ಕಥೆ – ಪ್ರೀತಿ ಆರ್‌

ಸುಮಿತ್‌ ತನ್ನ ರೂಢಿಯಂತೆ ರೈಲ್ವೆ ಸ್ಟೇಷನ್‌ಗೆ ಒಂದು ಗಂಟೆ ಮೊದಲೇ ಬಂದಿದ್ದ. ಆಫೀಸ್‌ ಕೆಲಸದ ನಿಮಿತ್ತ ಅವನು ಹೈದರಾಬಾದಿಗೆ ಹೊರಟಿದ್ದ. ಬಸ್ಸಿನಲ್ಲಿ ಹೊರಟಿದ್ದರೆ ಆರಾಮವಾಗಿ ರಾತ್ರಿ ಹೋಗಬಹುದಿತ್ತು. ಆದರೆ ಅವನಿಗೆ ರೈಲು ಪ್ರಯಾಣವೆಂದರೆ ತುಂಬಾ ಇಷ್ಟ. ಬೆಳಗ್ಗೆ 11ಕ್ಕೇ ಸ್ಟೇಶನ್ನಿಗೆ ಬಂದು ಕುಳಿತ. ಅವನಿಗೆ ಓದುವ ಹವ್ಯಾಸ. ಆದ್ದರಿಂದ ಕೆಲವು ಪುಸ್ತಕಗಳು, ಅಂದಿನ ದಿನಪತ್ರಿಕೆಗಳನ್ನು ಮನೆಯಿಂದಲೇ ತಂದಿದ್ದ. ರೈಲು ಬರಲು ಇನ್ನೂ 15 ನಿಮಿಷವಿತ್ತು. ಒಂದು ದಿನಪತ್ರಿಕೆಯನ್ನು ತೆಗೆದು ಬೆಂಚ್‌ ಮೇಲೆ ಕುಳಿತುಕೊಂಡು ಓದಲಾರಂಭಿಸಿದ. ಸ್ವಲ್ಪ ಹೊತ್ತಿಗೆ ಅಪ್ಪ ಅಮ್ಮ ಮಗಳೊಂದಿಗೆ ಒಂದು ಪರಿವಾರ ಅಲ್ಲಿಗೆ ಬಂದಿತು. ಅವರೂ ಅದೇ ಬೆಂಚಿನ ಮೇಲೆ ಕುಳಿತುಕೊಂಡರು. ಅವರನ್ನು ನೋಡಿದರೆ ಏಕೋ ತುಂಬಾ ದುಃಖದಲ್ಲಿರುವಂತೆ ಕಾಣುತ್ತಿದ್ದರು. ಅಪ್ಪ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದರು, “ಏನು ಮಾಡುವುದು ಎಲ್ಲ ನಮ್ಮ ನಸೀಬು. ಮಗಳ ಇಚ್ಛೆಯಂತೆ ಎಲ್ಲವನ್ನೂ ಒಪ್ಪಿಕೊಂಡರೂ ಹೀಗಾಯಿತು. ಈಗ ಹೈದರಬಾದ್‌ಗೆ ವಾಪಸ್‌ ಹೊರಟಿದ್ದೇವೆ. ಅಲ್ಲಿ ತಲುಪಿದ ಮೇಲೆ ಮಾತನಾಡುತ್ತೇನೆ,” ಎಂದು ಹೇಳಿ ಫೋನ್‌ ಇಟ್ಟರು.

ತಾಯಿ ಮಗಳಿಗೆ ಚಹಾ ತಂದು ಕೊಟ್ಟರು. ಇಬ್ಬರೂ ಬಲವಂತವಾಗಿ ಅರ್ಧರ್ಧ ಟೀ ಕುಡಿದು ಕಪ್‌ನ್ನು ಕಸದ ಬುಟ್ಟಿಗೆ ಹಾಕಿದರು.

ರೈಲು ಬೆಳಗಾವಿ ನಿಲ್ದಾಣದಲ್ಲಿ ಬಂದು ನಿಂತಾಗ 1-2 ಗಂಟೆ. ಸ್ಲೀಪರ್‌ ಕೋಚ್‌ ನಂಬರ್‌ನ್ನು ಹುಡುಕುತ್ತಾ ಸುಮಿತ್‌ ಮುಂದೆ ಹೋದ. ಅವನು ತನ್ನ ಸೀಟ್‌ನಲ್ಲಿ ಕುಳಿತಾಗ ತುಂಬಾ ಖುಷಿಯಾಗಿದ್ದ. ಕಾರಣ ಕಿಟಕಿ ಬಳಿಯ ಸೀಟೆಂದರೆ ಅವನಿಗೆ ಎಲ್ಲಿಲ್ಲದ ಖುಷಿ. ಬರೀ ಸೀಟಿನ ನಂಬರ್‌ ನೋಡಿಯೇ ಅದು ಕೆಳಗಿನದೇ ನಡುವಿನದೇ ಅಥವಾ ಮೇಲಿನದೇ ಎಂದು ಹೇಳುತ್ತಿದ್ದ. ರೈಲಿನ ಬಗೆಗಿನ ಎಲ್ಲ ಮಾಹಿತಿಗಳು ಅವನಿಗೆ ಗೊತ್ತಿದ್ದವು. ರೈಲಿನ ಟೈಮ್ ಟೇಬಲ್‌ನ ಎಲ್ಲ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದ. ಅವನಮ್ಮ ತಮಾಷೆಗೆ ನಿನಗೆ ರೈಲಿನೊಂದಿಗೇ ಮದುವೆ ಮಾಡುತ್ತೇನೆಂದು ಹೇಳುತ್ತಿದ್ದರು.

ಅವನು ಆರಾಮವಾಗಿ ಕುಳಿತು ಕೈಯಲ್ಲಿ ದಿನಪತ್ರಿಕೆ ಹಿಡಿದು ಕಿಟಕಿಯಲ್ಲಿ ನೋಡುತ್ತಾ ಹೊರಗಿನ ದೃಶ್ಯವನ್ನು ಅನುಭವಿಸುತ್ತಿದ್ದ. ಅಷ್ಟರಲ್ಲಿ ಅದೇ ಪರಿವಾರ ಅಲ್ಲಿಗೆ ಬಂದಿತು. ಅವರ ಮಗಳು ಸುಮಿತ್‌ನ ಎದುರಿಗೇ ಕುಳಿತಳು. ಸುಮಿತ್‌ ಎದ್ದು ಅವರ ಸಾಮಾನುಗಳನ್ನು ಸರಿಯಾಗಿಡಲು ಸಹಕರಿಸಿದ. ರೈಲು ನಿಲ್ದಾಣ ಬಿಟ್ಟಿತು.

ಸ್ವಲ್ಪ ಹೊತ್ತಿನ ನಂತರ ಸುಮಿತ್‌ ಆ ಹುಡುಗಿಯನ್ನು ನೋಡಿದ. ಹಾಲಿನ ಕೆನೆಯ ಬಣ್ಣದ ಮುಖ, ಬಟ್ಟಲು ಕಂಗಳ ರೂಪವತಿ ಆಕೆ. ಆದರೆ ಏಕೋ ಅತ್ತು ಅತ್ತು ಕಣ್ಣು ಕೆಂಪಾದಂತಿತ್ತು. ಅವಳ ಅಂದವಾದ ತುಟಿಗಳಲ್ಲಿ ಚಿಕ್ಕ ಕಿರುನಗು ಇರಲಿಲ್ಲ. ಕಿಟಕಿಯಲ್ಲಿ ಕೈಯಿಟ್ಟು ಗಲ್ಲಕ್ಕೆ ಕೈಯೂರಿ ಕುಳಿತಿದ್ದಳು. ಅವಳ ಕೈಯಲ್ಲಿ ಮದರಂಗಿ ಇತ್ತು. ಅವಳು ಕಿಟಕಿಯತ್ತ ಶೂನ್ಯಭಾವದಿಂದ ನೋಡುತ್ತಿದ್ದಳು. ಅವಳಮ್ಮ ಅಪ್ಪ ಇಬ್ಬರೂ ಸುಮ್ಮನೆ ಕುಳಿತು ತೂಕಡಿಸುತ್ತಿದ್ದರು. ಯಾರಲ್ಲೂ ಉತ್ಸಾಹವಿರಲಿಲ್ಲ.

ರೈಲು ಲೋಂಡಾದ ಕಾಡಿನಲ್ಲಿ ಓಡುತ್ತಿತ್ತು. ಸುಮಿತ್‌ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ. ಸೂಪ್‌ ಮಾರುವವನು ಟೊಮೇಟೊ ಸೂಪ್‌ ಮಾರಿಕೊಂಡು ಬಂದಾಗ ಅದನ್ನು ತೆಗೆದುಕೊಂಡು ಎದುರಿನವರಿಗೆ ನಿಮಗೆ ಬೇಕಾ ಎಂದು ಕೇಳಿದ. ಅವರು ಬೇಡ ನೀವು ತೆಗೆದುಕೊಳ್ಳಿ ಎಂದರು. ಸುಮಿತ್‌ ಸೂಪ್‌ ಕುಡಿಯುತ್ತಿದ್ದಾಗ ಅವರೇ ಮಾತಿಗಾರಂಭಿಸಿ, ಸುಮಿತ್‌ನನ್ನು ಏನು ಮಾಡುತ್ತಿದ್ದಿ ಎಂದು ಕೇಳಿದರು. ಸುಮಿತ್‌ ತಾನು ಒಬ್ಬ ಎಂಜಿನಿಯರ್‌ ಆಗಿದ್ದು, ತನ್ನಮ್ಮನೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದೇನೆಂದು ತಿಳಿಸಿದ. ಅದಕ್ಕವರು ತಾವು ಹೈದರಾಬಾದಿನಲ್ಲಿ ಉಪಾಧ್ಯಾಯರಾಗಿದ್ದು, ಮೂಲತಃ ಬೆಳಗಾವಿಯವರೇ ಎಂದು ಹೇಳಿದರು. ತಮ್ಮ ಮಗಳನ್ನು ಸುಮನಾ ಎಂದು ಪರಿಚಯಿಸಿದರು. ಅವಳು ಬೆಳಗಾವಿಯಲ್ಲಿ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆಂದೂ ಹೇಳಿದರು. ಸುಮನಾ ಒಲ್ಲದ ಮನಸ್ಸಿನಿಂದ ಸುಮಿತ್‌ನ ಕಡೆ ನೋಡಿ ಕಿರುನಗೆ ಬೀರಿದಳು. ಧಾರವಾಡ ಬರುವಷ್ಟರಲ್ಲಿ ಅವರಮ್ಮ ಸುಮಿತ್‌ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡು ಮಾತನಾಡುತ್ತಿದ್ದರು. ರೈಲು ಧಾರವಾಡದಲ್ಲಿ ನಿಂತಾಗ ಸುಮನಾಳನ್ನು ಅವರಪ್ಪ ಬಲವಂತವಾಗಿ ಕೆಳಗೆ ಕರೆದುಕೊಂಡು ಹೋದರು. ಆಗ ಸುಮಿತ್ ಇದೇ ಸರಿಯಾದ ಸಮಯವೆಂದು ಅವರಮ್ಮನನ್ನು ಯಾಕೆ ಸುಮನಾಗೆ ಮೈ ಹುಷಾರಿಲ್ಲವೇ ಎಂದು ಕೇಳಿದ. ಅದಕ್ಕೆ ಅವರಮ್ಮ, “ಇಲ್ಲಪ್ಪ ಅವಳು ತುಂಬಾ ಉತ್ಸಾಹದಿಂದಿರುವ ಹುಡುಗಿ. ಬೆಳಗಾವಿಯಲ್ಲಿ ನನ್ನ ತಂಗಿಯ ಮನೆಯಲ್ಲಿದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಪಕ್ಕದ ಮನೆಯ ರಾಘವ ಎಂಬ ಹುಡುಗನೊಂದಿಗೆ ಪ್ರೇಮಾಂಕುರವಾಗಿ ಅವನನ್ನು ಬಹಳ ಪ್ರೀತಿಸಿದಳು. ನನ್ನ ತಂಗಿಗೂ ಆ ಹುಡುಗ ಬಹಳ ಇಷ್ಟ. ಅವನ ಸೌಮ್ಯ ಸ್ವಭಾವ ನಮಗೂ ಇಷ್ಟವಾಯಿತು, ನಮಗೂ ಒಬ್ಬಳೇ ಮಗಳಿದ್ದರಿಂದ ಒಪ್ಪಿಕೊಂಡೆ. ಅವನು ಒಳ್ಳೆಯ ಕೆಲಸದಲ್ಲಿದ್ದ. ರಾಘವನ ತಂದೆ ತಾಯಿಯೊಂದಿಗೆ ಮಾತನಾಡಿದೆವು. ಅವರೂ ಸಂತೋಷದಿಂದ ಒಪ್ಪಿಕೊಂಡರು. ಆದರೆ ನಿಶ್ಚಿತಾರ್ಥಕ್ಕೆ ಒಂದೆರಡು ದಿನ ಮೊದಲು ಅವರ ತಂದೆ ಬಂದು ನಮಗೆ 5 ಲಕ್ಷ ರೂಪಾಯಿ ವರದಕ್ಷಿಣೆ ಬೇಕು, ನಮ್ಮ ಮಗನಿಗೆ ಎಂಟೆಕ್‌ ಕಲಿಸಲು ಅಮೆರಿಕಾಗೆ ಕಳುಹಿಸಬೇಕೆಂದರು.

“ನಾವು ಮೊದಲಿನಿಂದಲೂ ಬಹಳ ಆದರ್ಶವಾದಿಗಳು. ಸುಮನಾಳನ್ನು ಹಾಗೆಯೇ ಬೆಳೆಸಿದ್ದೇವೆ. ಇದನ್ನು ಕೇಳಿ ಸುಮನಾ ಬಂದು ಹುಡುಗನ ತಂದೆಯನ್ನು ಬೈದು ಕಳುಹಿಸಿದಳು. ಮುಂದೇನು? ಅರ್ಧ ಗಂಟೆಯಲ್ಲಿಯೇ ರಾಘವನ ಫೋನ್‌ ಬಂದಿತು. ಅವನಿಗೆ ತನ್ನ ತಂದೆಗಾದ ಅವಮಾನ ಸಹಿಸಲಾಗಲಿಲ್ಲ, ಸಂಬಂಧ ಮುರಿದು ಬಿತ್ತು. ಎಲ್ಲ ಸರಿಯಾಗಿದ್ದರೆ ನಾಳೆ ಸುಮನಾಳ ನಿಶ್ಚಿತಾರ್ಥವಿತ್ತು. ರಾಘವ ಮತ್ತು ಸುಮನಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇನ್ನು ನಮ್ಮ ಸುಮನಾ ಅವನನ್ನು ಮರೆಯಲು ಸಾಧ್ಯವೇ ಎನಿಸುತ್ತಿದೆ…..” ಎಂದು ಕಣ್ಣೀರಿಟ್ಟರು.

ನಂತರ “ಸಾರಿ ಏನೋ ನಿನ್ನನ್ನು ನೋಡಿ ಎಲ್ಲ ಹೇಳಬೇಕೆನ್ನಿಸಿತು. ನಿಮಗೆ ಬೇಜಾರಾಗಿದ್ದರೆ ಕ್ಷಮಿಸಪ್ಪ…..” ಎಂದರು.

ಸುಮಿತ್‌ಗೆ ಏನು ಹೇಳಬೇಕೋ ತಿಳಿಯಲಿಲ್ಲ, “ಆಂಟಿ ಎಲ್ಲ ಸರಿಹೋಗುತ್ತೆ. ಚಿಂತೆ ಮಾಡಬೇಡಿರಿ,” ಎಂದಷ್ಟೇ ಹೇಳಿ ಸುಮ್ಮನಾದ.

ರೈಲು ಹೊರಡುವ ಮುನ್ಸೂಚನೆ ಕೊಟ್ಟಿದ್ದರಿಂದ ತಂದೆ ಮಗಳು ರೈಲು ಹತ್ತಿದರು. ರೈಲು ಹೊರಟಿತು. ಅವರಮ್ಮ ಊಟದ ಡಬ್ಬಿಯನ್ನು ತೆರೆದರು. ಸುಮಿತ್‌ಗೆ ಬಲವಂತ ಮಾಡಿ ಬಡಿಸಿದರು. ಚಪಾತಿ, ಬೆಂಡೆಕಾಯಿ ಪಲ್ಯ, ಟೊಮೇಟೊ ಚಟ್ನಿ, ಚಿತ್ರಾನ್ನ, ಮೊಸರನ್ನ ಎಲ್ಲವೂ ಇತ್ತು. ಸುಮಿತ್‌ ಕೂಡ ತಾನು ತಂದಿದ್ದ ಬಿಸಿಬೇಳೆ ಭಾತ್‌ನ್ನು ಅವರಿಗೆ ಕೊಟ್ಟ. ಸುಮನಾ ತನ್ನ ಪೋಷಕರು ಕಟ್ಟಿಕೊಟ್ಟ ಬುತ್ತಿ ಎಂದು ಸ್ವಲ್ಪ ತಿಂದಳು. ಅವಳು ಬೇಸರದಲ್ಲಿದ್ದಳು. ಅವಳ ಮನಸ್ಸೆಲ್ಲ ರಾಘವನಲ್ಲಿತ್ತು. ಊಟವಾದ ಮೇಲೆ  ಸುಮಿತ್‌ ಧನ್ಯವಾದ ಹೇಳಿ ಸ್ವಲ್ಪ ಹೊತ್ತು ಮಲಗುವುದಾಗಿ ಹೇಳಿ ಸುಮನಾಳ ಎದುರಿಗಿನ ಮೇಲಿನ ಬರ್ತ್‌ನಲ್ಲಿ ಮಲಗಿಕೊಂಡ. ಸುಮನಾ ಮೇಲಿಂದ ಮೇಲೆ ತನ್ನ ಮೊಬೈಲ್‌ನ್ನು ತೆಗೆದುಕೊಂಡು ಅನ್‌ಲಾಕ್‌ ಮಾಡುವುದು ಏನೋ ನೋಡುವುದು ಮಾಡುತ್ತಿದ್ದಳು. ಸುಮಿತ್‌ ಮೇಲಿಂದ ಅದನ್ನು ಗಮನಿಸುತ್ತಿದ್ದ. ಅವನಿಗೆ ಅವಳ ಬಗ್ಗೆ ಬಹಳ ಕನಿಕರವಾಯಿತು.

ರಾತ್ರಿಯಾಯಿತು…… ಸುಮಿತ್‌ ಎಲ್ಲರಿಗೂ ಬರ್ತ್‌ ಹಾಕಿಕೊಟ್ಟ. ಸುಮನಾಳ ತಾಯಿಗೆ ಸುಮಿತ್‌ ಬಹಳ ಹಿಡಿಸಿದ. ಅವನಿಗೇ ಸುಮನಾಳನ್ನು ಮದುವೆ ಮಾಡಿಕೊಟ್ಟರೆ ಎಂದು ಯೋಚಿಸುವಷ್ಟರ ಮಟ್ಟಿಗೆ ಅವನು ಆಕೆಗೆ ಇಷ್ಟವಾದ. ಸುಮಿತ್‌ ಅವರಮ್ಮನಿಗೆ ಮೆಲ್ಲಗೆ ನಾಳೆ ಬೆಳಗ್ಗೆ ಬಹುಶಃ ನಿಮ್ಮ ಮಗಳ ಮುಖದ ಮೇಲೆ ನಗು ಮೂಡಿರುತ್ತದೆ ಎಂದ. ಬೆಳಗ್ಗೆ 5.30ಕ್ಕೆ ಎಲ್ಲರೂ ತಂತಮ್ಮ ಸಾಮಾನುಗಳನ್ನು ಹೊರತೆಗೆಯುತ್ತಿದ್ದರು. ರೈಲು ಲಿಂಗಂಪಲ್ಲಿಗೆ ಬಂದಿತು. ಸುಮಿತ್‌ ಸುಮನಾ ಮತ್ತು ಅವರ ತಂದೆ ತಾಯಿಗೆ ಬೈ ಹೇಳಿ ಹೊರಟುಹೋದ.

ಮುಂದೆ ಅರ್ಧ ಗಂಟೆಯಲ್ಲಿ ರೈಲು ಹೈದರಾಬಾದ್‌ ನಿಲ್ದಾಣದಲ್ಲಿ ನಿಂತಿತು. ಸುಮನಾ ಮತ್ತು ಅವರ ತಂದೆ ತಾಯಿ ಇಳಿದರು. ಮಗಳ ನಿಶ್ಚಿತಾರ್ಥವೆಂದು ಅಕ್ಕಪಕ್ಕದವರಿಗೆಲ್ಲ ಹೇಳಿದ್ದರಿಂದ ಈಗೇನು ಹೇಳುವುದೆಂದು ತಲೆಯಲ್ಲಿ ನೂರಾರು ವಿಚಾರಗಳು ಸುಳಿಯುತ್ತಿದ್ದವು. ಅಷ್ಟರಲ್ಲಿಯೇ ಅವರಿಗೆ ಆಶ್ಚರ್ಯ ಕಾದಿತ್ತು. ಫ್ಲಾಟ್‌ಫಾರಂನಲ್ಲಿ ರಾಘವ ಇವರೆಡೆಗೆ ಬರುತ್ತಿದ್ದ. ಅವನನ್ನು ನೋಡಿ ಮೂವರೂ ಅವಾಕ್ಕಾಗಿ ನಿಂತರು. ರಾಘವ ಸುಮನಾಳ ತಂದೆ ತಾಯಿಗೆ ನಮಸ್ಕರಿಸಿ, “ಅಮ್ಮ ಅಪ್ಪ ಸಾರಿ, ದುಡುಕಿ ತಪ್ಪು ಮಾಡಿಬಿಟ್ಟೆ, ಕ್ಷಮಿಸಿ. ಅಮೆರಿಕಾಗೆ ಕಳುಹಿಸಬೇಕೆಂದು ನಮ್ಮ ತಂದೆಯವರಿಗೆ ಬಹಳ ವರ್ಷಗಳಿಂದ ಆಸೆಯಿತ್ತು.  ಆದರೆ ಸರ್ಕಾರಿ ಕೆಲಸದಲ್ಲಿದ್ದ ಅವರಿಗೆ ಅಷ್ಟೊಂದು ಹಣವನ್ನು ಹೊಂದಿಸಲು ಆಗಲೇ ಇಲ್ಲ. ಆದ್ದರಿಂದ ನಿಮ್ಮ ಬಳಿ ವರದಕ್ಷಿಣೆ ರೂಪದಲ್ಲಿ ಕೇಳಿದರು. ಈಗ ಅವರಿಗೂ ಪಶ್ಚಾತ್ತಾಪವಾಗಿದೆ,” ಎಂದವನೇ ಸುಮನಾಳ ಕಡೆ ತಿರುಗಿ, “ಸುಮನಾ ನಿನ್ನನ್ನು ಬಿಟ್ಟು ನಾನು ಇರಲಾರೆ. ನನ್ನ ದಯವಿಟ್ಟು ಕ್ಷಮಿಸು. ನಿನಗಾಗಿ ರಾತ್ರಿಯೆಲ್ಲಾ ಬಸ್‌ನಲ್ಲಿ ಪ್ರಯಾಣ ಮಾಡಿ ಬಂದಿದ್ದೇನೆ,” ಎಂದ.

ಎಲ್ಲರೂ ಸಂತೋಷದಿಂದ ರೈಲ್ವೆ ನಿಲ್ದಾಣದಿಂದ ಹೊರನಡೆದರು.

ಇತ್ತ ಲಿಂಗಂಪಲ್ಲಿಯಲ್ಲಿಳಿದ ಸಮಿತ್‌ ರಿಕ್ಷಾದಲ್ಲಿ ಕುಳಿತುಕೊಂಡು ತನ್ನಿಂದ ಪ್ರೀತಿಸುವ ಎರಡು ಜೀವಗಳು ಒಂದಾಗಬಹುದು, ಒಂದು ಒಳ್ಳೆಯ ಹುಡುಗಿಯ ಬದುಕು ಬಹುಶಃ ಬಂಗಾರವಾಗಬಹುದು ಎಂದು ಸಂತೃಪ್ತಿಯಿಂದ ಮನಸ್ಸಿನಲ್ಲೇ ನಕ್ಕ.

ಅವನು ಮಧ್ಯಾಹ್ನ ಮೇಲಿನ ಬರ್ತ್‌ನಲ್ಲಿ ಮಲಗಿದ್ದಾಗ ಸುಮನಾಳ ಫೋನ್‌ನ ಅನ್‌ಲಾಕ್‌ ಕೋಡ್‌ ನಂಬರ್‌ ಅವನಿಗೆ ಅಕಸ್ಮಾತಾಗಿ ಗೊತ್ತಾಯಿತು. ಆಗಲೇ ಅವನಿಗೊಂದು ಉಪಾಯ ಹೊಳೆಯಿತು. ಸುಮನಾ ಸಾಯಂಕಾಲ ತನ್ನ ತಂದೆಯೊಂದಿಗೆ ಗದಗ ಸ್ಟೇಷನ್ನಿನಲ್ಲಿ ಇಳಿದಳು. ತನ್ನ ಮೊಬೈಲ್‌ನ್ನು ಸೀಟಿನ ಮೇಲಿಟ್ಟಿದ್ದಳು. ಅವರಮ್ಮ ಮಲಗಿದ್ದರು. ಆಗ ಸುಮಿತ್‌ ಅವಳ ಮೊಬೈಲ್ ‌ತೆಗೆದುಕೊಂಡು ರಾಘವನಿಗೆ, `ಪ್ರೀತಿಯ ರಾಘವ, ನಿನಗೆ ಗೊತ್ತಿರುವ ಹಾಗೆ ನಮ್ಮ ತಂದೆ ತಾಯಿ ಬಹಳ ಆದರ್ಶವಾದಿಗಳು. ನಿಮ್ಮ ತಂದೆ ಒಮ್ಮೆಲೇ ವರದಕ್ಷಿಣೆ ಕೇಳಿದ್ದಕ್ಕೆ ನನಗೆ ಬಹಳ ಆಘಾತವಾಯಿತು. ಅದಕ್ಕೇ ನಾನು ನಿಮ್ಮ ತಂದೆಗೆ ದುಡುಕಿ ಬೈದುಬಿಟ್ಟೆ. ನೀನು ಅಮೆರಿಕಾಗೆ ಹೋಗುವುದು ನನಗೂ ಬಹಳ ಸಂತೋಷವೇ. ಆದರೆ ಅದು ನೀನೇ ಸ್ವತಃ ಗಳಿಸಿದ ಹಣದಿಂದ ಹೋಗುವುದನ್ನು ನಾನು ಬಯಸುತ್ತೇನೆ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ. ಬಹುಶಃ ನನಗೆ ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ಯಾವುದೇ ಕಾರಣಕ್ಕೂ ನಾನು ನನ್ನ ಆದರ್ಶಗಳನ್ನು ಬಿಟ್ಟುಕೊಡುವುದಿಲ್ಲ. ನಿಮ್ಮ ತಂದೆಗೆ ನಾನು ಕ್ಷಮೆ ಕೇಳಿದೆನೆಂದು ಹೇಳು. ಸ್ವಾಭಿಮಾನಿಗಳು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ. ನೀನು ಸ್ವಾಭಿಮಾನಿಯೆಂದು ನನಗೆ ಗೊತ್ತು. ಇದನ್ನು ಒಪ್ಪಿಕೊಂಡು ಈಗಲೂ ನನ್ನನ್ನು ಪ್ರೀತಿಸುತ್ತಿದ್ದರೆ, ನೀನಾಗಿಯೇ ಹೈದರಾಬಾದ್‌ಗೆ ಬಂದು ನನ್ನನ್ನು ಭೇಟಿಯಾಗುವಿ…..’ ಎಂದು ಒಂದು ಸಂದೇಶ ಕಳಿಸಿ, ಮೊಬೈಲ್‌ನ್ನು ಅದರ ಸ್ಥಳದಲ್ಲಿಟ್ಟು ಬಿಟ್ಟ.ರಾಘವ ತಪ್ಪು ಮಾಡಿದ್ದು ನಿಜ. ಆದರೆ ಅವನಿಗೆ ಎರಡನೇ ಅವಕಾಶ ಕೊಟ್ಟರೆ ಅವರಿಬ್ಬರ ಜೀವನ ಸುಧಾರಿಸಬಹುದೆಂದು ಸುಮಿತ್‌ನ ಸಂದೇಶ ಕಳಿಸಿದ್ದ. ಅವನ ಪ್ರಯತ್ನ ಫಲಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ