ಚಿನ್ನಾಭರಣಗಳ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ ಕಾಂತಿ ಲಕ್ಷ್ಮಿ, ಮುಂದೆ ಮದುವೆಯಾದ ನಂತರ, ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಇಂದಿನ ಯುವ ಜನತೆಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ಸಾಧನೆಗಳ ಬಗ್ಗೆ ತಿಳಿಯೋಣವೇ…..?
ಕಾಂತಿ ಲಕ್ಷ್ಮೀ ಹುಟ್ಟಿದ್ದು, ಬಾಲ್ಯ ಕಳೆದದ್ದು, ಬೆಳೆದದ್ದು, ಓದಿದ್ದು ಮುತ್ತಿನ ನಗರಿ ಹೈದರಾಬಾದ್ ನಲ್ಲಿ. ತಂದೆ ಚಿನ್ನಾಭರಣಗಳ ವ್ಯಾಪಾರಿ. ಕಾಂತಿ ಲಕ್ಷ್ಮೀ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದರೂ ಕುಟುಂಬದಲ್ಲಿ ನಡೆದು ಬಂದಿದ್ದ ವ್ಯಾಪಾರದಲ್ಲಿ ತಂದೆಗೆ ಕೈ ಜೋಡಿಸಿದರು. ವ್ಯವಹಾರದ ಮೊದಲ ಪಟ್ಟುಗಳನ್ನು ಕಲಿತು ಕರತಲಾಮಲಕ ಮಾಡಿಕೊಂಡರು.
ಕುಟುಂಬದಲ್ಲಿ ತಲತಲಾಂತರದಿಂದ ನಡೆದು ಬಂದ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾಂತಿ ಲಕ್ಷ್ಮೀ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಮೊದಲ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇವರ ನಾಯಕತ್ವದಲ್ಲಿ ಆಭರಣೋದ್ಯಮ ಬಹಳ ವೃದ್ಧಿ ಹೊಂದಿತು. ಆದರೆ ವಯಸ್ಸಿನ ಮಧುರ ಘಟ್ಟದಲ್ಲಿ ಅರವಿಂದ ಮೇಡರನ್ನು ಕೈ ಹಿಡಿದು, ಅವರ ಬಾಳ ಸಂಗಾತಿಯಾಗಿ ತಂದೆ ಮನೆಯಾದ ಹೈದರಾಬಾದ್ ತೊರೆದು, ಪತಿಯ ಮನೆ ಬೆಂಗಳೂರಿಗೆ ಬಂದರು. ಗೃಹಿಣಿಯಾಗಿ ಕಾಂತಿ ಲಕ್ಷ್ಮೀ ಮೇಡ ಆದರು.
ಪಾದರಸದಂಥ ವ್ಯಕ್ತಿತ್ವ
ಸದಾ ಪಾದರಸದಂತಹ ವ್ಯಕ್ತಿತ್ವದವರಾಗಿದ್ದ ಕಾಂತಿಗೆ, ಪತಿಯ ಮನೆಗೆ ಹೊಂದಿಕೊಳ್ಳಲು ಬಹಳ ದಿನಗಳು ಬೇಕಾಗಲಿಲ್ಲ. ಸದಾ ಚಟುವಟಿಕೆಯ ಆಗರವಾಗಿದ್ದ ಅವರಿಗೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ.
2000ದಲ್ಲಿ ಮೊದಲ ಮಗು ಹುಟ್ಟಿದ ನಂತರ ಸಾಮಾಜಿಕ ಬದುಕಿಗೆ ದುಮುಕಿದರು. ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಇಂಗ್ಲಿಷ್, ಡಿಪ್ಲೊಮಾ ಇನ್ ಟೀಚಿಂಗ್ ಫಾರ್ ಟೀಚಿಂಗ್ ಚಿಲ್ಡ್ರನ್ ವಿತ್ ಲರ್ನಿಂಗ್ ಡಿಸ್ ಎಬಿಲಿಟಿ ಪದವಿಗಳನ್ನು ಮುಗಿಸಿ, ಸಮಾಜ ಸೇವೆ ಮಾಡಬೇಕೆಂಬ ತುಡಿತಕ್ಕೆ ಒಳಗಾಗಿ ಆಶಾ ಇನ್ ಫಿನಿಟಿ ಫೌಂಡೇಶನ್ ಸ್ಥಾಪಕ ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡರು.
ಆಶಾ ಇನ್ ಫಿನಿಟಿ ಫೌಂಡೇಶನ್
ಆಶಾ ಸಂಸ್ಥೆಯ ಕ್ರಿಯಾಶೀಲ ಸದಸ್ಯರಾಗಿ ಇಂಗ್ಲಿಷ್ ಪದವೀಧರ ವಿದ್ಯಾರ್ಥಿಗಳಿಗೆ ಕೆಲಸ ಗಳಿಸುವ ಕೌಶಲ್ಯ ಕಲಿಸುವಿಕೆ ಮತ್ತು ಕನ್ನಡವನ್ನು ಕನ್ನಡನಾಡಿನಲ್ಲಿ ನೆಲೆಸಿರು ಕನ್ನಡೇತರರಿಗೆ ಕಲಿಸುವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಶಾ ಸಂಸ್ಥೆ ಆಸ್ಥಿಯ ಸದಸ್ಯರಾಗಿ ಇಂಗ್ಲಿಷ್ ನಲ್ಲಿ ಪಠ್ಯ ಕ್ರಮ ರೂಪಿಸಿ ಪದವೀಧರರಿಗೆ ತರಬೇತಿ ನೀಡುತ್ತಾ ಅವರುಗಳನ್ನು ಹಲವಾರು ಕೆಲಸಗಳಿಗೆ ಯೋಗ್ಯರನ್ನಾಗಿಸಿ ಹಲವು ಕೌಶಲ್ಯ ಕೆಲಸಗಳನ್ನು ಕಲಿಸುತ್ತಾ, ಕೆಲಸ ಪಡೆದುಕೊಳ್ಳಲು ಸತತವಾಗಿ ಅಣಿಗೊಳಿಸುತ್ತಿದ್ದಾರೆ.
ಇನ್ನೂ ಉತ್ತಮವಾದದ್ದನ್ನು ಸಾಧಿಸಬೇಕೆಂಬ ಹೆಬ್ಬಯಕೆಯಿಂದ ಪತಿಯ ಕುಟುಂಬದ ಎಂ.ಕೆ.ಆರ್ ಗ್ರೂಪ್ ಆಫ್ ಕಂಪನಿಗಳ ಆಡಳಿತದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಈ ನಿರ್ಧಾರ ಮಾಡಿದ್ದು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ. ಅಂದು ಮಾಡಿದ ನಿರ್ಧಾರ ಇಂದಿನವರೆಗೂ ದುಡಿಸಿಕೊಂಡು ಬಂದಿದೆ. ಈ ಕಾಲಘಟ್ಟದಲ್ಲಿ ಹಲವಾರು ಸಾಧನೆಯ ಗರಿಮೆ, ಹಿರಿಮೆಗಳು ಇವರ ಪಾಲಾಗಿವೆ.
ಎಂ.ಕೆ.ಆರ್. ಗ್ರೂಪ್ ನ ಆಡಳಿತ ಶಕ್ತಿ
ಇಂದು ಇವರು ಎಂ.ಕೆ.ಆರ್ ಗ್ರೂಪ್ ಆಫ್ ಕಂಪನಿಗಳ ಆಡಳಿತದ ಶಕ್ತಿಯಾಗಿ ಬೆಳೆದು ಆಡಳಿತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಂತೂ ಗ್ರೂಪ್ ನ ಸಂಪೂರ್ಣ ಆಡಳಿತ ನಿರ್ವಹಣೆಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನ ಕಾರ್ಪೊರೇಟ್ ಆಫೀಸಿನಲ್ಲಿ ಕೆಲಸ ಮಾಡುತ್ತಾ ರಾಜಶ್ರೀ ಫುಡ್ಸ್, ಸಾಯಿದೀಪ್ ಎಕ್ಸ್ ಪೋರ್ಟ್ಸ್ ಮತ್ತಿತರ ಕಂಪನಿಗಳ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ಇವರ ಈ ಸೇವೆ ರಜತ ವರ್ಷಗಳನ್ನು ಪೂರೈಸಿವೆ. ಆಡಳಿತ ಕಾರ್ಯದ ಜೊತೆಗೆ ಆಶಾ ಇನ್ ಫಿನಿಟಿ ಫೌಂಡೇಶನ್ ನಂಟೂ ಜೊತೆ ಜೊತೆಯಾಗಿ ಮುಂದುವರಿದಿದೆ.
ಕಾಂತ ಲಕ್ಷ್ಮೀ ಮೇಡರವರಿಗೆ ಓದು, ಕಲಾ ಕುಶಲತೆ, ಸೃಜನಶೀಲತೆ ರಕ್ತಗತವಾಗಿದೆ. ಇತರರಿಗೆ ಸಹಾಯ ಮಾಡುವುದು ಅವರ ಆದ್ಯತೆಗಳಲ್ಲಿ ಒಂದಾಗಿದೆ. ಜೊತೆಗೆ ದೈವ ಭಕ್ತಿಯೂ ಮೈಗೂಡಿದೆ. ಭಗವದ್ಗೀತೆಯ ಪಾಠಗಳು ಅಚ್ಚುಮೆಚ್ಚು. ಗೀತೆಯನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ.
ಪ್ರೀತಿಯ ಹವ್ಯಾಸಗಳು
ಕಾಂತಿಯವರಿಗೆ ಪ್ರೀತಿಯ ಹವ್ಯಾಸವೆಂದರೆ ಪ್ರವಾಸ. ದೇಶ ವಿದೇಶಗಳನ್ನು ಸುತ್ತಾಡಿದ್ದಾರೆ. ಹವ್ಯಾಸಗಳ ಮುಂದುವರಿದ ಭಾಗಗಳೆಂದರೆ ಅಡುಗೆ, ವಿವಿಧ ದೇಶಗಳ (ಪೂರ್ವಪಶ್ಚಿಮ) ಅಡುಗೆ ವಿಧಾನಗಳು ಸಿದ್ಧಿಸಿವೆ. ಅಡುಗೆ ಮಾಡುವಾಗ ಯಾವಾಗಲೂ ಪೌಷ್ಟಿಕ ಆಹಾರದ ಅಡುಗೆಗಳ ಬಗ್ಗೆಯೇ ಗಮನ.
ವಿದ್ಯೆ, ವಿನಯ, ಅಪಾರ ಪ್ರತಿಭೆ, ಸರಳತೆ ಇದ್ದರೂ ಅವರ ಕಾಲುಗಳು ಯಾವಾಗಲೂ ನೆಲದ ಮೇಲೆ, ತಲೆ ಯಾವಾಗಲೂ ಭುಜದ ಮೇಲೇ ಸ್ಥಿರ. ಯುವ ಪೀಳಿಗೆಗೆ, ಹೊಸ ಹೊಸ ವಿದ್ಯೆ ಮತ್ತು ಕೌಶಲ್ಯಗಳನ್ನು ಕೊಡುಗೆಯಾಗಿ ನೀಡಲು ಇವರ ಮನ ಸದಾ ಮಿಡಿಯುತ್ತಿರುತ್ತದೆ. ಇವರ ಶಕ್ತಿ ಎಂದರೆ ಇತರರಿಗೆ ಸಹಾಯ ಮಾಡುವುದು, ಎಲ್ಲರ ಜೊತೆ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುವುದು, ಸದಾ ಹೊಸತು ಕಲಿಯುವುದರಲ್ಲಿ ತೊಡಗಿಸಿಕೊಂಡಿರುವುದು, ತಂಡದ ಜೊತೆ ಮತ್ತು ತಂಡದ ನಾಯಕಿಯಾಗಿ ಕೆಲಸ ನಿರ್ವಹಿಸುವುದು ಅವರಿಗೆ ಹೆಚ್ಚಿನ ಸಂತಸ ನೀಡುತ್ತದೆ.
ಸದಾ ಚಟುವಟಿಕೆಯಲ್ಲಿ ನಿರತ
ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಇನ್ನೂ ಹೆಚ್ಚು ಹೆಚ್ಚು ಟೈಮ್ ಮ್ಯಾನೇಜ್ ಮೆಂಟ್ ಕಲಿಯುವ ಬಯಕೆ ಮತ್ತು ಸಮಯವನ್ನು ಸದ್ಬಳಕೆ ಮಾಡುವ ಹಂಬಲ ಇವರಲ್ಲಿದೆ. ಇವರ ಎಲ್ಲಾ ಸಾಧನೆಗಳಲ್ಲಿ ಸದಾ ಬೆನ್ನಿಗೆ ನಿಂತಿರುವವರೆಂದರೆ ಇವರ ಪತಿ ಅರವಿಂದ್ ಮೇಡ ಮತ್ತು ಇಬ್ಬರು ಗಂಡು ಮಕ್ಕಳು.
ಕಾಂತಿ ಲಕ್ಷ್ಮೀ ಮೇಡರವರ ಸಾಧನೆಯ ಪ್ರತಿ ಹೆಜ್ಜೆಯಲ್ಲಿ ಕುಟುಂಬ ಇವರ ಜೊತೆ ಇದೆ. ಕುಟುಂಬದ ಸದಸ್ಯರು ಇವರನ್ನು ಸದಾ ಪ್ರೋತ್ಸಾಹಿಸುತ್ತಾರೆ. ಇವರಿಗಿರುವ ಒಂದೇ ದೌರ್ಬಲ್ಯವೆಂದರೆ ಸುಲಭವಾಗಿ ನಂಬುದು. ಇನ್ನು ಲಿಮಿಟೇಶನ್ ಗಳಿಗೆ ಬಂದರೆ ದಿನದ 24 ಗಂಟೆಗಳು ಸಾಲದು ಎಂಬ ಕೊರತೆ. ಮುಂದುವರಿದು ಸ್ಕೈ ಈಸ್ ದಿ ಲಿಮಿಟ್ ಎಂದು ನಗುತ್ತಾರೆ. ಹೊರಗಿನ ಅಪಾಯಗಳ ವಿಷಯಕ್ಕೆ ಬಂದರೆ ಯಾವುದೂ ಇಲ್ಲವೆನ್ನುತ್ತಾರೆ.
ಯಶಸ್ಸಿಗೆ ಅಷ್ಟ ಸೂತ್ರಗಳು
ಕಳೆದ 25 ವರ್ಷಗಳಿಂದ ಪತಿಗೆ ಜೊತೆಯಾಗಿ ಮನೆಯಲ್ಲೂ, ಸಂಸ್ಥೆಯಲ್ಲೂ ಅವಿರತ ದುಡಿಯುತ್ತಿದ್ದರೂ ದಣಿವರಿಯದ ಕ್ರಿಯಾಶೀಲ ವ್ಯಕ್ತಿ ಕಾಂತ ಲಕ್ಷ್ಮೀ ಮೇಡ. ಕೊನೆಯಲ್ಲಿ ಯುವ ಪೀಳಿಗೆಗೆ ನಿಮ್ಮ ಸಂದೇಶವೇನು ಎಂದು ಕೇಳಿದ್ದಕ್ಕೆ ಬದುಕಿನ ಅಷ್ಟ ಸೂತ್ರಗಳನ್ನು ಮುಂದಿಟ್ಟರು.
ಹೆಂಗಳೆಯರೇ ಹಲವಾರು ಯುದ್ಧಗಳನ್ನು ನೀವು ಗೆಲ್ಲುವುದಿದೆ.
ಎದ್ದೇಳಿ, ಎಚ್ಚರಗೊಳ್ಳಿ, ಉನ್ನತ ಕೌಶಲ್ಯಗಳನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿ.
ನಿಮ್ಮ ವರ್ತನೆಯು ಸದಾ ಸರಿದಾರಿಯಲ್ಲಿರಲಿ.
ನೀವು ನಿಮ್ಮ ಸುತ್ತಲೂ ಶ್ರೇಷ್ಠ ಕಾಂತಿವಲಯವನ್ನು ನಿರ್ಮಾಣ ಮಾಡಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ.
ಎಂದೂ ಸೋಲೊಪ್ಪದಿರಿ. ನಡೆಯಲಿ ಸತತ ಪ್ರಯತ್ನ, ಏಕೆಂದರೆ ಮಹತ್ವದ ತಿರುವು ಮತ್ತು ಜಯ ಮರುಗಳಿಗೆಯಲ್ಲೇ ದೊರೆಯಲಿದೆ. ನಿಮಗಾಗಿ ಮುಂದೆ ಕಾದು ಕುಳಿತಿದೆ ದಿಗ್ವಿಜಯ!
ಬದುಕೊಂದು ಪಯಣ. ನಿಮ್ಮ ಪಯಣವನ್ನು ನಂಬಿರಿ ಮತ್ತು ನಿರ್ಭಯವಾಗಿ ಮುಂದುವರಿಯಿರಿ.
ಯಾವುದರೊಂದಿಗೂ ಹೊಂದಾಣಿಕೆ ಬೇಡ. ಹೊಸ ದಾರಿಯಲ್ಲಿ ನಡೆದು ಇತರರಿಗೆ ನಿಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ.
ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ಏಕೆಂದರೆ ನೀವು ವೈಶಿಷ್ಟ್ಯಪೂರ್ಣರು, ಜಗದಲಿ ನಿಮ್ಮ ಪಯಣ ವೈಶಿಷ್ಟ್ಯಪೂರ್ಣ!
– ಸದ್ಯೋಜಾತ





