ಕಥೆ - ಡಾ. ದೀಪಾ ಹಿರೇಮಠ್
``ಅಮ್ಮ ಹೊರಗಡೆ ಕಟ್ಟೆಯ ಮೇಲೆ ಯಾರೋ ಒಬ್ಬ ವೃದ್ಧರು ಕುಳಿತಿದ್ದಾರೆ. ನೀನು ಹುಷಾರು, ಬಾಗಿಲು ತೆರೆಯಬೇಡ, ಒಳಗಡೆ ಇರು,'' ಎಂದು ತಾಯಿಗೆ ಮಗ ಹೇಳಿದ.
``ಆಯಿತು ಅರುಣ್, ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ. ನೀನು ಹುಷಾರಾಗಿ ಕಾಲೇಜಿಗೆ ಹೋಗಿ ಬಾ, ಮಧ್ಯಾಹ್ನ ಲಂಚ್ ಬಾಕ್ಸ್ ಇಟ್ಟಿದ್ದೀನಿ, ಊಟ ಮಾಡು,'' ಎನ್ನುತ್ತಾ ಮಗನ ಹಿಂದೆ ನಡೆದಳು.
ಹೊರಗಿನ ಬಾಗಿಲು ತೆರೆಯಲು ಪಕ್ಕದ ಕಟ್ಟೆಯ ಮೇಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟ ಸುಮಾರು 65-70 ವರ್ಷ ವಯಸ್ಸಿನ ವ್ಯಕ್ತಿ ಕುಳಿತಿದ್ದರು.
ತಾಯಿ ಮಗ ಇಬ್ಬರೂ ನೋಡಿದರು. ಬಾಡಿದ ಮುಖ, ಶರೀರದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಸುಸ್ತಾಗಿ ಕುಳಿತಿರಬಹುದು ಎಂದುಕೊಂಡಳು ಸವಿತಾ. ಆದರೆ ಅವಳ ಮನಸ್ಸು ಚುರ್ ಎಂದಿತು. ಯಾಕೋ ತನ್ನ ತಂದೆ ಕಣ್ಣು ಮುಂದೆ ಬಂದಂತಾಯಿತು.
``ಅಮ್ಮಾ, ಬಾಗಿಲು ಹಾಕಿಕೋ,'' ಎಂದು ಹೊರನಡೆದ. ತಾಯಿ ಬಾಗಿಲು ಹಾಕಿ ಒಳಗೆ ಹೋದ ಮೇಲೆ ಇವನು ರಸ್ತೆಗೆ ಇಳಿದ.
ಒಳಗಡೆ ಬಂದ ಸವಿತಾಳಿಗೆ ಮನೆ ಬಿಕೋ ಎನ್ನುತ್ತಿತ್ತು. ಹೊಸ ಕನಸುಗಳನ್ನು ಕಟ್ಟಿಕೊಂಡು ಆ ಮನೆಗೆ ಕಾಲಿಟ್ಟಾಗ, ತುಂಬಿದ ಸಂಸಾರವಿತ್ತು. ಮನೆಯಲ್ಲಿ ನಗು, ಮಾತಿನ ಕಲರವವಿತ್ತು. ಅತ್ತೆ, ಮಾವ, ನಾದಿನಿ, ಮೈದನರ ಮುನಿಸು, ವಿರಸ, ಸಂತೋಷ, ಚಿಕ್ಕ ಪುಟ್ಟ ಜಗಳ ಎಲ್ಲ ತುಂಬಿ ತುಳುಕುತ್ತಿತ್ತು. ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಸಡಗರದಿಂದ ಆಚರಿಸುತ್ತಿದ್ದರು.
ಅರುಣ್ ಹುಟ್ಟಿ ಐದು ವರ್ಷಕ್ಕೆ ನಾದಿನಿ ವಿನುತಾಳ ಮದುವೆಯಾಗಿ ಅಮೆರಿಕಾಕ್ಕೆ ಹಾರಿದಳು. ಮೈದುನನ ಕೆಲಸದ ನಿಮಿತ್ತ ಅವನ ಸಂಸಾರ ಮುಂಬೈ ಸೇರಿತು.
ಅರುಣ್ 10 ವರ್ಷದವನಿದ್ದಾಗ, ಅತ್ತೆ ಮಾವ ಒಂದು ಕಾರು ಅಪಘಾತದಲ್ಲಿ ಇವರನ್ನೆಲ್ಲ ಬಿಟ್ಟು ಹೋದರು. ಸವಿತಾ, ಗಂಡ ಹರೀಶ್, ಮಗ ಅರುಣ್ ಜೊತೆ ಜೀವನ ನಡೆದಿತ್ತು. ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಎಲ್ಲರೂ ಕೂಡುತ್ತಿದ್ದರು. ಈ ನಾಲ್ಕು ವರ್ಷದಲ್ಲಿ ಎಲ್ಲ ಸಂಬಂಧಗಳು ಕಳಿಚಿದವು. ಗಂಡನ ಅಕಾಲಿಕ ಮರಣದಿಂದ ಕಂಗೆಟ್ಟ ಸವಿತಾ ಮಗನಿಗಾಗಿ ಜೀವಿಸುತ್ತಿದ್ದೇನೆ ಎನ್ನುತ್ತಾ, ಕಣ್ಣೀರು ಒರೆಸಿಕೊಂಡು ಅಡುಗೆಮನೆ ಕಡೆ ನಡೆದಳು.
ಮಧ್ಯಾಹ್ನ ಊಟದ ಸಮಯ, ಮಗ ಊಟ ಮಾಡುತ್ತಿರಬಹುದು ಎನ್ನುತ್ತಾ ತಾನೂ ತಟ್ಟೆಗೆ ಅನ್ನ ಹಾಕಿಕೊಂಡಳು. ಹೊರಗೆ ಕುಳಿತ ವ್ಯಕ್ತಿ ನೆನಪಾಗಲು ಇಷ್ಟೊತ್ತು ಇರಲಿಕ್ಕಿಲ್ಲ ಹೋಗಿರಬೇಕು. ಏನೋ ಆಯಾಸ ಆಗಿರಬೇಕು, ಅದಕ್ಕೆ ಕುಳಿತಿದ್ದರೊ ಏನೋ ಎಂದುಕೊಳ್ಳುತ್ತಾ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ ಎದ್ದರಾಯಿತು ಎನ್ನುತ್ತಾ ಮಲಗಿದ ಸವಿತಾಳಿಗೆ, ಕಾಲಿಂಗ್ ಬೆಲ್ ಶಬ್ದಕ್ಕೆ ಎಚ್ಚರವಾಯಿತು.
`ಅಯ್ಯೋ ದೇವರೇ, ಈ ಹಾಳಾದ ನಿದ್ದೆ ರಾತ್ರಿ ಬಾ ಅಂದರೆ ಬರಲ್ಲ. ಇವತ್ತೇನೂ ಸಂಜೆಯವರೆಗೆ ಮಲಗಿದ್ದೇನೆ,' ಎನ್ನುತ್ತಾ ಓಡಿ ಬಂದು ಬಾಗಿಲು ತೆರೆಯಲು ಅರುಣ್ ನಿಂತಿದ್ದ.
``ಬಾ ಅರುಣ್,'' ಎಂದಳು.
``ಅಮ್ಮಾ, ಇಲ್ಲಿ ನೋಡು,'' ಎಂದಾಗ ಸವಿತಾ ಹೊರಗೆ ಗೋಣು ಹಾಕಿ ನೋಡಲು ಆಶ್ಚರ್ಯವಾಯಿತು ಅದೇ ವ್ಯಕ್ತಿ ಗೂಡು ಕಾಲು ಹಾಕಿ ಮಲಗಿಕೊಂಡು ನರಳುತ್ತಿದ್ದಾನೆ.