ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಭಾನುವಾರ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ವಸತಿ ಶಾಲೆಯ ಮಕ್ಕಳೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.
ವಸತಿ ಶಾಲೆಯ ವ್ಯವಸ್ಥೆ ಹಾಗೂ ಬೋಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳಿದ ಸಚಿವರು, ದಿನನಿತ್ಯ ಬೆಳಗ್ಗೆ ದೈಹಿಕ ವ್ಯಾಯಾಮ ಜೊತೆಗೆ ದಿನಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಹಿಡಿತ ಬಗ್ಗೆ ಪ್ರಶ್ನೆ ಕೇಳಿ, ತಾವು ತಿಳಿಸಿದ ಪದಗಳನ್ನು ಬೋರ್ಡ್ ಮೇಲೆ ಬರೆಯುವಂತೆ ಮಕ್ಕಳಿಗೆ ತಿಳಿಸಿ, ಕೆಲ ಸಮಯ ಇಂಗ್ಲಿಷ್ ಮೇಷ್ಟ್ರಾಗಿ ಬೋಧನೆ ಮಾಡಿದರು.ದಿನನಿತ್ಯ ಕನ್ನಡ, ಇಂಗ್ಲಿಷ್ ಪತ್ರಿಕೆಗಳು ಓದುವುದರಿಂದ ಭಾಷೆಯ ಮೇಲೆ ಹಿಡಿತ ಹಾಗೂ ವಾಕ್ಯ ರಚನೆ ಮಾಡಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ವಾರ್ಡನ್ ಹೆಚ್ಚು ಸಮಯ ನೀಡಿ: ಇಂದಿರಾಗಾಂಧಿ ವಸತಿ ಶಾಲೆಯ ವಾರ್ಡನ್ (ಮೇಲ್ವಿಚಾರಕರು) ಪ್ರತಿನಿತ್ಯ ಮಕ್ಕಳ ದಿನಚರಿ ಬಗ್ಗೆ ನಿಗಾವಹಿಸಿ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಮಯ ನೀಡಬೇಕೆಂದು ಶಾಲಾ ಸಿಬ್ಬಂದಿಗಳಿಗೆ ಹಾಗೂ ವಾರ್ಡನ್ ಗಳಿಗೆ ಸೂಚನೆ ನೀಡಿದರು.ಹಾಸ್ಟೆಲ್ ಸಮಸ್ಯೆ ಇದ್ದರೆ ಚೀಟಿ ಬರೆದು ಕೊಡಿ: ಎಲ್ಲರ ಮುಂದೆ ಸಮಸ್ಯೆಗಳು, ವೈಯಕ್ತಿಕ ವಿಷಯಗಳ ಬಗ್ಗೆ ವಿದ್ಯಾರ್ಥಿನಿಯರು ಹೇಳಲು ಮುಜುಗರವಾದರೆ ನನಗೆ ನೇರವಾಗಿ ಕರೆ ಮಾಡಿ ಅಥವಾ ತಹಶೀಲ್ದಾರ್ ಶ್ರೇಯಾಂಕ್ ಅವರಿಗೆ ಚೀಟಿ ಬರೆದುಕೊಡಿ ಎಂದು ಸಚಿವರು ತಿಳಿಸಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೇಯಾಂಕ್, ವಸತಿ ಶಾಲೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.