ಗಂಗಪ್ಪ 6 ತಿಂಗಳಿನಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಬಹಳ ನರಳಾಡಿದ. ಅಂತ್ಯಕಾಲ ಬಂತೆಂದು ಡಾಕ್ಟರ್ ಹೇಳಲು ಮಡದಿ, ಮೂವರು ಮಕ್ಕಳನ್ನೂ ಬಳಿಗೆ ಕರೆಸಿಕೊಂಡು ಕ್ಷೀಣ ದನಿಯಲ್ಲಿ ಹೇಳತೊಡಗಿದ.
ಗಂಗಪ್ಪ : ನೋಡೋ ಸುರೇಶ, ನೀನು ನನ್ನ ಹಿರಿಯ ಮಗ ಅಂತ ಯಶಂತಪುರದ 40 ಮನೆಗಳನ್ನು ಕೊಡ್ತಾ ಇದೀನಿ.
ಸುರೇಶ : ಆಯ್ತಪ್ಪ... ನಾನು ನೋಡಿಕೊಳ್ತೀನಿ.
ಗಂಗಪ್ಪ : ಉಮೇಶ, ನೀನು ನನ್ನ ಎರಡನೇ ಮಗ ಅಂತ ಪೀಣ್ಯ ಕಡೆಯ 30 ಮನೆಗಳನ್ನು ಕೊಡ್ತಾ ಇದೀನಿ.
ಉಮೇಶ್: ಆಯ್ತಪ್ಪ... ನಾನು ನೋಡಿಕೊಳ್ತೀನಿ.
ಗಂಗಪ್ಪ : ನೋಡಮ್ಮ ಭವಾನಿ, ನೀನು ನನ್ನ ಒಬ್ಬಳೇ ಮಗಳು. ದಾಸರಹಳ್ಳಿ ಕಡೆ ಇರೋ 20 ಮನೆಗಳನ್ನು ನಿನಗೆ ವಹಿಸಿಕೊಡ್ತೀನಿ.
ಭವಾನಿ : ಆಯ್ತಪ್ಪ, ನಿನ್ನ ಮಾತಿನಂತೆ ನಡೆದುಕೊಳ್ತೀನಿ.
ಗಂಗಪ್ಪ : ನೋಡೇ ರತ್ನಾ.... ನಿನಗೆ ಏನೂ ಕೊಡ್ಲಿಲ್ಲ ಅಂದ್ಕೊಬೇಡ. ನನ್ನ ಹೆಂಡತಿಯಾದ ನಿನಗೆ ವಯಸ್ಸಾಗಿರೋದ್ರಿಂದ ನಮ್ಮ ಮನೆಯ ಹತ್ತಿರವೇ ಇರುವ 15 ಮನೆ ಕೊಡ್ತಿದ್ದೀನಿ. ಆಯ್ತು ತಾನೇ?
ರತ್ನಮ್ಮ : ಸರಿ ಬಿಡಿ.
ಗಂಗಪ್ಪನನ್ನು 6 ತಿಂಗಳಿನಿಂದ ಸುಧಾರಿಸುತ್ತಿದ್ದ ನರ್ಸ್ ನಳಿನಿ ಇವರೆಲ್ಲರ ಮಾತು ಕೇಳಿ, ಈ ಶ್ರೀಮಂತ ಗಂಗಪ್ಪ ತನಗೂ ಏನಾದರೂ ಕೊಡಬಹುದೆಂದು ಓಡಿಬಂದು ಅವನ ಮುಂದೆ ನಿಂತು ನಾಡಿಬಡಿತ ನೋಡುವವಳಂತೆ, ಆಸೆಯಿಂದ ಕಾದಳು.
ರತ್ನಮ್ಮ : ಏನವ್ವ ನೋಡ್ತಿದ್ದಿ.... ಸಾಯೋ ಕಾಲಕ್ಕೆ ನನ್ನ ಗಂಡ ಎಲ್ಲರಿಗೂ ಮನೆ ಕೊಟ್ಟ, ನಿನಗೇನೂ ಕೊಡಲಿಲ್ಲ ಅಂತಾನಾ? ನಾವು ಹಾಲು ಮಾರುವವರು. ಇಷ್ಟೆಲ್ಲ ಹಾಲಿನ ವರ್ತನೆ ಮನೆಗಳ ಜವಾಬ್ದಾರಿ ನಮಗೆ ಹಂಚಿದ್ದಷ್ಟೆ.... ನೀನು ನಿನ್ನ ಪಾಡಿಗೆ ಇಂಜೆಕ್ಷನ್ ಕೊಡವ್ವ....
ನರ್ಸ್ ನಳಿನಿ ಬಿಪಿ ಕಡಿಮೆ ಆಗಲು ಡಾಕ್ಟರ್ ಓಡಿ ಬಂದರು.
ಸ್ಟೈಲಾಗಿ ಸಿಂಗರಿಸಿಕೊಂಡು ಬಂದ ಮಾಡರ್ನ್ ಮಾಲಾ ಆಟೋಗಾಗಿ ಕಾಯತೊಡಗಿದಳು.
ಮಾಲಾ : ಏನ್ರಿ.... ರೈಲ್ವೆ ಸ್ಟೇಷನ್ಗೆ ಹೋಗಬೇಕು ಬಾಡಿಗೆ ಎಷ್ಟಾಗುತ್ತೆ?
ಡ್ರೈವರ್ : ಜಸ್ಟ್ 50/ ರೂ. ಅಷ್ಟೆ.
ಮಾಲಾ : ಏನ್ರಿ ಇದು... ಇಷ್ಟು ಹತ್ತಿರದಲ್ಲಿರೋ ಸ್ಟೇಷನ್ಗೆ ಹೋಗಲು 50/ ರೂ ಕೊಡ್ಬೇಕಾ...?
ಡ್ರೈವರ್ : ಹೌದು ಮೇಡಂ. ಸ್ಟೇಷನ್ ಹತ್ತಿರ ಎಲ್ಲಿ ಬಂತು... ಇಲ್ಲಿಂದ 2 ಕಿ.ಮೀ. ಆಗುತ್ತೆ!
ಮಾಲಾ : ಎದುರುಗಡೆ ಕಾಣ್ತಿದೆ... ಯಾಕ್ರಿ ಸುಳ್ಳು ಹೇಳ್ತೀರಿ...?
ಡ್ರೈವರ್ : ರೀ ಮೇಡಂ..... ಕೈ ಸ್ವಲ್ಪ ಹಿಂದಕ್ಕೆ ಎಳ್ಕೊಳ್ಳಿ... ಇಲ್ಲದಿದ್ದರೆ ರೈಲ್ವೆ ಬೋಗಿಗೇ ತಗುಲೀತು!
ಪತ್ನಿ : ನೋಡ್ರಿ, ಇವತ್ತು ರಾತ್ರಿ ಅಡುಗೆ ಮಾಡಕ್ಕಾಗಲ್ಲ. ಹೊರಗಡೆ ಡಿನ್ನರ್ಗೆ ಕರೆದುಕೊಂಡು ಹೋಗಿ.
ಪತಿ : ಸರಿ, ನಡಿ.... ನಾವು ಉಡುಪಿ ರೆಸ್ಟೋರೆಂಟ್ಗೆ ಹೋಗೋಣ.
ಪತ್ನಿ : ಸಾಧಾರಣ ಹೋಟೆಲ್ಗಳು ಇದ್ದದ್ದೇ.... ಇವತ್ತು ಲೀಲಾ ಪ್ಯಾಲೆಸ್ಗೆ ಕರೆದುಕೊಂಡು ಹೋಗಿ.
ಪತಿ : (ಉಗುಳು ನುಂಗುತ್ತಾ ಸುದೀರ್ಘ ಆಲೋಚನೆ ನಂತರ) ಹ್ಞೂಂ ಸರಿ, 7 ಗಂಟೆಗೆ ರೆಡಿ ಆಗಿರು.
ಅಂತೂ ಸಂಜೆ 7 ಗಂಟೆಗೆ ರೆಡಿಯಾಗಿ ದಂಪತಿಗಳು ಹಳೆ ಏರ್ಪೋರ್ಟ್ ರಸ್ತೆ ಹಾದಿಯಾಗಿ ಹೊರಟರು. ಪತಿಯ ಬಿಗುಮಾನ ಇನ್ನೂ ಕಡಿಮೆ ಆಗಿರಲಿಲ್ಲ.