ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಮಹಾನಗರ. ಒಂದು ಕಡೆ ಲಕ್ಷಾಂತರ ಜನರು ಸ್ವಂತ ಮನೆಯ ಕನಸು ಕಾಣುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ನಿವೇಶನಗಳು ವರ್ಷಾನುಗಟ್ಟಲೆ ಖಾಲಿಯಾಗಿಯೇ ಉಳಿದಿವೆ. ಇಂತಹ ಖಾಲಿ ಜಾಗಗಳು ಇಂದು ಕೇವಲ ಹೂಡಿಕೆ ಆಸ್ತಿಗಳಾಗಿರದೆ, ಕಸದ ತೊಟ್ಟಿಗಳಾಗಿ, ಕಳೆ–ಗಿಡಗಂಟಿಗಳ ತಾಣವಾಗಿ, ಸೊಳ್ಳೆ ಮತ್ತು ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗುತ್ತಿರುವುದು ವಾಸ್ತವ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಹಿಂದಿನ ಸಿಐಟಿಬಿ (CITB), ಕಾರ್ಪೊರೇಷನ್ ಹಾಗೂ ವಿವಿಧ ಸಹಕಾರ ಸಂಘಗಳಿಂದ ನಿವೇಶನ ಪಡೆದವರು ಐದು ವರ್ಷಗಳೊಳಗೆ ಮನೆ ನಿರ್ಮಿಸಬೇಕು. ಇಲ್ಲವಾದರೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವುದು ಅಥವಾ ನಿವೇಶನವನ್ನೇ ಸರ್ಕಾರ ವಾಪಸ್ ಪಡೆಯುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದ ಹಿಂದಿನ ಉದ್ದೇಶವೇನು?

ಹೆಬ್ಬಾಳ ಜಂಕ್ಷನ್ನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ನಗರದಲ್ಲಿ ಖಾಲಿ ನಿವೇಶನಗಳೇ ಅಕ್ರಮ ಕಸ ಸುರಿಯುವ ಪ್ರಮುಖ ತಾಣಗಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ನಿವೇಶನ ನೀಡುವುದು ಮನೆ ನಿರ್ಮಿಸಿಕೊಳ್ಳಲೆಂದೇ ಹೊರತು ದಶಕಗಳ ಕಾಲ ಖಾಲಿ ಇಟ್ಟು ಬೆಲೆ ಏರಿಕೆಗೆ ಕಾಯಲು ಅಲ್ಲ. ಕೆಲವರು 20, 30, 40 ವರ್ಷಗಳಾದರೂ ಮನೆ ಕಟ್ಟಿಲ್ಲ. ಅಗತ್ಯವಿದ್ದರೆ ಅವರು ಪಾವತಿಸಿದ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿ ನಿವೇಶನವನ್ನು ಸರ್ಕಾರ ವಾಪಸ್ ಪಡೆಯಲಿದೆ. ಎಂಬ ಅವರ ಮಾತು ನಗರಾಭಿವೃದ್ಧಿಯ ಕುರಿತು ಸರ್ಕಾರದ ಗಂಭೀರ ನಿಲುವನ್ನು ತೋರಿಸುತ್ತದೆ.
ಖಾಲಿ ನಿವೇಶನ… ಆದರೆ ಹೊಣೆಗಾರಿಕೆ ಯಾರದ್ದು?

ಅನೇಕರು “ನಮ್ಮ ಜಾಗದಲ್ಲಿ ನಾವು ಕಸ ಹಾಕಿಲ್ಲ” ಎಂದು ಹೇಳಬಹುದು. ಆದರೆ ಸಾರ್ವಜನಿಕ ಸ್ಥಳದಂತೆ ಬಿಟ್ಟಿರುವ ಖಾಲಿ ನಿವೇಶನದಲ್ಲಿ ಇತರರು ಕಸ ಸುರಿದರೂ ಅದರ ಹೊಣೆ ಮಾಲೀಕರಿಗೂ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಕನಿಷ್ಠ ಕಾಂಪೌಂಡ್ ನಿರ್ಮಿಸುವುದು, ಜಾಗವನ್ನು ಸ್ವಚ್ಛವಾಗಿಡುವುದು ಮತ್ತು ಅಕ್ರಮ ಕಸ ಸುರಿಯುವುದನ್ನು ತಡೆಯುವುದು ನಿವೇಶನ ಮಾಲೀಕರ ಕರ್ತವ್ಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸ್ವಚ್ಛ ಬೆಂಗಳೂರು – ಸರ್ಕಾರದಷ್ಟೇ ನಾಗರಿಕರ ಜವಾಬ್ದಾರಿ

ಮಹಾತ್ಮ ಗಾಂಧೀಜಿ ಹೇಳಿದ “ಸ್ವಚ್ಛತೆಯೇ ದೇವರು” ಎಂಬ ಸಂದೇಶವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, “ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರಿನ ಜನರ ಆಸ್ತಿ. ಅದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ಕರೆ ನೀಡಿದ್ದಾರೆ. ಅದೇ ವೇಳೆ ಅನುಮತಿ ಇಲ್ಲದೆ ನಗರದಲ್ಲಿ ಕಸ ಸುರಿಯುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಮಸ್ಯೆಯ ಮೂಲ ಎಲ್ಲಿದೆ?
ಇಂದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕಾಣುವ ಕಸದ ಸಮಸ್ಯೆಗೆ ಕೇವಲ ಸರ್ಕಾರವನ್ನೇ ದೂರುವುದು ನ್ಯಾಯವಲ್ಲ.
- ಖಾಲಿ ನಿವೇಶನಗಳನ್ನು ನಿರ್ವಹಿಸದ ಮಾಲೀಕರು,
- ಎಲ್ಲೆಂದರಲ್ಲಿ ಕಸ ಎಸೆಯುವ ನಾಗರಿಕರು,
- ನಿಯಮ ಉಲ್ಲಂಘಿಸುವ ವ್ಯಾಪಾರಿಗಳು,
- ಮತ್ತು ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು…
ಇವರೆಲ್ಲರೂ ಈ ಸಮಸ್ಯೆಯ ಪಾಲುದಾರರು. ಆದ್ದರಿಂದ ಪರಿಹಾರವೂ ಎಲ್ಲರ ಸಹಭಾಗಿತ್ವದಿಂದಲೇ ಸಾಧ್ಯ.
ಸರ್ಕಾರದ ಕರ್ತವ್ಯ ಆಡಳಿತ ನಡೆಸುವುದೇ ಹೊರತು, ಜನರ ಆಸ್ತಿಯ ಮೇಲೆ ಹಿಡಿತ ಸಾಧಿಸುವುದಲ್ಲ!
ಹಾಗೆ ನೋಡಿದರೆ ಸರ್ಕಾರ ಯಾವುದೇ ನಿವೇಶನವನ್ನು ಉಚಿತವಾಗಿ ನೀಡುವುದಿಲ್ಲ. ಆಯಾ ಕಾಲದ ಮಾರುಕಟ್ಟೆ ದರಕ್ಕೆ ತಕ್ಕಂತೆ ಹಣ ಪಡೆದು ನಿವೇಶನಗಳನ್ನು ಮಾರಾಟ ಮಾಡುತ್ತದೆ. ಅಷ್ಟೇ ಅಲ್ಲ, ನಿವೇಶನ ಖಾಲಿ ಇದ್ದರೂ ಪ್ರತಿವರ್ಷ ತಪ್ಪದೇ ಆಸ್ತಿ ತೆರಿಗೆ ವಸೂಲಿ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಸ ನಿರ್ವಹಣೆ ಹೆಸರಿನಲ್ಲಿ ಪ್ರತ್ಯೇಕ ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ಹೀಗಿರುವಾಗ, “





