ರಂಗೋಲಿ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ, ಎಲ್ಲ ಕಾಲದಲ್ಲಿಯೂ ಮನೆ ಮುಂದಿನ ಚಿತ್ತಾರವಾಗಿ ಗಮನಸೆಳೆಯುತ್ತದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣವೇ.....?
ರಂಗೋಲಿ ಶುಭ ಸೂಚಕವಾಗಿದ್ದು, ಪ್ರತಿದಿನ ಬೆಳಗ್ಗೆ ಮನೆಯ ಮುಂದೆ ನೀರು ಹಾಕಿ ಸುಂದರವಾದ ರಂಗೋಲಿ ಹಾಕಿ ಮುಂದಿನ ಕೆಲಸಕ್ಕೆ ಅಣಿ ಮಾಡುವುದು ಗೃಹಿಣಿಯ ಕೆಲಸ.
ರಂಗೋಲಿ ಮನೆಯ ಮುಂದೆ, ತುಳಸಿ ಕಟ್ಟೆಯ ಮುಂದೆ, ಅಂಗಳದಲ್ಲಿ, ದೇವರ ಕೋಣೆಯಲ್ಲಿ ಹಾಕುವುದು ಸಾಂಪ್ರದಾಯಕವಾಗಿ ಬೆಳೆದು ಬಂದಿದೆ. ರಂಗೋಲಿ ನೋಡಲು ಸುಂದರವಾಗಿ ಕಾಣುವುದಲ್ಲದೆ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ. ರಂಗೋಲಿಯನ್ನಿಟ್ಟು ಅದಕ್ಕೆ ವಿವಿಧ ಬಣ್ಣಗಳನ್ನು ತುಂಬಿದರೆ ಅದರ ಸೊಗಸು ಇನ್ನೂ ಹೆಚ್ಚುತ್ತದೆ. ನಮ್ಮ ಪ್ರಾಚೀನ ಕಲೆಗಳಲ್ಲಿ ರಂಗೋಲಿಯೂ ಒಂದು. 64 ಕಲೆಗಳಲ್ಲಿ ಒಂದಾದ ರಂಗವಲ್ಲಿ ಎಂದರೆ ಹತ್ತು ಹಲವಾರು ಬಣ್ಣಗಳಿಂದ ರಚಿಸಿದ ಬಳ್ಳಿ ಎಂದರ್ಥ ಹಾಗೂ ವರ್ಣಗಳ ವೃಂದ ಎಂದರ್ಥ. ಹಾಗೆಯೇ ರಂಗ+ವಲ್ಲಿ ಎಂಬ ಪದಗಳು ರೂಪಿಗೆ ಬಂದಿರಬೇಕು.

ಆ ಕಾಲದಲ್ಲೇ ರಂಗೋಲಿ ಇತ್ತು
ಭಾರತೀಯ ಪರಂಪರೆಯಲ್ಲಿ ರಂಗೋಲಿಗೆ ವಿಶಿಷ್ಟ ಸ್ಥಾನವಿದೆ. ಮಾನವ ಕುಲದ ಮೊದಲ ನಾಗರಿಕತೆ ಆರಂಭವಾದ ಸಿಂಧು, ಮೆಸಪಟೋಮಿಯಾ ಕಾಲದಲ್ಲೇ ರಂಗೋಲಿ ಬಳಕೆಯಲ್ಲಿತ್ತು. ಮಂತ್ರ, ತಂತ್ರ, ವಿದ್ಯೆಗಳಲ್ಲಿ ಬಳಕೆಗೆ ಬಂದ ರಂಗೋಲಿ ಕ್ರಮೇಣ ಮನೆ ಬಾಗಿಲ ಸಿಂಗಾರಕ್ಕೆ ಬಳಸಲಾಯಿತು. ರಂಗೋಲಿ ಧಾರ್ಮಿಕ ಕಣ್ಣಲ್ಲಿ ದುಷ್ಟಶಕ್ತಿ ತಡೆಯುವ, ದೇವರನ್ನು ಸ್ವಾಗತಿಸುವ ಭಕ್ತಿ ಪರಂಪರೆಯಾಗಿಯೂ ಕಂಡಿದೆ. ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಯಲ್ಲಿ, ಅಂಗಳದಲ್ಲಿ ಸ್ಥಾನ ಪಡೆದಿದೆ. ಹಳ್ಳಿಗಳಲ್ಲಿ ಮಹಿಳೆಯರು ರಂಗೋಲಿ ಎಳೆಯುವ ಮೂಲಕವೇ ಅವರಿಗೆ ಆ ದಿನದ ಆರಂಭ.

ಮನೆಯ ಅಂದ ಹೆಚ್ಚಳ
ಕವಿಗಳು ರಂಗೋಲಿಯನ್ನು ಕಾವ್ಯಮಯವಾಗಿಯೂ ವರ್ಣಿಸಿದ್ದಾರೆ. `ಮನೆಯ ನೋಡು ಮನೆಯ ಅಂದ ನೋಡು, ರಂಗವಲ್ಲಿ ನೋಡು, ರಂಗವಲ್ಲಿಯ ಪರಿಮಳ ನೋಡು' ಎಂಬ ಈ ಗೀತೆಯಂತೆ ಮನೆಯ ಅಂದ ಹೆಚ್ಚಿಸುವುದು ಬಾಗಿಲಲ್ಲಿ ನಗುವ ಬಣ್ಣ ಬಣ್ಣದ ರಂಗೋಲಿ ಮಾತ್ರ. ರಂಗೋಲಿ ನೋಡುವವರ ಮನಕ್ಕೆ ತಂಪು, ಕಣ್ಣಿಗೆ ಇಂಪು. ಅದನ್ನು ರಚಿಸುವಾಗ ನಮ್ಮಲ್ಲಿ ಹುದುಗಿರುವ ಕಲೆ ಜಾಗೃತವಾಗುತ್ತದೆ. ಸಾತ್ವಿಕ ಭಾವನೆ ಹೊರಹೊಮ್ಮುತ್ತದೆ. ಹಾಡುತ್ತಾ, ಭಕ್ತಿಯಲ್ಲಿ ಮೈ ಮರೆತ ರಂಗೋಲಿ ಬಿಡಿಸುವಾಗ ನಮ್ಮ ಮನಸ್ಸು ಪರಮಾತ್ಮನಲ್ಲಿ ಲೀನವಾಗುತ್ತದೆ. ಹಿಂದೆ ಮಹಾಸಾದ್ವಿ ಮಹಿಳೆಯರು `ರಂಗ ಒಲಿ, ಪಾಂಡುರಂಗ ಒಲಿ,' ಎಂದು ಹಾಡುತ್ತಾ ಬ್ರಾಹ್ಮಿ ಮುಹೂರ್ತದಲ್ಲಿ ರಂಗೋಲಿ ಬಿಡಿಸುತ್ತಾ ಪರಮಾತ್ಮನ ನಾಮ ಸ್ಮರಣೆ ಮಾಡುತ್ತಿದ್ದರು.

ಹಬ್ಬಗಳಲ್ಲಿ ರಂಗೋಲಿಯ ಮಹತ್ವ
ಹಬ್ಬ ಹರಿದಿನಗಳಲ್ಲಿ ರಂಗೋಲಿಗೆ ಹೆಚ್ಚಿನ ಪ್ರಾಮುಖ್ಯತೆ. ಅಂದು ಮಹಿಳೆಯರು ರಂಗೋಲಿಯನ್ನು ವೈವಿಧ್ಯಮಯವಾಗಿ ಬಿಡಿಸುತ್ತಿದ್ದರು. ಅಷ್ಟದಳ ಪದ್ಮ, ಸ್ವಸ್ತಿಕ, ಕಮಲ, ಕಳಸ ಇನ್ನೂ ಮುಂತಾಗಿ ರಂಗೋಲಿಗಳನ್ನು ಬಿಡಿಸುತ್ತಿದ್ದರು. ಅದಕ್ಕೆ ವಿವಿಧ ಬಣ್ಣಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕರಿಸುತ್ತಿದ್ದರು. ಭಕ್ತಿಯಿಂದ ಬಿಡಿಸುವಾಗ ಪರಮಾತ್ಮನೆ ಅದರಲ್ಲಿ ಲೀನವಾದಂತೆ ಭಾಸವಾಗುತ್ತಿತ್ತು. ಹಾಗೆ ರಂಗೋಲಿ ಬಿಡುವಾಗ ಒಂದು ದೃಷ್ಟಿಕೋನ ಇರುವುದರಿಂದ ಏಕಾಗ್ರತೆ ಉಂಟಾಗುತ್ತದೆ. ಮನಸ್ಸಿಗೆ, ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ.





