ರಾಷ್ಟ್ರಪತಿ ದ್ರೌಪದಿ ಮುರ್ಮು ಇದೇ ಮೊದಲಬಾರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐಎನ್ಎಸ್ ವಾಗ್ಶೀರ್ ಸಬ್ ಮರೀನ್ ನಲ್ಲಿ ಪ್ರಯಾಣಿಸಿದರು.

ಈ ಮೂಲಕ ಸಬ್​ಮರೀನ್​ನಲ್ಲಿ ಪ್ರಯಾಣಿಸಿದ 2 ನೇ ರಾಷ್ಟಪತಿ ಎಂಬ ದಾಖಲೆ ಬರೆದಿದ್ದಾರೆ.  ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಬರಮಾಡಿಕೊಂಡರು.

ಏಷ್ಯದ ಅತೀ ದೊಡ್ಡ ನೌಕಾ ನೆಲೆಯಾಗಿರುವ ಕಾರವಾರದ ಕದಂಬ ನೌಕಾನೆಲೆ ಫೇಸ್ -2 ಕಾಮಗಾರಿ ಸಹ ಮುಕ್ತಾಯವಾಗಿದ್ದು ಯುದ್ದ ಹಡಗುಗಳು, ಸಬ್ ಮರೀನ್​ಗಳ ನಿಲ್ದಾಣದ ತಾಣವಾಗಿದೆ. ರಿಪೇರಿ ಯಾರ್ಡ್​ ಸಹ ಇದೇ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ರಾಷ್ಟ್ರಪತಿ ಮುರ್ಮು ಭೇಟಿ ನೀಡಿ, ಸಬ್ ಮರೀನ್​ನಲ್ಲಿ ಒಂದು ಗಂಟೆಗಳ ಐತಿಹಾಸಿಕ ಪ್ರಯಾಣ ನಡೆಸಿದರು.ಈ ಸಂದರ್ಭ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ಚೀಫ್ ಆಫ್ ನೇವಲ್ ಸ್ಟಾಪ್ ಮತ್ತು ರಿಯರ್ ಅಡ್ಮಿರಲ್ ವಿಕ್ರಂ ಮೆನನ್ , ಪ್ಲಾಬ್ ಆಫೀಸರ್ ಕರ್ನಾಟಕ ನೇವಲ್ ಏರಿಯ ಅಧಿಕಾರಿಗಳು ಸಾಥ್ ನೀಡಿದರು.

ಗೋವಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್​ ಮೂಲಕ ಕದಂಬ ನೌಕಾನೆಲೆಗೆ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಸ್ವಾಗತಿಸಿದರು. ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್​ ಸಿಂಗ್​, ಎಸ್ಪಿ ದೀಪನ್​ ಎಂ. ಎನ್​ ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ