ನೀಳ್ಗಥೆ - ಪ್ರಕಾಶ ಕಕ್ಕನವರ
ಮಾತೃ ಹೃದಯಕ್ಕೆ ಹೊಸಬರು ಖಂಡಿತಾ ಅಪರಿಚಿತರಲ್ಲ. ಸ್ವಂತ ಮಗ ವಿದೇಶ ಸೇರಿ ದೂರವಾದ ಕೊರಗಿನಲ್ಲಿದ್ದ ಲಲಿತಮ್ಮನಿಗೆ ಆಕಸ್ಮಿಕವಾಗಿ ಶರವಣನ ಪರಿಚಯವಾಯಿತು. ಅದು ಮುಂದಕ್ಕೆ ಯಾವ ಘಟ್ಟ ತಲುಪಿತು.......?
ಲಲಿತಮ್ಮ ಮುಂಜಾವಿನ ವಿಹಾರಕ್ಕೆಂದು ಉದ್ಯಾನವನಕ್ಕೆ ಬಂದಾಗ ದಿನಕ್ಕಿಂತ ಅರ್ಧ ಗಂಟೆ ಲೇಟ್ ಆಗಿತ್ತು. ಉದ್ಯಾನವನದ ಗೇಟ್ ದಾಟಿ ಒಳ ಪ್ರವೇಶಿಸುತ್ತಿದ್ದಂತೆ ಬಿರುಸಾಗಿ ಓಡಿ ಬರುತ್ತಿದ್ದ ಒಬ್ಬ ದಡೂತಿ ವ್ಯಕ್ತಿ ಲಲಿತಮ್ಮನವರಿಗೆ ಬಲವಾಗಿ ಗುದ್ದಿದ. ಆ ರಭಸಕ್ಕೆ ಲಲಿತಮ್ಮ ಆಯತಪ್ಪಿ ಮುಗ್ಗರಿಸಿ ಬೀಳುವವರಿದ್ದರು ಆಗ ಎದುರಾಗಿ ಬರುತ್ತಿದ್ದ ಒಬ್ಬ ಯುವಕ ಓಡಿ ಬಂದು ಅವರನ್ನು ಹಿಡಿದು ನಿಲ್ಲಿಸಿ ಹತ್ತಿರದ ಕಲ್ಲು ಬಾಕಿಗೆ ಕುಳ್ಳಿರಿಸಿದ.
``ಅಮ್ಮಾ ಪೆಟ್ಟಾಯ್ತಾ.....?!!'' ಆ ಯುವಕ ಮುಗುಳ್ನಗುತ್ತ ಕೇಳಿದ.
ನೋವಿನಿಂದ ನರಳುತ್ತಿದ್ದ ಲಲಿತಮ್ಮ, ``ಅಯ್ಯೋ ಅಂತಹದೇನೂ ಆಗಿಲ್ಲಪ್ಪಾ..... ನೀನು ಯಾಕೆ ಇಷ್ಟೊಂದು ಗಾಬರಿ ಆಗಿದ್ದೀಯಾ?!'' ಎಂದು ಕೇಳಿದರು.
ಆ ಹುಡುಗ ಹೆಚ್ಚು ಹೊತ್ತು ನಿಲ್ಲದೇ ಮತ್ತೆ ತನ್ನ ರನ್ನಿಂಗ್ ರೌಂಡ್ಸ್ ಹಾಕುತ್ತಾ ಮುಂದೆ ಸಾಗಿದ.
ಲಲಿತಮ್ಮ ಓಡುತ್ತಿರುವ ಆ ಯುವಕನನ್ನೇ ನೋಡುತ್ತಾ ಕುಳಿತರು. ಲಲಿತಮ್ಮ ಆಯತಪ್ಪಿ ಬೀಳುತ್ತಿದ್ದಾಗ ಅಮೆರಿಕಾದಲ್ಲಿರುವ ತಮ್ಮ ಮಗ ಸುಮಿತನೇ ಬಂದು ಹಿಡಿದಂತೆ ಭಾಸವಾಯಿತು....!!
`ಹ್ಞೂಂ.... ನನ್ನ ಮಗ ನನ್ನ ಜೊತೆ ಇರಲು ನಾನು ಪುಣ್ಯ ಮಾಡಿರಬೇಕಲ್ಲ....?' ಎಂದುಕೊಂಡರು.
ಲಲಿತಮ್ಮ ಎಪ್ಪತ್ತು ವರ್ಷದ ಮಹಿಳೆ. ವಿಶಾಲವಾದ ಮನೆ, ಕಾರು, ಸಾಕಷ್ಟು ದುಡ್ಡು, ಸಂಪತ್ತು ಎಲ್ಲವೂ ಇದೆ. ಒಬ್ಬನೇ ಮಗ ಸುಮಿತ್ ಅಮೆರಿಕಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಅವನಿಗೆ ಮದುವೆ ಆಗಿ ಒಬ್ಬ ಮಗ ಇದ್ದಾನೆ. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಯಜಮಾನರ ಅಕಾಲಿಕ ಸಾವು ಲಲಿತಮ್ಮನವರ ಎದೆ ನಡುಗಿಸಿತ್ತು. ಯಜಮಾನರು ಸರ್ಕಾರಿ ಕಛೇರಿಯಲ್ಲಿ ದೊಡ್ಡ ಅಧಿಕಾರಿಗಳಾಗಿದ್ದರು. ಮನೆ ಪ್ರತಿನಿತ್ಯ ಜನರಿಂದ, ಆಳುಕಾಳುಗಳಿಂದ ತುಂಬಿರುತ್ತಿತ್ತು. ಯಜಮಾನರ ಕಾರು ಮನೆ ಹತ್ತಿರ ಬರುತ್ತಿದ್ದಂತೆ ಜನಸಮೂಹ ಮನೆಯತ್ತ ಕಿಕ್ಕಿರಿಯುತ್ತಿತ್ತು. ಈಗ ಅದು ಏನೂ ಇಲ್ಲ. ಅವರು ಗತ್ತಿನಿಂದ ಓಡಾಡುತ್ತಿದ್ದ ಕಾರು ಈಗ ಧೂಳು ತಿಂದು ಶೆಡ್ ಸೇರಿಕೊಂಡಿದೆ. ಮನೆ ಮುಂದೆ ಇದ್ದ ವಿಶಾಲವಾದ ಈಜುಕೊಳ ಹಾಳಾಗಿಹೋಗಿದೆ. ಈಗ ಈ ವಿಶಾಲವಾದ ಮನೆಯಲ್ಲಿ ಒಂಟಿತನ ಅವರನ್ನು ಕಾಡುತ್ತಿತ್ತು. ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಬಲವಂತದಿಂದ ಅವರ ದೇಹ ಹೊಕ್ಕು ಮನೆ ಮಾಡಿಕೊಂಡಿದ್ದ.
ಮಧುಮೇಹ ರೋಗ ಹಿಡಿತದಲ್ಲಿ ಇರಬೇಕಾದರೆ ವೈದ್ಯರ ಸಲಹೆಯಂತೆ ಪ್ರತಿನಿತ್ಯ ವಾಕಿಂಗ್ ಅಂತ ಹೋಗಬೇಕು. ಲಲಿತಮ್ಮ ಹತ್ತಿರದಲ್ಲಿದ್ದ ಉದ್ಯಾನವನಕ್ಕೆ ಮುಂಜಾವಿನ ವಿಹಾರಕ್ಕೆಂದು ಪ್ರತಿನಿತ್ಯ ಹೋಗುತ್ತಿದ್ದರು.
ಲಲಿತಮ್ಮನವರನ್ನು ಆಗಾಧ ಒಂಟಿತನ ಕಾಡುತ್ತಿತ್ತು. ಮಗ ಸುಮಿತ್ ಒಬ್ಬನೇ ಅವರ ಬದುಕಿನ ಆಧಾರ. ಅವನಿಗೆ ಫೋನ್ ಮಾಡಿದರೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಅಕಸ್ಮಾತ್ ಉತ್ತರಿಸಿದರೆ, ಚೆನ್ನಾಗಿ ಮಾತಾಡುತ್ತಿರಲಿಲ್ಲ.
ದಿನ ನಿತ್ಯದಂತೆ ಲಲಿತಮ್ಮ ಸಿದ್ಧರಾಗಿ ವಾಯು ವಿಹಾರಕ್ಕೆಂದು ಹೊರಟರು. ಒಂದು ಸುತ್ತು ಸುತ್ತಿ ಅರ್ಧ ಗಂಟೆ ಕೂತು ಬರುವುದು ಅವರ ನಿತ್ಯದ ರೂಢಿ. ಒಂದನೇ ಸುತ್ತು ಆರಂಭವಾಗುತ್ತಿದ್ದಂತೆ, ``ನಮಸ್ಕಾರ್ರೀ ಆಂಟಿ... ಹ್ಯಾಂಗ ಇದ್ದೀರಿ....?!'' ನಿನ್ನೆ ಸಹಾಯ ಮಾಡಿದ ಯುವಕ ಎದುರು ಬಂದು ನಸುನಗುತ್ತಾ ನಿಂತಿದ್ದ. ಲಲಿತಮ್ಮನವರಿಗೆ ಮೊದಲು ಆತ ಯಾರು ಎಂದು ಗುರುತು ಸಿಗಲಿಲ್ಲ.





