ಮೇಷದ ವಿಶ್ವಾಮಿತ್ರರಿಂದ ಮೀನದ ಪರಾಶರರವರೆಗೆ… 12 ರಾಶಿಗಳು, 12 ಋಷಿಗಳು ಮತ್ತು 12 ವಿಭಿನ್ನ ವ್ಯಕ್ತಿತ್ವಗಳ ಕುತೂಹಲಕಾರಿ ಹೋಲಿಕೆ
ಭಾರತೀಯ ಪುರಾಣ ಪರಂಪರೆಯಲ್ಲಿ ವಿಶ್ವಾಮಿತ್ರ, ವಶಿಷ್ಠ, ನಾರದ, ಅಗಸ್ತ್ಯ, ಭೃಗು, ಕಶ್ಯಪ, ಗೌತಮ, ಜಮದಗ್ನಿ, ವೇದವ್ಯಾಸ, ಅತ್ರಿ, ಅಂಗೀರಸ ಮತ್ತು ಪರಾಶರ ಮುಂತಾದ ಮಹರ್ಷಿಗಳು ಕೇವಲ ತಪಸ್ವಿಗಳಲ್ಲ. ಪ್ರತಿಯೊಬ್ಬ ಋಷಿಯೂ ಒಂದೊಂದು ವಿಶಿಷ್ಟ ಗುಣ, ಜೀವನದೃಷ್ಟಿ ಮತ್ತು ತತ್ತ್ವದ ಪ್ರತೀಕವಾಗಿ ನಮ್ಮ ಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಶ್ವಾಮಿತ್ರರಲ್ಲಿ ಛಲ ಮತ್ತು ಪರಿವರ್ತನೆ, ವಶಿಷ್ಠರಲ್ಲಿ ಜ್ಞಾನ ಮತ್ತು ಸಂಯಮ, ನಾರದರಲ್ಲ ಸಂವಹನ ಮತ್ತು ಕುತೂಹಲ, ಅಗಸ್ತ್ಯರಲ್ಲಿ ಆಂತರಿಕ ಶಕ್ತಿ, ವ್ಯಾಸರಲ್ಲಿ ಜ್ಞಾನಸಂಪತ್ತು, ಪರಾಶರರಲ್ಲಿ ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಚಿಂತನೆ—ಹೀಗೆ ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಭಿನ್ನ. ಇದೇ ರೀತಿ ವೇದ ಜ್ಯೋತಿಷ್ಯದಲ್ಲಿ 12 ಜನ್ಮರಾಶಿಗಳನ್ನು ಅಗ್ನಿ, ಭೂಮಿ, ವಾಯು ಮತ್ತು ಜಲ ಎಂಬ ನಾಲ್ಕು ತತ್ತ್ವಗಳಾಗಿ ಹಾಗೂ ಚರ, ಸ್ಥಿರ ಮತ್ತು ದ್ವಿಸ್ವಭಾವ ಎಂಬ ಮೂರು ಸ್ವಭಾವಗಳಾಗಿ ವರ್ಗೀಕರಿಸಲಾಗುತ್ತದೆ.
ಹೀಗಾಗಿ ಒಂದು ಕುತೂಹಲಕಾರಿ ಪ್ರಶ್ನೆ ಮೂಡುತ್ತದೆ. “ನಿಮ್ಮ ಜನ್ಮರಾಶಿಯ ಸ್ವಭಾವಕ್ಕೆ ಪುರಾಣದ ಯಾವ ಮಹರ್ಷಿಯ ವ್ಯಕ್ತಿತ್ವ ಹೆಚ್ಚು ಹೋಲುತ್ತದೆ?”
ಇದು ಶಾಸ್ತ್ರೀಯವಾಗಿ ನಿಗದಿಪಡಿಸಿದ ನಿಯಮವಲ್ಲ. ಆದರೆ ಪುರಾಣದ ಋಷಿಗಳ ವ್ಯಕ್ತಿತ್ವ ಮತ್ತು ರಾಶಿಗಳ ಸಾಂಪ್ರದಾಯಿಕ ಗುಣಗಳನ್ನು ಹೋಲಿಸಿ ನೋಡುವ ಒಂದು ಆಸಕ್ತಿದಾಯಕ ಪ್ರಯತ್ನ.
ಮೇಷ ರಾಶಿ – ವಿಶ್ವಾಮಿತ್ರ
ಛಲ, ಧೈರ್ಯ ಮತ್ತು “ಸಾಧಿಸಿಯೇ ತೀರುತ್ತೇನೆ” ಎನ್ನುವ ಮನೋಭಾವ
ಮೇಷ ರಾಶಿ ಅಗ್ನಿ ತತ್ತ್ವದ ಚರ ರಾಶಿ. ಇದರ ಅಧಿಪತಿ ಮಂಗಳ. ವೇಗ, ಧೈರ್ಯ, ಸಾಹಸ, ಮುನ್ನುಗ್ಗುವ ಗುಣ ಮತ್ತು ಸ್ಪರ್ಧಾತ್ಮಕ ಮನೋಭಾವ ಇದರೊಂದಿಗೆ ಜೋಡಿಸಲಾಗುತ್ತದೆ. ಹೀಗಾಗಿ ಮೇಷಕ್ಕೆ ವಿಶ್ವಾಮಿತ್ರರು ಅತ್ಯಂತ ಸೂಕ್ತವಾದ ಸಾಂಕೇತಿಕ ಹೋಲಿಕೆ. ವಿಶ್ವಾಮಿತ್ರರು ಆರಂಭದಲ್ಲಿ ರಾಜರಾಗಿದ್ದವರು. ನಂತರ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಸ್ಥಾನವನ್ನು ಪಡೆಯುವ ಸಂಕಲ್ಪ ಕೈಗೊಂಡರು. ಅವರ ಜೀವನದಲ್ಲಿ ಎದುರಾದ ಅಡೆತಡೆಗಳು ಕಡಿಮೆಯಿರಲಿಲ್ಲ. ಆದರೆ ಗುರಿ ಸಾಧಿಸುವ ಹಠ ಮಾತ್ರ ಕಡಿಮೆಯಾಗಲಿಲ್ಲ.
ಇದೇ ಮೇಷದ ಮನೋಭಾವವನ್ನು ನೆನಪಿಸುತ್ತದೆ. ಒಮ್ಮೆ ಗುರಿ ನಿಗದಿಪಡಿಸಿದರೆ ಹಿಂದೆ ಸರಿಯದಿರುವುದು—ಇದು ನಿಮ್ಮಲ್ಲಿದ್ದರೆ ನಿಮ್ಮೊಳಗೆ ವಿಶ್ವಾಮಿತ್ರನ ಛಲವಿದೆ!
ವೃಷಭ ರಾಶಿ – ವಶಿಷ್ಠ
ಸ್ಥಿರತೆ, ತಾಳ್ಮೆ ಮತ್ತು ಸಂಯಮ
ವೃಷಭವು ಭೂ ತತ್ತ್ವದ ಸ್ಥಿರ ರಾಶಿ. ತಾಳ್ಮೆ, ಸ್ಥಿರತೆ, ನಿಷ್ಠೆ ಮತ್ತು ನಿಧಾನವಾಗಿ ಆದರೆ ಗಟ್ಟಿಯಾಗಿ ಜೀವನ ಕಟ್ಟಿಕೊಳ್ಳುವ ಗುಣ ಇದರೊಂದಿಗೆ ಸಂಬಂಧಿಸಿದೆ. ಇದಕ್ಕೆ ವಶಿಷ್ಠ ಋಷಿಯನ್ನು ಹೋಲಿಸಬಹುದು. ವಶಿಷ್ಠರು ಜ್ಞಾನ, ಸಂಯಮ ಮತ್ತು ಸ್ಥಿರತೆಯ ಪ್ರತೀಕರಾಗಿ ಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ವೃಷಭ ರಾಶಿಯವರು ಸಾಮಾನ್ಯವಾಗಿ ತಕ್ಷಣ ನಿರ್ಧಾರ ಕೈಗೊಳ್ಳುವುದಕ್ಕಿಂತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ಆದರೆ ಒಮ್ಮೆ ನಿರ್ಧಾರ ಮಾಡಿದರೆ ಅದನ್ನು ಬದಲಿಸುವುದು ಸುಲಭವಲ್ಲ.
“ನಿಧಾನವಾದರೂ ನಿಶ್ಚಿತ” ಎಂಬ ಮಾತು ವೃಷಭದ ಸ್ವಭಾವಕ್ಕೆ ಚೆನ್ನಾಗಿ ಹೊಂದುತ್ತದೆ.
ಮಿಥುನ ರಾಶಿ – ನಾರದ
ಮಾತು, ಮಾಹಿತಿ ಮತ್ತು ಕುತೂಹಲದ ರಾಶಿ
ಮಿಥುನವು ವಾಯು ತತ್ತ್ವದ ದ್ವಿಸ್ವಭಾವದ ರಾಶಿ. ಮಾತು, ಸಂವಹನ, ಬುದ್ಧಿವಂತಿಕೆ, ಕುತೂಹಲ ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದರ ಪ್ರಮುಖ ಲಕ್ಷಣಗಳೆಂದು ಜ್ಯೋತಿಷ್ಯ ಪರಂಪರೆ ಹೇಳುತ್ತದೆ. ಹೀಗಾಗಿ ಮಿಥುನಕ್ಕೆ ನಾರದ ಮುನಿ ಬಹಳ ಕುತೂಹಲಕಾರಿ ಹೋಲಿಕೆ.








