ಟಿಬೆಟಿಯನ್ ನಿರಾಶ್ರಿತರ ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ನೆಲೆವೀಡು ಮುಂಡಗೋಡ. ಇದರ ಬಗ್ಗೆ ವಿವರವಾಗಿ ತಿಳಿಯೋಣವೇ....?
ಕರ್ನಾಟಕದ ಮಿನಿ ಟಿಬೆಟ್ ಎಂದೇ ಹೆಸರುವಾಸಿ ಆಗಿರುವ ಮುಂಡಗೋಡ ಟಿಬೆಟಿಯನ್ ಜನರ ಜೀವನ ಹಾಗೂ ಸಂಸ್ಕೃತಿಯ ಭಂಡಾರವಾಗಿದೆ. ಈ ಪುಟ್ಟದಾದ ಮುಂಡಗೋಡ ಪಟ್ಟಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಕಾರವಾರ ಜಿಲ್ಲೆಯಿಂದ 132 ಕಿ.ಮೀ. ದೂರದಲ್ಲಿದೆ. ಈ ಸುಂದರವಾದ ಮುಂಡಗೋಡ ಪಟ್ಟಣ ಭತ್ತದ ಗದ್ದೆಗಳಿಂದ ಕೂಡಿದ್ದು, ನೋಡುಗರ ಕಣ್ಣಿಗೆ ಆನಂದವನ್ನು ಉಂಟು ಮಾಡುತ್ತದೆ.
ಇಲ್ಲಿ ನಾವು ಟಿಬೆಟಿಯನ್ ಸನ್ಯಾಸಿಗಳನ್ನು ವರ್ಣರಂಜಿತ ನಿಲುವಂಗಿಯಲ್ಲಿ ಮತ್ತು ಗ್ರಾಮಸ್ಥರನ್ನು ಸಾಂಪ್ರದಾಯಿಕ ಉಡುಪಿನಲ್ಲಿ ನೋಡಬಹುದು. ಇಲ್ಲಿರುವ ಹೆಚ್ಚು ಕುಟುಂಬಗಳು ತಮ್ಮ ಜೀವನಕ್ಕಾಗಿ ಸಣ್ಣ ಕೃಷಿ, ರೆಸ್ಟೋರೆಂಟ್, ಸಿಹಿ ತಿನಿಸುಗಳ ಅಂಗಡಿ, ಬುಟ್ಟಿ ಹೆಣೆಯುವುದು, ಸ್ವೆಟರ್ ಮಾರಾಟ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ವಸಾಹತುಗಳ ಒಳಗಿನ ಪುಟ್ಟ ಟೌನ್ ಶಿಪ್ ಟಿಬೆಟಿಯನ್ಜನರು ನಡೆಸುವ ಸಣ್ಣ ಅಂಗಡಿಗಳು ಹಾಗೂ ರೆಸ್ಟೋರೆಂಟ್ ಗಳಿಂದ ತುಂಬಿರುತ್ತವೆ. ಇಲ್ಲಿ ಸಾಂಪ್ರದಾಯಿಕ ಟಿಬೆಟಿಯನ್ ಶೈಲಿಯ ಆಹಾರವಾದ ನೂಡಲ್ಸ್, ಸೂಪ್ ಹಾಗೂ ರುಚಿಕರ ಮೋಮೋಸ್ ದೊರೆಯುತ್ತವೆ.

ಗೋಲ್ಡನ್ ಟೆಂಪಲ್ ಇಲ್ಲಿನ ಪ್ರವಾಸಿಗರ ಅತಿ ಆಕರ್ಷಣೀಯ ಕೇಂದ್ರಬಿಂದುವಾದ ಬುದ್ಧನ ಗೋಲ್ಡನ್ ಟೆಂಪಲ್ ನೋಡಲೇಬೇಕಾದ ಸ್ಥಳ. ದೇವಾಲಯವನ್ನು ಕಲಾತ್ಮಕವಾಗಿ ರಚಿಸಲಾಗಿದ್ದು, ಒಳ ಪ್ರವೇಶಿಸುತ್ತಿದ್ದಂತೆ ನಾವು ಟಿಬೆಟ್ ನಲ್ಲಿ ಇರುವಂತೆ ಭಾಸವಾಗುತ್ತದೆ ಹಾಗೂ ಮನಸ್ಸಿಗೆ ಒಂದು ರೀತಿಯ ಸಮಾಧಾನ ಮತ್ತು ಶಾಂತಿಯ ಅನುಭವ ಆಗುತ್ತದೆ. ದೇವಾಲಯದ ಒಳಭಾಗದಲ್ಲಿ ನಾವು ಬಂಗಾರ ಬಣ್ಣ ಹೊಂದಿರುವ ಶಾಂತಿಪ್ರಿಯ ಬುದ್ಧನ ಹಾಗೂ ಟಿಬೆಟಿಯನ್ ದೇವತೆಗಳ ಪ್ರತಿಮೆಗಳನ್ನು ನೋಡಬಹುದು. ಹಾಗೆಯೇ ಔಷಧಿಯ ಕಲಶವನ್ನು ಹಿಡಿದಿರುವ ಮೆಡಿಸಿನ್ ಬುದ್ಧನ ವಿಗ್ರಹವನ್ನು ನೋಡಬಹುದು.

ದೇವಾಲಯದ ಹೊರಾಂಗಣದಲ್ಲಿ ದೊಡ್ಡದಾದ ಗಂಟೆ ಇದ್ದು ಇಲ್ಲಿನ ಬೌದ್ಧ ಭಿಕ್ಕುಗಳು ಈ ಗಂಟೆ ಬಾರಿಸುವುದರ ಮೂಲಕ ತಮ್ಮ ದಿನ ನಿತ್ಯದ ಪೂಜೆಯನ್ನು ಪ್ರಾರಂಭಿಸುವರು. ಇಲ್ಲಿ 70% ರಷ್ಟು ಬೌದ್ಧ ಸನ್ಯಾಸಿಗಳಿದ್ದು 30% ರಷ್ಟು ಸಾಮಾನ್ಯ ಜನರಿದ್ದಾರೆ. ಈ ದೇವಾಲಯದಲ್ಲಿ ನಾವು ನಮ್ಮ ಮನಸ್ಸಿನಲ್ಲಿರುವ ಇಚ್ಛೆಯನ್ನು ಬೇಡಿಕೊಂಡು ಮೇಣದ ಬತ್ತಿಯನ್ನು ಬೆಳಗಿಸಿದರೆ ನಮ್ಮ ಇಷ್ಟಾರ್ಥ ಪೂರೈಸುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿನ ಗೋಡೆಗಳ ಮೇಲೆ ಟಿಬೆಟಿಯನ್ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಟಿಬೆಟಿಯನ್ ದೇವತೆ ಹಾಗೂ ದುಷ್ಟಶಕ್ತಿಯನ್ನು ವರ್ಣರಂಜಿತವಾಗಿ ಚಿತ್ರೀಕರಿಸಲಾಗಿದೆ. ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿ ಬೌದ್ಧ ಸನ್ಯಾಸಿಗಳು ಮತ್ತು ವಿದ್ಯಾರ್ಥಿಗಳು ಮುಂಜಾನೆ ಹಾಗೂ ಮಧ್ಯಾಹ್ನ ಮಂತ್ರ ಪಠಿಸಿ ಪೂಜೆ ಸಲ್ಲಿಸುವ ವಿಧಾನವಿದೆ.

ಮುಂಡಗೋಡಕ್ಕೆ ಹೋಗುವುದು ಹೇಗೆ?
ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಇದು ಸುಮಾರು 54 ಕಿ.ಮೀ. ದೂರದಲ್ಲಿದೆ. ನೀವು ಹುಬ್ಬಳ್ಳಿಯಿಂದ ಹೋಗುವುದಾದರೆ ಸುಮಾರು 49 ಕಿ.ಮೀ. ದೂರದಲ್ಲಿದೆ ಹಾಗೂ ಕಾರವಾರ ಜಿಲ್ಲೆಯಿಂದ 132 ಕಿ.ಮೀ. ದೂರದಲ್ಲಿದೆ. ನೀವು ಖಾಸಗಿ ವಾಹನ ಅಥವಾ ಸರ್ಕಾರಿ ಬಸ್ಸುಗಳ ಮೂಲಕ ಹೋಗಬಹುದು.





