ಕಥೆ - ಸುಮಾ ವೀಣಾ
ಅದೇ ತಾನೇ ಲಾಕ್ ಡೌನ್ ತೆರವಾಗಿತ್ತು. ವಿನುತಾ ಕಾಲೇಜಿನಲ್ಲಿ ಕರೆದಿದ್ದ ಮೀಟಿಂಗ್ ಅಟೆಂಡ್ ಮಾಡಲು ಬಲು ಖುಷಿಯಿಂದಲೇ ಹೊರಟಿದ್ದಳು. ಅಷಾಢದ ಮಳೆ ಜಿಟಿಜಿಟಿ ಜಿನುಗುತ್ತಿತ್ತು. ಎದುರುಗಿದ್ದ ವಾಹನಗಳು ಸರಿ ಕಾಣುತ್ತಿರಲಿಲ್ಲ. ಸಿಗ್ನಲ್ ಬಿದ್ದಿದೆಯಲ್ಲಾ ಎನ್ನುತ್ತಾ ಹೆಲ್ಮೆಟ್ ನ್ನು ತೆಗೆದು ಕೈಯಲ್ಲಿ ಒರೆಸಿ ತಲೆಗೆ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಆಕಸ್ಮಿಕವಾಗಿ ಪಕ್ಕಕ್ಕೆ ಹೊರಳಿದಳು.
ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದ ಮಾರುತಿ ವ್ಯಾನ್ ನಿಂತಿತ್ತು. ಆ ಆ್ಯಂಬುಲೆನ್ಸ್ ಗೆ ಇನ್ನಿತರ ಆ್ಯಂಬುಲೆನ್ಸ್ ಗಳ ಹಾಗೆ ತರಾತುರಿಯಿಂದ ಹೋಗಬೇಕು ಎನ್ನುವ ಧಾವಂತವಿರಲಿಲ್ಲ. ಪ್ರಶಾಂತವಾಗಿಯೇ ನಿಂತ ಹಾಗಿತ್ತು. ಲೋಕದ ಗೊಡವೆ ಮರೆತು ತಾಯಿ ದೇಹವೊಂದು ಚಿರನಿದ್ರೆಯಲ್ಲಿತ್ತು. ಮೂಗಿಗೆ ಇಟ್ಟ ಹತ್ತಿ ಜೀವವೊಂದರ ಪ್ರಾಣಪಕ್ಷಿ ಹಾರಿಹೋಗಿ ಗಂಟೆಗಳೇ ಉರುಳಿವೆ ಎನ್ನುವಂತಿತ್ತು. ಗಾಳಿಗೆ ಆ ದೇಹದ ಮುಂದಲೆಯ ಪುಡಿ ಕೂದಲು ಹಾರಾಡುತ್ತಿತ್ತು. ಆ ಸತ್ತ ವ್ಯಕ್ತಿಯ ಮಗನೇ ಇರಬೇಕು, ``ಅಮ್ಮಾ..... ಅಮ್ಮಾ.....,'' ಎನ್ನುತ್ತಲೇ ಸೋತ ಧ್ವನಿಯಲ್ಲೇ ಹಾರಾಡುತ್ತಿದ್ದ ಕೂದಲನ್ನು ಸರಿ ಮಾಡುತ್ತಿದ್ದ.
ಅಷ್ಟರಲ್ಲಿ ಯುವತಿಯೊಬ್ಬಳು ಬಂದು, ``ಶಶಿ ಡೋರ್ ಓಪನ್ ಮಾಡೋ..... ಅಮ್ಮಂಗೆ ಸಿಕ್ಬಿಡ್ತು ಹಾರ.....'' ಎನ್ನುತ್ತಲೇ ತಕ್ಷಣ ತೆಗೆದ ಆ್ಯಂಬುಲೆನ್ಸ್ ಬಾಗಿಲನ್ನು ಸರಕ್ಕನೆ ಹಾಕಿಕೊಂಡಳು.
ಹೊಸ ಸುಗಂಧರಾಜ ಹೂವಿನ ಹಾರದ ಪರಿಮಳ ಪಸರಿಸುವುದರಲ್ಲಿತ್ತು. ತಕ್ಷಣ ಗ್ರೀನ್ ಸಿಗ್ನಲ್ ಬಿದ್ದಿದ್ದರಿಂದ ವಿನುತಾ ಸ್ಕೂಟಿಯನ್ನು ಸ್ಟಾರ್ಟ್ ಮಾಡಿಕೊಂಡು ಭರ್ರನೆ ಮುಂದೆ ಹೋದಳು.
ಮೀಟಿಂಗ್ ನಲ್ಲಿ ಕುಳಿತರೆ ಪ್ರಿನ್ಸಿಪಾಲ್, ``ಆನ್ ಲೈನ್ ಕ್ಲಾಸ್ ಎಲ್ಲಾ ಮಾಡುತ್ತಿದ್ದೀರ. ಮಕ್ಕಳನ್ನು ಯಾವಾಗ ಆಫ್ ಲೈನ್ ಗೆ ಕರೆಯುತ್ತೀರೊ ಏನೋ?'' ಎಂದರು.
ವಿನುತಾ ಹಾಗೆ ಸುಮ್ಮನೆ ಕುಳಿತಿದ್ದಳು. ಅಂತೂ ಮೀಟಿಂಗ್ ಮುಗಿಯಿತು. ಹೇಳಿಕೆ, ಕೇಳಿಕೆಗಳಾದವು. ಅವಳ ಪಕ್ಕದಲ್ಲೇ ಕುಳಿತಿದ್ದ ವಿನುತಾಳ ಸಹೋದ್ಯೋಗಿಯೂ ಗೆಳತಿಯೂ ಆಗಿದ್ದ ಭವ್ಯಾ, ``ಏನೇ ಆಯ್ತು ಒಂಥರಾ ಇದ್ದೀಯಾ..... ಹೇಳೇ ಏನಾಯ್ತು....?'' ಎಂದು ಕೇಳಿದಳು.
``ಏನೂ ಇಲ್ವೇ..... ಬರ್ತಾ ಏನಾಯ್ತು ಗೊತ್ತಾ.....'' ಎಂದು ತಾನು ಸಿಗ್ನಲ್ ನಲ್ಲಿ ಕಂಡ ದೃಶ್ಯ ವಿವರಿಸಿದ ವಿನುತಾ, ಇನ್ನೂ ಎಳೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡವರಿಗಾಗಿ ಮರುಗಿದಳು.
``ಅಲ್ವೇ.... ನಿಂದೇ ಹಾಸಿ ಹೊದ್ದುಕೊಳ್ಳುವಷ್ಟು ಇದೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಂಡ್ರೆ ಆಗುತ್ತೇನೇ....? ಹೇಳು, ನಿಮ್ಮಮ್ಮ ಹೇಗಿದ್ದಾರೆ ಅಂತ....'' ಭವ್ಯಾ ಪ್ರೀತಿಯಿಂದ ಕೇಳಿದಳು.
``ಅಯ್ಯೋ..... ಅಮ್ಮನಾ.... ಅಮ್ಮಿ ಹಾಗೆ ಇದ್ದಾರೆ. ನಾಲ್ಕು ವರ್ಷ ಮಗುವಿನ ಥರಾ ಕಣೆ ಅವರು..... ಹಸಿವು ಅನ್ನಲ್ಲ, ಬಾಯಾರಿಕೆ ಅನ್ನಲ್ಲ. ಏನು ಕೊಟ್ಟರೂ ಹಸಿವಿಲ್ಲ ಅಂತಾರೆ. ಒಂದು ಕ್ಷಣದಲ್ಲಿ ಆಗಿದ್ದು ಜೀವನ ಪರ್ಯಂತ ಗೋಳ್ಹಾಕೊಳ್ತಾ ಇದ್ಯಲ್ಲ ಭವ್ಯಾ.... ಎಲ್ಲಾ ನಮ್ಮ ಕರ್ಮ ಕಣೇ.....'' ಎಂದು ದುಃಖಿತಳಾದಳು.
``ಪೂನಾಕ್ಕೆ ಕರ್ಕೊಂಡು ಹೋಗ್ತೀವಿ. ಫೇಮಸ್ ನ್ಯೂರಾಲಜಿಸ್ಟ್ ಆಪಾಯಿಂಟ್ ಮೆಂಟ್ ಕೊಟ್ಟಿದ್ದಾರೆ ಅಂದಿದ್ಯಲ್ಲಾ..... ಏನಾಯ್ತು?'' ಎಂದು ಭವ್ಯಾ ಮಾತು ಮುಂದುವರಿಸಿದಳು.
ವಿನುತಾ ಸಾವರಿಸಿಕೊಂಡು, ``ಅಷ್ಟರಲ್ಲಿ ಎರಡನೆ ಅಲೆ ಅಂತ ಲಾಕ್ ಡೌನ್ ಆಯ್ತು! ಈಗ ಹೇಗೆ ಹೋಗೋದು...? ಆಲ್ಛ, ಬೀಟ, ಗಾಮ ಅಂತೆಲ್ಲಾ ಏನೇನೋ ಹೊಸ ವೈರಸ್ ಗಳು ಬಂದಿದೆಯಲ್ಲಾ ಏನ್ಮಾಡೋದು....'' ಎಂದಳು ವಿನುತಾ.