- ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು, ಕೇಶವಶಿಲ್ಪ, ಡಿ. 7: ಮೂವ್ವತ್ತೇಳು ದಿನಗಳ ಕಾಲ ನಡೆದ ಕನ್ನಡ ಪುಸ್ತಕ ಹಬ್ಬದ ಸಮಾರೋಪ ಸಮಾರಂಭವು ರಾಷ್ಟ್ರೋತ್ಥಾನ ಪರಿಷತ್ನ ಕೇಶವಶಿಲ್ಪ ಸಭಾಂಗಣದಲ್ಲಿ ಡಾ. ಗುರುರಾಜ ಕರಜಗಿ, ಶ್ರೀ ಬಸವರಾಜ ಪಾಟೀಲ ಸೇಡಂ ಹಾಗೂ ಶ್ರೀ ಎಂ ಪಿ ಕುಮಾರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಣತಜ್ಞರು, ಲೇಖಕರು ಹಾಗೂ ACT ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾದ ಡಾ. ಗುರುರಾಜ ಕರಜಗಿಯವರು ಆಗಮಿಸಿದ್ದರು. ಈ ಬಾರಿಯ ಪುಸ್ತಕ ಪರಿಚಾರಕರೆಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕರಾದ ಶ್ರೀ ಬಸವರಾಜ ಪಾಟೀಲ ಸೇಡಂ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿ ಮೆರವಣಿಗೆಯ ಬಳಿಕ ಶ್ರೀ ಯದುವೀರ್ ಒಡೆಯರ್ ಅವರು ಕನ್ನಡ ಪುಸ್ತಕ ಹಬ್ಬಕ್ಕೆ ನ.1ರಂದು ಚಾಲನೆ ನೀಡಿದರು. 37 ದಿನಗಳ ಕಾಲ ನಡೆದ ಕನ್ನಡ ಪುಸ್ತಕ ಹಬ್ಬದಲ್ಲಿ ನೃತ್ಯ, ನಾಟಕ, ಹಾಸ್ಯರಸಾಯನ, ಕರ್ನಾಟಕ – ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಏಕವ್ಯಕ್ತಿ ತಾಳಮದ್ದಲೆ ಸೇರಿದಂತೆ ವೈವಿಧ್ಯಮಯ 5೦ ಸಾಂಸ್ಕೃತಿಕ ಕಾರ್ಯಕ್ರಮಗಳು, 2 ವಿಶೇಷ ಉಪನ್ಯಾಸಗಳು, ಅನಕೃ ಪ್ರತಿಷ್ಠಾನ ನೀಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೇರಿದಂತೆ ಒಟ್ಟು 55 ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆದವು. 210 ಹಿರಿಯ ಕಲಾವಿದರು ಹಾಗೂ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೂ ಸಂಸ್ಕಾರ ಭಾರತಿಯ ಕಲಾಸಹಕಾರ ಬೆನ್ನೆಲುಬಾಗಿ ನಿಂತಿದೆ.

ಹಾಗೂ 2 ಪುಸ್ತಕ ಲೋಕಾರ್ಪಣ ಕಾರ್ಯಕ್ರಮಗಳಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ಪಂಚಪರಿವರ್ತನೆಗಳಿಗೆ ಸಂಬಂಧಿಸಿದ ಒಟ್ಟು 10 ಕೃತಿಗಳನ್ನು ಲೋಕಾರ್ಪಣಗೊಳಿಸಲಾಗಿದೆ. 9 ಸ್ಪರ್ಧೆಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಲಾಗಿದೆ.
ಪುಸ್ತಕ ಪರಿಚಾರಕ ಸನ್ಮಾನ ಸ್ವೀಕರಿಸಿ ಶ್ರೀ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡುತ್ತ ತನಗೆ ಸಾಹಿತ್ಯದ ಹುಚ್ಚು ಹಿಡಿಸಿದ್ದು ರಾಮಕೃಷ್ಣ ಆಶ್ರಮ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯ ಎಂದರು. ಉತ್ತಮ ನೈತಿಕ ಚಾರಿತ್ರ್ಯವನ್ನು ಇಟ್ಟುಕೊಂಡು ಉಪನ್ಯಾಸ ಮಾಡುವವರಿಗೆ ಉತ್ತಮ ಸಾಹಿತ್ಯ, ನಾಟಕ, ದೇಶಭಕ್ತಿಯ ಸಾಹಿತ್ಯ ಇವಕ್ಕೆಲ್ಲ ಬೆಲೆ ಇದ್ದೇ ಇದೆ. ‘Thus Speaks Series’ಗೆ ಆಗ 30 ಪೈಸೆ ಇತ್ತು, ಈಗ ಅದಕ್ಕೆ 15 ರೂ. ಇದೆ. ಅಂದಿನಿಂದಲೂ ಸಾಹಿತ್ಯವನ್ನು ಮಾರಿದ್ದೇನೆ. 25,000 ಪುಸ್ತಕ ಪ್ರಕಾಶನ ಮಾಡಿ ಮಾರಿದ್ದೇನೆ. ಉತ್ತಮ ಯಾವುದೇ ಇದ್ದರೂ ಅದಕ್ಕೆ ಪ್ರೋತ್ಸಾಹ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯ ಇರುವುದಿಲ್ಲ. ಪುಸ್ತಕ ಯಾವಾಗ ಯಾವ ವ್ಯಕ್ತಿಯನ್ನು ಮೀಟುವುದೋ ಅದನ್ನು ಅಳೆಯುವುದಕ್ಕೆ ಯಾವುದೇ ಮೀಟರ್ ಇರುವುದಿಲ್ಲ. ಸಾಹಿತ್ಯಕ್ಕೆ ನನ್ನದೊಂದು ಅಳಿಲುಸೇವೆ ಸಲ್ಲಿಸಿದ್ದೇನೆ. 2.5 ಕೋಟಿ ಸಾಹಿತ್ಯವನ್ನು ಮಾರಿದ್ದೇನೆ. ಇದು ನನ್ನ ಜೀವನದ ಹವ್ಯಾಸವಾಗಿದ್ದು ಸೇಡಂನಲ್ಲಿ ಪುಸ್ತಕದ ಅಂಗಡಿ ಇದ್ದಂತೆ ಗುಲಬರ್ಗಾದಲ್ಲಿ ನನ್ನ ಕಛೇರಿಯಲ್ಲಿ ಪುಸ್ತಕದ ಅಂಗಡಿ ಇದೆ. ವಿಚಾರಕ್ರಾಂತಿ ತುಂಬ ದೊಡ್ಡದಿದ್ದು ಸಾಹಿತ್ಯ ಹಾಗೂ ಉಪನ್ಯಾಸದ ಪಾತ್ರ ಅದರಲ್ಲಿ ತುಂಬ ದೊಡ್ಡದು. ಎಲ್ಲೆಲ್ಲಿ ಉತ್ತಮ ಎನ್ನುವುದಿದೆಯೋ ಅದನ್ನು ನಿಮ್ಮದಾಗಿಸಿಕೊಂಡು ವ್ರತದಂತೆ ಅದನ್ನು ಮಾಡಿದರೆ ನೀವು ಸಹ ಯಾವುದೇ ದಾಖಲೆಯನ್ನು ಮುರಿಯಲು ಸಾಧ್ಯ ಎಂದು ಹೇಳಿದರು.





