ನೀಳ್ಗಥೆ – ರಾಧಿಕಾ ಮನೋಹರ್‌

ಭಾಗ  ಮೂರು  

ಇಲ್ಲಿಯರೆಗೆ………

ಅಶ್ವಿನ್‌ ವೃತ್ತಿಯಿಂದ ಒಬ್ಬ ವೈದ್ಯರು. ಒಂದು ಒಳ್ಳೆಯ ಕಂಪನಿಯಲ್ಲಿ ಸೀನಿಯರ್‌ ಮ್ಯಾನೇಜರ್‌ ಹುದ್ದೆಯಲ್ಲಿದ್ದ ನಂದಿತಾಳ ಜೊತೆ ಅವರ ಮದುವೆಯಾಯಿತು. ನಂದಿತಾ ಸದಾ ನಿರುತ್ಸಾಹದಲ್ಲಿರುತ್ತಿದ್ದಳು. ಹಾಸಿಗೆಯಲ್ಲಿಯೂ ಅವಳು ಒಬ್ಬ ಪತ್ನಿಯಂತೆ ವ್ಯವಹರಿಸುತ್ತಿರಲಿಲ್ಲ. ಒಂದು ದಿನ ಅಶ್ವಿನ್‌ ಒತ್ತಾಯಿಸಿ ಕಾರಣ ಕೇಳಲು ತಾನು ಬೇರೊಬ್ಬನ ಪ್ರೀತಿಯಲ್ಲಿ ಹುಚ್ಚಾಗಿರುವುದನ್ನು ತಿಳಿಸಿದಳು. ಆಶ್ಚರ್ಯವೆಂದರೆ ಆ ಇನ್ನೊಬ್ಬ  ವ್ಯಕ್ತಿ ವಿವಾಹಿತ!

ನಂದಿತಾಳಿಂದ ವಿಚ್ಛೇದನ ಪಡೆದ ನಂತರ ಅಶ್ವಿನ್‌ ದಿವ್ಯಾಳನ್ನು ಮರುಮದುವೆಯಾದರು. ದಿವ್ಯಾ ಮತ್ತು ತಮ್ಮ 8 ವರ್ಷದ  ಮಗನೊಂದಿಗೆ ಯಾವುದೇ ಕಹಿಯಿಲ್ಲದ ದಾಂಪತ್ಯ ಜೀವನ ನಡೆಸುತ್ತಾ ಸುಖವಾಗಿದ್ದರು.

10 ವರ್ಷಗಳ ನಂತರ ಇದ್ದಕ್ಕಿದ್ದಂತೆ ನಂದಿತಾ ಒಂದು ದಿನ ಅಶ್ವಿನ್‌ ಅವರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಬಂದಳು. ತಾನು ಅತ್ಯಂತ ಹೀನ ಮತ್ತು ಅಸಹಾಯಕ ಸ್ಥಿತಿಯಲ್ಲಿರುವುದನ್ನು ತಿಳಿಸಿ ಮತ್ತೆ ಮತ್ತೆ ಅವರ ಕ್ಷಮೆ ಕೇಳಿದಳು.

ಸರಳ ಸ್ವಭಾವದ ಅಶ್ವಿನ್‌ ಅವಳ ಮಾತುಗಳನ್ನು ನಂಬಿ ಸಹಾಯ ಮಾಡಲು ಮುಂದಾದರು. ಅವಳಿಗೆ ಒಂದು ಬಾಡಿಗೆ ಮನೆಯನ್ನು ಗೊತ್ತು ಮಾಡಿ ಅವಳ ವ್ಯವಸ್ಥೆಗೆ ಅಗತ್ಯವಾದ ಆರ್ಥಿಕ ನೆರವನ್ನೂ ನೀಡಿದರು.

ಅಶ್ವಿನ್‌ ಮನೆಗೆ ಬರಬೇಕೆಂದು ಒಂದು ದಿನ ನಂದಿತಾ ಮತ್ತೆ ಮತ್ತೆ  ಕೇಳಿಕೊಂಡಳು. ಕ್ಲಿನಿಕ್‌ ಮುಗಿಸಿ ಅವಳ ಮನೆ ತಲುಪಿದಾಗ ನಂದಿತಾ ಚೆನ್ನಾಗಿ ಅಲಂಕರಿಸಿಕೊಂಡು ತಮಗಾಗಿ ಕಾಯುತ್ತಿದ್ದುದು ಕಂಡಿತು.

ಮುಂದೆ ಓದಿ……

“ಬನ್ನಿ ಬನ್ನಿ…. ನೀವು ಬಂದೇ ಬರುವಿರೆಂದು ನನಗೆ ವಿಶ್ವಾಸವಿತ್ತು,” ನಂದಿತಾ ಕೊರಳು ಕೊಂಕಿಸಿ ನುಡಿದಳು. ಅವಳ ಶರೀರದ ವೈಯಾರಕ್ಕೆ ತಕ್ಕಂತೆ ಧ್ವನಿಯಲ್ಲೂ ಜೇನು ಒಸರುತ್ತಿತ್ತು. ಅವಳು ಬೇಕೆಂದೇ ಹಾಗೆ ಮಾಡುತ್ತಿದ್ದಳೋ ಅಥವಾ ಅಶ್ವಿನ್‌ರನ್ನು ನೋಡಿದ ಸಂತೋಷದಿಂದ  ಭಾವವಿಹ್ವಲಗೊಂಡಿದ್ದಳೋ ತಿಳಿಯುತ್ತಿರಲಿಲ್ಲ. ಅವಳ ನಡವಳಿಕೆಯನ್ನು ನೋಡಿದರೆ, ಅವರಿಬ್ಬರ ಸಂಬಂಧದಲ್ಲಿ ಬಿರುಕು ಹುಟ್ಟಿ ಇಬ್ಬರೂ ಪರಸ್ಪರ ದೂರವಾಗಿದ್ದರು ಎಂದು ಯಾರಿಗೂ ಅನ್ನಿಸುವಂತಿರಲಿಲ್ಲ. ನಂದಿತಾ ಅವರ ಪತ್ನಿಯೇ ಎನ್ನುವಂತಿತ್ತು ಅವಳ ವ್ಯವಹಾರ.

ನಂದಿತಾಳ ಸ್ವಚ್ಛಂದ ಭಾವದಿಂದ ಅಶ್ವಿನ್‌ ಮನಸ್ಸು ಕೊಂಚ ಡೋಲಾಯಮಾನವಾಯಿತು. ಸ್ತ್ರೀಯ ಸೌಂದರ್ಯ ಮತ್ತು ಚಾಂಚಲ್ಯ ಪುರುಷನ ಮನಸ್ಸನ್ನು ಅಲುಗಿಸದಿರದೇ? ಅದರಲ್ಲೂ ನಂದಿತಾ ಅವರ ಮಾಜಿ ಪತ್ನಿ. ಅವಳ ಪ್ರತ್ಯೇಕ ಅಂಗವನ್ನು ಕಂಡಿದ್ದವರು. ಹಾಗಿರುವಾಗ ಇಷ್ಟು ಕಾಲದ ನಂತರ ಅವಳು ಸಂಕೋಚವಿಲ್ಲದೆ ಸೌಂದರ್ಯ ಪ್ರದರ್ಶನ ಮಾಡಿದರೆ ಮನಸ್ಸು ಹರಿದಾಡದಿರುವುದೇ?

ಅಶ್ವಿನ್‌ ಹೊರಗೆ ಏನೂ ಪ್ರಕಟಿಸದೆ, ಅವಳತ್ತ ನೋಡದೆ ಒಳಗೆ ಹೋಗಿ ಕುಳಿತರು. ನಂದಿತಾ ತನ್ನ ಮನೆಯನ್ನು ಬಹು ಸುಂದರವಾಗಿ ಸಜ್ಜುಗೊಳಿಸಿದ್ದಳು. ಮನೆ ಚಿಕ್ಕದಾಗಿತ್ತು. ಆದರೆ ಗೃಹಿಣಿಯು ಜಾಣೆಯಾದರೆ ಚಿಕ್ಕ ಜಾಗವನ್ನೂ ಚೊಕ್ಕವಾಗಿಡಬಲ್ಲಳು. ನಂದಿತಾಳ ಈ ಗುಣ ಅಶ್ವಿನ್‌ಗೆ ತಿಳಿದಿರಲಿಲ್ಲ. ಏಕೆಂದರೆ ಅವರಿಬ್ಬರು ಮದುವೆಯಾಗಿ ಮನೆ ಮಾಡಿಕೊಂಡಿದ್ದಾಗ ನಂದಿತಾಳ ಮನಸ್ಸು ಮನೆಯಲ್ಲಿರಲೇ ಇಲ್ಲ, ತನು ಮಾತ್ರ ಅಲ್ಲಿತ್ತು ಅಷ್ಟೆ. ಹಾಗಿರುವಾಗ ಮನೆಯ ಕಡೆ ಗಮನವೆಲ್ಲಿರುತ್ತದೆ?

ಸಿಹಿ ತಿಂದು ಅಶ್ವಿನ್‌ ಹೊರಡಲು ಎದ್ದಾಗ ನಂದಿತಾ, “ನಿಮಗೆ ಹೇಗೆ ಧನ್ಯವಾದ ಹೇಳಲಿ?” ಎಂದು ಮೃದುವಾಗಿ ಅವರ ಕೈ ಹಿಡಿದು ಅದುಮಿದಳು.

ಅಶ್ವಿನ್‌ ಶರೀರದಲ್ಲಿ ವಿದ್ಯುತ್‌ ಸಂಚಾರವಾದಂತಾಯಿತು. ನಂದಿತಾಳ ಸ್ಪರ್ಶ ಉತ್ತೇಜಿತವಾಗಿತ್ತು. ಜೊತೆಗೆ ಅದು ಮೊದಲ ಬಾರಿಯ ಸ್ಪರ್ಶದಂತೆ ಭಾಸವಾಯಿತು. ಅವಳ ವಯಸ್ಸು 10 ವರ್ಷ ಹೆಚ್ಚಾಗಿತ್ತು ಎನ್ನುವುದಷ್ಟಲ್ಲದೆ ಅವಳ ಸೌಂದರ್ಯ ಕುಂದಿರಲಿಲ್ಲ. ಯಾವುದೇ ಪುರುಷನ ಮನಸ್ಸನ್ನು ಮೀಟಬಲ್ಲ ಶಕ್ತಿ ಅವಳ ಸೌಂದರ್ಯಕ್ಕಿತ್ತು.

ಅಶ್ವಿನ್‌ ಅವಳತ್ತ ನೋಡದೆ ತಮ್ಮ ಕೈ ಬಿಡಿಸಿಕೊಂಡು ಹೇಳಿದರು, “ಇದರಲ್ಲಿ ಧನ್ಯವಾದ ಹೇಳುವ ಅಶ್ಯಕತೆ ಏನು? ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು.”

ಮನುಷ್ಯ ಸೌಂದರ್ಯೋಪಾಸಕ. ಎಲ್ಲ ಬಗೆಯ ಸೌಂದರ್ಯ ಅವನನ್ನು ಆಕರ್ಷಿಸುತ್ತದೆ. ನಂದಿತಾಳ ಸೌಂದರ್ಯ ಅಶ್ವಿನ್‌ಗೆ ಹೊಸದೇನೂ ಅಲ್ಲ. ಆದರೆ ಇಂದು ಅವಳು ಹೊಸ ಬಗೆಯಾಗಿ ಕಾಣುತ್ತಿದ್ದಳು. ಸ್ತ್ರೀ ಪ್ರತಿಬಾರಿಯೂ ಹೊಸ ರೂಪ ಮತ್ತು ಹೊಸ ರೀತಿಯಿಂದ ಕಾಣುತ್ತಾಳೆ. ಆದ್ದರಿಂದಲೇ ಆ ರೂಪ ಪುರುಷನನ್ನು ಆಕರ್ಷಿಸುತ್ತದೆ.

ಅಶ್ವಿನ್‌ ಕೊಂಚ ವಿಚಲಿತರಾಗಿದ್ದರು. ಮನೆಗೆ ಬಂದು ಅವರು ದಿವ್ಯಾಳನ್ನು ದೃಷ್ಟಿಯಿಟ್ಟು ನೋಡಿದರು. ಅವಳೂ ಹೊಸ ಬಗೆಯಾಗಿ ಕಂಡಳು. ಬೆಳಗಿನ ಎಳೆ ಬಿಸಿಲಿನಲ್ಲಿ ಅರಳಿ ನಿಂತ ಬಣ್ಣದ ಹೂವಿನಂತೆ ಕಾಣಿಸಿದಳು. ಒಂದು ಮಗುವಿನ ತಾಯಿಯಾಗಿದ್ದರೂ ಸೌಂದರ್ಯವೇನೂ ಕುಂದಿರಲಿಲ್ಲ. ಅವಳು ಒಬ್ಬ ಡಾಕ್ಟರ್‌ನ ಪತ್ನಿ. ತನ್ನ ಶರೀರವನ್ನು ಕಾಪಾಡಿಟ್ಟುಕೊಂಡಿದ್ದಳು. ದಿವ್ಯಾ ಮತ್ತು ನಂದಿತಾ ಇಬ್ಬರನ್ನೂ ಅಶ್ವಿನ್‌ ಹೋಲಿಸಿ ನೋಡಿದರು. ಇಬ್ಬರ ರೂಪ, ಗುಣಗಳು ಬೇರೆ ಬೇರೆ. ಒಬ್ಬಳು ತನ್ನ ಸಂಸಾರಕ್ಕಾಗಿ ಸಮರ್ಪಿತಳಾಗಿದ್ದಳು. ಇನ್ನೊಬ್ಬಳು ಸ್ವಚ್ಛಂದವಾಗಿ ಹಾರಾಡುವ ಚಿಟ್ಟೆಯಂತೆ…. ಆದರೆ ಇಬ್ಬರದೂ ಮನಮೋಹಕ ಸೌಂದರ್ಯ.

ನಂದಿತಾಳಿಗೆ ಒಂದು ನೆಲೆ ಮಾಡಿಕೊಟ್ಟಿದ್ದಕ್ಕಾಗಿ ಅಶ್ವಿನ್‌ಗೆ ಸಮಾಧಾನವಾಗಿತ್ತು. ಆದರೆ ಅದಕ್ಕಾಗಿ ಪ್ರತಿಫಲ ಪಡೆಯಬೇಕೆಂಬ ವಿಚಾರವೆಂದೂ ಅವರ ಮನಸ್ಸಿಗೆ ಬಂದಿರಲಿಲ್ಲ. ಅವರು ನಂದಿತಾಳಿಗೆ ತಾವಾಗಿ ಫೋನ್‌ನ್ನು ಮಾಡುತ್ತಿರಲಿಲ್ಲ. ಆದರೆ ಅವಳಿಂದ ಫೋನ್‌ ಬಾರದಿದ್ದರೆ ಅವರಿಗೆ ಶಾಂತಿ ಇರುತ್ತಿರಲಿಲ್ಲ. ಇವಳು ಸಿಹಿಯಾಗಿ ಮಾತನಾಡುತ್ತಿದ್ದಳು. ಕೆಲವು ಸಲ ಹಿಂದಿನ ವಿಷಯವನ್ನು ತೆಗೆದು ಅವರ ಕ್ಷಮೆ ಕೇಳುತ್ತಿದ್ದಳು. ತಾನು ಅವರಿಗೆ ಎಷ್ಟು ಋಣಿ ಎಂದು ಬಣ್ಣಿಸುತ್ತಿದ್ದಳು. ಅವರ ಉಪಕಾರಕ್ಕೆ ಬದಲಾಗಿ ತಾನು ಏನಾದರೂ ಮಾಡಲು ಬಯಸುವುದಾಗಿ ಹೇಳುತ್ತಿದ್ದಳು.

ಅಶ್ವಿನ್‌ ಆ ಮಾತಿಗೆ ನಕ್ಕು ಸುಮ್ಮನಾಗಿ ಬಿಡುತ್ತಿದ್ದರು. ಇದರಿಂದ ನಂದಿತಾಳಿಗೆ ಅವರಿಗೆ ತನ್ನಿಂದ ಒಂದು ಅಪೇಕ್ಷೆ ಇದೆ ಎಂದು ಭಾವಿಸುತ್ತಿದ್ದಳು.

ನಂದಿತಾ ಫೋನ್‌ ಮಾಡಿದಾಗೆಲ್ಲ ಅವರನ್ನು ಮನೆಗೆ ಆಹ್ವಾನಿಸುತ್ತಿದ್ದಳು. ಅವಳ ಮಾತು ಹೇಗಿರುತ್ತಿತ್ತೆಂದರೆ. ಅಶ್ವಿನ್‌ಗೆ ಅವಳ ಆಹ್ವಾನವನ್ನು ತಿರಸ್ಕರಿಸಿ ಮನನೋಯಿಸಲು ಇಷ್ಟವಾಗುತ್ತಿರಲಿಲ್ಲ. ನಂದಿತಾ ಒಂಟಿಯಾಗಿದ್ದಾಳೆ. ಈ ಊರಿನಲ್ಲಿ ಅವಳಿಗೆ ತಿಳಿದವರು ಯಾರೂ ಇಲ್ಲ ಎಂದು ಅವಳ ಸಂತೋಷಕ್ಕಾಗಿ ಅಶ್ವಿನ್‌ ಆಗಾಗ ಅಲ್ಲಿಗೆ ಹೋಗುತ್ತಿದ್ದರು. ನಂದಿತಾ ಅವರನ್ನು ಆದರದಿಂದ ಸ್ವಾಗತಿಸಿ ಅವರಿಗಾಗಿ ಬಿಸಿಯಾಗಿ ತಿಂಡಿ ಮಾಡಿಕೊಡುತ್ತಿದ್ದಳು. ಅಶ್ವಿನ್‌ ಸ್ವಲ್ಪ ಸಮಯ ಅಲ್ಲಿ ಕುಳಿತಿದ್ದು ಅವಳ ಮಾತುಗಳನ್ನು ಕೇಳಿಸಿಕೊಂಡು ಮನೆಗೆ ಹೋಗುತ್ತಿದ್ದರು.

ಒಂದು ದಿನ ನಂದಿತಾ ಸೋಫಾದಲ್ಲಿ ಅವರ ಪಕ್ಕಕ್ಕೇ ಬಂದು ಕುಳಿತಳು. ಅಶ್ವಿನ್‌ ಬೆಚ್ಚಿ ದೂರ ಸರಿದು ಕೊಂಚ ಮೈ ಮುದುರಿ ಕುಳಿತರು.

ಅವಳು ನಕ್ಕು, “ನೀವು ನನ್ನಿಂದ ದೂರ ಕುಳಿತುಕೊಳ್ಳುವುದೇಕೆ? ನಾನು ನಿಮ್ಮ ಪತ್ನಿಯಾಗಿದ್ದವಳು. ಈಗಲೂ ನಮ್ಮಲ್ಲಿ  ಅದೇ ಆತ್ಮೀಯತೆ ಇದೆ…. ಮತ್ತೆ ದೂರ ಏಕೆ…..” ಕೇಳಿದಳು.

ಅಶ್ವಿನ್‌ ಏನು ಹೇಳಬೇಕೆಂದು ತಿಳಿಯದೆ ಸುಮ್ಮನೆ ಒಂದು ಮಾತು ಆಡಿದರು, “ಹ್ಞಾಂ…. ಏನಿಲ್ಲ…. ಇಲ್ಲೇ ಸರಿಯಾಗಿದೆ.”

“ಆದರೆ ನನಗೆ ಸರಿಯಾಗಿಲ್ಲ…..,” ನಂದಿತಾ ಮತ್ತೆ ಅವರತ್ತ ಜರುಗಿದಳು.

“ನನ್ನ ಮನಸ್ಸಿನಲ್ಲಿ ಅಪರಾಧಿ ಭಾವನೆ ಇದೆ. ನಾನು ನಿಮಗೆ ಎಷ್ಟು ಬೇಸರ ಮಾಡಿದೆ. ನೀವು ನನಗೆ ಹೊಡೆಯೋದು ಇರಲಿ, ಒಂದು ಮಾತು ಬೈಯಲೂ ಇಲ್ಲ. ಸುಮ್ಮನೆ ಎಲ್ಲವನ್ನೂ ಸಹಿಸಿಕೊಂಡಿರಿ. ನಿಮ್ಮಂತಹ ಸಾಧು ಸ್ವಭಾವದವರಿಗೆ ಕಷ್ಟ ಕೊಟ್ಟು ನನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ ಅಂತ ನನಗೆ ಆಗ ಅರ್ಥವಾಗಲೇ ಇಲ್ಲ. ನೀವಾದರೂ ಸ್ವಲ್ಪ ಬಿಗಿಯಾಗಿದ್ದು ನನಗೆ ಬೈದು ಬುದ್ಧಿ ಹೇಳಿದ್ದರೆ, ನಿಮ್ಮನ್ನು ಬಿಟ್ಟು ಹೋಗುವ ತಪ್ಪನ್ನು ನಾನು ಮಾಡುತ್ತಲೇ ಇರಲಿಲ್ಲ. ಅಪರಾಧೀ ಭಾವನೆಯಿಂದ  ಬಿಡುಗಡೆ ಪಡೆಯೋದು ಹೇಗೆ?”

ಇದು ಅವಳ ವೈಯಕ್ತಿಕ ಸಮಸ್ಯೆ. ಇದರಲ್ಲಿ ಅವರು ಹೇಗೆ ಸಹಾಯ ಮಾಡಲು ಸಾಧ್ಯ?

“ನಾನು  ನಿಮ್ಮಿಂದ ಸಹಾಯ ಪಡೆದು ಆರಾಮವಾಗಿ ಬಾಳಬೇಕು ಅಂತ ಇಲ್ಲಿಗೆ ಬರಲಿಲ್ಲ…. ಬೆಂಗಳೂರಿನಲ್ಲೇ ಸುಖವಾಗಿ  ಇರಬಹುದಿತ್ತು. ನನ್ನ ಮೊದಲಿನ ಕೆಲಸವನ್ನೇ ಮತ್ತೆ ಪಡೆಯಬಹುದಿತ್ತು ಅಥವಾ ಬೇರೆ ಕೆಲಸವನ್ನು ನೋಡಿಕೊಳ್ಳಬಹುದಿತ್ತು. ಅದರಲ್ಲೇನೂ ತೊಂದರೆ ಇರಲಿಲ್ಲ…..”

ಇಂದು ನಂದಿತಾ ತನ್ನ ನಿಜವಾದ ಉದ್ದೇಶವನ್ನು ಬಹಿರಂಪಡಿಸುತ್ತಿದ್ದಳು. ಅಶ್ವಿನ್‌ ಬೆಚ್ಚಿದರು. ಹಾಗಾದರೆ ಅವಳಿಗೆ ನಿಜಕ್ಕೂ ಏನೂ ತೊಂದರೆ ಇರಲಿಲ್ಲವೇ? ಅವರಿಗಾಗಿಯೇ ಅವಳು ಇಲ್ಲಿಗೆ ಬಂದಳೇ?

“ಹಾಗಾದರೆ…. ಮತ್ತೆ….” ಅಶ್ವಿನ್‌ ಗೊಂದಲಕ್ಕೊಳಗಾದರು. ಇನ್ನೂ ಏನೇನೋ ಕೇಳಬೇಕೆಂದುಕೊಂಡರು. ಆದರೆ ಕೇಳಲಿಲ್ಲ. ಅವರು ಪ್ರಶ್ನಿಸದಿದ್ದರೂ ನಂದಿತಾ ತಾನಾಗಿಯೇ ಹೇಳುವಳೆಂದು ಅವರಿಗೆ ಗೊತ್ತಿತ್ತು. ಅವಳದು ಚಂಚಲ ಸ್ವಭಾವ. ಯಾವ ವಿಷಯವನ್ನೂ ಅವಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಸಿಕೊಳ್ಳಲಾರಳು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು.

ನಂದಿತಾ ತನ್ನ ಕೈಯನ್ನು ಅವರ ತೊಡೆಯ ಮೇಲಿಟ್ಟು ಮೃದುವಾಗಿ ಸವರತೊಡಗಿದಳು. ಅವಳ ಮಾತು, ವರ್ತನೆಗಳಿಂದ ಗರಬಡಿದಂತಾಗಿದ್ದರು.

“ಮನುಷ್ಯನಿಗೆ ಸ್ವತಃ ಕಷ್ಟ ಬರುವವರೆಗೆ ಇತರರ ಕಷ್ಟ ಅರ್ಥವಾಗುವುದಿಲ್ಲ…. ಅವನು ನನ್ನನ್ನು ತಿರಸ್ಕರಿಸಿದಾಗ, ನನ್ನ ವಿಶ್ವಾಸದ್ರೋಹದಿಂದ ನೀವು ಎಂತಹ ಮಾನಸಿಕ ಹಿಂಸೆ ಅನುಭವಿಸಿರಬಹುದು ಎಂದು ನನಗೆ ಅರ್ಥವಾಯಿತು. ನನ್ನ ಹೃದಯ ಚೂರಾಗಿ, ಪ್ರಪಂಚಕ್ಕೆ ಮುಖ ತೋರಿಸುವ ಯೋಗ್ಯತೆ ಇಲ್ಲವಾದಾಗ ನನಗೆ ನೀರಿನಲ್ಲಿ ಮುಳುಗಿ ಸಾಯುವುದಲ್ಲದೆ ಬೇರೆ ದಾರಿ ಇಲ್ಲ ಎನ್ನಿಸಿಬಿಟ್ಟಿತು.

“ಆಗ ನನಗೆ ಯೋಚನೆ ಬಂದಿದ್ದೇನೆಂದರೆ…. ನನ್ನಿಂದಾಗಿ ನೀವು ಬಹಳ ನೋವು ಅನುಭವಿಸಿದಿರಿ. ನಾನು ಮಾಡಿದ ವಿಷಪ್ರಾಶನವನ್ನು ಸಹಿಸಿದಿರಿ. ಹಾಗಿರುವಾಗ ನಾನೂ ಸಹ ಅವನು ಕೊಟ್ಟ ವಿಷವನ್ನು ಕುಡಿದು ಬದುಕಬಹುದಲ್ಲವೇ ಎನ್ನಿಸಿತು. ನೀವು ನನಗೆ ಸಿಕ್ಕಿ, ನನ್ನನ್ನು  ಕ್ಷಮಿಸಿದರೆ ನನ್ನ ದುಃಖ ಕಡಿಮೆಯಾಗುತ್ತದೆ ಎಂದು ಯೋಚಿಸಿದೆ.

“ಈಗ ನೀವು ನನಗೆ ಸಿಕ್ಕಿರುವಿರಿ. ನನ್ನ ಮೇಲೆ ನಿಮಗೆ ಯಾವುದೇ ರೋಷ, ದ್ವೇಷವಿಲ್ಲ ಎಂದು ಅರ್ಥವಾಗಿದೆ. ಇದರಿಂದ ನನ್ನ ದುಃಖ ಕಡಿಮೆಯಾಗಿರುವುದಲ್ಲದೆ, ನಾನು ಸುಖಸಾಗರದಲ್ಲಿ ತೇಲುತ್ತಿದ್ದೇನೆ. ಈಗ ಬಾಳ್ವೆಯ ಬಗ್ಗೆ ನನ್ನ ಆಸೆ ಹೆಚ್ಚಾಗಿದೆ. ನನ್ನ ಬುದ್ಧಿಗೇಡಿತನದಿಂದ ಹಿಂದೆ ಕಳೆದುಕೊಂಡಿದ್ದನ್ನು ಈಗ ಮತ್ತೆ ಪಡೆದುಕೊಳ್ಳಬೇಕೆಂಬ ಬಯಕೆ ಹುಟ್ಟಿದೆ.”

ಅಶ್ವಿನ್‌ ಮೌನವಾಗಿ ಅವಳ ಮಾತನ್ನು ಕೇಳುತ್ತಿದ್ದರು, “ನೀವು ನನ್ನ ತಪ್ಪನ್ನು ಕ್ಷಮಿಸಿದ್ದೀರಿ, ನನ್ನ ದುಃಖವನ್ನು ಹೋಗಲಾಡಿಸಿದ್ದೀರಿ. ಆದರೆ ನನ್ನ ತಪ್ಪಿಗೆ ಪ್ರಾಯಶ್ಚಿತ್ತ ಇನ್ನೂ ಬಾಕಿ ಇದೆ.”

“ಏನದು?” ಎಂಬಂತೆ ಅಶ್ವಿನ್‌ ತಮ್ಮ ದೃಷ್ಟಿಯನ್ನು ನಂದಿತಾಳ ಕಣ್ಣಿನತ್ತ ಹರಿಸಿದರು. ಅವಳ ಕಣ್ಣುಗಳಲ್ಲಿದ್ದ ಹೊಳಪಿನಲ್ಲಿ ಅಶ್ವಿನ್‌ತನ್ನ ಮಾತನ್ನು ನಿರಾಕರಿಸುವುದಿಲ್ಲ ಎಂಬ ವಿಶ್ವಾಸಭಾವಿದ್ದಿತು.

ನಂದಿತಾ ಭಾವುಕತೆಯಿಂದ ಅವರ ಎರಡೂ ಕೈಗಳನ್ನು ಹಿಡಿದುಕೊಂಡು, “ನಿಮ್ಮದು ವಿಶಾಲ ಹೃದಯ ಅಂತ ನನಗೆ ಗೊತ್ತು. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಜೀವನ ಪೂರ್ತಿ ನಿಮ್ಮ ಜೊತೆ ಇರೋದಕ್ಕೆ ಅವಕಾಶ ಮಾಡಿಕೊಡಿ. ಇದೇ ನನ್ನ ಪ್ರಾಯಶ್ಚಿತ್ತ……”

ಅಶ್ವಿನ್‌ ಬೆಚ್ಚಿದರು. ತಮ್ಮ ಕೈ ಬಿಡಿಸಿಕೊಂಡು ಎದ್ದು ನಿಂತರು. “ಏನಂದೆ?”

ಅವಳೂ ಎದ್ದು ನಿಂತಳು, “ಹೀಗೆ ಏಕೆ ಬೆಚ್ಚಿದಿರಿ? ನಾನೇನೂ ಆಗದಿರುವುದನ್ನು ಹೇಳಲಿಲ್ಲವಲ್ಲ. ಪ್ರಪಂಚದಲ್ಲಿ ಎಷ್ಟೊಂದು ಜನರು ಮದುವೆಯಾಗದೆ ಜೊತೆಯಲ್ಲಿ ಇರುವುದಿಲ್ಲವೇ? ನಾನು ನಿಮ್ಮ ವಿಚ್ಛೇದಿತ ಪತ್ನಿ. ನನಗೆ ನಿಮ್ಮ ಮೇಲೆ ಏನೂ ಹಕ್ಕಿಲ್ಲ. ಆದರೆ ನಾನು ನನ್ನ ಜೀವನವನ್ನು ನಿಮಗೆ ಸಮರ್ಪಣೆ ಮಾಡಲು ಬಯಸುತ್ತೇನೆ.”

ಅಶ್ವಿನ್‌ ಗಡಬಡಿಸಿ ಹೇಳಿದರು, “ಇದು ಹೇಗೆ ಆಗುತ್ತೆ?”

“ಎಲ್ಲ ಆಗುತ್ತೆ, ಮನಸ್ಸು ಮಾಡಬೇಕು ಅಷ್ಟೇ.”

“ನನಗೆ ಮದುವೆಯಾಗಿದೆ. ಮನೆಯಲ್ಲಿ ಹೆಂಡತಿ, ಮಗ ಇದ್ದಾರೆ. ನಾನು ನಿನ್ನ ಜೊತೆ ಇರುವುದಕ್ಕಾಗುತ್ತದೆಯೇ?”

“ನಾನು ಕೊಟ್ಟಿದ್ದ ಕಷ್ಟದ ವಿಷವನ್ನು ನೀವು  ಕುಡಿದಿರಿ. ಈಗ ಸಂತೋಷದಿಂದ ನನ್ನ ಜೊತೆ ಇರಬಹುದು. ನನ್ನನ್ನು ನಿಮಗೆ ಸಮರ್ಪಣೆ ಮಾಡಿಕೊಳ್ಳಲು ಬಯಸುತ್ತೇನಲ್ಲದೆ,  ನಿಮ್ಮಿಂದ ಬೇರೇನೂ ಅಪೇಕ್ಷಿಸುವುದಿಲ್ಲ. ನಿಮ್ಮಿಂದ ಯಾವ ಹಕ್ಕನ್ನು ಕೇಳುವುದಿಲ್ಲ, ಮಗುವಿಗಾಗಿ ಆಶಿಸುವುದಿಲ್ಲ, ಹಣ, ಆಸ್ತಿ ಏನೂ ಬೇಡ…. ಕೇವಲ ನಿಮ್ಮ ಸಹವಾಸ ಬೇಕು. ನಿಮ್ಮಲ್ಲಿ ಒಂದಾಗಬೇಕು.”

ಅಶ್ವಿನ್‌ಗೆ ತಲೆ ಸುತ್ತಿ ಬಂತು. ಅವರು ಒಬ್ಬ ವೈದ್ಯರಾಗಿದ್ದು, ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಬಗೆಯನ್ನು ತಿಳಿದಿದ್ದರು.  ಹಿಂದೆ ನಂದಿತಾ ಪರಪುರುಷನ ಸಂಬಂಧದ ಬಗ್ಗೆ ತಿಳಿಸಿದಾಗಲೂ ಇಷ್ಟು ವಿಚಲಿತರಾಗಿರಲಿಲ್ಲ. ಅದಕ್ಕೇನು ಮಾಡಬಹುದು ಎಂದು ಯೋಚಿಸುವ ಮನೋಸಾಮರ್ಥ್ಯ ಹೊಂದಿದ್ದರು. ಆದರೆ ಇಂದು ಅವರಿಗೆ ದಾರಿ ಕಾಣದೆ ತೊಳಲುವಂತಾಯಿತು.

ನಂದಿತಾ ತಮ್ಮಲ್ಲಿಗೆ ಬಂದ ಕಾರಣ ಈಗ ಅವರಿಗೆ ಸ್ಪಷ್ಟವಾಯಿತು. ಅವರು ಒಂದು ಬಾರಿ ಅವಳು ಉಣಿಸಿದ್ದ ವಿಷವನ್ನು ಕುಡಿದಿದ್ದರು. ಈಗ ತಿಳಿದು ತಿಳಿದೂ ಮತ್ತೊಮ್ಮೆ ಕುಡಿಯಲು ಸಾಧ್ಯವಿಲ್ಲ.

ನಂದಿತಾ ಅವರ ತೋಳೊಳಗೆ ನುಸುಳಿ ಅವರ ಎದೆಗೆ ಮುಖವಿಟ್ಟು ಹೇಳಿದಳು, “ಆಗೋಲ್ಲ ಅಂತ ಹೇಳಬೇಡಿ. ನಾನು ಬಹಳ ಆಸೆ ಇಟ್ಟುಕೊಂಡು ನಿಮ್ಮ ಬಳಿಗೆ ಬಂದಿದ್ದೇನೆ. ನನ್ನ ಜೀವನವನ್ನು ನಿಮ್ಮ ಚರಣಗಳಲ್ಲಿ ಅರ್ಪಿಸಿಕೊಂಡು ನನ್ನ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಅನ್ನುವುದೊಂದೇ ನನ್ನ ಉದ್ದೇಶ.

“ನೀವಲ್ಲದೆ ನನಗೆ ಇನ್ನು ಯಾರೂ ಬೇಡ. ನೀವು ನನ್ನನ್ನು ಸ್ವೀಕರಿಸದೆ ಇದ್ದರೆ, ನಾನು ಜೀವನಪೂರ್ತಿ ಒಂಟಿಯಾಗಿಯೇ ಇದ್ದು ನಿಮ್ಮನ್ನು ನಿರೀಕ್ಷಿಸುತ್ತಿರುತ್ತೇನೆ,” ನಂದಿತಾಳ ಧ್ವನಿ ಜೀವನವಿಡೀ ಹಿಂಸಿಸಲ್ಪಟ್ಟ ಹೆಣ್ಣಿನಂತೆ ಅಸಹಾಯಕತೆಯಿಂದ ಕಂಪಿಸುತ್ತಿತ್ತು.

ಅವಳಿಗೆ ಆಸರೆ ನೀಡದಿದ್ದರೆ ಅವಳ ಬಾಳು ಕುಸಿದು ಹೋಗುವಂತೆ ತೋರುತ್ತಿತ್ತು. ಆದರೆ ನಂದಿತಾಳ ಬೇಡಿಕೆ, ಅವು ಯಾವುದೂ ಅಶ್ವಿನ್‌ ಮೇಲೆ ಪ್ರಭಾವ ಬೀರಲಿಲ್ಲ. ಅವರ ತಲೆಯ ನರಗಳೆಲ್ಲ ಸಿಡಿಯತೊಡಗಿದವು. ದೀಪಾಳಿಯ ಪಟಾಕಿ ಶಬ್ದದಂತೆ ಅವರ ಸುತ್ತಲೂ ಸದ್ದಾಗುತ್ತಿರುವಂತೆ ಭಾಸವಾಯಿತು.

ಆ ಸ್ಥಳದಲ್ಲಿ ಇನ್ನು ನಿಲ್ಲಲಾರದೆ ಅಶ್ವಿನ್‌ ಹೊರಡಲು ಸಿದ್ಧರಾದರು. ನಂದಿತಾ ಅವರನ್ನು ತಡೆದು ನಿಲ್ಲಿಸಿ, “ನೀವು ಹೊರಡುವುದಾದರೆ ನಾನು ನಿಮ್ಮನ್ನು ತಡೆಯುವುದಿಲ್ಲ. ಆದರೆ ಇದೇ ಊರಿನಲ್ಲಿದ್ದುಕೊಂಡು ನಿಮಗಾಗಿ ಕಾಯುತ್ತಿರುತ್ತೇನೆ ಎಂಬ ಮಾತನ್ನು ನೆಪಿನಲ್ಲಿಟ್ಟುಕೊಂಡಿರಿ. ನಿಮ್ಮ ನಿರ್ಧಾರವನ್ನು ನಿರೀಕ್ಷಿಸುತ್ತೇನೆ,” ಎಂದು ಹೇಳಿದಳು.

ಅಶ್ವಿನ್‌ ಏನೂ ಹೇಳದೆ ಮನೆಯಿಂದ ಹೊರಗೆ ಬಂದರು. ಆ ಸಮಯದಲ್ಲಿ ಬೀದಿ ದೀಪಗಳು ಹತ್ತಿಲ್ಲದೆ ಉದ್ದಕ್ಕೂ ಕತ್ತಲು ಕವಿದಿತ್ತು. ಅವರ ಮನಸ್ಸಿನ ಒಳಗೂ ಕ್ತತಲು, ಹೊರಗೂ ಕತ್ತಲು. ತಾವು ಯಾವುದೋ ಅಂತ್ಯವಿಲ್ಲದ ಕತ್ತಲೆಯ ಗುಹೆಯನ್ನು  ಪ್ರವೇಶಿಸುತ್ತಿರುವಂತೆ ಅವರಿಗೆ ಭಾಸವಾಯಿತು.

ಪಾಪ! ಅವರಿಗೆ ಹೀಗೇಕಾಗುತ್ತಿದೆ? ಕಷ್ಟವನ್ನು ಮೌನವಾಗಿ ಸಹಿಸುವುದು ಮತ್ತಷ್ಟು ಕಷ್ಟಕ್ಕೆ ಆಮಂತ್ರಣ ನೀಡಿದಂತೆಯೆ? ಅವರು ಯಾರಿಗೂ ತೊಂದರೆ ಕೊಟ್ಟರವಲ್ಲ. ಮತ್ತೆ ಅವರಿಗೇಕೆ ಕಷ್ಟಗಳು ಬೆನ್ನತ್ತಿ ಬರುತ್ತವೆ?

ಅಶ್ವಿನ್‌ ತಮ್ಮ ವಾಹನವನ್ನು ಸ್ಟಾರ್ಟ್‌ ಮಾಡಿ ಹೊರಟರೂ ಅವರಿಗೆ ಮೈ ಮೇಲೆ ಪ್ರಜ್ಞೆ ಇದ್ದಂತಿರಲಿಲ್ಲ. ಅವರ ಮೈ ನಡುಗುತ್ತಿತ್ತು. ಕೈ ಕಾಲುಗಳು ಮಾತ್ರ ತಮ್ಮ ಕೆಲಸ ಮಾಡುತ್ತಿದ್ದವು. ಯಾರೋ ಬೇರೊಬ್ಬ ವ್ಯಕ್ತಿ ರಿಮೋಟ್ ಕಂಟ್ರೋಲ್‌ನಿಂದ ಅವರನ್ನು ನಡೆಸುತ್ತಿರುವಂತೆ ಭಾಸವಾಗುತ್ತಿತ್ತು. ಅವರ ಆಲೋಚನಾ ಶಕ್ತಿಯೇ ಮಾಯವಾಗಿತ್ತು.

ಮನೆಯನ್ನು ತಲುಪುವ ವೇಳೆಗೆ ಅವರ ಮೈಮನಸ್ಸುಗಳು ಕೊಂಚ ತಹಬದಿಗೆ ಬಂದಿದ್ದವು. ತಲೆಯಲ್ಲಿನ ಗಡಚಿಕ್ಕುವಿಕೆ  ಕಡಿಮೆಯಾಗಿತ್ತು. ಶರೀರದ ನಡುಕ ನಿಂತಿತ್ತು. ಆದರೆ ಬಣ್ಣಗೆಟ್ಟ ಮುಖ ಅವರ ಮನಸ್ಸಿನ ಹೋರಾಟಕ್ಕೆ ನಿದರ್ಶನವಾಗಿತ್ತು.

ಮನೆ ತಲುಪಿದಾಗ ದಿವ್ಯಾ ಎದುರಾಗದಿರಲಿ ಎಂದು ಅವರ ಮನಸ್ಸು ಬಯಸುತ್ತಿತ್ತು. ಆದರೆ ತಡವಾಗಿದ್ದರಿಂದ ಅವಳು ಪತಿಯನ್ನು ನಿರೀಕ್ಷಿಸುತ್ತಾ ಇದ್ದಳು. ಮಗ ಆಗಲೇ ನಿದ್ರೆ ಮಾಡಿದ್ದ. ಆದ್ದರಿಂದ ಪತಿಗಾಗಿ ಕಾಯುವುದಲ್ಲದೆ, ಅವಳಿಗೆ ಬೇರೇನೂ ಕೆಲಸವಿರಲಿಲ್ಲ.

ಅಶ್ವಿನ್‌ ಸ್ಥಿತಿಯನ್ನು ನೋಡಿ ದಿವ್ಯಾ ಅವರ ಕೈಹಿಡಿದು ಕರೆತಂದು ಸೋಫಾ ಮೇಲೆ ಕುಳ್ಳಿರಿಸಿದಳು, “ನೀವು ಬಹಳ ದಣಿದಿದ್ದೀರಿ,” ಎಂದು ಚಿಂತೆಯಿಂದ ಹೇಳಿದಳು.

ಅವಳತ್ತ ಒಮ್ಮೆ ನೋಡಿ, ಸುಮ್ಮನೆ ಕಣ್ಣು ಮುಚ್ಚಿ ಸೋಫಾದ ಮೇಲೆ ತಲೆ ಒರಗಿಸಿದರು.

ದಿವ್ಯಾ ಓಡುತ್ತಾ ಹೋಗಿ ನೀರು ತಂದಳು. ನೀರಿನ ಲೋಟನ್ನು ಅವರ ಕೈಗಿಡುತ್ತಾ, “ನೀರು ಕುಡಿಯಿರಿ…. ನೀವು ಹೇಳಿದ್ದನ್ನು ಕೇಳುವುದೇ ಇಲ್ಲ. ಕೆಲಸ ಕಡಿಮೆ ಮಾಡಿಕೊಳ್ಳಿ ಅಂತ ಎಷ್ಟು ಸಲ ಹೇಳಿದ್ದೇನೆ. ರಾತ್ರಿ ಇಡೀ ಕ್ಲಿನಿಕ್‌ ತೆರೆದುಕೊಂಡು ಕುಳಿತಿದ್ದರೂ ಪೇಶೆಂಟ್ಸ್ ಬರುತ್ತಲೇ ಇರುತ್ತಾರೆ. ಅವರನ್ನು ನೋಡುತ್ತಾ ನೋಡುತ್ತಾ ನೀವೇ ಪೇಶೆಂಟ್‌ ಆಗಬೇಕೇನು….? ನಿಮ್ಮ ಆರೋಗ್ಯ ಸರಿ ಇಲ್ಲದಿದ್ದರೆ ನೀವು ರೋಗಗಳಿಗೆ ಹೇಗೆ ಚಿಕಿತ್ಸೆ ಮಾಡುತ್ತೀರಿ….? ನಮಗೂ ನಿಮ್ಮ ಬಗ್ಗೆ ಯೋಚನೆ ಆಗುತ್ತದೆ,” ಎನ್ನುತ್ತಾ ಪತಿಯ ಹಣೆಯನ್ನು ಮೃದುವಾಗಿ ಒತ್ತತೊಡಗಿದಳು. ಅದು ಅಶ್ವಿನ್‌ಗೆ ಹಾಯೆನಿಸಿತು.

“ನಿಮ್ಮ ಮುಖ ನೋಡಿದರೆ 10 ದಿನಗಳಿಂದ ಊಟ ಮಾಡಿಲ್ಲವೇನೋ ಅನ್ನುವ ಹಾಗಿದೆ.”

ಅಶ್ವಿನ್‌ ಸುಮ್ಮನೆ ಕಣ್ಣು ಮುಚ್ಚಿ ಒರಗಿ ಕುಳಿತಿದ್ದರು. ಪತ್ನಿಯ ಒಂದೊಂದು ಮಾತೂ ಅವರ ಕಿವಿಗೆ ಬೀಳುತ್ತಿತ್ತು. ಆದರೆ ಅವರಿಗೆ  ಉತ್ತರ ಕೊಡಲಾಗುತ್ತಿರಲಿಲ್ಲ. ಪಾಪ, ಅವರ ಎದೆಯೊಳಗೆ ಎಂತಹ ಬಿರುಗಾಳಿ ಬೀಸುತ್ತಿತ್ತೆನ್ನುವುದು ಅವಳಿಗೇನು ಗೊತ್ತು? ಅದು ಅವಳಿಗೆ ಎಂದಿಗೂ ತಿಳಿಯಲು ಸಾಧ್ಯ ಇರಲಿಲ್ಲ. ಏಕೆಂದರೆ ಆ ಬಗ್ಗೆ ಹೇಳಿ ಅವಳ ನೆಮ್ಮದಿಯನ್ನು ಕೆಡಿಸಲು ಅಶ್ವಿನ್‌ಗೆ ಇಷ್ಟವಿರಲಿಲ್ಲ.

ಈ ಪ್ರಸಂಗದಲ್ಲಿ ದಿವ್ಯಾಳ ಪಾತ್ರವೇನೂ ಇಲ್ಲ. ಯಾರದೋ ತಪ್ಪಿಗೆ ಅವಳೇಕೆ ಶಿಕ್ಷೆ ಅನುಭವಿಸಬೇಕು? ತಾವು ಕುಡಿದಿರುವ ವಿಷದ ಒಂದು ಹನಿಯನ್ನೂ ದಿವ್ಯಾಳ ತುಟಿಗಳಿಗೆ ಸೋಕಿಸಲಾರರು. ಪೂರ್ತಿ ವಿಷವನ್ನೂ ತಾವೇ ಕುಡಿಯಬೇಕಾಗಿದೆ. ಅವರ ಶರೀರವೆಲ್ಲ ಅದೆಷ್ಟು ವಿಷಮಯವಾಗಿದೆ ಎಂದರೆ ಇನ್ನಾವ ವಿಷ ಅದರ ಮೇಲೆ ಪ್ರಭಾವ ಬೀರಲಾರದು.

ಮರುದಿನ ಬೆಳಗಾದಾಗ ಅಶ್ವಿನ್‌ ಹಿಂದಿನ ದಿನ ಏನೂ ನಡೆದಿಲ್ಲವೆಂಬಂತೆ ಸಹಜ ಭಾವದಲ್ಲಿದ್ದರು. ಹೊರಗೆ ಶಾಂತ ಮತ್ತು ಗಂಭೀರವಾಗಿದ್ದರೂ ಅವರ ಮನಸ್ಸಿನಲ್ಲಿ ಯಾವುದೋ ವಿಚಾರ ಮಂಥನ ನಡೆಯುತ್ತಿತ್ತು. ಏನು ಮಾಡಬೇಕೆಂಬುದನ್ನು ಅವರು ತೀರ್ಮಾನಿಸಿದ್ದರು. ‘ಇಂದೇ ಎಲ್ಲ ನಿರ್ಧಾರವಾಗಬೇಕು, ಸುಮ್ಮನೆ ಮುಂದೂಡಬಾರದು,’ ಎಂದಕೊಂಡರು.

ಅಶ್ವಿನ್‌ ತಮ್ಮ ಪ್ರಾತಃವಿಧಿಗಳನ್ನು ಪೂರೈಸಿದರು. ಕ್ಲಿನಿಕ್‌ಗೆ ಹೊರಡಲು ಇನ್ನೂ ಸಮಯವಿತ್ತು. ದಿವ್ಯಾ ತಿಂಡಿ ಮಾಡುವ ಕೆಲಸದಲ್ಲಿ ಮಗ್ನಳಾಗಿದ್ದಳು. ರಾತ್ರಿಯ ಗೊಂದಲದ ಮನಃಸ್ಥಿತಿಯಲ್ಲಿ ಅಶ್ವಿನ್‌ ಮೊಬೈಲ್ ಫೋನ್‌ ಕಡೆ ಗಮನವೇ ಹರಿದಿರಲಿಲ್ಲ. ಈಗ ನೋಡಿದರೆ ಹಲವಾರು ಮೆಸೇಜ್‌ಗಳಿದ್ದವು. ಅವುಗಳಲ್ಲಿ ಒಂದು ಮೆಸೇಜ್‌ ನಂದಿತಾಳದ್ದಾಗಿತ್ತು, “ನೀವು ಮನೆ ತಲುಪಿದಿರೇನು….? ಏನೂ ತೊಂದರೆ ಇಲ್ಲವೇ? ನನಗೆ ನಿಮ್ಮದೇ ಚಿಂತೆಯಾಗಿದೆ.”

ಅಶ್ವಿನ್‌ ಆ ಮೆಸೇಜ್‌ಗೆ ಉತ್ತರಿಸಿದರು, “ನಾನು ಸರಿಯಾಗಿದ್ದೇನೆ. ನಂದಿತಾ, ನಾನು ನನ್ನ ಜೀವನದಲ್ಲಿ ಬಹಳಷ್ಟು ವಿಷವನ್ನು ಸೇವಿಸಿದ್ದೇನೆ. ನಾನು ನಿಜಕ್ಕೂ ವಿಷಮಯವಾಗಿದ್ದೇನೆ. ಇನ್ನು ಹೆಚ್ಚು ವಿಷವನ್ನು ಸೇವಿಸುವ ಸಾಮರ್ಥ್ಯ ನನಗಿಲ್ಲ. ಇನ್ನೊಂದು ಹನಿ ವಿಷ ಕುಡಿದರೂ ನಾನು ಸಾಯುತ್ತೇನೆ. ನನ್ನ ಮನಸ್ಸು ನಿನಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ನನ್ನ ಹೆಂಡತಿ, ಮಗನನ್ನು ನಾನು ಪ್ರೀತಿಸುತ್ತೇನೆ.  ಅವರೊಡನೆ ಶಾಂತಿಯಿಂದ ಬಾಳಲು ಬಯಸುತ್ತೇನೆ. ನನ್ನನ್ನು ಬದುಕಲು ಬಿಡು. ನಿನಗೆ ನನ್ನದೊಂದು ಸಲಹೆ ಇದೆ. ನೀನು ಹೀಗೆ ನನ್ನ ಬೆನ್ನು ಹತ್ತುವುದನ್ನು ಬಿಟ್ಟು, ಬೇರೊಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಬಾಳುವೆ ಮಾಡುವುದನ್ನು ನೋಡಿಕೊ. ಇನ್ನೆಂದಿಗೂ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಬೇಡ.”

ನಂದಿತಾಳಿಗೆ ಮೆಸೇಜ್‌ ಕಳಿಸಿದ ನಂತರ ಅವರ ಮನಸ್ಸಿನಿಂದ ಒಂದು ದೊಡ್ಡ ಹೊರೆ ಇಳಿದಂತಾಯಿತು. ಈಗ ಅವರ ಮನಸ್ಸಿನಲ್ಲಿ ಯಾವುದೇ ಆತಂಕ, ಚಿಂತೆ, ಇರಲಿಲ್ಲ. ಕಳೆದ 10 ವರ್ಷಗಳಿಂದ ಅವರ ಮನದಲ್ಲಿ ಶೇಖರಗೊಂಡು ಹೆಪ್ಪುಗಟ್ಟಿದ್ದ ವಿಷ ಇದ್ದಕ್ಕಿದ್ದಂತೆ ಒಡೆದು ಶರೀರದಿಂದ ಹೊರಗೆ ಹರಿದು ಹೋದಂತೆ ಅವರಿಗೆ ಭಾಸವಾಯಿತು. ಈಗ ಆ ವಿಷ ಅವರ ಮೇಲೆ ಯಾವುದೇ ಪ್ರಭಾವ ಬೀರುವಂತಿರಲಿಲ್ಲ.

ದಿವ್ಯಾ ತಿಂಡಿಯ ತಟ್ಟೆಯನ್ನು ಕೈಯಲ್ಲಿ ಹಿಡಿದು ಮುಗುಳ್ನಗುತ್ತಾ ಅವರತ್ತ ಬಂದು, “ಬನ್ನಿ, ತಿಂಡಿ ತಿನ್ನಿ….” ಎಂದಳು.

ಅವಳು ಸ್ನಾನ ಮಾಡಿ ಫ್ರೆಶ್‌ ಆಗಿದ್ದಳು. ಸಾಧಾರಣ ಉಡುಪಿನಲ್ಲೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಅವರ ಮನಸ್ಸಿನಲ್ಲಿ ಆನಂದ ತುಂಬಿತ್ತು. ಅವರು ನಸುನಗುತ್ತಾ ಡೈನಿಂಗ್‌ ಟೇಬಲ್‌ನತ್ತ ನಡೆದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ