ಇಂದಿನ ಮಕ್ಕಳು ಅಸಾಧಾರಣ ಪ್ರತಿಭೆಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಕಾಲ ಇದು. ಅಂತಹ ಬಾಲ ಪ್ರತಿಭೆಗಳಲ್ಲಿ ತನ್ನ ವಿಶಿಷ್ಟ ಸಾಧನೆಗಳಿಂದ ಕರ್ನಾಟಕದ ಹೆಸರನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿರುವ ಬಾಲಕನ ಹೆಸರು ಪೃಥು ಪಿ. ಅದ್ವೈತ್ (Prithu P. Advaith). ಅಸಾಮಾನ್ಯ ಸ್ಮರಣಶಕ್ತಿ, ವೇದ-ಉಪನಿಷತ್ತುಗಳ ಮೇಲಿನ ಆಸಕ್ತಿ, ಶ್ಲೋಕ ಪಠಣದಲ್ಲಿನ ಅದ್ಭುತ ಪ್ರತಿಭೆ ಮತ್ತು ನಿರಂತರ ಪರಿಶ್ರಮದ ಮೂಲಕ ಈ ಪುಟ್ಟ ಬಾಲಕ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶ್ವ ದಾಖಲೆಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ.

ವಿದ್ಯೆ ಕಲಿಯುವುದಕ್ಕೆ ಯಾರದ್ದೇ ಹಂಗಿಲ್ಲಾ. ಸಾಧನೆಗೆ ವಯಸ್ಸಿಲ್ಲಾ!  ಎಂಬುದನ್ನು ಈಗಾಗಲೇ ಆದಿಗುರು ಶ್ರೀ ಶಂಕರಾಚಾರ್ಯರು ಸಾಧಿಸಿ ತೋರಿಸಿದ್ದಾರೆ. ಅವರ ಕುರಿತಾಗಿರುವ ಈ ಶ್ಲೋಕವೇ ಎಲ್ಲವನ್ನೂ ವಿವರಿಸಿಬಿಡುತ್ತದೆ.

ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ |ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೆ  ಆಚಾರ್ಯ ಶಂಕರರು ಎಂಟನೇ ವಯಸ್ಸಿಗೆ ನಾಲ್ಕು ವೇದಗಳನ್ನು ಕಲಿತರು. ಹನ್ನೆರಡನೇ ವಯಸ್ಸಿಗೆ ಸಕಲ ಶಾಸ್ತ್ರಗಳಲ್ಲೂ ಪಾರಂಗತರಾದರು. ಹದಿನಾರನೇ ವಯಸ್ಸಿಗೆ ಪ್ರಮುಖ ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳಿಗೆ ಅದ್ಭುತವಾದ ಭಾಷ್ಯಗಳನ್ನು ಬರೆದರು ಎಂಬತಹ ಅಪ್ರತಿಮ ಪ್ರತಿಭೆಯನ್ನು ಹೊಂದಿದ್ದರು ಎಂದು ತಿಳಿಸುತ್ತದೆ.

ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ, ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನನ್ನ ತಮ್ಮನ (ಚಿಕ್ಕಪ್ಪನ ಮಗ) ಮದುವೆಗೆ ಹೋಗಿದ್ದೆ.  ಅದು ಬಹಳ ವಿಶೇಷವಾದ ಮದುವೆ. ಅದು ಭಾರತ ಮತ್ತು ಸ್ಪೇನ್ ದೇಶದ ಅದ್ಭುತವಾದ ಸಮಾಗಮ. ಪ್ರೀತಿಗೆ ಕಣ್ಣಿಲ್ಲಾ ಮತ್ತು ಯಾವುದೇ ಜಾತಿ ಧರ್ಮದ ಹಂಗಿಲ್ಲಾ!! ಹಾಗೇ ಪ್ರೀತಿ ಮಾಡ ಬಾರದು. ಮಾಡಿದರೆ ಜಗಕೆ ಹೆದರಬಾರದು ಎಂಬ ರವಿಮಾಮನ ಹೇಳಿಕೆಯಂತೆ ಇಬ್ಬರ ಮನೆಯವರನ್ನೂ ಒಪ್ಪಿಸಿ ಬಹಳ ಅದ್ದೂರಿಯಾಗಿ ಹಿಂದೂ ಸಂಪ್ರದಾಯದ ಪ್ರಕಾರ  ಶಾಸ್ತ್ರೀಯವಾಗಿ ಸಪ್ತಪದಿ ತುಳಿದ ಮದುವೆ ಅದಾಗಿತ್ತು. ಇಂತಹ ಸೂಕ್ಷ್ಮವಾದ ಮದುವೆಯ ಪೌರೋಹಿತ್ಯವಹಿಸಿದ್ದವರು ಪ್ರತೀ ಮಂತ್ರವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಕ್ತವಾಗಿ ವಿವರಿಸುತ್ತಾ, ಹೆಣ್ಣಿನ ಮನೆಯವರಿಗೆ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ಪರಿಚಯಿಸುತ್ತಾ, ಬಹಳ ಅದ್ಭುತವಾಗಿ ಮದುವೆಯನ್ನು ನಿಭಾಯಿಸಿದ್ದರು. ವರಪೂಜೆಯ ನಂತರ ಕುಟುಂಬದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಮನರಂಜಿಸುವ ಸಲುವಾಗಿ ಹುಬ್ಬಳ್ಳಿ ಮುದುಕಾ ಜಾತ್ರೆಗೆ ಹೊಂಟಾ.. ಹುಬ್ಬಳ್ಳಿ ಮುದುಕಾ.. ಮುದುಕನ ಹೆಂಡತಿ.. ಎಂದು  ಒಂದಕ್ಕೊಂದು ಜೋಡಿಸಿಕೊಂಡು ವೇಗವಾಗಿ ಹೇಳುತ್ತಾ, ಎಲ್ಲೀ ನೀವು  ಹೇಳ್ತೀರಾ!! ನಿಮ್ಮ ಕೈಯ್ಯಲ್ಲಿ ಹೇಳುಕ್ಕಾಗುತ್ತಾ.. ಎಂದು  ಒಬ್ಬೊಬ್ಬರನ್ನೇ ಕೇಳುತ್ತಾ ಸ್ವಲ್ಪ ಹೊತ್ತು ಕಾಲ ಕಳೆದಿದ್ದೆ. ಪುರೋಹಿತರ ಜೊತೆ ಬಂದಿದ್ದ ಸಣ್ಣ ವಯಸ್ಸಿನ ಹುಡುಗ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಪುಟ್ಟ ಹುಡುಗಾ!! ಅಂತಾ ಸುಮ್ಮನಾಗಿದ್ದೆ.

ಮಾರನೇಯ ದಿನ ಧಾರೆ, ಸಪ್ತಪದಿ, ಹೆಣ್ಣು ಒಪ್ಪಿಸುವ ಶಾಸ್ರ ಎಲ್ಲವೂ ಮುಗಿದು ಸಂಜೆ ಆರತಕ್ಷತೆಗೆ ಬಂದವರೆಲ್ಲರನ್ನೂ ಸ್ವಾಗತಿಸಲು ಬಾಗಿಲು ಮುಂದೆ ನಿಂತಿದ್ದಾಗ, ಸಕುಟುಂಬ ಸಮೇತರಾಗಿ ಬಂದ ಪುರೋಹಿತರ ವೇಷ ಬದಲಾಗಿದ್ದನ್ನು ಕಂಡು, ಏನು ಪುರೋಹಿತರೇ ವೇಷ ಎಲ್ಲವೂ ಬದಲಾಗಿದೆ ಎಂದು ಕೇಳಿದಾಗ ಅವರು ನಗುತ್ತಲ್ಲೇ ಸಾರ್, ವೃತ್ತಿಯಲ್ಲಿ ನಾನು ಸಾಫ್ಟ್ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್, ಪ್ರವೃತ್ತಿಯಲ್ಲಿ ವಂಶಪಾರಂಪರ್ಯದ ಪೌರೋಹಿತ್ಯವನ್ನೂ ರೂಢಿಸಿಕೊಂಡಿದ್ದೇನೆ. ನಮ್ಮ ಸಂಪ್ರದಾಯ ಬಿಡಬಾರದಲ್ಲವೇ  ಎಂದಾಗ ಅರೇ!! ಹೌದಲ್ವೇ ಎನಿಸಿತು. ಹಾಗೇ ಮಾತನಾಡುತ್ತಾ. ನಮ್ಮ ಮಗ ನೆನ್ನೆಯಿಂದ ನಿಮ್ಮ ಅಭಿಮಾನಿಯಾಗಿ ಬಿಟ್ಟಿದ್ದಾನೆ. ನಿಮ್ಮ ಮುಂದೆ ಅವನು ಹುಬ್ಬಳ್ಳಿ ಮುದುಕಾ.. ಮುದುಕನ ಹೆಂಡತಿ.. ಪೂರ್ತಿ ಹೇಳಬೇಕೆಂದೇ ಇಂದು ಬಂದಿದ್ದಾನೆ ಎಂದಾಗ, ಅರೇ ಹೌದಾ!! ಎಂದು ಅಚ್ಚರಿ ಪಟ್ಟು ಎಲ್ಲಿ ಹೇಳು ಮಗೂ ಎಂದಾಗ, ಒಂದೇ ಉಸಿರಿನಲ್ಲಿ ಎಲ್ಲವನ್ನೂ ಸರಿಯಾಗಿ ಹೇಳಿದಾಗ ಬಹಳ ಸಂತೋಷವಾಗಿ ಏನಪ್ಪಾ ನಿನ್ನ ಹೆಸರು ಎಂದು ಕೇಳಿದಾಗ ಡಾ. ಪೃಥು ಪಿ. ಅದ್ವೈತ್ ಎಂದು ವೇಗವಾಗಿ ಹೇಳಿದಾಗ,  ಪುಟ್ಟ ಮಗು ಈಗಲಿಂದಲೇ ಡಾಕ್ಟರ್ ಆಗಬೇಕೆಂದು ಹಾಗೆ ಹೇಳುತ್ತಿರಬಹುದು ಎಂದು ಭಾವಿಸಿ ಮತ್ತೆ, ನಿನ್ನ ಹೆಸರು ಸರಿಯಾಗಿ ಹೇಳು ಎಂದು ಕೇಳಿದಾಗ ಮತ್ತೆ ಡಾ. ಪೃಥು ಪಿ. ಅದ್ವೈತ್ ಎಂದು ಹೇಳಿದ್ದನ್ನು ಕೇಳಿ, ಅವರ ತಂದೆಯವರ ಬಳಿ ಏನ್ ಸರ್ ಹೀಗೆ ಹೇಳ್ತಾ ಇದ್ದಾನೆ ನಿಮ್ಮ ಮಗ ಎಂದಾಗ. ಹೌದು ಅವನು ಈಗಾಗಲೇ ಆರು ವಿಶ್ವದಾಖಲೆ ಮಾಡಿದ್ದು, ಎರಡು ವಿದ್ಯಾ ಸಂಸ್ಥೆಗಳು ಅವನಿಗೆ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ ಎಂದಾಗ, ಈಗ ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮದಾಗಿತ್ತು ಎಂದು ಬೇರೆ ಹೇಳಬೇಕಿಲ್ಲಾ ಅಲ್ವೇ?

ಬಾಲ್ಯದಲ್ಲೇ ಮೂಡಿದ ಅದ್ಭುತ ಪ್ರತಿಭೆ

ಮೈಸೂರು ನಗರದ ನಿವಾಸಿಗಳಾದ ಪುನೀತ್ ಜಿಮತ್ತು ಪೂಜಾ ಎನ್ದಂಪತಿಯ ಪುತ್ರನಾದ ಪೃಥು ಪಿಅದ್ವೈತ್, 2017ರ ಜನವರಿ 21ರಂದು ಜನಿಸಿದ್ದಾನೆ. ಮೂಲತಃ ಚಾಮರಾಜನಗರ ಜಿಲ್ಲೆಯ ಕೂಡ್ಲೂರು  ಗ್ರಾಮದ ಸ್ಥಳ ಪುರೋಹಿತರಾಗಿದ್ದ ಕೂಡ್ಲೂರು ಗುಂಡಪ್ಪನವರ ವಂಶದ ಕುಡಿಯೇ ಪೃಥು, ಕುತೂಹಲದ ಮತ್ತೊಂದು ವಿಚಾರವೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದಂತಹ ಶ್ರೀ ನ ಕೃಷ್ಣಪ್ಪನವರಿಗೆ ಪೃಥು ಹತ್ತಿರದ ಬಂಧುವಾಗುತ್ತಾನೆ. ಸದ್ಯ ಮೈಸೂರಿನ ಪೂರ್ಣಚೇತನ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ, ಬಾಲ್ಯದಿಂದಲೇ ಮನೆಯಲ್ಲಿ ತಂದೆಯವರಿಂದಲೇ ವೇದ ಮಂತ್ರಗಳು ಉಪನಿಷತ್ತುಗಳು, ಭಗವದ್ಗೀತೆ, ಮತ್ತು ಶ್ಲೋಕಗಳನ್ನು ಬಹಳ ಆಸಕ್ತಿಯಿಂದ ಕಲಿತ, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನೂರಾರು ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡು  ಅದನ್ನು ಎಲ್ಲರ ಮುಂದೆ ಯಾವುದೇ ಅಂಜಿಕೆ ಇಲ್ಲದೇ ಹೇಳುವ ಮೂಲಕ  ಎಲ್ಲರ ಗಮನ ಸೆಳೆದಿದ್ದ..

ಪೇಜಾವರ ಶ್ರೀಗಳ ಆಶೀರ್ವಾದ

2023ರಲ್ಲಿ ಪರಮಪೂಜ್ಯ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೈಸೂರಿನಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದ ಸಂದರ್ಭದಲ್ಲಿ ಪೃಥು ಓದುತ್ತಿದ್ದ ಶಾಲೆಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಸಂಧರ್ಭದಲ್ಲಿ ಅವರನ್ನು ಪೃಥುವಿನ ಮಂತ್ರೋಚ್ಚಾರಣೆ ಮೂಲಕ ಸ್ವಾಗತಿಸಿದ್ದಲ್ಲದೇ, ಸ್ವಾಮಿಗಳಿಗೆ ಹಾರವನ್ನು ಹಾಕುವ ಜವಾಬ್ಧಾರಿಯೂ ಅವನದ್ದೇ ಆಗಿತ್ತು. ಮೂರು ಅಡಿ ಎತ್ತರದ ಪೃಥು, ಸುಮಾರು ಆರು ಅಡಿಯ ಪೇಜವಶ್ರೀಗಳ ಕೊರಳಿಗೆ ಹಾರವನ್ನು ಹಾಕಲು ಹೇಗೆ ತಾನೇ ಸಾಧ್ಯ.  ಅಸಾಧ್ಯವನ್ನು ಸಾಧ್ಯವಾಗಿ ಮಾಡುವಲ್ಲಿ ಈಗಾಲೇ ಪಳಗಿದ್ದ ಪೃಥು  ಛಂಗನೇ ಹಾರಿ ಸ್ವಾಮಿಗಳ ಕುತ್ತಿಗೆ ಹಾರವನ್ನು ಹಾಕುವುದರಲ್ಲಿ ಸಫಲನಾದರೂ, ಹಾರಿದ ಭರದಲ್ಲಿ ಆಯತಪ್ಪಿ  ಅವನಿಗೇ ಅರಿವಿಲ್ಲದಂತೆ ಸ್ವಾಮಿಗಳ ಪಾದವನ್ನು ಮೆಟ್ಟಿ ಬಿಟ್ಟಿದ್ದ.  ಪುಟ್ಟ ಹುಡುಗ ಎಂದು ಸ್ವಾಮಿಗಳೂ ಸಹಾ  ಅದನ್ನು ಗಂಭಿರವಾಗಿ ತೆಗೆದುಕೊಳ್ಳದೇ ಹೋದರೂ, ಸ್ವಾಮಿಗಳ ಜೊತೆ ಬಂದಿದ್ದ  ಆವರ ಪರಿಚಾರಕರು, ಏನಪ್ಪಾ ಮಗು ಎಂತಹ ದೊಡ್ಡ ಅಚಾತುರ್ಯ ಮಾಡಿದ್ದೀಯೇ?  ಎಂದು ಹೇಳಿದ್ದು ಪೃಥುವಿನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿ ಶಾಲೆಯಿಂದ ಮನೆಗೆ  ಹೋದಾಗಲೂ ಅದೇ ಗುಂಗಿನಲ್ಲಿ ಉದಾಸೀನನಾಗಿ ಇದ್ದದ್ದನ್ನು ಕಂಡು  ಅವನಿಂದ ವಿಚಾರ ತಿಳಿದ ಕೂಡಲೇ ಪೇಜಾವರ ಶ್ರೀಗಳ ಬಳಿ ಕ್ಷಮೆಯಾಚಿಸಲು  ಅಪ್ಪಾ  ಮಗ ಅಲ್ಲಿಗೆ ಹೋಗಿ ಬೆಳಿಗ್ಗೆ ನಡೆದದ್ದೆಲ್ಲವನ್ನೂ ವಿವರಿಸಿ ಕ್ಷಮೆ ಯಾಚಿಸಿದಾಗ, ಅರೇ ಹೌದಾ ಇಷ್ಟೆಲ್ಲಾ ಆಯ್ತಾ! ಎಂದು ಸ್ವಾಮಿಗಳೇ ಅಚ್ಚರಿ ಪಟ್ಟು, ನೀನಿನ್ನೂ ಚಿಕ್ಕ ಹುಡುಗ ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳಬೇಡಾ ಎಂದು ಪೃಥುನನ್ನು ಸಮಾಧಾನಿಸಿ ಕೆಲ ಕಾಲ ಅವನನ್ನೇ ದಿಟ್ಟಿಸಿ ನೋಡುತ್ತಾ!! ಈತ ಸಾಮಾನ್ಯ ಹುಡುಗನಲ್ಲಾ!! ಏನೋ ಬಾರೀ ಸಾಧನೆಗಾಗಿಯೇ ಹುಟ್ಟಿರುವ ಹಾಗಿದೆ  ಎಂದು ಹೇಳಿದರಂತೆ

ನಂತರ ಸ್ವಾಮಿಗಳ ಮುಂದೆ ತನಗೆ ಗೊತ್ತಿದ್ದ / ಕಲಿತಿದ್ದ  ಮಂತ್ರ ಮತ್ತು ಸ್ತೋತ್ರಗಳನ್ನೆಲ್ಲಾ ಪಟ ಪಟನೇ ಹೇಳಿದ್ದನ್ನು ಕೇಳಿದ  ಶ್ರೀಗಳು,

ಇನ್ನೂ ಹೆಚ್ಚು ಅಭ್ಯಾಸ ಮಾಡು, ನಿನಗೆ ದೊಡ್ಡ ಯಶಸ್ಸು ಸಿಗುತ್ತದೆ ಎಂದು ಆಶೀರ್ವದಿಸಿದ್ದರು.

ಈ ಮಾತುಗಳಿಂದ ಪ್ರೇರಿತನಾದ ಪೃಥು ನಿರಂತರ ಅಭ್ಯಾಸ ಮುಂದುವರೆಸಿ ವಿಶ್ವ ದಾಖಲೆ ನಿರ್ಮಿಸಿರುವುದು ಮತ್ತೊಂದು ವಿಶೇಷವಾಗಿದೆ..

30 ನಿಮಿಷಗಳಲ್ಲಿ 150 ಶ್ಲೋಕ ಪಠಿಸಿ ವಿಶ್ವ ದಾಖಲೆ

ಪೃಥು ಪಿ. ಅದ್ವೈತ್  ತನ್ನ ಏಳನೇ ವರ್ಷದಲ್ಲೇ ಮಾಡಿದ  ಅತ್ಯಂತ ಗಮನಾರ್ಹ ಸಾಧನೆ ಎಂದರೆ ಕೇವಲ 30 ನಿಮಿಷಗಳಲ್ಲಿ 150 ಶ್ಲೋಕಗಳನ್ನು ಪಠಿಸಿ ದಿನಾಂಕ 27/07/2024 ರಂದು  ವಿಶ್ವ ದಾಖಲೆ  ನಿರ್ಮಿಸಿರುವುದು.

ಈ ಸಾಧನೆಗಾಗಿ ಅವರು ಏಕಕಾಲದಲ್ಲಿ ಮೂರು ಪ್ರತಿಷ್ಠಿತ ವಿಶ್ವ ದಾಖಲೆ ಸಂಸ್ಥೆಗಳಲ್ಲಿ ದಾಖಲೆ ನಿರ್ಮಿಸಿದ್ದಾರೆ:

  • Elite World Record
  • Asia Records Academy
  • India Records Academy ಅಷ್ಟೇ ಅಲ್ಲದೆ,
  • ನಿರಂತರ ಹದಿನಾರು ಘಂಟೆಗಳ ಸಾಮೂಹಿಕ ಭಗವದ್ಗೀತೆ ಹೇಳುವುದರಲ್ಲಿ ಭಾಗವಹಿಸಿ The Longest Chanting Marathon of Bhagavadgeetha ಎಂಬ ವಿಶ್ವದಾಖಲೆಯನ್ನು Asia Records Academy ಇಂದ ದಿನಾಂಕ 27/07/2024 ಮತ್ತು28/07/2024 ರಂದು ಪಡೆದಿದ್ದಾನೆ.
  • ಸಾಮೂಹಿಕ ಗಣಿತ ಪದ ಬಂಧ ಪ್ರಶ್ನೆಗಳನ್ನು ಅಂದರೆ Math Puzzle Solving ನಲ್ಲಿ ಭಾಗವಹಿಸಿ The Most Participants Solving Math Puzzle Simultaneously counted to 465 ಎಂಬ ವಿಶ್ವದಾಖಲೆಯನ್ನು Elite World Record ಇಂದ  28/07/2024 ರಂದು ಪಡೆದಿದ್ದಾನೆ.
  • ನಿರಂತರ ಎರಡು ಗಂಟೆಗಳ ಕಾಲದ ಸಾಮೂಹಿಕ ವಿವಿಧ ಬಗೆಯ ನೃತ್ಯ ಮಾಡುವುದರಲ್ಲಿ ಭಾಗವಹಿಸಿ The MaximumParticipants in a Multi Genre Dance Performance at a single location within 2 Hours counted to 498 ಎಂಬವಿಶ್ವದಾಖಲೆಯನ್ನು India Records Academy ಇಂದ ದಿನಾಂಕ 04/08/2024 ರಂದು ಪಡೆದಿದ್ದಾನೆ.

ಶೃಂಗೇರಿ  ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಮಹಾಶೀರ್ವಾದ

ಬಾಲಕ ಪೃಥುವಿನ  ಅಸಾಧಾರಣ ಪ್ರತಿಭೆಯ ವಿಷಯವನ್ನು ತಿಳಿದ ಶ್ರೀ ಕ್ಷೇತ್ರ ಶೃಂಗೇರಿಯ ಶ್ರೀ ಶಾರದಾ ಪೀಠದ ಪೀಠಾಧಿಪತಿಗಳಾದ  ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ತಮ್ಮ ಆಡಳಿತಾಧಿಕಾರಿಗಳ ಮೂಲಕ ಪೃಥುವಿನ ತಂದೆ ಪುನೀತ್ ಅವರಿಗೆ ಕರೆ ಮಾಡಿ  ಕುಟುಂಬ ಸಮೇತರಾಗಿ ಶೃಂಗೇರಿಗೆ ಬರಲು ಹೇಳಿ ಕಳುಹಿಸಿದ್ದನ್ನೇ, ಪರಮ ಸೌಭಾಗ್ಯ ಎಂದು ತಿಳಿದ ಪೃಥು ಅವರ ತಂದೆ ಪುನೀತ್ ಅವರು ಅದೇ ರಾತ್ರಿ ಶೃಂಗೇರಿಗೆ ಪಯಣಿಸಿ ಮಾರನೇ ದಿನ 27/05/2025 ರಂದು ಶ್ರೀ ಶಾರದಾದೇವಿ, ಶ್ರೀ ವಿದ್ಯಾಶಂಕರ, ಶ್ರೀ ಆದಿ ಶಂಕರಾಚಾರ್ಯರು, ತೋರಣ ಗಣಪತಿ ಮತ್ತು ಶ್ರೀ ಬಾಲಸುಬ್ರಹ್ಮಣ್ಯನ ದರ್ಶನ ಪಡೆದು ಚಂದ್ರಮೌಳೇಶ್ವರನ ಸನ್ನಿಧಿಯಲ್ಲಿ ಹಿರಿಯ ಸ್ವಾಮಿಗಳನ್ನು ಭೇಟಿ ಮಾಡಿದಾಗ, ಸ್ವಾಮಿಗಳ ಮುಂದೆ ತನ್ನೆಲ್ಲಾ ಪ್ರತಿಭೆಗಳನ್ನು ಪ್ರದರ್ಶನ ಮಾಡಿದ್ದನ್ನು ಕಂಡ ಶೃಂಗೇರಿ ಶ್ರೀಗಳು ಸಹಾ ಈತ  ಅಸಾಧಾರಣ ಬಾಲಕನಾಗಿದ್ದು, ಮುಂದೆ ದೊಡ್ಡ ಸಾಧನೆ ಮಾಡುವನಿದ್ದಾನೆ. ಹಾಗಾಗಿ ಆತನ ಮುಂದಿನ ಶಿಕ್ಷಣಕ್ಕೆ ಯಾವುದೇ ರೀತಿಯ ಸಹಾ ಬೇಕಿದ್ದರೂ ಶ್ರೀ ಮಠದ ವತಿಯಿಂದ ಮಾಡಲು ಸಿದ್ಧವಿದೆ ಎಂದು ತಿಳಿಸಿರುವುದು ಪೃಥುವಿನ ಹೆಗ್ಗಳಿಕೆಯಾಗಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳಿಂದ ಗೌರವ

ಆದಿಚುಂಚನಗಿರಿ ಮಠದಲ್ಲಿ ದಿನಾಂಕ 16/01/2026 ರಂದು ನೆಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಭಾಗಿಯಾಗಿ ಕನ್ನಡ ಇಂದಿನ ಸವಾಲುಗಳ ಬಗ್ಗೆ ಮಾತನಾಡಿ ಮೆಚ್ಚುಗೆ ಪಡೆದು ಪೂಜ್ಯ ನಿರ್ಮಲಾನಂದ ಸ್ವಾಮಿಗಳು ಗೌರವಿಸಿಸನ್ಮಾನಿಸಿದ್ದಾರೆ.

ಶಿಕ್ಷಣದಲ್ಲಿಯೂ ಅಗ್ರಗಣ್ಯ

ಕೇವಲ ಧಾರ್ಮಿಕ ಆಸಕ್ತಿಯಲ್ಲದೇ ಶಿಕ್ಷಣ ಕ್ಷೇತ್ರದಲ್ಲಿಯೂ ಪೃಥು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾನೆ.

  • ಮೊದಲ ಮತ್ತು ಎರಡನೇ ತರಗತಿಯಲ್ಲಿ 95% ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾನೆ.
  • International Science Olympiad Foundation (SOF) ಪರೀಕ್ಷೆಗಳಲ್ಲಿ ಭಾಗವಹಿಸಿ ಸತತ ಎರಡು ವರ್ಷಗಳ ಕಾಲ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
  • Shuttle Badminton ಆಟ , ಪ್ರಸ್ತುತ ಶಾಸ್ತ್ರೀಯ ಸಂಗೀತ ಹಾಗೂ ತಬಲ  ಅಭ್ಯಾಸ ಮಾಡುತ್ತಿದ್ದಾನೆ
  • ಕನ್ನಡದ ಸಾಹಿತ್ಯದ ಬಗ್ಗೆ ಒಲವು ಹೊಂದಿರುವ ಪೃಥು, ಕನ್ನಡದಲ್ಲಿ ಕವನ ರಚನೆ ಹಾಗೂ ಲೇಖನಗಳನ್ನು ಬರೆಯುತ್ತಾನೆ.. ಇವನ ಕವನ ಹಾಗೂ ಲೇಖನಗಳು ಶಾಲೆಯ ಪತ್ರಿಕೆ ಸೇರಿದಂತೆ ವಿವಿಧ ಕನ್ನಡ ದಿನಪತ್ರಿಕೆಗಳಲ್ಲೂ ಈಗಾಗಲೇ ಪ್ರಕಟಗೊಂಡಿವೆ..

ಸಮಾಜಮುಖಿ ಮನೋಭಾವ

ಪೃಥು ಕೇವಲ ಪ್ರತಿಭಾವಂತ ಬಾಲಕ ಮಾತ್ರವಲ್ಲ, ಸಾಮಾಜಿಕ ಕಾಳಜಿಯುಳ್ಳ ಬಾಲಕ ಕೂಡ ಹೌದು.

ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಕಾಣಿಕೆ

ತಾನು ಸಂಗ್ರಹಿಸಿದ್ದ ಗೋಲಕದ ಹಣವನ್ನು ಸ್ವಯಂ ಪ್ರೇರಣೆಯಿಂದ ಅಯೋಧ್ಯಾ ಶ್ರೀರಾ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದಾನ ಮಾಡಿದ್ದಾನೆ.

ಪರಿಸರ ಪ್ರೀತಿ

ಪ್ರತಿ ವರ್ಷ ತನ್ನ ಹುಟ್ಟುಹಬ್ಬದಂದು, ತನ್ನ ವಯಸ್ಸಿಗೆ ಸಮನಾದಷ್ಟು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ವರ ಕುಟುಂಬದ ವಿಶಿಷ್ಟ ಆಚರಣೆಯಾಗಿದೆ.

ಪಡೆದ ಪ್ರಶಸ್ತಿಗಳು ಮತ್ತು ಸನ್ಮಾನಗಳು

ಪೃಥುವಿನ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಪ್ರಮುಖ ಪ್ರಶಸ್ತಿಗಳು

✅ ಆದರ್ಶ ಬಾಲ ಪ್ರತಿಭಾರತ್ನ ಪ್ರಶಸ್ತಿ – 2023
(ಆದರ್ಶ ಸೇವಾ ಸಂಘ ಮತ್ತು ವಿಶ್ವ ವಿಪ್ರತ್ರಯೀ ಪರಿಷತ್, ಮೈಸೂರು)

✅ ಬಾಲ ಸ್ತೋತ್ರ ಕಲಾರತ್ನ ಪ್ರಶಸ್ತಿ – 2024
(ಮೂಕಾಂಬಿಕ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ

✅ Shloka Scholar ಪ್ರಶಸ್ತಿ – 2024(Wiz Kids Carnival ಸಂಸ್ಥೆಯ ಅಖಿಲ ಭಾರತ ಶ್ಲೋಕ ಪಠಣ ಸ್ಪರ್ಧೆ)

✅ Karnataka Glory Awards – 2024
“Excellence in Best Talented Rising Star of Karnataka”

 

✅ ಬಾಲ ಕರುನಾಡ ರತ್ನ ಪ್ರಶಸ್ತಿ – 2024
(ಸಂಧ್ಯಾ ಸುರಕ್ಷಾ ಟ್ರಸ್ಟ್ ಮತ್ತು ಪಾರಿಜಾತ ಟ್ರಸ್ಟ್)

✅ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2024
(ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)

✅ ಚಾಮರಾಜ ಒಡೆಯರ್ ಪ್ರಶಸ್ತಿ  – 2025
(ಚಾಮರಾಜನಗರದಲ್ಲಿ ನೆಡೆದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್)

✅ ವಾಮನ ಪ್ರಿಯ ಪ್ರಶಸ್ತಿ  – 2025
(ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್ ಫೆಡೆರೇಷನ್ ಹುಬ್ಬಳ್ಳಿ ವಿಭಾಗದ ಭಾಗವತ ಸಮ್ಮೇಳನ)

✅ ಸೇವಾ ರತ್ನಪ್ರಶಸ್ತಿ  – 2026
(National Crime Control Board ಮತ್ತು Women Empowerment and Protection Cell(WEPC) Mysore)

ಇತರ ಸಾಧನೆಗಳು

  • Alpha International School ಆಯೋಜಿಸಿದ್ದ Stylish Kids ಸ್ಪರ್ಧೆಯಲ್ಲಿ ವಿಜೇತ.
  • ಶಿವರಾತ್ರಿಯಂದು ತಮ್ಮ ಮನೆಯಲ್ಲಿ ನಡೆಸಿದ ಶಿವಾಭಿಷೇಕ ಕಾರ್ಯಕ್ರಮ ಶಂಕರ ಟಿವಿಯಲ್ಲಿ ಪ್ರಸಾರವಾಗಿದೆ. ‌
  • ಸ್ಥಳೀಯ ಸುದ್ದಿವಾಹಿನಿಯ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾ ನೆ.
  • ಕನ್ನಡ ಮಕ್ಕಳ ಚಲನಚಿತ್ರ ಮನಸಿದ್ದರೆ ಮಾರ್ಗ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾನೆ ಹಾಗೂ ಡಬ್ಬಿಂಗ್ ಮಾಡಿದ್ದಾನೆ.
  • ಸ್ವರ್ಣ ಕಮಲ ಎಂಬ ಕನ್ನಡದ ಮಕ್ಕಳ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾನೆ.
  • ಭೂಮಿಯ ಬಗ್ಗೆ ಪೃಥು ಬರೆದ ಆರು ಕವನಗಳು ಪನೋರಮಾ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನ -2026ರಲ್ಲಿ ಆಯ್ಕೆಯಾಗಿ ಸುಮಾರು 96ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತಕಿರಿಯ ಪ್ರತಿನಿಧಿ ಪೃಥು.  ಕನ್ನಡದಲ್ಲಿ ಬರೆದ 6 ಕವನವನ್ನು ಕನ್ನಡ, ಇಂಗ್ಲಿಷ್ , ಫ್ರೆಂಚ್ , ಸ್ಪ್ಯಾನಿಷ್, ಇಟಲಿಯನ್. ಗ್ರೀಕ್ ಭಾಷೆಗಳಿಗೆಅಂತರಾಷ್ಟ್ರೀಯ ಪ್ರಕಾಶನವೊಂದು  “ಫೃಥ್ವಿ – ಅ ಟ್ರೈಬ್ಯೂಟ್ ಟು ಮದರ್ ಅರ್ಥ್ ” ಎಂಬ ಹೆಸರಲ್ಲಿ ಪುಸ್ತಕ ಹೊರತಂದಿದೆ

ಗೌರವ ಡಾಕ್ಟರೇಟ್ ಪಡೆದ 7 ವರ್ಷದ ಬಾಲಕ

  • ಸಾಮಾನ್ಯವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಜೀವನಪೂರ್ತಿ ಸಾಧನೆ ಮಾಡಿದ ಮಹನೀಯರಿಗೆ ನೀಡಲಾಗುತ್ತದೆ. ಆದರೆ ಕೇವಲ 7ನೇ ವಯಸ್ಸಿನಲ್ಲೇ ವಿಶ್ವ ದಾಖಲೆಗಳ ಸರದಾರನಾಗಿರುವ ಪೃಥು ಪಿ. ಅದ್ವೈತ್ ನಿಗೆ ಮಕ್ಕಳ ದಿನಾಚರಣೆ ಅಂಗವಾಗಿ ದಿನಾಂಕ 13/11/2024 ರಂದು  World Culture and Environment Protection Commission (Approved by Govt. of India) ಸಂಸ್ಥೆಯು Doctorate in Child Youth Inspiration ಎಂಬ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.
  • ಪೃಥು. ಪಿ. ಅದ್ವೈತ್ ನ ಸಾಧನೆಯನ್ನು ಗಮನಿಸಿ ನವದೆಹಲಿಯ ಫರಿದಾಬಾದ್ ನಲ್ಲಿ ಇರುವ Magic and Art University ಯವರು ದಿನಾಂಕ 18/01/2025 ರಂದು The Castle and Art Theater, Faridabad, Delhi ಯಲ್ಲಿ ನೆಡೆದ ಪ್ರಶಸ್ತಿಪುರಸ್ಕಾರ ಸಮಾರಂಭದಲ್ಲಿ ಭಾರತದ ಸರ್ವೊಚ್ಛ ನ್ಯಾಯಲಯದ ನ್ಯಾಯವಾದಿ ಡಾ. ರಾಮ್ ಅವತಾರ್ ಶರ್ಮರವರು ಗೌರವ ಡಾಕ್ಟರೇಟ್ ಪದವಿ ಯನ್ನು ನೀಡಿ ಗೌರವಿಸಿದರು. ಇದು ಇಡೀ ಕರ್ನಾಟಕವೇ ಹೆಮ್ಮೆಪಡುವಂತಹ ಸಾಧನೆಯಾಗಿದೆ.

 

 

ಗಣ್ಯರಿಂದ ಸನ್ಮಾನ

ಪೃಥು ಅವರನ್ನು ಹಲವಾರು ಗಣ್ಯರು ಮತ್ತು ಸಂಸ್ಥೆಗಳು ಗೌರವಿಸಿವೆ. ಅವುಗಳಲ್ಲಿ ಪ್ರಮುಖರು:

  • ಪರಮಪೂಜ್ಯ ಪೇಜಾವರ ಶ್ರೀಗಳು
  • ಗಣಪತಿ ಸಚ್ಚಿದಾನಂದ ಆಶ್ರಮ
  • ವಿಶ್ವ ಹಿಂದೂ ಪರಿಷತ್
  • ವಿಶ್ವ ವಿಪ್ರತ್ರಯೀ ಪರಿಷತ್
  • ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
  • ಮಾಜಿ ಸಚಿವ ಆರ್.ವಿ. ದೇಶಪಾಂಡೆ
  • ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್
  • ಶಾಸಕ ಜಿ.ಟಿ. ದೇವೇಗೌಡ
  • ಶಾಸಕ ಟಿ.ಎಸ್. ಶ್ರೀವತ್ಸ
  • ನಿವೃತ್ತ ನ್ಯಾಯಮೂರ್ತಿ ಜನ್ ಕುಮಾರ್
  • ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ಗಣ್ಯರು.

ಪೋಷಕರ ಪಾತ್ರ

ಪ್ರತಿಯೊಬ್ಬ ಬಾಲ ಪ್ರತಿಭೆಯ ಹಿಂದೆ ಪೋಷಕರ ಪ್ರೋತ್ಸಾಹ ಇರುತ್ತದೆ. ಪೃಥು ಅವರ ತಂದೆ-ತಾಯಿ ಅವರ ಸಹಜ ಪ್ರತಿಭೆಯನ್ನು ಗುರುತಿಸಿ, ಯಾವುದೇ ಒತ್ತಡವಿಲ್ಲದೆ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ನೀಡಿರುವುದು ಅವರ ಸಾಧನೆಗೆ ಪ್ರಮುಖ ಕಾರಣವಾಗಿದೆ.

ಇಂದಿನ ಮಕ್ಕಳಿಗೆ ಮಾದರಿ

ಮೊಬೈಲ್, ಗ್ಯಾಜೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಇಂದಿನ ಕಾಲದಲ್ಲಿ ಪೃಥು ಅವರಂತಹ ಮಕ್ಕಳು:

  • ಸಮಯದ ಸದ್ಬಳಕೆ,
  • ಶಿಸ್ತು,
  • ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು,
  • ನಿರಂತರ ಅಭ್ಯಾಸ,

ಇವುಗಳಿಂದ ವಿಶ್ವ ಮಟ್ಟದಲ್ಲಿ ಹೇಗೆ ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.

ಪೃಥು ಪಿಅದ್ವೈತ್ ಕೇವಲ 6 ವಿಶ್ವ ದಾಖಲೆಗಳ ಸರದಾರನಲ್ಲ.  ಅವನು ಹೊಸ ಭಾರತದ ಪ್ರತಿಭೆಯ ಪ್ರತೀ.

ಅವನ ಸಾಧನೆಗಳು ಸಾವಿರಾರು ಮಕ್ಕಳಿಗೆ ಪ್ರೇರಣೆಯಾಗಿದ್ದು, ಕರ್ನಾಟಕದ ಹೆಸರನ್ನು ಜಗತ್ತಿನ ಮಟ್ಟದಲ್ಲಿ ಎತ್ತಿ ಹಿಡಿದಿವೆ.

ವಯಸ್ಸು ಚಿಕ್ಕದಾದರೂಕನಸುಗಳು ದೊಡ್ಡದಾಗಿದ್ದರೆ ವಿಶ್ವವೇ ನಿಮ್ಮ ಸಾಧನೆಯನ್ನು ಗೌರವಿಸುತ್ತದೆ” – ಇದಕ್ಕೆ ಪೃಥು ಪಿಅದ್ವೈತ್ ಅತ್ಯುತ್ತಮ ಉದಾಹರಣೆ.

ಇಂತಹ ಬಾಲ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಭವಿಷ್ಯ ಮತ್ತಷ್ಟು ಕೀರ್ತಿಗಳಿಂದ ಉಜ್ವಲವಾಗಲಿ ಎಂದು ಹಾರೈಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

        

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ