ಸೀರೆ ಧರಿಸುವ ಶೈಲಿಯನ್ನೇ ಬದಲಿಸಿದ ಟ್ಯಾಗೋರ್ ಕುಟುಂಬದ ಧೀಮಂತೆ ಜ್ಞಾನದಾನಂದಿನಿ ದೇವಿ
ಇಂದು ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಎಂದರೆ ನಮ್ಮ ಕಣ್ಣೆದುರು ಮೂಡುವ ಚಿತ್ರವೇ ಸುಂದರವಾದ ಸೀರೆ, ಅದಕ್ಕೆ ಹೊಂದುವ ರವಿಕೆ (ಬ್ಲೌಸ್) ಮತ್ತು ಒಳಲಂಗ (ಪೆಟಿಕೋಟ್). ಮದುವೆ, ಹಬ್ಬ-ಹರಿದಿನ, ಧಾರ್ಮಿಕ ಆಚರಣೆ ಅಥವಾ ಅಧಿಕೃತ ಸಮಾರಂಭ—ಎಲ್ಲೆಡೆ ಈ ಉಡುಗೆಯೇ ಭಾರತೀಯ ಮಹಿಳೆಯರ ಸೊಬಗನ್ನು ಹೆಚ್ಚಿಸುತ್ತದೆ. ಆದಕ್ಕೇ ಏನೋ? ರನ್ನ ಚಿತ್ರದಲ್ಲಿ ಯೋಗರಾಜ್ ಭಟ್ಟರು ಸೀರೆಲಿ ಹುಡುಗಿರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರ್ರು ಅಂತಾ ಹಾಡನ್ನೇ ಬರೆದು ಬಿಟ್ಟರು. ಆದರೆ ಒಂದು ಆಶ್ಚರ್ಯದ ಸಂಗತಿ ಏನೆಂದರೆ, ಇಂದು ಸೀರೆಗೆ ಅವಿಭಾಜ್ಯ ಅಂಗವೆಂದು ಪರಿಗಣಿಸುವ ಹೊಲಿದ ರವಿಕೆಗೆ ಕೇವಲ ಸುಮಾರು 150 ವರ್ಷಗಳ ಇತಿಹಾಸವಿದೆ! ಸಾವಿರಾರು ವರ್ಷಗಳಿಂದ ಭಾರತೀಯ ಮಹಿಳೆಯರು ಸೀರೆ ಧರಿಸುತ್ತಿದ್ದರೂ, ಇಂದಿನ ಮಾದರಿಯ ಬ್ಲೌಸ್ ಮತ್ತು ಪೆಟಿಕೋಟ್ ಆಗಿನ ಕಾಲದಲ್ಲಿ ಇರಲಿಲ್ಲ. ಈ ಮಹತ್ತರ ಬದಲಾವಣೆಯ ಹಿಂದೆ ಭಾರತದ ಸಾಮಾಜಿಕ ಇತಿಹಾಸವನ್ನೇ ಬದಲಿಸಿದ ಒಬ್ಬ ಮಹಿಳೆಯ ಸಾಹಸ ಮತ್ತು ದೂರದೃಷ್ಟಿಯ ಕಥೆಯಿದೆ.
ಸಾವಿರಾರು ವರ್ಷಗಳ ಕಾಲ ರವಿಕೆ ಇಲ್ಲದೆಯೇ ಸೀರೆ ಧರಿಸುತ್ತಿದ್ದರು

ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಮಹಿಳೆಯರ ಉಡುಗೆ ಸಂಪೂರ್ಣವಾಗಿ ಹೊಲಿಗೆಯಿಲ್ಲದ ಬಟ್ಟೆಗಳನ್ನು ಆಧರಿಸಿತ್ತು. ಸಾಂಚಿ, ಭಾರ್ಹುತ್ ಮತ್ತು ಅಮರಾವತಿಯ ಪ್ರಾಚೀನ ಶಿಲ್ಪಗಳನ್ನು ಗಮನಿಸಿದರೆ, ಮಹಿಳೆಯರು ವಿವಿಧ ರೀತಿಯಲ್ಲಿ ಸೀರೆಯಂತಹ ಉದ್ದನೆಯ ಬಟ್ಟೆಯನ್ನು ಸುತ್ತಿಕೊಳ್ಳುತ್ತಿದ್ದರೂ, ಇಂದಿನ ರೀತಿಯ ಹೊಲಿದ ರವಿಕೆ ಅಥವಾ ಪೆಟಿಕೋಟ್ ಬಳಸುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಆ ಕಾಲದಲ್ಲಿ ಉಡುಗೆಯ ಶೈಲಿ ಮುಖ್ಯವಾಗಿ, ಸ್ಥಳೀಯ ಸಂಪ್ರದಾಯ, ಹವಾಮಾನ, ಸಾಮಾಜಿಕ ಪರಿಸ್ಥಿತಿ, ವೈಯಕ್ತಿಕ ಅನುಕೂಲತೆ ಇವುಗಳನ್ನು ಆಧರಿಸಿಯೇ ರೂಪುಗೊಂಡಿತ್ತು. ಭಾರತದೆಲ್ಲೆಡೆ ಒಂದೇ ರೀತಿಯ ಉಡುಗೆ ಎಂಬ ಪರಿಕಲ್ಪನೆಯೇ ಇರಲಿಲ್ಲ.
ಬ್ರಿಟಿಷರ ಆಗಮನದ ನಂತರ ಬದಲಾದ ಉಡುಗೆಯ ಕಲ್ಪನೆ

18 ಮತ್ತು 19ನೇ ಶತಮಾನದಲ್ಲಿ ಬ್ರಿಟಿಷರ ಆಡಳಿತ ಭಾರತದಲ್ಲಿ ಬಲವಾಗುತ್ತಿದ್ದಂತೆ, ವಿಕ್ಟೋರಿಯನ್ ಸಂಸ್ಕೃತಿಯ ಪ್ರಭಾವವೂ ಹೆಚ್ಚಾಯಿತು. ಅಂದಿನ ಬ್ರಿಟಿಷ್ ಅಧಿಕಾರಿಗಳು ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ತಮ್ಮ ದೃಷ್ಟಿಕೋನದಿಂದ “ಸಭ್ಯವಲ್ಲ” ಎಂದು ಟೀಕಿಸಲು ಆರಂಭಿಸಿದರು. ವಿಶೇಷವಾಗಿ ಬಂಗಾಳದ ಮೇಲ್ವರ್ಗದ ಮಹಿಳೆಯರ ಉಡುಗೆ ಕುರಿತು ಸಾಕಷ್ಟು ಟೀಕೆಗಳು ಕೇಳಿಬಂದವು. ಈ ಸಾಮಾಜಿಕ ಒತ್ತಡದ ನಡುವೆ ಭಾರತೀಯ ಮಹಿಳೆಯರ ಉಡುಗೆಯಲ್ಲಿ ಐತಿಹಾಸಿಕ ತಿರುವು ಸಂಭವಿಸಿತು.
ಜ್ಞಾನದಾನಂದಿನಿ ದೇವಿ – ಭಾರತೀಯ ಮಹಿಳೆಯರ ಉಡುಗೆಯಲ್ಲಿ ಕ್ರಾಂತಿ ತಂದ ಮಹಿಳೆ

ಈ ಬದಲಾವಣೆಯ ಕೇಂದ್ರಬಿಂದುವಾಗಿದ್ದವರು ಜ್ಞಾನದಾ





