ನೀಳ್ಗಥೆ - ಶೇಖರಗೌಡ ವೀ.ಸ.
ಅನ್ಯ ಧರ್ಮೀಯದವರಾದರೂ ಜಾನಿ ಶಮೀಮಾ ಒಲವಿನಿಂದ ಒಂದಾಗಿದ್ದರು. ಇವರ ಪವಿತ್ರ ಪ್ರೇಮಕ್ಕೆ ಒದಗಿದ ಅಗ್ನಿಪರೀಕ್ಷೆ ಏನು...... ಅದು ಇವರು ಬಯಸಿದ ಫಲವನ್ನು ನೀಡಿತೇ......?
ಇರುಳಲ್ಲಿ ಬೆತ್ತಲಾಗಿದ್ದ ಮೂಡಣ ಬೆಳಗಿನ ಜಾವ ಮತ್ತೆ ಸರಸರನೇ ಬಣ್ಣದ ಸೀರೆಯುಟ್ಟು ನಸುನಾಚತೊಡಗಿದಂತೆ ಕೆಂಪೇರತೊಡಗಿತ್ತು. ಪೂರ್ವದಲ್ಲಿ ಆಗಷ್ಟೇ ಕೆಂಪೊಡೆಯತೊಡಗಿತ್ತು. ಜಗ ಬೆಳಗಲು ಹೊಂಬಣ್ಣದ ಉದಯ ರವಿ ಕ್ಷಿತಿಜದ ಗರ್ಭದಿಂದ ಹೊರಬರಲು ತವಕಿಸತೊಡಗಿದ್ದ. ಪಕ್ಷಿಗಳ ಕಲರವ ಆಗಷ್ಟೇ ಅನುರಣಿಸತೊಡಗಿತ್ತು. ತುತ್ತಿನ ಚೀಲ ತುಂಬಿಸಲು ಹಕ್ಕಿಗಳು ಚಿಲಿಪಿಲಿಗುಡುತ್ತಾ ಗಮ್ಯದ ಕಡೆಗೆ ಸಾಗಿದ್ದವು.
ಜಾನಿ ಬೆಳಗಿನ ವಾಯುವಿಹಾರದ ಉಲ್ಲಾಸಭರಿತ ಚುರುಕಾದ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರೂ ಅವನ ಮನಸ್ಸು ಏನನ್ನೋ ಮೆಲುಕ ಹಾಕತೊಡಗಿತ್ತು. ಒಲವಿನ ಗೆಳತಿಯ ಸುಮಧುರ ಮಾತುಗಳು ಕಿವಿಯಲ್ಲಿ ಗುಂಯ್ ಗುಡತೊಡಗಿದ್ದವು. ಅರಿವಿಲ್ಲದಂತೆ ವಾಯುವಿಹಾರದ ಪಥವನ್ನು ಬದಲಿಸಿ, ಮುಖ್ಯ ರಸ್ತೆಯಿಂದ ಕಾಲು ದಾರಿಯಂತಿದ್ದ ಚಿಕ್ಕ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದ. ನಿರ್ಜನ ಪ್ರದೇಶವೆಂದರೂ ಸರಿ. ಜಾನಿಯ ಮನಸ್ಸು ಕನವರಿಸಲು ಮುಂದಾಯಿತು. `ಈ ಮನಸ್ಸು ಅದೆಷ್ಟು ಮೊಂಡು ಎಂದರೆ, ಸದಾ ನಿನ್ನ ನೆನಪಿನ ಅಲೆಯೊಳಗೆ ಸುಳಿಯಾಗಿ ಸುತ್ತತ್ತಲೇ ಇರುತ್ತದೆ. ನಿನ್ನ ಹುಣ್ಣಿಮೆಯಂಥ ನಗು ನನ್ನೆದೆಯೊಳಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತುತ್ತಿದೆ,' ಎಂದೆನ್ನುತ್ತಿದ್ದ ಜಾನಿ ಒಲವಿನ ಗೆಳೆತಿಯ ಜೊತೆಗೆ ಹೆಜ್ಜೆ ಹಾಕುತ್ತಿದ್ದ.
`ಉದಯ ರವಿಯ ಹೊಂಬಣ್ಣದ ಕಿರಣಗಳು ಮುತ್ತಿಟ್ಟಾಗ ತಾನೇ ಹೂ ಅರಳುವುದು.... ನಾನೂ ನಿನ್ನ ಬೆಚ್ಚನೆಯ ಪ್ರೀತಿಯಲ್ಲಿ ಅರಳಿ ಘಮಘಮಿಸುವೆ,' ಎಂದು ಪಿಸುಗುಡುವ ಪ್ರೀತಿಯ ಗೆಳತಿಯ ಮಾತುಗಳು ಅವನೆದೆಯಲ್ಲಿ ಕಚಗುಳಿ ಇಡತೊಡಗಿದ್ದವು. ಅದಕ್ಕೆ ಅವನು, `ನೀನು ನನ್ನ ಬದುಕಿನ ಸುಂದರ ಕವಿತೆ,' ಎನ್ನುತ್ತಿದ್ದ ಮಾತುಗಳು ಅವನ ಹೃನ್ಮನಗಳಲ್ಲಿ ಸಂತಸದ ತಂಗಾಳಿ ತೀಡಿದವು.
`ಈ ನನ್ನ ಕಂಗಳು ಹಗಲಿರುಳು ನಿನಗಾಗಿ ಅರಸುತಿವೆ. ಕಣ್ಣ ದೀಪಗಳು ಬೆಳುತ್ತಿರುವುದು ನಿನಗಾಗಿ,' ಎಂದು ಅವಳು ಉಸುರಿದರೆ, `ಚಂದ್ರನೊಂದಿಗೆ ಮಾತಾಡಿ ತನು ಕಾಂತಿ ತುಂಬಿದವಳು ನೀನು. ಇಳೆಯ ಬೇಡಿಕೊಂಡು ಹಸಿರುಟ್ಟು ಬಂದವಳು ನೀನು,' ಎಂದು ಆಗಾಗ ಅವಳ ಬಿಸಿ ಅಪ್ಪುಗೆಯಲ್ಲಿ ಅವನು ಪಿಸುಗುಡುತ್ತಿದ್ದ.
`ಬೀಸೋ ಗಾಳಿ ಸುದ್ದಿ ತಂದೈತಿ ನನ್ನೊಳಗಿನ ಪ್ರೀತಿಗೆ. ಉಸಿರು ನೀಡಿ ಜೀವ ಕೊಡುವವನು ನೀನು,' ಎನ್ನುವ ಅವಳ ಮೆಲುನುಡಿಗೆ ಜಾನಿಯ ಎದೆ ಅರಳುತ್ತಿತ್ತು.
`ನಿನ್ನೊಲುಮೆಯ ನಗುವೊಂದೇ ಸಾಕೆನೆಗೆ.... ಕಲ್ಲುಮುಳ್ಳುಗಳೂ ಮಲ್ಲಿಗೆಯಂತಾಗುವವು,' ಎಂದು ಪಿಸುಗುಡುತ್ತಿದ್ದ ಅವನು ಆಗೊಮ್ಮೆ, ಈಗೊಮ್ಮೆ ಅವಳ ನಡುಬಳಸಿ. ಪ್ರೀತಿಯ ಮಾತುಗಳ ಗುಂಗಿನಲ್ಲಿ ಜಾನಿ ಮುಖ್ಯ ರಸ್ತೆಯಿಂದ ಆಗಲೇ ತುಸು ದೂರವೇ ಬಂದಿದ್ದ. ಆಗಲೇ ದಿನಕರ ಆ ದಿನದ ಕರ್ತವ್ಯಕ್ಕೆ ಹಾಜರಾಗಿ ತನ್ನ ಸ್ಥಾನವನ್ನು ಅಲಂಕರಿಸ ತೊಡಗಿದ್ದ. ಬೆಳಕು ಎಲ್ಲೆಡೆ ಪಸರಿಸತೊಡಗಿತ್ತು. ಅಷ್ಟರಲ್ಲಿ ಸರಪರ ಎನ್ನುವ ಶಬ್ದ. ಇದ್ದಕ್ಕಿದ್ದಂತೆ ಆಗ ಯಾರೋ ಆರು ಜನ ಯುವಕರು ಜಾನಿಯನ್ನು ಸುತ್ತುವರಿದಿದ್ದರು. ಎಲ್ಲರೂ ಇಪ್ಪತ್ತೈದರ ಆಸುಪಾಸಿನ ಬಿಸಿ ರಕ್ತದ ತರುಣರೇ. ಎಲ್ಲರ ಕೈಯಲ್ಲಿ ಚಾಕು, ಚೂರಿ ಠಳಾಯಿಸತೊಡಗಿದ್ದವು. ಜಾನಿ ಅಧೀರನಾಗಿ, ತುಂಬಾ ಹೆದರಿಕೊಂಡುಬಿಟ್ಟ. ಅವನ ಜಂಘಾಬಲವೇ ಉಡುಗಿ ಹೋಯಿತು. ಓಡಿಹೋಗಿ ತಪ್ಪಿಸಿಕೊಳ್ಳದಂತೆ ಶಸ್ತ್ರಧಾರಿಗಳಿಂದ ಸುತ್ತುವರಿಯಲ್ಪಟ್ಟಿದ್ದ. ಅವನೆದೊಳಗೆ ಡವಡವ, ಪುಕಪುಕ.





