ಕರ್ನಾಟಕ ಸರ್ಕಾರ ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ. ಸದ್ಯ ಯೋಜನೆಯ 2ನೇ ಹಂತವಾದ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ. ಡಿಪಿಆರ್‌ ತಯಾರಿಕಾ ವೆಚ್ಚದ ಕುರಿತು ಸರ್ಕಾರ ಸೆಪ್ಟೆಂಬರ್ ಅಂತ್ಯದಲ್ಲಿ ಆದೇಶ ಹೊರಡಿಸಿದೆ.

2024 – 25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಮಾದಾವರದಿಂದ ತುಮಕೂರಿಗೆ 59.6 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಿಸುವ ಗುರಿ ಇದೆ. ಬಿಎಂಆರ್‌ಸಿಎಲ್‌ ಕಾರ್ಯ ಸಾಧ್ಯತಾ ವರದಿಯ ಅಧ್ಯಯನ ನಡೆಸಿದೆ. ಈಗ ಸಾರ್ವಜನಿಕ – ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ. ಇದು ಬೆಂಗಳೂರು ಮತ್ತು ತುಮಕೂರು ನಡುವೆ ಉತ್ತಮ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ.

ಗೃಹ ಸಚಿವ ಜಿ. ಪರಮೇಶ್ವರ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ. “ಬಿಎಂಆರ್‌ಸಿಎಲ್‌ಗೆ ಅಧ್ಯಯನ ನಡೆಸುವ ಜವಾಬ್ದಾರಿ ನೀಡಲಾಗಿತ್ತು. 3 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಗಳನ್ನು ಕರೆಯಲಾಗಿತ್ತು. ಹೈದರಾಬಾದ್ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಆ ಸಂಸ್ಥೆ ಈಗ ತನ್ನ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ” ಎಂದು ಸಚಿವರು ಹೇಳಿದರು. ಈ ವರದಿಯು ಯೋಜನೆಯ ಮುಂದಿನ ಹಂತಗಳಿಗೆ ದಾರಿ ಮಾಡಿಕೊಟ್ಟಿದೆ.

3 ಕೋಟಿ ರೂ. ವೆಚ್ಚಕ್ಕೆ ಆದೇಶ: ಕಾರ್ಯಸಾಧ್ಯತಾ ವರದಿ ಬಂದ ನಂತರ, ಸರ್ಕಾರವು ಬಿಎಂಆರ್‌ಸಿಎಲ್‌ಗೆ ಡಿಪಿಆರ್‌ ಸಿದ್ಧಪಡಿಸಲು ಸೂಚಿಸಿದೆ. ಇದಕ್ಕೂ ಸಹ 3 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಈ ಕುರಿತು 2025ರ ಸೆಪ್ಟೆಂಬರ್ 25ರಂದು ಆದೇಶ ಹೊರಡಿಸಲಾಗಿದೆ.

20,649 ಕೋಟಿ ರೂ. ವೆಚ್ಚ: ಯೋಜನೆಯ ಮೊದಲ ಹಂತಕ್ಕೆ ₹20,649 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಹಲವು ಖಾಸಗಿ ಕಂಪನಿಗಳು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಆಸಕ್ತಿ ತೋರಿಸಿವೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ನಮ್ಮ ಮೆಟ್ರೋ ಹಸಿರು ಮಾರ್ಗವು ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೂ 33.4 ಕಿ.ಮೀ ಕಾರ್ಯಚರಣೆ ನಡೆಸುತ್ತಿದೆ. ಪ್ರಸ್ತಾವಿತ ಮೆಟ್ರೋ ಮಾರ್ಗವು 59.6 ಕಿ.ಮೀ. ಉದ್ದವಿದ್ದು, ಮಾದಾವರವನ್ನು ತುಮಕೂರಿಗೆ ಸಂಪರ್ಕಿಸುತ್ತದೆ.

ಮುಂದಿನ ಹಂತಗಳು: ಕಾರ್ಯ ಸಾಧ್ಯತಾ ವರದಿಗೆ ಅನುಮೋದನೆ ದೊರೆತರೆ, ಎರಡನೇ ಹಂತವಾದ ವಿಸ್ತೃತ ಯೋಜನಾ ವರದಿ ನಡೆಯುತ್ತದೆ. ಈ ವರದಿ ಆಧರಿಸಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಯೋಜನೆಗೆ ಅಂತಿಮ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ ಕಾಮಗಾರಿ ಆರಂಭವಾಗಲಿದೆ.

ಸಂಭಾವ್ಯ ನಿಲ್ದಾಣಗಳು :

  • ಮಾದಾವರ
  • ಮಾಕಳಿ
  • ದಾಸನಪುರ
  • ನೆಲಮಂಗಲ
  • ವೀವರ್ ಕಾಲೋನಿ
  • ನೆಲಮಂಗಲ ವಿಶ್ವೇಶ್ವರಪುರ
  • ನೆಲಮಂಗಲ ಟೋಲ್‌ಗೇಟ್
  • ಬೂದಿಹಾಳ್
  • ಟಿ. ಬೇಗೂರು
  • ತಿಪ್ಪಗೊಂಡನಹಳ್ಳಿ
  • ಕುಲವನಹಳ್ಳಿ
  • ಮಹಿಮಾಪುರ
  • ಬಿಲ್ಲನ್‌ಕೋಟೆ
  • ಸೋಂಪುರ ಕೈಗಾರಿಕಾ ಪ್ರದೇಶ
  • ದಾಬಸ್‌ಪೇಟೆ
  • ನಲ್ಲಾಯನಪಾಳ್ಯ
  • ಚಿಕ್ಕಹಳ್ಳಿ
  • ಹಿರೇಹಳ್ಳಿ ಕೈಗಾರಿಕಾ ಪ್ರದೇಶ
  • ಪಂಡಿತನಹಳ್ಳಿ
  • ಕ್ಯಾತ್ಸಂದ್ರ ಬೈಪಾಸ್
  • ಕ್ಯಾತ್ಸಂದ್ರ
  • ಎಸ್‌ಐಟಿ (ಸಿದ್ಧಾರ್ಥ ಕಾಲೇಜು)
  • ತುಮಕೂರು ಬಸ್ ನಿಲ್ದಾಣ
  • ಟೂಡಾ ಲೇಔಟ್
  • ನಾಗಣ್ಣ ಪಾಳ್ಯ
  • ಶಿರಾ ಗೇಟ್‌ನ

ಬೆಂಗಳೂರು ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಒಟ್ಟು 26 ಸಂಭಾವ್ಯ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಎಲ್ಲವೂ ಎಲೆವೆಟೆಡ್‌ ಮಾದರಿಯ ನಿಲ್ದಾಣಗಳಾಗಿವೆ. ಹೀಗಾಗಿ, ನಿರ್ಮಾಣ ವೆಚ್ಚ ಹಾಗೂ ಸಮಯ ಎರಡು ಕಡಿಮೆ ಇರಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ