ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯೊಂದರಲ್ಲಿ ಸೀನಿಯರ್ ಸಾಫ್ಟ್ವೇರ್ ಆರ್ಕಿಟೆಕ್ಟ್ ಆಗಿರುವ ಈ ಆಕಾಶ್ಗೆ ದಿನದ 24 ಗಂಟೆಯೂ ಸಾಲುತ್ತಿರಲಿಲ್ಲ. ಸದಾ ಮೊಬೈಲ್ ನಲ್ಲಿ ನೋಟಿಫಿಕೇಶನ್ಗಳು, ಲ್ಯಾಪ್ಟಾಪ್ ಸ್ಕ್ರೀನ್ ನಲ್ಲಿ ಜೂಮ್ ಮೀಟಿಂಗ್ಗಳದ್ದೇ ಅಬ್ಬರ. ಅವನ ತಲೆಯಲ್ಲಿ ಸದಾ ಕೋಡಿಂಗ್, ಡೆಡ್ಲೈನ್ಗಳದ್ದೇ ಗದ್ದಲವಿರುತಿತ್ತು. ಜಗತ್ತಿನ ಎಲ್ಲ ತಂತ್ರಜ್ಞಾನಗಳ ಜೊತೆಗೆ ಕನೆಕ್ಟ್ ಆಗಿದ್ದ ಆಕಾಶ್, ನನ್ನ ಜೊತೆಗೆ ಮಾತ್ರ ಕನೆಕ್ಟ್ ಆಗುವುದನ್ನೇ ಮರೆತುಬಿಟ್ಟಿದ್ದ.ಒಂದು ದಿನ ಸತತ ಕೆಲಸದ ಒತ್ತಡದಿಂದಾಗಿ ಆಕಾಶ್ಗೆ ತೀವ್ರ ತಲೆನೋವು ಮತ್ತು ಆತಂಕ ಕಾಣಿಸಿಕೊಂಡಿತು. ವೈದ್ಯರು ಅವನಿಗೆ ಮಾತ್ರೆಗಳನ್ನು ಕೊಡುವುದರ ಜೊತೆಗೆ ನಿಮ್ಮ ತಲೆಯಲ್ಲಿ ಅತಿಯಾದ ಮೆಸೇಜ್ಗಳಿಂದ ಟ್ರಾಫಿಕ್ ಜಾಮ್ ಆಗಿದೆ. ಮೊದಲು ಈ ಮೊಬೈಲ್ ಆಫ್ ಮಾಡಿ, ಕನಿಷ್ಠ ಮೂರು ದಿನ ಯಾರಲ್ಲೂ ಮಾತನಾಡದೆ ಮೌನವಾಗಿರಿ... ಎಂದು ಕಡ್ಡಾಯವಾಗಿ ಸಲಹೆ ನೀಡಿದರು.ಅದೆಷ್ಟೋ ಹೊತ್ತು ಕುಳಿತು ಯೋಚಿಸಿ ಬೇರೆ ದಾರಿಯಿಲ್ಲದೆ ಆಕಾಶ್ ಪಶ್ಚಿಮ ಘಟ್ಟದ ಒಂದು ಸಣ್ಣ ಹಳ್ಳಿಯ ರೆಸಾರ್ಟ್ಗೆ ಹೊರಟು ನಿಂತ. ಅಲ್ಲಿ ಮೊಬೈಲ್ ನೆಟ್ವರ್ಕ್ ಇರಲಿಲ್ಲ.ಅಲ್ಲಿಗೆ ಹೋದ ಮೊದಲ ದಿನವಂತೂ ಉಸಿರುಗಟ್ಟಿದಂತಾಯಿತು. ಹೊರಗೆ ನಿಶ್ಯಬ್ದವಿತ್ತಾದರೂ ಮನಸ್ಸಿನೊಳಗೆ ಆಫೀಸ್ ಇಮೇಲ್ಗಳು, ಇನ್ನೊಂದು ಕೋಡ್ ಸಬ್ಮಿಟ್ ಮಾಡಬೇಕಿತ್ತು, ಕ್ಲೈಂಟ್ ಏನು ಅಂದುಕೊಳ್ಳಬಹುದು ಎಂಬ ಆಲೋಚನೆಗಳು ಸುಳಿದಾಡುತ್ತಿದ್ದವು. ಮಾತನಾಡದೆ ಇರುವುದು ಅವನಿಗೆ ಯಾಕೋ ಒಂದು ದೊಡ್ಡ ಶಿಕ್ಷೆಯಂತೆ ಭಾಸವಾಯಿತು.
ಎರಡನೆಯ ದಿನ ಡಾಕ್ಟರ್ ಹೇಳಿಕೆಯಂತೆ ಪ್ರಕೃತಿಯೊಂದಿಗೆ ಸಂಭಾಷಣೆ ಹೊರಗಿನ ನಿಶ್ಯಬ್ದವನ್ನು ಆಕಾಶ್ ನಿಧಾನವಾಗಿ ಗಮನಿಸಲು ಶುರುಮಾಡಿದ. ಮೊಬೈಲ್ ಪರದೆಯಿಂದ ಕಣ್ಣು ಹೊರತೆಗೆದಾಗ, ರೆಸಾರ್ಟ್ ಮುಂದಿನ ತೋಟದಲ್ಲಿದ್ದ ಹಕ್ಕಿಗಳ ಕಲರವ, ಗಾಳಿಗೆ ಎಲೆಗಳು ಅಲುಗಾಡುವ ಶಬ್ದ, ಹರಿಯುವ ಸಣ್ಣ ತೊರೆಯ ನಾದ ಅವನಿಗೆ ಕೇಳಿಸತೊಡಗಿದವು. ಮೊಬೈಲ್ನ ರೀಲ್ಸ್ ಬದಲು, ಪ್ರಕೃತಿಯ ಲೈವ್ ದೃಶ್ಯಗಳು ಅವನ ಕಣ್ಣಿಗೆ ಬಿದ್ದವು. ಅಚ್ಚರಿಯೆಂದರೆ, ಅವನ ತಲೆಯಲ್ಲಿದ್ದ ಆಫೀಸ್ ಯೋಚನೆಗಳ ವೇಗ ನಿಧಾನವಾಗಿ ಕಡಿಮೆ ಆಗುತ್ತಾ ಬಂತು.
ಇದನ್ನೆಲ್ಲಾ ಸೂಕ್ಷ್ಮವಾಗಿ ನಾನು ಗಮನಿಸುತ್ತಿದ್ದೆ, ಆದರೂ ಆಕಾಶನಿಗೆ ಏನೂ ಹೇಳಿರಲಿಲ್ಲ. ಇಂದು
ಅದೆಷ್ಟು ಬೇಗ ಸುಖ ನಿದ್ರೆಗೆ ಜಾರಿದ ಎಂದು ನೋಡಿದಾಗ ನನ್ನ ಸಂಭ್ರಮ ಹೇಳತೀರದು.

ಮಾರನೆಯ ದಿನದ ಮುಂಜಾನೆ ಆಕಾಶ್ ಕಣ್ಣು ಬಿಟ್ಟಾಗ ಅವನ ಬದುಕಿನಲ್ಲಿ ಅದೊಂದು ರೀತಿಯ ಹೊಸದಾದ ಅನುಭವವಾಯಿತು.ಆತನ ತಲೆಯಲ್ಲಿ ಯಾವುದೇ ಆತಂಕವಿರಲಿಲ್ಲ. ತಾನು ಉಸಿರಾಡುತ್ತಿರುವುದನ್ನು, ತನ್ನ ಹೃದಯದ ಬಡಿತವನ್ನು ಅವನು ಸ್ಪಷ್ಟವಾಗಿ ಅನುಭವಿಸಿದ. ಜೊತೆಗೆ ನನ್ನೊಂದಿಗೂ ಆತ್ಮೀಯವಾಗಿ ನಡೆದುಕೊಂಡಿದ್ದು ಇತ್ತೀಚಿನ ದಿನಮಾನಗಳಲ್ಲಿ ಬಹು ವಿಶೇಷವೇ..
ಅದು ಕೇವಲ ಬಾಯಿಯ ಮೌನವಾಗಿರಲಿಲ್ಲ, ಅವನ ಮನಸ್ಸಿನ ಆಳದಿಂದ ಹೊರಹೊಮ್ಮಿದ ಮೌನವಾಗಿತ್ತು. ಆ ಅಗಾಧತೆಯಲ್ಲಿ ಅವನಿಗೆ ತನ್ನ ನಿಜವಾದ ಆಸೆ,ಆಕಾಂಕ್ಷೆಗಳು,ಯಂತ್ರದಂತಿಹ ಜೀವನಶೈಲಿಯಿಂದ ಆರೋಗ್ಯದ ಮೇಲಾದ ಪರಿಣಾಮ, ನಿರ್ದಿಷ್ಟ ಸಮಯ ಪರಿಪಾಲನೆಯ ಮಹತ್ವ ಮತ್ತು ಜೀವನದಲ್ಲಿ ನಿಜವಾದ ಸಂತೋಷ,ಸಂಭ್ರಮ ಆತ್ಮತೃಪ್ತಿ, ಖುಷಿಯೆಂದರೆ ಏನೆಂಬುದು ಅರ್ಥವಾದಂತಾಯ್ತು. ಹೊರಗಿನ ಯಾವುದೇ ಗ್ಯಾಜೆಟ್ಗಳಿಲ್ಲದೆ ತನ್ನೊಳಗೆ ತಾನು ಅತ್ಯಂತ ಶಾಂತಚಿತ್ತನಾಗಿ ಸಂತೃಪ್ತನಾಗಿ ಹೇಗೆ ಬದುಕಬೇಕೆಂಬುದನ್ನು ಕಂಡುಕೊಂಡ.





