ಬೆಳಗಾವಿ ಕರ್ನಾಟಕದ ಸಾಂಸ್ಕೃತಿಕ ಸಂಪದ್ಭರಿತ ಜಿಲ್ಲೆಗಳಲ್ಲೊಂದು. ಉತ್ತರಕ್ಕೆ ಮುಂಬೈಯಿಂದ 500 ಕಿ.ಮೀ. ದಕ್ಷಿಣಕ್ಕೆ ಹುಬ್ಬಳ್ಳಿಯಿಂದ 100 ಕಿ.ಮೀ. ಪೂರ್ವಕ್ಕೆ ಬೆಂಗಳೂರಿನಿಂದ 500 ಕಿ.ಮೀ. ಪಶ್ಚಿಮಕ್ಕೆ ಪಣಜಿಯಿಂದ (ಗೋವಾ) 150 ಕಿ.ಮೀ. ಬೆಂಗಳೂರಿನಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಬೆಳಗಾವಿ ಮೂಲಕ ಹಾದು ಹೋಗುವುದು.
ರೈಲು ಸಂಪರ್ಕ ಹೊಂದಿರುವ ಬೆಳಗಾವಿ, ಸಾಂಬ್ರಾದಲ್ಲಿ ವಿಮಾನ ನಿಲ್ದಾಣವನ್ನೂ ಹೊಂದಿದೆ. ಉತ್ತರ ಕರ್ನಾಟಕದ ಉಕ್ಕಿನ ಕೋಟೆ ಎಂದೇ ಹೆಸರಾಗಿರುವ ಮಲೆನಾಡಿನ ಪ್ರಾಕೃತಿಕ ಸಿರಿಯನ್ನು ಹೊಂದಿದೆ. ತನ್ನ ಮಡಿಲಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಅಡಗಿಸಿಕೊಂಡ ಬೆಳಗಾವಿಯಲ್ಲಿ ಕೋಟೆ, ಕೋಟೆಯ ಕೆರೆ, ದುರ್ಗ ದೇವಾಲಯ, ಕೆ.ಎಲ್.ಇ. ಸಂಸ್ಥೆ, ರಾಮಕೃಷ್ಣ ಆಶ್ರಮ, ಕುಮಾರ ಗಂಧರ್ವ ರಂಗಮಂದಿರ, ಕಮಲ ಬಸದಿ, ಮಿಲಿಟರಿ ಮಹದೇವ ಮಂದಿರ, ಹಿಂಡಲಗಾ ಕಾರಾಗೃಹ, ಕಪಿಲೇಶ್ವರ ದೇಗುಲ, ಕನ್ನಡ ಸಾಹಿತ್ಯ ಭವನ ಒಂದೇ ಎರಡೇ ಹಲವು ಹತ್ತು ವಿಶಿಷ್ಟ ತಾಣಗಳನ್ನು ಹೊಂದಿದ ಬೆಳಗಾವಿಗೆ 2012ರಲ್ಲಿ ಸುವರ್ಣಸೌಧ ಲೋಕಾರ್ಪಣೆಗೊಳ್ಳುವ ಮೂಲಕ ಮತ್ತೊಂದು ದಾಖಲಾರ್ಹ ಸ್ಥಳದೊಂದಿಗೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.
ಸಮಗ್ರ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ 50 ವರ್ಷಗಳ ಸವಿನೆನಪಿಗಾಗಿ ರಾಜ್ಯದ ಉತ್ತರದ ತುತ್ತತುದಿಯಲ್ಲಿರುವ ಕುಂದಾನಗರಿಯಲ್ಲಿ ನಿರ್ಮಿಸಲಾಗಿರುವ ಸುವರ್ಣಸೌಧ ಲೋಕಾರ್ಪಣೆಗೊಂಡಿದೆ. ಇದನ್ನು 11ನೇ ಅಕ್ಟೋಬರ್ 2012ರಂದು ಪ್ರಣವ್ ಮುಖರ್ಜಿ ಉದ್ಘಾಟಿಸಿದರು.
ರಾಜ್ಯದ ಹೆಮ್ಮೆಯ ಸಂಕೇತವಾಗುವ ಮೂಲಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಇದು ಸಾರಿ ಹೇಳುವಂತಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸಲೇಬೇಕು ಎಂಬ ಈ ಭಾಗದ ಬಹುದಿನಗಳ ಧ್ವನಿಗೆ ಕೊನೆಗೂ ಶಾಶ್ವತ ಪರಿಹಾರ ಸುವರ್ಣ ವಿಧಾನಸೌಧದ ಮೂಲಕ ಸಿಕ್ಕಿದೆ. 2006 ಸೆಪ್ಟೆಂಬರ್ 25-29ರವರೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಇಂತಹ ದೊಡ್ಡ ಕಟ್ಟಡ ನಿರ್ಮಾಣದ ಕನಸು ಮೊಳಕೊಡೆಯಿತು.
ರಾಜ್ಯ ಸರ್ಕಾರ 2006ರ ಸೆಪ್ಟೆಂಬರ್ 25-29ರವರೆಗೆ ವಿಧಾನಮಂಡಲ ಅಧಿವೇಶನವನ್ನು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆಸಿತು. ಉತ್ತರ ಕರ್ನಾಟಕದ ಇತಿಹಾಸದಲ್ಲಿಯೇ ಮೈಲಿಗಲ್ಲಾದ ಪ್ರಥಮ ಅಧಿವೇಶನದಲ್ಲಿ ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು. ಅದರಂತೆ ಅಧಿವೇಶನ ನಡೆಸಲು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ ಸುಸಜ್ಜಿತ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಯಿತು.
ವಿಧಾನಮಂಡಲ ಅಧಿವೇಶನದ ತೀರ್ಮಾನವನ್ನು ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕೈಗೊಂಡಿದ್ದರಿಂದ ಈ ಕಟ್ಟಡಕ್ಕೆ `ಸುವರ್ಣ ವಿಧಾನಸೌಧ' ಎಂದು ಹೆಸರಿಡಲಾಯಿತು. ವಿಧಾನಮಂಡಲದ ತೀರ್ಮಾನದಂತೆ ಟಿಳಕಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು. ಆ ಜಾಗ ನಗರ ಮಧ್ಯದಲ್ಲಿರುವುದರಿಂದ ಅನೇಕರು ಅಲ್ಲಿ ಸುವರ್ಣಸೌಧ ನಿರ್ಮಿಸದೇ ಬೇರೊಂದು ಸ್ಥಳದಲ್ಲಿ ನಿರ್ಮಿಸುವಂತೆ ಕೋರಿದರು.
ನಂತರ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಹಲಗಾಬಸ್ತಾಡ ಪ್ರದೇಶದ ಗುಡ್ಡವನ್ನು ಈ ಕಟ್ಟಡಕ್ಕೆ ಆಯ್ಕೆ ಮಾಡಲಾಯಿತು. 2009ರಲ್ಲಿ ಎರಡನೇ ಬಾರಿಗೆ ವಿಧಾನಮಂಡಲದ ಅಧಿವೇಶನ ನಡೆದ ಸಂದರ್ಭದಲ್ಲಿ ಸುವರ್ಣಸೌಧ