ನಮ್ಮ ಬಾಲಿವುಡ್‌ನಲ್ಲಂತೂ ಇಂಥ ನಕಲಿ ಶ್ಯಾಮರ ಕಾಟ ಜಾಸ್ತಿ! ತಾವು ಪ್ರಾಮಾಣಿಕರೆಂದೇನೋ ಹೇಳಿಕೊಳ್ಳುತ್ತಾರೆ, ಆದರೆ ಅದು ಭಾಷಣ, ಪುಸ್ತಕಗಳಿಗೆ ಮಾತ್ರ! ”ಕರಣ್‌ ತನ್ನ ಬುಕ್‌ ರಿಲೀಸ್‌ ಮಾಡಿದ ನಂತರ ಕಾಜೋಲ್‌ ಕುಟುಕಿದ್ದು ಈ ರೀತಿ. ಕಾರಣ ಈಕೆಯ ಪತಿ ಅಜಯ್‌ ದೇವಗನ್‌ನ `ಶಿವಾಯ್‌’ ಮತ್ತು ಕರಣ್‌ನ `ಏ ದಿಲ್‌ ಮುಶ್ಕಿಲ್‌’ ಚಿತ್ರಗಳೆರಡೂ ಒಂದೇ ದಿನ ರಿಲೀಸ್‌ ಆದದ್ದು.

ಶಕ್ತಿಯಾದ ಸುನೀಲ್

‌ದೆಹಲಿಯ ಪಂಜಾಬಿ ಹುಡುಗ ಸುನೀಲ್ ಕಪೂರ್‌ ಹೀರೋ ಆಗಲು ಮುಂಬೈಗೆ ಹೋಗಿ, ಅಲ್ಲಿಂದ ಶಕ್ತಿ ಕಪೂರ್‌ ಆಗಿ ಮರಳಿದ್ದ. ಹೆಸರು ಬದಲಾಗಿದ್ದೇಕೆ? “ನಾನು ಹೀರೋ ಅಂತೂ ಆಗಲಿಲ್ಲ, ವಿಲನ್‌ ಪಾತ್ರ ಸಿಗತೊಡಗಿತು. ಆಗ ಸುನೀಲ್ ದತ್ತ್ ರ ಚಿತ್ರಗಳು ಮೇಲು ಮಟ್ಟದಲ್ಲಿದ್ದ. ನನ್ನ ಹೆಸರೂ ಸುನೀಲ್‌, ಒಬ್ಬ ಸಾಧಾರಣ ವಿಲನ್‌. ಅಂಥ ಹೀರೋ ಹೆಸರೂ ಅದೇ ಆದ ಕಾರಣ, ನಾನು ಶಕ್ತಿ ಆದೆ. ಇದು ನರ್ಗೀಸ್‌ ಅವರ ಸಲಹೆ. ಬೇರೆಲ್ಲೂ ಒಳ್ಳೆ ಹೆಸರು ಗಿಟ್ಟಿಸದ ನಾನು ಚಿತ್ರರಂಗದಲ್ಲಾದರೂ ತಳವೂರಲೇಬೇಕೆಂದು ವಿಲನ್‌, ಕಮಿಡಿಯನ್‌ ಆದೆ.”ಶಕ್ತಿ ಸಹ ಪುಣೆ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿ. `ಕುರ್ಬಾನಿ’ ಇವರ ಕೆರಿಯರ್‌ನ ಟರ್ನಿಂಗ್‌ ಪಾಯಿಂಟ್‌. “ನನ್ನ ಬಳಿ ಒಂದು ಗುಜರಿ ಕಾರಿತ್ತು. ಯಾರೋ ಮರ್ಸಿಡಿಸ್‌ನವರು ನನ್ನ ಈ ಕಾರನ್ನು ಗುದ್ದಿದಾಗ, ಅವರ ಬಳಿ ಹಣ ವಸೂಲಿ ಮಾಡಲು ಇಳಿದೆ. ನೋಡಿದ್ರೆ ಫಿರೋಜ್‌ ಖಾನ್‌! ನನ್ನನ್ನು ಅಲ್ಲಿ ಗಮನಿಸಿದವರೇ ಅವರು ಡೀಲ್‌ ಸೆಟ್‌ ಮಾಡಿ, ತಮ್ಮ ಚಿತ್ರಕ್ಕೆ ಆಫರ್‌ ಕೂಡ ನೀಡಿದರು! ಕೆಟ್ಟು ನಿಂತ ಕಾರು ನನ್ನ ಜೀವನ ಕಾಪಾಡಿತ್ತು.“ಅದೇ ರೀತಿ `ಹಿಮ್ಮತ್‌ ವಾಲಾ’ ನನ್ನ ಕಾಮೆಡಿಗೆ ಅಡಿಕ್ಟ್ ಮಾಡಿತು. ನಿರ್ದೇಶಕರು ದಕ್ಷಿಣದವರು. ಚೆನ್ನೈನಲ್ಲಿ ಶೂಟಿಂಗ್‌. ನನ್ನ ಪಾತ್ರದ ಪ್ರಕಾರ ನಾನು `ಔವ್’ ಎನ್ನಬೇಕಿತ್ತು. ಬೆಳಗ್ಗೆ ಹೋಗಿ ಸಂಜೆ ಆಯ್ತು. ಆದರೆ ಡೈರೆಕ್ಟರ್‌ಗೆ ನನ್ನ `ಔವ್’ ಹಿಡಿಸಲೇ ಇಲ್ಲ. ನನಗೂ ಸಾಕಾಗಿತ್ತು. ಚಿತ್ರ ಬಿಟ್ಟು ಹೊರಟುಹೋಗೋಣ ಎಂದು ರೆಡಿ ಆದೆ. ಕೊನೆಗೊಮ್ಮೆ ಟ್ರೈ ಮಾಡಿಯೇ ಬಿಡೋಣ ಎಂದು ಬಾಯಿ ಸೊಟ್ಟಗೆ ತಿರುಗಿಸಿ `ಔವ್’ ಅಂದೆ. ಅದು ನೆಟ್ಟಗೆ ಕ್ಲಿಕ್‌ ಆಯಿತು!”

ಚಿತ್ರ ಅಪೂರ್ಣವಾಗಿದ್ರೆ ನಾನು ಎಲೆಮರೆಯಲ್ಲೇ!

ಕೇವಲ 13 ವರ್ಷದ ವಯಸ್ಸಿನಲ್ಲಿ ಎವರೆಸ್ಟ್ ಏರುವ ಕನಸನ್ನೂ ಎಳೆಯರು ಕಾಣಲಾರರು. ಆದರೆ ಬಡ ಕುಟುಂಬದ ಪೂರ್ಣಾ, ಈ ಕನಸು ಕಂಡಿದ್ದಲ್ಲದೆ ಅದನ್ನು ನನಸು ಸಹ ಮಾಡಿಕೊಂಡಳು. ಈ ಹುಡುಗಿಯ ಇಂಥ ಅದ್ಭುತ ಸಾಹಸವನ್ನು ನಟ, ನಿರ್ದೇಶಕ ರಾಹುಲ್ ಬೋಸ್‌ ತಮ್ಮ `ಪೂರ್ಣಿಮಾ’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ತೆಲಂಗಾಣಾದ ಸಣ್ಣ ಗ್ರಾಮದ ಹುಡುಗಿ ಪೂರ್ಣಾ ಹೇಳುತ್ತಾಳೆ, ಅವಳು ಆ ಚಿತ್ರದ ಕೇಂದ್ರಬಿಂದು ಆಗಿರದಿದ್ದರೆ ಜನ ಗುರುತಿಸುತ್ತಲೇ ಇರಲಿಲ್ಲ. ಪೂರ್ಣಾ ಮೇ 2014ರಲ್ಲಿ ಎವರೆಸ್ಟ್ ಶಿಖರಾರೋಹಣ ಮಾಡಿ ತನ್ನ ಕನಸು ನನಸಾಗಿಸಿಕೊಂಡು, ಒಂದು ವಿನೂತನ ದಾಖಲೆ ಸ್ಥಾಪಿಸಿದ್ದಳು. ವಿಶ್ವದ ಅತಿ ಕಿರಿಯ ಬಾಲೆ ಎವರೆಸ್ಟ್ ಏರಿದ್ದಾಳೆ.

ನಿರಾಶೆಗೆ ಗುರಿಯಾಗಿದ್ದ ಆಶಾ

ಲಕ್ಷಾಂತರ ಜನರ ಪ್ರೀತಿ ಪಡೆದ ಮೇಲೂ ಏಕಾಂಗಿತನ ಡಿಪ್ರೆಶನ್‌ಗೆ ತಳ್ಳಿದರೆ ಮಾಡುವುದೇನು? ಇಂಥ ಸಂದಿಗ್ಧಕ್ಕೆ ಸಿಲುಕಿದ್ದವರು ದಶಕಗಳಾಚೆಯ ಬಾಲಿವುಡ್‌ನ ಎವರ್‌ಗ್ರೀನ್‌ ನಾಯಕಿ ಆಶಾ ಪರೇಖ್‌. ಆಕೆಯ ಕೆರಿಯರ್‌ ಉನ್ನತ ಮಟ್ಟದಲ್ಲಿದ್ದಾಗ ಎಲ್ಲಾ ಸೂಪರ್‌ಸ್ಟಾರ್‌ಗಳೂ ನಾ ಮುಂದು ತಾ ಮುಂದು ಎಂದು ಜೊತೆಗೆ ನಟಿಸಿದ್ದರು. ಬೇಡಿಕೆ ಕುಸಿದಂತೆ… ಎಲ್ಲರೂ ಕೈ ಬಿಟ್ಟರು. 1959-72ರವರೆಗೊ ಆಶಾ ಬಾಲಿವುಡ್‌ ಕ್ವೀನ್‌ ಎನಿಸಿದ್ದರು. ಸಿಂಗಲ್ ಆಗಿದ್ದ ಈಕೆ ತಾಯಿ ತಂದೆಯರನ್ನು ಕಳೆದುಕೊಂಡ ಬಳಿಕ ತೀರಾ ಹತಾಶರಾದರು.“ಎಷ್ಟೋ ಸಲ ಆತ್ಮಹತ್ಯೆ ಮಾಡಿಕೊಳ್ಳಲೇ ಎಂದೂ ಯೋಚಿಸಿದ್ದಿದೆ. ಮದುವೆ ಆಗದೆ ಸಿಂಗಲ್ ಆಗಿ ಉಳಿಯಬೇಕೆನ್ನುವುದು ನನ್ನದೇ ನಿರ್ಧಾರ. ಅಮ್ಮ ನನ್ನ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಆಗಿದ್ದಳು. ಆಕೆಯ ಮರಣಾನಂತರ ನನಗೆ ಹುಚ್ಚೇ ಹಿಡಿಯಿತು. ವಯಸ್ಸಿನ ಪ್ರಭಾವ, ಏಕಾಂಗಿತನ ನನ್ನನ್ನು ಕಿತ್ತು ಕಾಡತೊಡಗಿತು. ಇದರಿಂದ ಹೊರಬರಲಿಕ್ಕಾಗಿಯೇ ನಾನು `ದಿ ಹಿಟ್‌ ಗರ್ಲ್’ ಎಂಬ ಆತ್ಮಕಥೆಗೆ ತೊಡಗಿದೆ.

 

ಕಿಯಾರಾಳ ತೋಪಾದ ಐಡಿಯಾ

ಒಮ್ಮೊಮ್ಮೆ ಹೊಸ ಐಡಿಯಾಗಳು ವರ್ಕ್‌ ಆಗದಿದ್ದಾಗ ಎಂಥ ಘಾಸಿ ಆಗುತ್ತದೆ ಎಂಬುದನ್ನು ಕಿಯಾರಾಳನ್ನು ಕೇಳಿ ನೋಡಿ. ಬಾಕ್ಸಿಂಗ್‌ ಕುರಿತಾದ `ಪಗ್ಲಿ’ ಮೊದಲ ಚಿತ್ರದಲ್ಲಿ ಹೀರೋ ವಿಜೇಂದ್ರ ಸಿಂಗ್‌ ಜೊತೆ ನಟಿಸಿದಾಗ, ದುರಾದೃಷ್ಟಕ್ಕೆ ಅದು ಬಾಕ್ಸ್ ಆಫೀಸ್‌ನಲ್ಲಿ  ಚಿತ್‌ ಆಗಬೇಕೇ? ಇದಾದ ನಂತರ `ಧೋನಿ : ದಿ ಅನ್‌ಟೋಲ್ಡ್ ಸ್ಟೋರಿ’ ತುಸು ಹಿಟ್‌ ಎನಿಸಿದರೂ ಅದರ ಸಂಪೂರ್ಣ ಕ್ರೆಡಿಟ್‌ ಸುಶಾಂತ್‌ ರಜಪೂತ್‌ಗೆ ಹೋಯಿತು. ಎಲ್ಲಕ್ಕೂ ದೊಡ್ಡ ಫ್ಲಾಪ್‌ ಎಂದರೆ `ಮಶೀನ್‌’ ಚಿತ್ರ. ಇದರಿಂದಾಗಿ ಈಕೆ ಡಿಪ್ರೆಶನ್‌ಗೆ ಹೋಗಬೇಕಾಯ್ತು. “ಏನೇನೋ ಐಡಿಯಾ ಮಾಡುವ ಬದಲು ಪಾಸಿಟಿವ್ ಥಿಂಕಿಂಗ್‌ ಕಡೆ ಫೋಕಸ್‌ ಮಾಡುವುದು ಒಳ್ಳೆಯದು. ಹಳೆಯದರ ಕುರಿತು ಮತ್ತೆ ಮತ್ತೆ ಪಶ್ಚಾತ್ತಾಪ ಪಡುವುದರಿಂದ ಲಾಭವೇನು?” ಎನ್ನುತ್ತಾಳೆ.

ತಾಯಿಯಾದ ನಂತರ ಮರಳಿದ ಕರೀನಾ

ಹಳೆಯ ನಾಯಕಿಯರಂತೆ ತಾಯಿಯಾದ ನಂತರ ತನ್ನ ಸಂಸಾರಕ್ಕೆ ಅಂಟಿ ಕೂರುವ ಜಾಯಮಾನದವಳಲ್ಲ ಕರೀನಾ. ಮಗು ಹುಟ್ಟಿದ ನಂತರ, ಬಾಣಂತನ ಆಯಿತೆನಿಸಿದ ಈಕೆ, ಕರಣ್‌ನ ಹೊಸ ಚಿತ್ರಕ್ಕೆ ಸೈನ್‌ ಮಾಡಿದ್ದಾಳೆ. ಬೇಬೋ ಬಳಿ ಇಂದಿಗೂ ಚಿತ್ರಗಳಿಗೆ ಬರವಿಲ್ಲ. ಆದರೆ ಬಲು ಚೂಸಿಯಾಗಿ ಚಿತ್ರ ಆರಿಸಿಕೊಳ್ಳುತ್ತಿದ್ದಾಳೆ. ಈಗ ಆಕೆ ತನ್ನ ಫಿಟ್‌ನೆಸ್‌ ಬಗ್ಗೆಯೂ ಬಲು ಹುಷಾರಾಗಿದ್ದಾಳೆ. ತನ್ನ ಅಪೂರ್ಣ `ವೀರೆ ದಿ ವೆಡಿಂಗ್‌’ ಚಿತ್ರವನ್ನು ಈಗ ಕಂಪ್ಲೀಟ್‌ ಮಾಡುತ್ತಿದ್ದಾಳೆ. ಜೊತೆಗೆ ಸ್ವರಾ ಭಾಸ್ಕರ್‌, ಸೋನಂ ಕಪೂರ್‌ ಸಹ ಇದ್ದಾರೆ.

ವಿದ್ಯಾಳಿಗೆ ಕೋಪ ಬಂದದ್ದೇಕೆ?

ಡರ್ಟಿ ಪಿಕ್ಚರ್‌, ಕಹಾನಿ ಮುಂತಾದ ಹಿಟ್‌ ಚಿತ್ರಗಳ ನಂತರ ವಿದ್ಯಾಬಾಲನ್‌ ಎಲ್ಲೇ ಹೋದರೂ ಅವಳನ್ನು ಮೀಡಿಯಾ ಮುತ್ತಿಕೊಳ್ಳುತ್ತದೆ. “ಇತ್ತೀಚೆಗೆ ನಾನೊಂದು ಸಾವಿನ ಮನೆಗೆ ಹೋಗಿದ್ದಾಗ, ಮೃತರ ಅಂತಿಮ ದರ್ಶನ ಪಡೆದು ಹೊರಬಂದ ತಕ್ಷಣ ಎಂದಿನಂತೆ ಮೀಡಿಯಾ ನನ್ನನ್ನು ಮುತ್ತಿಕೊಂಡಿತು. ಅವರಿಗೆ ಉತ್ತರಿಸುತ್ತಿದ್ದೆ… ಅದೇ ಜಾಗಕ್ಕೆ ಆಮೀರ್‌ ಖಾನ್‌ ಬಂದರು. ಇದೇ ಮೀಡಿಯಾ ಮಂದಿ ನನ್ನನ್ನೇ ತುಳಿದುಹಾಕಿ ಅವರ ಸಂದರ್ಶನಕ್ಕೆ ಓಡುವುದೇ? ಇರಲಿ, ಆಮೀರ್‌ ಖಾನ್‌ ದೊಡ್ಡ ಸ್ಟಾರ್‌ ಸರಿ. ಹಾಗೆಂದು ನಾಯಕಿಯರಾದ ನಾವು ಏನೇನೂ ಅಲ್ಲವೇ? ಅಟ್ಟಕ್ಕೇರಿಸುವ ಇದೇ ಮೀಡಿಯಾ ಚಟ್ಟಕ್ಕೆ ತಳ್ಳಲಿಕ್ಕೂ ಹೇಸುವುದಿಲ್ಲ!”

 

ದಿವ್ಯಾಂಕಾ-ವಿವೇಕ್‌ರ ಚರ್ಚೆ

`ನಚ್‌ ಬಲಿಯೇ’ದ ಹೊಸ ಸೀಸನ್‌ನಲ್ಲಿ ಇದೀಗ ಹಲವು ಜೋಡಿಗಳ ಮಧ್ಯೆ ದಿವ್ಯಾಂಕಾ-ವಿವೇಕ್‌ರ ಜೋಡಿಯ ಕುರಿತಾದ ಚರ್ಚೆ ಎಲ್ಲೆಲ್ಲೂ ಕೇಳಿಬರುತ್ತಿದೆ. ಕಳೆದ ತಿಂಗಳು ಶುರುವಾದ ಈ ಶೋ ಪ್ರೇಮ, ಪ್ರಣಯ, ಡ್ಯಾನ್ಸ್ ಗಳ ಮಹಾಮೇಳ ಎನಿಸಿದೆ. ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿರುವ `ಏ ಹೈ ಮೊಹಬ್ಬತೇ’ ಶೋನ ಸೂಪರ್‌ಹಿಟ್‌ ಜೋಡಿ ರಮಣ್‌-ಇಶಿತಾ, ಪರಸ್ಪರ ಕೋ ಸ್ಟಾರ್ಸ್‌ ಆಗಿ ಬಹಳ ಸಾಥ್‌ ನೀಡುತ್ತಾರೆ. ದಿವ್ಯಾಂಕಾ ಅಂತೂ ಎರಡೂ ಶೋಗಳಲ್ಲಿ ಮಿಂಚುತ್ತಿದ್ದಾಳೆ. ಇಂಥ ಜೋಡಿಗಳಿಗೆ ಆಲ್ ದಿ ಬೆಸ್ಟ್!

ಅಜ್ಜಿಯ ಮನದಾಳದ ಆಸೆ

ಉದಿತ್‌ ನಾರಾಯಣ್‌ರ ಮಗ, ಕಿರುತೆರೆಯ ಜನಪ್ರಿಯ ಆ್ಯಂಕರ್‌, ಸಿಂಗರ್‌ ಆದಿತ್ಯ ನಾರಾಯಣ್‌ನ 95 ವರ್ಷದ ಅಜ್ಜಿಗೆ, ಮೊಮ್ಮಗ ಸಿನಿಮಾ ನಟಿಯನ್ನೇ ಮದುವೆ ಆಗಲಿ ಎಂದು ಆಸೆಯಂತೆ. ಸ್ಟಾರ್‌ ಸೊಸೆ ಬರದಿದ್ದರೇನು, ಈ ಮನೆತನದ ಮುಂದಿನ ಕುಲವಧು ಸ್ಟಾರ್‌ ಆಗಿರಲಿ ಎನ್ನುತ್ತಾರೆ ಅಜ್ಜಿ! ಅವರ ಕನಸು ಈಗ ನನಸಾಗಿದೆ.

ಭಾಭಿಗಳ ಬೈ ಬೈ

`ಭಾಭೀಜಿ ಘರ್‌ ಪರ್‌ ಹೈ’ ವೀಕ್ಷಕರನ್ನು ಎಷ್ಟು ನಗಿಸಿತೋ ಅಷ್ಟೇ ವಿವಾದಗಳಿಗೂ ಸಿಲುಕಿದೆ. ಮೊದಲು ಇದರ ನಾಯಕಿ ಗೌರಿ ಶಿಂಧೆ ನಿರ್ಮಾಪಕರ ಮೇಲೆ ಸೆಕ್ಷುಯಲ್ ಅಸಾಲ್ಟ್ ಕೇಸ್‌ ಹಾಕಿದ್ದರೆ, ಈಗ ಈ ಧಾರಾವಾಹಿಯ ಎರಡನೇ ನಾಯಕಿ ಸೌಮ್ಯಾ ಟಂಡನ್‌ ಸಹ ಹಿಂದಿನವಳಂತೆಯೇ ಶೋ ಬಿಟ್ಟುಬಿಡ್ತೀನಿ ಎಂದು ದಬಾಯಿಸುತ್ತಿದ್ದಾಳೆ. ಕಾರಣ….? ಆಕೆಯ ಕಾಂಟ್ರಾಕ್ಟ್, ಇದೀಗ ಪೂರ್ತಿ ಆಗಿದೆ. ಅವಳಿಗೆ ಈ ಗ್ಲಾಮರ್‌ವಿಹೀನ ಭಾಭಿ ಪಾತ್ರ ಸಾಕು ಸಾಕೆನಿಸಿದೆ. ಹೀಗಾಗಿ ಹೊಸ ಕಾಂಟ್ರಾಕ್ಟ್ ಬೇಡವಂತೆ.

ಬಾಡಿಗೆಗೆ ಮನೆಯೇ ಸಿಗ್ತಿಲ್ಲ!

ಬಹಳ ಹಿಂದೆ ಕಿಸ್ಸಿಂಗ್‌ ಕಿಂಗ್‌ ಇಮ್ರಾನ್‌ ಹಾಶ್ಮಿ ಸಹ ತನ್ನ ಧರ್ಮದ ಕಾರಣ ಮುಂಬೈನಲ್ಲಿ ಒಳ್ಳೆ ಕಡೆ ತನಗೆ ಬಾಡಿಗೆಮನೆ ಸಿಗ್ತಿಲ್ಲ ಎಂದು ದೂರಿದ್ದ. ಈಗ ನಟ ಎಜಾಜ್‌ ಖಾನ್‌ ಸಹ ಹೀಗೆ ಹೇಳ್ತಿದ್ದಾನೆ. ಈತ ಈಗಾಗಲೇ `ಕ್ಯೂಂಕಿ ಸಾಸ್‌ ಭೀ ಕಭಿ ಬಹೂ ಥಿ’ ಧಾರಾವಾಹಿಯಲ್ಲಿ ಹೆಸರು ಗಳಿಸಿದ್ದ. ಈಗ ಹೊಸ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾನೆ. ಆತನ ಪ್ರಕಾರ, ಹಳೆ ಮನೆ ಬಿಟ್ಟು ಬಾಂದ್ರಾದ ಏರಿಯಾದಲ್ಲಿ ಮನೆ ಹುಡುಕಿದರೆ ಹಿಂದೂ, ಕ್ರೈಸ್ತ ಮನೆಯೊಡೆಯರು ತನ್ನನ್ನು ಹತ್ತಿರವೇ ಸೇರಿಸುವುದಿಲ್ಲ, ಎನ್ನುತ್ತಾನೆ.

ಡುಮ್ಮಿ ಆದರೇನಂತೆ?

ಸ್ಟಾರ್‌ ಪ್ಲಸ್‌ನ `ಢಾಯಿ ಕಿಲೋ ಪ್ರೇಮ್’ನ ನಾಯಕಿ ಅಂಜಲಿ ಆನಂದ್‌ಳ ತೂಕ ಎಷ್ಟು? ಕೇವಲ 108 ಕಿಲೋ! “ನಾನು ಹುಟ್ಟಿನಿಂದಲೇ ಹೀಗೆ ಡುಮ್ಮಿ ಆಗಿದ್ದೇನೆ. ನಮ್ಮ ಮನೆತನದಲ್ಲಿ ಎಲ್ಲರೂ ಹೀಗೆ, ಜೀನ್ಸ್ ನಲ್ಲೇ ಬಂದುಬಿಟ್ಟಿದೆ. ಹೀಗಾಗಿ ಸ್ಥೂಲತೆ ನನಗೆ ಶಾಪ ಎನಿಸಲ್ಲ. ನಾನು ಫಿಟ್‌ ಅಂಡ್ ಫೈನ್‌ ಆಗಿದ್ದೀನಿ, ಪರ್ಫೆಕ್ಟ್ ಆಗಿ ಕೆಲಸ ಮಾಡ್ತಿದ್ದೀನಿ. ಆ್ಯಕ್ಟಿವ್‌ ಆಗಿರುವುದು ಮುಖ್ಯ ಅಲ್ಲವೇ? ನಾನು ಮೋಟಿ ಆದರೇನು…. ಸ್ಟೈಲಿಶ್‌ ನಿಜ ಅನ್ನುವುದನ್ನು ವೀಕ್ಷಕರು ಧಾರಾವಾಹಿ ಸಕ್ಸಸ್‌ ಮಾಡಿಸಿ ನಿರೂಪಿಸಿದ್ದಾರೆ!” ಎನ್ನುತ್ತಾಳೆ ಅಂಜಲಿ.

TAGS : ತಾಪಸಿ ಪನ್ನು, ಶ್ರದ್ಧಾ ಕಪೂರ್, ಇರ್ಫಾನ್ ಸದಾ,  ಸನಿ ಲಿಯೋನ್, ಪರಿಣಿತಿ-ಆಯುಷ್ಮಾನ್, ರೇಖಾ-ಜ್ಯಾಕ್ಲೀನ್, ಕಾಜೋಲ್ V/S ಕರಣ್, ಶಕ್ತಿ ಕಪೂರ್, ಪೂರ್ಣಿಮಾ, ಆಶಾ ಪರೇಖ್, ಕಿಯಾರಾ, ಕರೀನಾ ಕಪೂರ್, ವಿದ್ಯಾಬಾಲನ್, ದಿವ್ಯಾಂಕಾ-ವಿವೇಕ್, ಆದಿತ್ಯ ನಾರಾಯಣ್, ಸೌಮ್ಯಾ ಟಂಡನ್, ಏಜಾಜ್ ಖಾನ್, ಅಂಜಲಿ ಆನಂದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ