`ವೈದ್ಯೋ ನಾರಾಯಣೋ ಹರಿಎಂಬಂತೆ ತಮ್ಮ ಅಮೂಲ್ಯ ವೈದ್ಯಕೀಯ ಸೇವೆಯಿಂದ ಜನಮಾನಸದಲ್ಲಿ ಅಪರೂಪದ ಅನನ್ಯ ಭರವಸೆ ಮೂಡಿಸಿರುವ ಡಾ. ಆಶಾ ರೆಡ್ಡಿಯವರ ಸಂಪೂರ್ಣ ಪರಿಚಯ ಪಡೆಯೋಣವೇ…..?

“ಅವರು ಎಂತಹ ಒಳ್ಳೆಯ ಡಾಕ್ಟರ್‌! ಅವರ ಹತ್ತಿರ ಮಾತಾನಾಡಿದ್ರೆ ಅರ್ಧ ಕಾಯಿಲೆ ವಾಸಿಯಾಗಿಬಿಡುತ್ತೆ. ಅವರ ನಗು ಮುಖ ನೋಡ್ತಾ, ಮೃದು ಮಾತು ಕೇಳ್ತಾ ಇದ್ರೆ ನಮಗೆ ಶಕ್ತಿ ಬಂದುಬಿಡುತ್ತೆ,” ಎಂದು ಡಾಕ್ಟರ್‌ ಹತ್ತಿರ ಹೋಗಿ ಬಂದವರು ಹೇಳುತ್ತಿದ್ದುದನ್ನು ನಾವೆಲ್ಲಾ ಕೇಳಿದ್ದೇವೆ. ನೋವಲ್ಲಿ ಇರುವವರೇ ವೈದ್ಯರ ಹತ್ತಿರ ಹೋಗುವುದು, ಅದರಿಂದ ಅವರ ಒಂದು ಸಾಂತ್ವನದ ಮಾತು ರೋಗಿಗೆ ಸಾಕಷ್ಟು ಬಲವನ್ನು ನೀಡುತ್ತದೆ. ಇದು ನಿಜಕ್ಕೂ ವೈದ್ಯರಿಗೆ ಇರಬೇಕಾದ ಕೌಶಲ್ಯ. ಅಂತಹ ಎಲ್ಲ ಗುಣಗಳನ್ನು ಹೊಂದಿರುವವರು ಡಾ. ಆಶಾ ರೆಡ್ಡಿ. ಅವರೊಡನೆ ಮಾತನಾಡುತ್ತಿದ್ದರೆ ಅವರ ಮಾತುಗಳನ್ನೇ ಕೇಳುತ್ತಿರಬೇಕು ಎನಿಸುತ್ತದೆ. ಇವರೊಬ್ಬ ಅತಿ ಯಶಸ್ವಿ ವೈದ್ಯೆ.

Pi7_Tool_1000394210-01

ತಾಯ್ತನ ಎಷ್ಚು ಮುಖ್ಯ?

ತಾಯ್ತನ ಹೆಣ್ಣಿನ ಜೀವನದ ಬಹು ಮುಖ್ಯ ಹಂತ. ಆ ಸಮಯದಲ್ಲಿ ಅವಳು ಎಲ್ಲರಿಂದಲೂ ಪ್ರೀತಿ ವಿಶ್ವಾಸ ಬಯಸುತ್ತಾಳೆ. ಅದರಲ್ಲೂ ಅವಳನ್ನು ನೋಡು, ತಪಾಸಣೆ ಮಾಡುವ ವೈದ್ಯೆ ಅವಳಿಗೆ ದೇವರ ಸಮಾನ. ಆದ್ದರಿಂದ ಸರಿಯಾದ ಡಾಕ್ಟರ್‌ ನ್ನು ಆರಿಸುವುದು ಬಹಳ ಮುಖ್ಯ. ಹೇಳಬೇಕೆಂದರೆ ಅದು ನಮ್ಮ ಜೀವನ ಮರಣದ ಪ್ರಶ್ನೆ. ಆಶಾ ಚಿಕಿತ್ಸೆ ನೀಡಿದ ಪೇಶೆಂಟ್‌ ಒಬ್ಬರು ಹೇಳಿದ ಮಾತು “ನಾನು ಬಸುರಿಯಾಗಿದ್ದಾಗ ನನಗೆ 36 ವರ್ಷ, ನನಗೆ ಮಧುಮೇಹ ಇತ್ತು. ಸಾಮಾನ್ಯವಾಗಿ ಬಸುರಿಯರಿಗೆ ಆ ಸಮಯದಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ. ಬೇರೆ ಯಾರಾದರೂ ಡಾಕ್ಟರ್‌ ಆಗಿದ್ದರೆ ಖಂಡಿತ ಸಿಸೇರಿಯನ್ ಮಾಡಿಬಿಡುತ್ತಿದ್ದರು. ಆದರೆ ಡಾ. ಆಶಾ ಬಹಳ ಸಹನೆಯಿಂದ ನನಗೆ ಧೈರ್ಯ ನೀಡಿ, ಸಾಮಾನ್ಯ ಅಂದರೆ ನಾರ್ಮಲ್ ಡೆಲಿವರಿಯನ್ನೇ ಮಾಡಿಸಿದರು.

“ಪ್ರೆಗ್ನೆನ್ಸಿಯಲ್ಲಿ ನನ್ನ ತಪಾಸಣೆಗೆ ಬರುವಾಗಲೂ ಅಷ್ಟೆ, ಬಹಳ ಸಂಯಮದಿಂದ ನಡೆದುಕೊಳ್ಳುತ್ತಿದ್ದರು. ನಾನು 30 ಕಿ.ಮೀ. ದೂರದಿಂದ ಬರುತ್ತಿದ್ದೆ. ನಿಜಕ್ಕೂ ಅದು ಸಾರ್ಥಕವೆನಿಸಿತು. ಈಗ ನನ್ನ ಮಗನಿಗೆ ನಾಲ್ಕು ವರ್ಷ ಆರೋಗ್ಯವಾಗಿದ್ದಾನೆ.”

Pi7_Tool_1000396733-01

ಹಣ ಇವರ ಆದ್ಯತೆ ಅಲ್ಲ

ಆಶಾರ ಹುಟ್ಟು ಸ್ಥಳ ದಾವಣಗೆರೆಯ ಹತ್ತಿರದ ಒಂದು ಹಳ್ಳಿ. ಅವರಿಗೆ ಡಾಕ್ಟರ್‌ ಆಗುವ ಅಭಿಪ್ರಾಯವೇ ಇರಲಿಲ್ಲವಂತೆ. ಲಾಯರ್ ಅಥವಾ ಪತ್ರಕರ್ತೆಯಾಗ ಬೇಕೆನ್ನುವುದು ಅವರ ಆಸೆಯಾಗಿತ್ತಂತೆ. ತಂದೆ ಎಂಜಿನಿಯರ್‌ ಮತ್ತು ತಾಯಿ ಹೆಸರಾಂತ ವೈದ್ಯರು. ಆ ಪ್ರೇರಣೆಯಿಂದಲೇ ಆಶಾ ಸಹ ವೈದ್ಯರಾಗಿರಬೇಕು. ಆಶಾ ಮೊದಲು ಎಂ.ಬಿ.ಬಿ.ಎಸ್‌ ಓದಿ ನಂತರ ಪ್ರಸೂತಿ ತಜ್ಞೆಯಾಗಿ ನಂತರ ಕೃತಕ ಗರ್ಭಧಾರಣೆಯ ವಿಷಯದಲ್ಲಿ ವಿಶೇಷ ತಜ್ಞೆಯಾಗಿ (ಸೂಪರ್‌ ಸ್ಪೆಷಾಲಿಟಿ) ಪ್ರಾವಿಣ್ಯತೆ ಪಡೆದಿದ್ದಾರೆ. ಮಕ್ಕಳಿಲ್ಲದ ಅನೇಕ ದಂಪತಿಗಳ ಜೀವನದಲ್ಲಿ ಅವರಿಗೆ ಸಂತಾನ ಭಾಗ್ಯದ ವರ ಪಡೆಯಲು ಚಿಕಿತ್ಸೆ ನೀಡಿದ್ದಾರೆ. ಬಹಳಷ್ಟು ಬಾರಿ ಇವರು ಚಿಕಿತ್ಸೆಗೆ ಪಡೆಯಬೇಕಾದ ಶುಲ್ಕವನ್ನು ಆಶಾ ಇನ್ಛಿನೈಟ್‌ ಸಂಸ್ಥೆಗೆ ದೇಣಿಗೆ ನೀಡಲು ಹೇಳುತ್ತಾರೆ. ಸಂಸ್ಥೆಗೆ ವಾಸೆಂಟಿಯರ್‌ ಆಗಿ ಸೇವೆ ಸಲ್ಲಿಸಲು ಹೇಳುತ್ತಾರೆ. ಹಣಕ್ಕೆ ಪ್ರಾಮುಖ್ಯತೆ ಕೊಡದ ಅಪರೂಪದ ವೈದ್ಯರಲ್ಲಿ ಇವರೂ ಒಬ್ಬರು ಎನ್ನಬಹುದು. ಅವರನ್ನು ನೋಡಲು ಬರುವ ರೋಗಿಗಳ ಜೊತೆ ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.

Pi7_Tool_IMG-20240207-WA0137-1

ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ

ಆಶಾರ ತಾಯಿ ತಂದೆಯರಿಗೆ ಇಬ್ಬರು ಹೆಣ್ಣುಮಕ್ಕಳು. ಇವರ ತಂಗಿ ಡಾ. ವಿಜಯಾ ದೀಪ್‌. ಅವರೂ ಸಹ ಒಳ್ಳೆಯ ವಿದ್ಯಾವಂತೆ. ಮೈಕ್ರೋ ಬಯಾಲಜಿಯಲ್ಲಿ ಪಿ.ಎಚ್‌.ಡಿ. ಪಡೆದಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ಯಾವುದರಲ್ಲೂ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆಸಿದ್ದಾರೆ ಎನ್ನುವುದು ಆಶಾರ ಮಾತು. ಆ ಮಕ್ಕಳೂ ಸಹ ಯಾವುದೇ ಗಂಡು ಮಕ್ಕಳಿಗೆ ಸಾಟಿ ಇಲ್ಲದಂತೆ ತಾಯಿ ತಂದೆಯರನ್ನು ನೋಡಿಕೊಳ್ಳುತ್ತಿದ್ದಾರೆ.

ತಂದೆಯ 80ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಿದರು. ಅವರ ಹುಟ್ಟೂರಿಗೆ ಹೋಗಿ ಒಂದು ದೊಡ್ಡ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ನಡೆಸಿದರು. ಆ ಊರಿನ ಜನ ಬಹಳ ಸಂತೋಷಪಟ್ಟರಂತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಗಂಡು ಮಗನಿಗೂ ಕಡಿಮೆ ಇಲ್ಲ ಎನ್ನುವುದನ್ನು ರೂಪಿಸಿದ್ದಾರೆ. ಆಗಾಗ ತಮ್ಮ ತಂದೆಯ ಹುಟ್ಟೂರಿಗೆ ಹೋಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿರುತ್ತಾರೆ. ಶಾಲೆಗಳಿಗೆ ಹೋಗಿ ಹೆಣ್ಣುಮಕ್ಕಳಿಗೆ ಅಂಗಾಂಗಗಳ ಶುಚಿತ್ವ ಹಾಗೂ ಅವರಿಗೆ ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ ನ ಬಗ್ಗೆ ತಿಳಿವಳಿಕೆ ನೀಡುವ ತರಗತಿಗಳನ್ನು ನಡೆಸುತ್ತಾರೆ.

ದೇಶ ಮತ್ತು ಕುಟುಂಬದ ಬಗ್ಗೆ ಪ್ರೇಮ

ಇವರು ತಜ್ಞ ವೈದ್ಯರಾಗಿ ಇಂಗ್ಲೆಂಡಿನಲ್ಲಿ ಬಹಳ ಒಳ್ಳೆಯ ಆಸ್ಪತ್ರೆಯಲ್ಲಿ ಉದ್ಯೋಗ ಮಾಡುತ್ತಿದ್ದರು, ಅಲ್ಲಿಯೇ ನೆಲೆಸಿದ್ದರು. ಬಹಳ ಸುಖಕರ ಮತ್ತು ಆರಾಮದಾಯಕ ಜೀವನ ನಡೆಸುತ್ತಿದ್ದರು. ಆದರೆ ತಾಯಿ ತಂದೆಯರ ಜೊತೆ ಇದ್ದು, ತಮ್ಮ ದೇಶದಲ್ಲೇ ಸೇವೆ ಮಾಡಬೇಕೆಂಬ ಮನಸ್ಸಿನಿಂದ ಭಾರತಕ್ಕೆ ಮರಳಿ ಬಂದರು. ನಿಜಕ್ಕೂ ಇಂತಹ ಸೇವಾ ಮನೋಭಾವದ ವೈದ್ಯರ ಅಗತ್ಯ ನಮ್ಮ ದೇಶ ಮತ್ತು ಸಮಾಜಕ್ಕಿದೆ.

ಸಾಧನೆ ಮತ್ತು ಪ್ರಶಸ್ತಿ ಪುರಸ್ಕಾರಗಳು

ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸ. ಅದರಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಲು ಕಾಂಬೋಡಿಯಾಗೆ ಹೋಗಿದ್ದರು. ಇವರಿಗೆ ಟ್ರೆಕಿಂಗ್‌ ಬಹಳ ಪ್ರಿಯ ಹೌದು. ಎಲ್ಲಾ ಒಳ್ಳೆಯ ಹವ್ಯಾಸ ಮತ್ತು ಮನಸ್ಸುಗಳನ್ನು ಹೊಂದಿರುವುದರಿಂದೋ ಏನೋ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.

ಅನೇಕ ವೈದ್ಯಕೀಯ ಸಮ್ಮೇಳನಗಳಲ್ಲಿ ಮುಖ್ಯ ಭಾಷಣಕಾರರಾಗಿ ಉತ್ತಮ ಭಾಷಣವನ್ನು ನೀಡಿದ್ದಾರೆ.

ಸೇಫ್‌ ಮದರ್‌ ಹುಡ್‌ ಬಗ್ಗೆ ಅನೇಕ ಕಡೆ ಉಪನ್ಯಾಸ ನೀಡಿದ್ದಾರೆ.

ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಿನ ಶೈಕ್ಷಣಿಕ ಅನುಭವವನ್ನು ಪಡೆದಿದ್ದಾರೆ.

ನ್ಯೂಯಾರ್ಕಿನ ಸನ್ನಿ ಡೌನ್‌ ಸ್ಟೇಟ್‌ ವೈದ್ಯಕೀಯ ಕೇಂದ್ರದಿಂದ ರಿಪ್ರೊಡಕ್ಟಿವ್ ‌ಎಂಡೋಕ್ರೈನಾಲಜಿ ಹಾಗೂ ಇನ್ಛರ್ಟಿಲಿಟಿ ಮತ್ತು ಗೈನಿಕ್‌ ಲ್ಯಾಪ್ರೋಸ್ಕೊಪಿಕ್‌ ಸರ್ಜರಿಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ.

ಜರ್ಮನಿಯ ಗ್ರೆಫ್‌ ಸ್ವೆಲ್ಡಾ ವಿಶ್ವವಿದ್ಯಾಲಯ ಮತ್ತು ಯು.ಕೆ.ಯ ರಾಯ್‌ ಫ್ರೀ ಆಸ್ಪತ್ರೆಯಲ್ಲಿ ಗೈನಕಾಲಜಿಕ್‌ ಎಂಡೊಸ್ಕೊಪಿ ಮತ್ತು ರಿಪ್ರೊಡಕ್ಟಿವ್ ‌ಟೆಕ್ನಾಲಜಿಯಲ್ಲಿ ಪಿ.ಜಿ. ಡಿಪ್ಲೋಮಾ ಪಡೆದಿದ್ದಾರೆ.

ಯು.ಕೆ.ಯ ಬ್ರಿಟಿಷ್‌ ಅಸೋಸಿಯೇಶನ್‌ ಆಫ್‌ಫಿಸಿಶಿಯನ್ಸ್ ಆಫ್‌ ಇಂಡಿಯನ್‌ ಆರಿಜಿನ್‌ ಸದಸ್ಯರಾಗಿದ್ದಾರೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ನಿರ್ವಂಚನೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

`ಸಂತೋಷ ಎನ್ನುವುದು ಶಾಶ್ವತವಲ್ಲ, ಆದ್ದರಿಂದ ಬದುಕನ್ನು ನಗುನಗುತ್ತಾ ಅನುಭವಿಸಿಬಿಡಿ. ದುಃಖವಾದರೂ ಅಷ್ಟೇ ಅದು ಮರೆಯಾಗುವವರೆಗೂ ಎದುರಿಸಿ, ಜೀವನ ಶಾಶ್ವತವಲ್ಲ. ಎಲ್ಲರೂ ಒಂದು ದಿನ ಹೋಗಲೇಬೇಕು. ಆದ್ದರಿಂದ ನೀವು ಮಾಡುವ ಕೆಲಸ ನಿಮಗೆ ಮತ್ತು ಇತರರಿಗೂ ಸಂತೋಷವನ್ನು ನೀಡಬೇಕು,’ ಎನ್ನುವುದು ಆಶಾರ ಮನದ ಮಾತು.

ಈ ಆದರ್ಶ ಮಹಿಳೆಯನ್ನು ಮಾತಾನಾಡಿಸಿದಾಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನದಲ್ಲಿ ಆಶಾಭಾವ ಮೂಡುತ್ತದೆ. ಬೆಳಕಿನ ಕಿರಣ ಹೊರ ಹೊಮ್ಮುತ್ತದೆ. `ಆಸೆಯ ಭಾವ ಒಲವಿನ ಜೀವ’ದ ಮಹಿಳೆಯ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ