ಸಲಿಂಗ ಜೋಡಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿ, ಜೋಲು ಮೋರೆಯೊಂದಿಗೆ ವಾಪಸ್ಸು ಬರುತ್ತಿವೆ. ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಅಂತಾಗಿದೆ. ಪರಸ್ಪರರಿಗೆ ಸಮಾಜ, ಸರ್ಕಾರದಿಂದ ಕಾನೂನಾತ್ಮಕ ವಿವಾಹ ರಕ್ಷಣೆ ದೊರಕದು ಅಂತಾಗಿಹೋಯಿತು.
ಅನಾದಿ ಕಾಲದಿಂದ ನಮ್ಮ ಸರ್ಕಾರ ಮತ್ತು ಧರ್ಮ ಎರಡೂ ಕೂಡಿ ವಿವಾಹದ ಕುರಿತು ಎಂಥ ಸುಭದ್ರ ಜಾಲ ಹೆಣೆದಿಟ್ಟಿದೆ ಎಂದರೆ, ಅದರ ಹೊರತಾಗಿ ವಿವಾಹದ ಕಲ್ಪನೆ ಸಾಧ್ಯವೇ ಇಲ್ಲ. ಸುಪ್ರೀಂ ಕೋರ್ಟ್ ಒತ್ತಿ ಒತ್ತಿ ಹೇಳಿದ್ದೂ ಇದನ್ನೇ! ಈಗಾಗಲೇ ವಿಶ್ವದ ಅನೇಕ ದೇಶಗಳು ಸಲಿಂಗ ವಿವಾಹಕ್ಕೆ ಕಾನೂನಿನ ಮನ್ನಣೆ ನೀಡಿದೆ. ಅದರಿಂದ ವಿವಾದಗಳೂ ಆಗಿಲ್ಲ, ಅಲ್ಲಿನ ಸಮಾಜಗಳೂ ತಮ್ಮ ಪಾಡಿಗಿವೆ.
ಎಲ್ಲಾ ಪ್ರಕರಣಗಳಲ್ಲೂ ಧರ್ಮ ದೊಡ್ಡ ಅಡ್ಡಗೋಡೆಯಾಗಿ ತಡೆಯುತ್ತದೆ. ಅದು ಸಂರಕ್ಷಣೆ ನೀಡುತ್ತದೆ ಎಂದೇನೋ ಹೇಳುತ್ತಾರೆ, ಆದರೆ ಅದರ ಅಂಗಡಿಕಾರರು ಮಾತ್ರ.... ಮೊದಲು ನಮಗೆ ಕೊಡಬೇಕಾದ ಹಣ ಕೊಟ್ಟು ನೀವು ಮದುವೆ ಆಗಿ, ಮಕ್ಕಳು ಮಾಡಿಕೊಳ್ಳಿ ಅಂತಾರೆ. ನಂತರ ತಾನೇ ಉಳಿದ ಸುಖ, ಸಂಪತ್ತು, ಕಾರು, ಬಂಗಲೆ ಇತ್ಯಾದಿಗಳು. ಈ ರೀತಿ ಎಲ್ಲಾ ಕಡೆಯೂ ಮೂಗು ತೂರಿಸುತ್ತಾ ಧರ್ಮ ಎಲ್ಲೆಡೆ ಗಬ್ಬೆಬ್ಬಿಸುತ್ತಿದೆ. ಯಾವ ಧರ್ಮ ಇದುವರೆಗೂ ಸಲಿಂಗ ವಿವಾಹಕ್ಕೆ ಸಮ್ಮತಿ ನೀಡಿಲ್ಲ, ಏಕೆಂದರೆ ಅದರ ಪಾರುಪತ್ಯಕ್ಕೆ ಅಡ್ಡಿ ಬರಬಾರದೆಂಬುದೇ ಇಲ್ಲಿಯ ವಿಡಂಬನೆ. ಹಾಗೂ ಒಂದು ವೇಳೆ ಇಂಥ ಜೋಡಿ ಮದುವೆಯಾದರೆ, ಅವರೇನೋ 40-50 ವರ್ಷ ಒಟ್ಟೊಟ್ಟಿಗೆ ಖುಷಿಯಾಗಿ ಬಾಳಬಹುದು, ಆದರೆ ಸಂತಾವನಂತೂ ಆಗದು. ಮುಂದೆ ಅವರಿಗೆ ಮಕ್ಕಳಾದರೆ ತಾನೇ ಅವರ ಜಾತಕ, ನಾಮಕರಣ, ವಿವಾಹ ಮುಂತಾದ ಎಲ್ಲಾ ವಿಷಯಕ್ಕೂ ಮೂಗು ತೂರಿಸಿ ಹಣ ಕೇಳಬಹುದು? ಹೀಗಾಗಿ ಧರ್ಮ ಸಲಿಂಗ ವಿವಾಹವನ್ನು ಎಂದೂ ಪುರಸ್ಕರಿಸದು.
ಸಲಿಂಗ ಸಂಬಂಧವನ್ನು ವಿವಾಹದ ಕಾನೂನಿನ ರೂಪ ಒದಗಿಸಲಾಗುತ್ತಿರುವ ಉದ್ದೇಶವೆಂದರೆ, ಸರ್ಕಾರದ ನೆರವಿನಿಂದ ಪತಿಪತ್ನಿ ಎನಿಸಿಕೊಂಡ ಇಬ್ಬರು ವ್ಯಕ್ತಿಗಳಿಗೆ ಕಾನೂನಿನ ನೆರವಿನಿಂದ ಬೇಕಾದಷ್ಟು ಹಕ್ಕು ಸಿಗುತ್ತದೆ. ಪತಿ ಸತ್ತ ತಕ್ಷಣ ಪತ್ನಿ ಅವನ ಆಸ್ತಿಯ ಒಡತಿಯಾಗುತ್ತಾಳೆ, ಮಕ್ಕಳಿಗೂ ಕಾನೂನುಬದ್ಧವಾಗಿ ತಾಯಿ ತಂದೆಯ ಹೆಸರು, ಆಸ್ತಿ ಸಿಗುತ್ತದೆ, ಒಬ್ಬರನ್ನೊಬ್ಬರು ಪರಸ್ಪರ ರೆಪ್ರೆಸೆಂಟ್ ಮಾಡಬಹುದು, ಆಸ್ಪತ್ರೆಗಳಲ್ಲಿ ನೆಕ್ಟ್ಸ್ ಆಫ್ ಕಿನ್ ವಿವಾಹಿತ ಸಂಗಾತಿಯೇ ಹೊರತು, ಅವಿವಾಹಿತ ಸಂಗಾತಿ ಅಲ್ಲ.
ಲಿವ್ ಇನ್ ನಲ್ಲಿರುವ ಜೋಡಿಗಳೂ ಸಹ ಇಂಥದೇ ಕಾನೂನಿನ ತೊಡಕಿಗೆ ನಲುಗುತ್ತಿವೆ. ಇಂಥ ಜೋಡಿಯ ಒಬ್ಬ ವ್ಯಕ್ತಿ ಖೈದಿಯಾದರೆ, ಇನ್ನೊಬ್ಬರಿಗೆ ಜೀವನ ಸಂಗಾತಿಯಂತೆ ನಿರ್ಧಾರ, ಜವಾಬ್ದಾರಿ ತೆಗೆದುಕೊಳ್ಳುವ ಹಕ್ಕಿಲ್ಲ, ಕೇವಲ ಫ್ರೆಂಡ್ ಮಾತ್ರ ಆಗುತ್ತಾರೆ. ಅದೇ ತರಹ ಬ್ಯಾಂಕಿನಲ್ಲಿರುವ ಹಣ, ಪೆನ್ಶನ್ ಹಣ, ಆಸ್ತಿಪಾಸ್ತಿ ಇತ್ಯಾದಿ ಯಾವುದರ ಹಕ್ಕೂ ಇಂಥ ಲಿವ್ ಇನ್, ಸಲಿಂಗ ಸಂಗಾತಿಗೆ ಇಲ್ಲ. ಪತಿ ಸತ್ತ ನಂತರ ಅವನ ಬಾಡಿಗೆ ಮನೆಗಳ ಆದಾಯವೆಲ್ಲ ಪತ್ನಿಗೆ ಸುಲಭವಾಗಿ ಸಿಗುತ್ತದೆ, ಇದೂ ಕೂಡ ಇಂಥವರಿಗೆ ಸಿಗದು.