ಕೋಟ್ಯಾಂತರ ಭಕ್ತರ ಆರಾಧ್ಯದೈವ ತಿರುಪತಿ ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನವೊಂದು ಕಳೆದ ಗುರುವಾರ ಹಾರಾಟ ನಡೆಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದಲ್ಲಿ ಈ ಘಟನೆಯನ್ನು ಖಂಡಿಸಿದ್ದು, ತಕ್ಷಣವೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಅಂತಾ ಆಗ್ರಹಿಸಲಾಗಿದೆ.
ಕಲಿಯುಗದ ಪ್ರತಿರೂಪವಾದ ತಿರುಮಲ ಶ್ರೀವಾರಿ ದೇವಾಲಯದ ಮೇಲೆ ವಿಮಾನ ಹಾರಾಟ ಮಾಡುತ್ತಿರುವ ದೃಶ್ಯ ಸಂಚಲನ ಮೂಡಿಸುತ್ತಿದೆ. ಇತ್ತೀಚೆಗೆ, ದೇವಸ್ಥಾನದ ಮೇಲೆ ವಿಮಾನಗಳು ಹಾರುತ್ತಿರುವುದನ್ನು ಹಲವು ಬಾರಿ ಗಮನಿಸಲಾಗಿದೆ. ಆದರೆ, ಮತ್ತೊಮ್ಮೆ ವಿಮಾನ ದೇವಾಲಯದ ಮೇಲೆ ತುಂಬಾ ಕಡಿಮೆ ಎತ್ತರದಲ್ಲಿ ಹಾರಿದ ಕಾರಣ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಮ ಶಾಸ್ತ್ರದ ನಿಯಮಗಳ ಪ್ರಕಾರ, ತಿರುಮಲ ದೇವಾಲಯದ ಮೇಲೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ಇಲ್ಲ. ಆದರೆ, ನಿರಂತರವಾಗಿ ವಿಮಾನಗಳು ಹಾರುತ್ತಿರುವುದರಿಂದ ಭಕ್ತರು ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ.
ತಿರುಪತಿ ದೇವಸ್ಥಾನದ ಮೇಲೆ ಹಾರುವ ದೈನಂದಿನ ವಿಮಾನಗಳು ಆಗಮ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ವಿಮಾನ ಹಾರಾಟದ ಬಗ್ಗೆ ಭಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ವಿಮಾನ ಸಂಚಾರ ದಿನನಿತ್ಯದ ಸಂಗತಿಯಾಗಿದೆ. ಕಳೆದ ಕೆಲವು ದಿನಗಳಿಂದ ತಿರುಮಲ ಬೆಟ್ಟದ ದೇವಾಲಯದ ಬಳಿ ವಿಮಾನಗಳು ಹಾರಾಡುತ್ತಿವೆ.
ಈ ಕುರಿತು TTD ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಮನವಿ ಸಲ್ಲಿಕೆ ಮಾಡಿದೆ. ಆದರೆ, ವಿಮಾನಯಾನ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಭಕ್ತರು ಆರೋಪಿಸುತ್ತಿದ್ದಾರೆ. ಟಿಟಿಡಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ, ವಿಮಾನಯಾನ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಅಂತಾ ಭಕ್ತರು ದೂರಿದ್ದಾರೆ.
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಎಲ್ಲಾ ಪೂಜೆಗಳು ಮತ್ತು ಸೇವೆಗಳು ಸಾವಿರಾರು ವರ್ಷಗಳ ಹಿಂದೆ ವೈಖಾನಸ ಋಷಿ ಸ್ಥಾಪಿಸಿದ ನಿಯಮಗಳ ಪ್ರಕಾರ ನಡೆಸಲಾಗುತ್ತವೆ. ಈ ನಿಯಮಗಳು ವೈಖಾನಸ ಭಗವತ್ ಆಗಮ ಶಾಸ್ತ್ರ ಎಂಬ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಶಾಸ್ತ್ರದ ಪ್ರಕಾರ, ದೇವಾಲಯದ ಮೇಲೆ ಯಾವುದೇ ರೀತಿಯ ಸಂಚಾರ ಅಥವಾ ವಿಮಾನ ಹಾರಾಟಕ್ಕೆ ಅನುಮತಿ ಇಲ್ಲ. ಈ ಕಾರಣದಿಂದ ತಿರುಮಲ ದೇವಸ್ಥಾನದ ಮೇಲೆ ವಿಮಾನ ಹಾರಲು ಅವಕಾಶ ನೀಡಬಾರದು ಅಂತಾ ಭಕ್ತರು ಆಗ್ರಹಿಸುತ್ತಾರೆ.
ತಿರುಪತಿ ತಿಮ್ಮಪ್ಪ ದೇವಾಲಯವು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದು. ಈ ದೇವಾಲಯದ ಮೇಲಿನ ವಾಯುಪ್ರದೇಶವನ್ನು ಕೇಂದ್ರ ಸರ್ಕಾರ ಅಥವಾ DGCA ಅಧಿಕೃತವಾಗಿ ನೋ-ಫ್ಲೈ ಜೋನ್ ಅಂತಾ ಘೋಷಣೆ ಮಾಡಿಲ್ಲ. ಆದರೆ, ಭಕ್ತರ ಭಾವನೆಗಳನ್ನು ಗೌರವಿಸುವ ಕಾರಣದಿಂದ, ವಿಮಾನಯಾನ ಸಂಸ್ಥೆಗಳು ತಿರುಪತಿ ದೇವಸ್ಥಾನದ ಮೇಲೆ ವಿಮಾನ ಹಾರಿಸದರಿಲು ನಿರ್ಧಾರ ಮಾಡಿದೆ. ಆದ್ರೂ ಕೂಡ ಇತ್ತೀಚಿಗೆ ಮತ್ತೆ ವಿಮಾನ ಹಾರಾಟ ಮುಂದುವರೆದಿದೆ ಅಂತಾ ಭಕ್ತರು ಕಳವಳ ವ್ಯಕ್ತಪಡಿಸ್ತಿದ್ದಾರೆ.
ತಿರುಪತಿ ದೇವಾಲಯದ ಮೇಲೆ ವಿಮಾನ ಹಾರಾಟ ಮಾಡುವುದನ್ನ ಖಂಡಿಸಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದನ್ನ ಗಮನಿಸಿದ ಗೃಹ ಸಚಿವೆ ಅನಿತಾ ತಿರುಮಲಕ್ಕೆ ಭೇಟಿ ನೀಡಿ ಈ ವಿಷಯವನ್ನು ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಅಂತಾ ತಿಳಿಸಿದ್ದಾರೆ. ವರದಿ ಬಂದ ನಂತರ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಿರುಮಲ ದೇವಸ್ಥಾನದ ಮೇಲೆ ವಿಮಾನ ಹಾರದಂತೆ ತೀರ್ಮಾನ ಕೈಗೊಳ್ಳಲಾಗುವುದು ಅಂತಾ ಗೃಹ ಸಚಿವೆ ಅನಿತಾ ಭರವಸೆ ನೀಡಿದ್ದಾರೆ.