“ನನ್ನ ಮಗಳು ಎಕನಾಮಿಕಲಿ, ಎಮೋಶನಲಿ ಹಾಗೂ ಸೆಕ್ಶುಲಿ ಇಂಡಿಪೆಂಡೆಂಟ್‌ ಆಗಿದ್ದಾಳೆ. ಹಾಗಾದರೆ ಅವಳಿಗೆ ಮದುವೆಯ ಅವಶ್ಯಕತೆಯಾದರೂ ಏನಿದೆ?”

`ಪೀಕೂ’ ಚಲನಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಹೇಳಿದ ಈ ಸಂಭಾಷಣೆ ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಪ್ರತಿಯೊಬ್ಬ ಸ್ವತಂತ್ರ ಹುಡುಗಿಯ ಕನಸಾಗುತ್ತ ಹೊರಟಿದೆ. ಈಗ ಪ್ರತಿಯೊಬ್ಬ ಹುಡುಗಿ ತನ್ನದೇ ಆದ ರೀತಿಯಲ್ಲಿ ಜೀವನದ ನಿರ್ಣಯ ತೆಗೆದುಕೊಳ್ಳಲು ಇಷ್ಟಪಡುತ್ತಾಳೆ. ಆದರೆ ಮದುವೆ ಯಾವಾಗ ಆಗಬೇಕು, ಆಗಬೇಕೊ ಬೇಡವೋ ಎಂಬುದನ್ನು ತಾನೇ ಸ್ವತಃ ನಿರ್ಧರಿಸಬೇಕೆನ್ನುತ್ತಾಳೆ. ಅವರು ತಮ್ಮದೇ ಆದ ರೀತಿಯಲ್ಲಿ ಜೀವಿಸಲು ಇಷ್ಟಪಡುತ್ತಾರೆ.

ಬೆಂಗಳೂರಿನ ಶರ್ಮಿಳಾ ಹಸನ್ಮುಖ ಸ್ವಭಾವದ ಸುಂದರ ಹುಡುಗಿ. ಜೊತೆಗೆ ಸ್ವತಂತ್ರ ಪ್ರವೃತ್ತಿಯವಳು. ಅವಳು ತನ್ನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಜೀವಿಸುತ್ತಿದ್ದಾಳೆ. ಅವಳಿಗೆ ಮದುವೆ ಆಗಬೇಕೆಂಬ ಯಾವ ಇಚ್ಛೆಯೂ ಇಲ್ಲ. ಆದರೆ ಒಮ್ಮೊಮ್ಮೆ ಸಮಾಜದ ಮಾತುಗಳು ಅವಳನ್ನು ಕಸಿವಿಸಿಗೊಳ್ಳುವಂತೆ ಮಾಡುತ್ತವೆ. ಪ್ರತಿಯೊಬ್ಬರ ಪ್ರಶ್ನೆ `ಯಾವಾಗ ಸೆಟಲ್ ಆಗುತ್ತಿದ್ದೀಯಾ?’ ಎಂದಾಗಿರುತ್ತದೆ. `ವಯಸ್ಸು ಹೆಚ್ಚುತ್ತಾ ಹೊರಟಿದೆ, ಮುಂದೆ ಸಮಸ್ಯೆ ಆಗುತ್ತದೆ,’ ಎಂದು ಅವರೆಲ್ಲ ಪುಕ್ಕಟೆ ಸಲಹೆ ಕೊಡುತ್ತಿರುತ್ತಾರೆ.

ಅಂದಹಾಗೆ, ಶರ್ಮಿಳಾ ತನ್ನದೇ ಆದ ರೀತಿಯಲ್ಲಿ ಜೀವನ ಸಾಗಿಸಬೇಕೆನ್ನುತ್ತಾಳೆ. ಅದು ಸಾಮಾಜಿಕ ಹಾಗೂ ಧಾರ್ಮಿಕ ಮರ್ಯಾದೆಗೆ ತಕ್ಕಂತೆ ಇಲ್ಲ. ಹೀಗಾಗಿ ಪ್ರತಿಯೊಬ್ಬ ಏಕಾಂಗಿ ಮಹಿಳೆಯನ್ನು ಸಮಾಜ ಪ್ರಶ್ನಾರ್ಥಕ ದೃಷ್ಟಿಯಲ್ಲಿ ನೋಡುತ್ತದೆ. ಮನೋಶಾಸ್ತ್ರಜ್ಞೆ ಪ್ರಗತಿ ಹೀಗೆ ಹೇಳುತ್ತಾರೆ, “ಪ್ರತಿಯೊಬ್ಬ ವ್ಯಕ್ತಿಯ ಯೋಚನೆ ಬೇರೆಬೇರೆಯಾಗಿರುತ್ತದೆ. ಸಮಾಜ ರೂಪಿಸಿದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದೇನೂ ಇಲ್ಲ. ಸೂಕ್ತ ವಯಸ್ಸಿನಲ್ಲಿ ಓದು, ಮದುವೆ, ಮಕ್ಕಳು ಇವೆಲ್ಲ ಟಿಪಿಕಲ್ ಮಾತುಗಳು. ಈಗ ಹುಡುಗಿಯರು ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಲು ಬಯಸುತ್ತಾರೆ. ಇದು ಸಮಾನತೆಯ ಯುಗ. ಈಗ ಹುಡುಗಿಯರು ತಮ್ಮದೇ ಮನೆ, ವಾಹನ ಖರೀದಿಸಿಕೊಂಡು ಬ್ಯಾಂಕ್‌ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಅಪೇಕ್ಷಿಸುತ್ತಾರೆ. ಹೀಗೆ ಮಾಡಿ ಒಳ್ಳೆಯ ಫೀಲಿಂಗ್‌ ಮಾಡಿಕೊಳ್ಳುವುದು ಆಕೆಯ ಅಪೇಕ್ಷೆ.

“ಆ ಬಳಿಕ ಆಕೆಗೆ ಮದುವೆ ಮಾಡಿಕೊಳ್ಳಲೇಬೇಕು ಎನಿಸಿದರೆ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾಳೆ. ಇಲ್ಲದಿದ್ದರೆ ಆಕೆ ಆ ಬಗ್ಗೆ ಯೋಚಿಸಲು ಹೋಗುವುದೇ ಇಲ್ಲ.

“ಈಗ ಹುಡುಗಿಯರಿಗೆ ಪುರುಷ ಸಂಗಾತಿಗಳ ಅವಶ್ಯಕತೆಯೂ ಉಂಟಾಗುವುದಿಲ್ಲ. ಪುರುಷ ಸಂಗಾತಿಗಳು ಆಫೀಸಿನಲ್ಲಿ ಸಿಕ್ಕೇ ಸಿಗುತ್ತಾರೆ. ಅದರಲ್ಲಿ ಕೆಲವರ ಜೊತೆ ಅವರು ಭಾವನಾತ್ಮಕವಾಗಿ ನಿಕಟರಾಗುತ್ತಾರೆ. ಅಂದಹಾಗೆ ಕೆರಿಯರ್‌ನಲ್ಲಿ ಸೆಟಲ್ ಆಗುವ ಹೊತ್ತಿಗೆ 30 ವರ್ಷ ದಾಟಿ ಹೋಗಿರುತ್ತದೆ. ಈ ಮಧ್ಯೆ ದೈಹಿಕ ಅಗತ್ಯತೆಗಳಿಗಾಗಿ ಲಿವ್ ‌ಇನ್‌ ರಿಲೇಶನ್‌ಶಿಪ್‌ನ ಆಶ್ರಯ ಪಡೆಯುತ್ತಿದ್ದಾಳೆ.”

ಇಂದಿನ ಮಹಿಳೆಗೆ ಬೇಕು ಸ್ವಾತಂತ್ರ್ಯ

ಮದುವೆ ಒಂದು ವೈಯಕ್ತಿಕ ಸಂಗತಿ ಹಾಗೂ ಇದು ಜೀವನದ ಜೊತೆಗಿನ ಹೊಂದಾಣಿಕೆ ಕೂಡ ಆಗಿದೆ. ಮದುವೆಯಿಂದಾಗಿ ಮಹಿಳೆಯ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ. ಅವಳ `ಪರ್ಸನಲ್ ಸ್ಪೇಸ್‌’ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಮನೆಯ ಎಲ್ಲ ಜವಾಬ್ದಾರಿಗಳು ಅವಳ ಹೆಗಲಿಗೆ ಬೀಳುತ್ತವೆ. ಹೀಗಾಗಿ ಆಕೆ ಮದುವೆಯ ಬಗ್ಗೆ ಬಂಡಾಯದ ಕಹಳೆ ಊದುತ್ತಿದ್ದಾಳೆ. ಹೊಸ ಪೀಳಿಗೆ ಹೆಚ್ಚೆಚ್ಚು ಬೋಲ್ಡ್ ಆಗುತ್ತಿದೆ. ಅವರೀಗ ಯಾವುದೇ ನಿರ್ಣಯ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಹುಡುಗಿಯರು ಹೆಚ್ಚೆಚ್ಚು ಸ್ವತಂತ್ರರಾಗುತ್ತ ಹೊರಟಂತೆ ಅವರು ಯಾವುದೇ ಅತಿರೇಕತನವನ್ನು ಸಹಿಸಿಕೊಳ್ಳುವುದಿಲ್ಲ. ಈಗಲೂ ಮಹಿಳೆ ತನ್ನ ಇಚ್ಛೆಯಂತೆ ಜೀವಿಸಲು ಆಗುವುದಿಲ್ಲ. ಧರ್ಮ ಆಕೆಯ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ನೋಡುತ್ತಿದೆ.

ಸ್ತ್ರೀ ಸ್ವಾತಂತ್ರ್ಯದಲ್ಲಿ ಧರ್ಮದ ಹಸ್ತಕ್ಷೇಪ ಒಂದೆಡೆ ಮಹಿಳೆ ತನ್ನದೇ ಆದ ರೀತಿಯಲ್ಲಿ ಜೀವಿಸಲು ಇಷ್ಟಪಡುತ್ತಾಳೆ. ಇನ್ನೊಂದೆಡೆ ಧರ್ಮದ ಮುಖಾಂತರ ನಿಯಂತ್ರಿಸಲ್ಪಡುವ ಸಮಾಜ ಅವಳ ಈ ಇಚ್ಛೆಯನ್ನು ಕೆಟ್ಟದೆಂದು ಭಾವಿಸುತ್ತದೆ. ಒಂದು ವೇಳೆ ಅವಳು ಮದುವೆ ಮಾಡಿಕೊಳ್ಳಲು ಇಚ್ಛಿಸುವುದಿಲ್ಲವೆಂದರೆ, ಅದನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳ ಉಲ್ಲಂಘನೆ ಎಂದು ಭಾವಿಸಲಾಗುತ್ತದೆ. ಏಕೆಂದರೆ ಧರ್ಮ ವೈವಾಹಿಕ ಎಂಬ ಸಂಸ್ಥೆಯನ್ನು ಹೈಜ್ಯಾಕ್‌ ಮಾಡಿದೆ. ಹೀಗಾಗಿ ಯಾವುದೇ ಒಬ್ಬ ಹುಡುಗಿ ಮದುವೆಯಾಗದೇ ಇರಲು ನಿರ್ಧರಿಸಿದರೆ ಅಥವಾ ಲಿವ್ ‌ಇನ್‌ ರಿಲೇಶನ್‌ಶಿಪ್‌ನಲ್ಲಿ ಇರಬಯಸಿದರೆ ಅಥವಾ ಮಗುವಿಗೆ ಜನ್ಮ ನೀಡದೇ ಇರಲು ನಿರ್ಧರಿಸಿದರೆ ಅದು ನೇರವಾಗಿ ಧರ್ಮದ ಉಲ್ಲಂಘನೆಯಾಗುತ್ತದೆ.

ಯಾವುದೇ ಒಬ್ಬ ಯುವತಿಗೆ ಸಮಾಜ ಧಾರ್ಮಿಕ ರೀತಿ ರಿವಾಜುಗಳ ಪ್ರಕಾರ ಪುರೋಹಿತರ ಮಂತ್ರಘೋಷಕ್ಕೆ ತಕ್ಕಂತೆ, ಯುವಕನ ಜೊತೆ ಸಪ್ತಪದಿ ತುಳಿದು ಅವನ ಹೆಂಡತಿಯಾದಾಗಲೇ ಗೌರವ ಕೊಡುವುದು. ಆ ಬಳಿಕ ಆಕೆ ಸಂತಾನಪ್ರಾಪ್ತಿಗಾಗಿ ದೇವಿದೇವತೆಗಳಿಗೆ ಕೋರಿಕೆ ಸಲ್ಲಿಸುತ್ತಾಳೆ. ತನ್ನ ಸುಖಿ ವೈವಾಹಿಕ ಜೀವನಕ್ಕಾಗಿ ಹರಕೆ ಸಲ್ಲಿಸುತ್ತಾಳೆ. ದೇವಸ್ಥಾನಗಳಿಗೆ, ತೀರ್ಥಸ್ಥಳಗಳಿಗೆ ಹೋಗುತ್ತಾಳೆ.

ಅದಕ್ಕೆ ಮುಂಚೆ ಆಕೆ ವರ ಪ್ರಾಪ್ತಿಗಾಗಿ ವ್ರತಪೂಜೆಗಳನ್ನು ಸಲ್ಲಿಸುತ್ತಾಳೆ. ಮದುವೆಯ ಬಳಿಕ ಗಂಡನ ದೀರ್ಘಾಯುಷ್ಯಕ್ಕಾಗಿ ಬಗೆಬಗೆಯ ವ್ರತಗಳನ್ನು ಮಾಡುತ್ತಾಳೆ. ಇದರ ಹೊರತಾಗಿ ಆಕೆ ಮನೆಯವರ ಒತ್ತಾಯದ ಮೇರೆಗೆ ಅನೇಕ ಬಗೆಯ ಹೋಮ ಹವನಗಳನ್ನು ಮಾಡಬೇಕಾಗಿ ಬರುತ್ತದೆ. ಸುಖಮಯ ಗೃಹಸ್ಥ ಜೀವನಕ್ಕೆ ಆಗಲೇ ಅವಳು ಸಂಪೂರ್ಣ ಗೌರವಾನ್ವಿತ ಎನಿಸಿಕೊಳ್ಳುತ್ತಾಳೆ.

ಇಂದಿನ ಯುವತಿಯರು ತಮ್ಮ ಸ್ವಇಚ್ಛೆಯ ಮೇರೆಗೆ ಧರ್ಮರಹಿತ ಆಧುನಿಕ ಜೀವನ ಜೀವಿಸಬೇಕೆನ್ನುತ್ತಾರೆ. ಸಮಾಜದ ದೃಷ್ಟಿಯಲ್ಲಿ ಅವರ ಈ ನಡೆ ಸನ್ಮಾನಕ್ಕೆ ಅರ್ಹವಾದುದು ಅಲ್ಲ. ಧರ್ಮ ಸ್ತ್ರೀಯ ಇಚ್ಛೆಗೆ ಶತಶತಮಾನಗಳಿಂದ ನಿರ್ಬಂಧ ಹೇರಿದೆ. ಇಂದು ಸಿಂಗಲ್ ವುಮನ್‌ ಯಾವ ರೀತಿ ಇರಲು ಬಯಸುತ್ತಿದ್ದಾಳೊ, ಅದು ಧಾರ್ಮಿಕ ಹಾಗೂ ಸಾಮಾಜಿಕ ದೃಷ್ಟಿಯಲ್ಲಿ ಸಂಪೂರ್ಣ ಉಲ್ಲಂಘನೆಯಾಗಿದೆ. ಹೀಗಾಗಿ ಧರ್ಮದ ಗುತ್ತಿಗೆದಾರರು ಅವಳ ಪ್ರೀತಿಯ ಬಗ್ಗೆ, ಧರಿಸುವ ಬಟ್ಟೆಗಳ ಬಗ್ಗೆ, ಓದುಬರಹ ಮುಂತಾದ ಖಾಸಗಿ ವಿಷಯಗಳ ಬಗ್ಗೆ ತನ್ನ ಆದೇಶಗಳನ್ನು ಹೊರಡಿಸುತ್ತಿರುತ್ತದೆ.

ಸಾಮಾಜಿಕ ಅಡ್ಡಿ ಆತಂಕಗಳು

ಸಮಾಜದಲ್ಲಿ ಮದುವೆಯನ್ನು ಒಂದು ಪವಿತ್ರ ಸಂಸ್ಥೆ ಎಂದು ಭಾವಿಸಲಾಗುತ್ತದೆ. ಸ್ತ್ರೀಯ ಯಶಸ್ಸಿನ ಮಾನದಂಡ ಆಕೆಯ ಕೆರಿಯರ್‌ನ ಯಶಸ್ಸಿನ ಬಗ್ಗೆ ಅಲ್ಲ, ಅವಳ ಯಶಸ್ವಿ ವೈವಾಹಿಕ ಜೀವನದ ಬಗ್ಗೆ ಪರಿಗಣಿಸಲಾಗುತ್ತದೆ. ಸಮಾಜ ಸಿಂಗಲ್ ಆಗಿರುವ ಹುಡುಗಿಯನ್ನು ಅಥವಾ ಹುಡುಗನನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅವರಿಬ್ಬರೂ ನೂರಾರು ಸಾವಿರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಯಾರು ಮದುವೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲವೋ ಅವರಿಗೆ ಈ ಬಗ್ಗೆ ಸ್ವಾತಂತ್ರ್ಯ ಇರಬೇಕು.

ಅವಿವಾಹಿತರು ಏಕಾಂಗಿಗಳಲ್ಲ

ಯಾವುದೇ ಒಬ್ಬ ಅವಿವಾಹಿತ ವ್ಯಕ್ತಿಯನ್ನು ಏಕಾಂಗಿ ಎಂದು ಏಕೆ ಭಾವಿಸಲಾಗುತ್ತದೆ? ಗಂಡ ಹೆಂಡತಿಯಾದರೆ ಮಾತ್ರ ಸಂಬಂಧಗಳು ಹುಟ್ಟಿಕೊಳ್ಳುತ್ತಿವೆಯೋ? ಬೇರೆ ಸಂಬಂಧಗಳು ಗೌಣಾಗುತ್ತಿವೆಯೋ? ಒಂದು ವೇಳೆ ಪೋಷಕರ ಪರಿಪೂರ್ಣ ಸಹಕಾರ ಇದ್ದರೆ ಒಳ್ಳೆಯ ಕೆರಿಯರ್‌ ಇದ್ದರೆ, ನಿಮ್ಮ ನಿರ್ಧಾರದ ಮೇಲೆ ನಿಮಗೆ ಪರಿಪೂರ್ಣ ನಂಬಿಕೆ ಇದ್ದರೆ, ನಿಮ್ಮದು ಸ್ಟ್ರಾಂಗ್ ಪರ್ಸನಾಲಿಟಿ ಆಗಿದ್ದರೆ, ಜೀವನದ ಕಷ್ಟದ ಸಂದರ್ಭದಲ್ಲಿ ನಿಮಗೆ ನೆರವಾಗುವ ಸ್ನೇಹಿತರ ಬಳಗ ಇದ್ದರೆ, ಅವಿವಾಹಿತ ವ್ಯಕ್ತಿ ತನ್ನನ್ನು ತಾನು ಎಂದು ಏಕಾಂಗಿಯೆಂದು ಭಾವಿಸಲು ಹೋಗುವುದಿಲ್ಲ.

ಮದುವೆ ಆಗದೇ ಇರುವ ನಿರ್ಧಾರ ಏಕೆ?

ಮದುವೆ ಆಗದೇ ಇರುವ ನಿರ್ಧಾರ ಆಕಸ್ಮಿಕವಾಗಿ ತೆಗೆದುಕೊಂಡಿದ್ದಾಗಿರುವುದಿಲ್ಲ. ಬಾಲ್ಯದಿಂದಲೇ ಹುಡುಗಿಯೊಬ್ಬಳಿಗೆ ಆಕೆಯ ಕುಟುಂಬದವರಿಂದ ಯಾವುದೇ ತಪ್ಪು ಸಂಗತಿಗೆ ಕುಗ್ಗಬಾರದು ಹಾಗೆಯೇ ತನ್ನ ಕಾಲ ಮೇಲೆ ತಾನು ನಿಲ್ಲುವ ತನಕ ಮದುವೆಯಾಗಬಾರದು ಎಂದು ಹೇಳಿಕೊಡಲಾಗಿರುತ್ತದೆ. ಹೀಗೆ ಮಾಡುವಷ್ಟರಲ್ಲಿ ಆಕೆಗೆ ಸಾಕಷ್ಟು ವಯಸ್ಸಾಗಿ ಹೋಗಿರುತ್ತದೆ. ಆ ಹಂತದಲ್ಲಿ ಆಕೆಗೆ ತನ್ನ ಸ್ಟೇಟಸ್‌ ಇರುವ ಹುಡುಗ ಸಿಗುವುದು ಕಷ್ಟವಾಗುತ್ತದೆ.

ಇದರ ಹೊರತಾಗಿ ಹುಡುಗಿಗೆ ತನ್ನ ಕುಟುಂಬದಲ್ಲಿ ತಾಯಿ, ಚಿಕ್ಕಮ್ಮ, ಸೋದರಿ ಅಥವಾ ಬೇರೆ ಯಾರೇ ಆಗಲಿ ಪುರುಷರ ದೌರ್ಜನ್ಯಕ್ಕೆ ತುತ್ತಾಗಿರುವುದನ್ನು ಆಕೆ ಬಾಲ್ಯದಲ್ಲಿಯೇ ನೋಡಿದ್ದರೆ ಅಥವಾ ಕೇಳಿದ್ದರೆ ಅವಳ ನಿರ್ಧಾರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಮಾತು ಮಾತಿಗೂ ಅಪ್ಪ ಅಥವಾ ಚಿಕ್ಕಪ್ಪ, ತನ್ನ ಅಮ್ಮನಿಗೆ, ಚಿಕ್ಕಮ್ಮನಿಗೆ, `ಮನೆಯಿಂದ ಈಗಲೇ ಹೊರಟುಹೋಗು,’  ಎಂಬಂತಹ ಕಟು ನಿಂದನೆಯ ಮಾತುಗಳನ್ನು ಕೇಳಿಸಿಕೊಂಡಿರುತ್ತಾಳೆ. ಇಂತಹ ಹುಡುಗಿಯರ ಮನಸ್ಸು ಘಾಸಿಗೊಂಡು ತಾನು ಯಾವುದಕ್ಕೂ ಅಂತಹ ಮಾತುಗಳನ್ನು ಕೇಳಿಸಿಕೊಳ್ಳಬಾರದು, ಮದುಲೆ ಆಗಲೇಬಾರದು ಎಂದು ನಿರ್ಧರಿಸಿಬಿಡುತ್ತಾರೆ. ತಾನು ತನ್ನ ಕಾಲ ಮೇಲೆ ನಿಂತುಕೊಳ್ಳಬೇಕು, ಯಾರ ಮುಂದೆಯೂ ಮಂಡಿಯೂರಬಾರದೆಂದು ಎಂಬ ನಿರ್ಧಾರ ಕೂಡ ಮಾಡಿಬಿಡುತ್ತಾರೆ.

ಈಗಲೂ ಕೂಡ ಮದುವೆಯ ಬಳಿಕ ಸ್ವತಂತ್ರ ಮಹಿಳೆಗೆ ಆಫೀಸಿನ ಜೀವನ ಹಾಗೂ ಮನೆಯ ಜೀವನಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಮೊದಲು ಜನರು ವಿವಾಹದ ಬಳಿಕ ಮಗುವಿಗೆ ಜನ್ಮ ನೀಡಿದ ಬಳಿಕ ಅವರೇ ತಮ್ಮ ಇನ್ಶೂರೆನ್ಸ್ ಎಂದು ಭಾವಿಸುತ್ತಾರೆ. ತಾವು ವೃದ್ಧಾಪ್ಯಕ್ಕೆ ಕಾಲಿಟ್ಟಾಗ ತಮ್ಮನ್ನು ನೋಡಿಕೊಳ್ಳುತ್ತಾರೆ ಎಂದೆಲ್ಲ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಈಗಿನ ವಾತಾವರಣ ಹಾಗಿಲ್ಲ.

ಈಗ ಮಕ್ಕಳು ತಮ್ಮ ಕೆರಿಯರ್‌ಗಾಗಿ ದೇಶದ ಬೇರೆ ನಗರಗಳಿಗೆ ಅಥವಾ ಬೇರೆ ದೇಶಗಳಿಗೆ ಹೊರಟು ಹೋಗುತ್ತಾರೆ. ಹೀಗಾಗಿ ಮದುವೆಯ ಬಳಿಕ ಮಕ್ಕಳು ಜೊತೆಗಿರುವುದಿಲ್ಲ. ಏಕಾಂಗಿಯಾಗಿ ಉಳಿಯಬೇಕಾಗುತ್ತದೆ. ಆಗ ವೃದ್ಧಾಶ್ರಮಗಳಲ್ಲಿ ಇರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಏಕಾಂಗಿಯಾಗಿ ಜೀವನ ಕಳೆಯಬೇಕಿದ್ದರೆ ಮದುವೆಯಾಗುವ ಅವಶ್ಯಕತೆ ಏನಿರುತ್ತದೆ ಎಂದು ಅವರಿಗೆ ಅನಿಸತೊಡಗುತ್ತದೆ.

ಅವಿವಾಹಿತರನ್ನು ಗೌರವಿಸಿ

ಈಗ ಓದಿನ ಬಳಿಕ ಕೆಲಸಗಳ ಪ್ರಾಥಮಿಕ ಪಟ್ಟಿಯಲ್ಲಿ ಮದುವೆಗೆ ಕೊನೆಯ ಸ್ಥಾನ ಸಿಕ್ಕಿದೆ. ಹೀಗೆ ಮಾಡುವವರ ಸಂಖ್ಯೆ ಕಡಿಮೆಯಿದೆ. ಮದುವೆಯ ನಿರ್ಣಯ ತಾನೇ ತೆಗೆದುಕೊಳ್ಳುವಂಥದ್ದು. ಒಮ್ಮೊಮ್ಮೆ ಇನ್ನೊಬ್ಬರ ಒತ್ತಡಕ್ಕೆ ಕಟ್ಟುಬಿದ್ದು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅವಿವಾಹಿತಳಾಗಿ ಉಳಿಯುವ ನಿರ್ಣಯ ಪರಿಪೂರ್ಣವಾಗಿ ಅವಳೊಬ್ಬಳದೇ ಆಗಿರುತ್ತದೆ. ಆಕೆಯ ಈ ನಿರ್ಣಯವನ್ನು ಗೌರವಿಸಬೇಕು. ಆದರೆ ಆಕೆಯ ಈ ನಿರ್ಧಾರ ತಪ್ಪು ಎಂದು ಬಹಳಷ್ಟು ಜನ ಹೇಳುತ್ತಾರೆ. ತನ್ನ ಜೀವನ ತಾನು ಹೇಗೆ ನಡೆಸಬೇಕು ಎಂದು ನಿರ್ಧಾರ ಕೈಗೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ.

ಮದುವೆಗೆ ಯಾವುದೇ ವಯಸ್ಸಿಲ್ಲ

ಅಂಜಲಿ ದೇಸಾಯಿ ಹೀಗೆ ಹೇಳುತ್ತಾರೆ, “ಮದುವೆಗೆ ಯಾವುದೇ ವಯಸ್ಸು ಎನ್ನುವುದು ಇರುವುದಿಲ್ಲ. ನೀವು ಮಾನಸಿಕವಾಗಿ ಯಾವಾಗ ಸಿದ್ಧವಾಗುತ್ತೀರೊ ಆಗಲೇ ನಿಮಗೆ ಮದುವೆಯ ವಯಸ್ಸು ಆಗಿದೆ ಎಂದರ್ಥ. ಸಮಾಜ ಹಾಗೂ ಕುಟುಂಬ ನಿಮ್ಮ ಮದುವೆ ವಯಸ್ಸನ್ನು ಎಷ್ಟು ಎಂದು ನಿರ್ಧರಿಸಿದೆಯೋ ಅದಕ್ಕೆ ಯಾವುದೇ ಅರ್ಥ ಇಲ್ಲ. ಬಹಳಷ್ಟು ಜನರ ಅಭಿಪ್ರಾಯವೇನೆಂದರೆ, ತಡವಾಗಿ ಮದುವೆಯಾಗುವುದರಿಂದ ಅಥವಾ ಮಾಡಿಕೊಳ್ಳದೇ ಇರುವುದರಿಂದ, ಮುಂದೆ ಕುಟುಂಬ ರೂಪಿಸಿಕೊಳ್ಳುವಾಗ ಸಾಕಷ್ಟು ತೊಂದರೆಯಾಗುತ್ತದೆ. ಆದರೆ ಈಗ ವೈದ್ಯ ವಿಜ್ಞಾನ ಸಾಕಷ್ಟು ಮುಂದುವರಿದಿರುವುದರಿಂದ ಇಂತಹ ಸಮಸ್ಯೆಗಳು ಸಾಕಷ್ಟು ಕಡಿಮೆಯಾಗಿವೆ.

ಈಚೆಗೆ ಮದುವೆಯ ಜೊತೆಜೊತೆಗೆ ಬೇರೊಂದು ರೀತಿಯ ಟ್ರೆಂಡ್‌ ಜೋರಾಗಿ ಚಾಲ್ತಿಯಲ್ಲಿದೆ. ಅದೇ ಲಿವ್ ‌ಇನ್‌ ರಿಲೇಶನ್‌ಶಿಪ್‌. ಮದುವೆಯಾಗದೆಯೇ ಹುಡುಗ-ಹುಡುಗಿ ಜೊತೆ ಜೊತೆಗೆ ಇರುತ್ತಾರೆ. ಇದೊಂದು ಟ್ರೆಂಡ್‌ ಅಷ್ಟೇ ಅಲ್ಲ, ಮದುವೆಯಂತಹ ಹಲವು ನಿರ್ಬಂಧಗಳು ಇದರಲ್ಲಿಲ್ಲ. ಭಾರತೀಯ ಸಮಾಜ ಇದನ್ನು ಒಪ್ಪುವುದು ಬಹುದೊಡ್ಡ ಸಮಸ್ಯೆ.

ಅವಿವಾಹಿತೆ ದತ್ತು ತೆಗೆದುಕೊಳ್ಳುವ ಹಕ್ಕು

ಜುಲೈ 2015ರಲ್ಲಿ ಸುಪ್ರೀಂ ಕೋರ್ಟ್‌ ತನ್ನ ಒಂದು ತೀರ್ಪಿನಲ್ಲಿ ಅವಿವಾಹಿತೆಯರು ದತ್ತು ತೆಗೆದುಕೊಳ್ಳಲು ಹಸಿರು ನಿಶಾನೆ ನೀಡಿದೆ. ನ್ಯಾಯಾಲಯ ಹೇಳಿದ್ದೇನೆಂದರೆ ಯಾವುದೇ ಸಿಂಗಲ್ ಪೇರೆಂಟ್‌ ಅಥವಾ ಅವಿವಾಹಿತ ತಾಯಂದಿರು ಮಗುವಿನ ಜನ್ಮ ದಿನಾಂಕಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಅವರಿಗೆ ನೀಡಬೇಕೆಂದು ಹೇಳಿದೆ. ಈ ತೀರ್ಪಿನ ಪ್ರಕಾರ ಯಾವುದೇ ಮಹಿಳೆ ಮದುವೆ  ಮಾಡಿಕೊಳ್ಳದೆಯೇ ಆ ಮಗುವಿಗೆ ಕಾನೂನುಬದ್ಧ ಪೋಷಕರಾಗಬಹುದು. ಅದರಲ್ಲಿ ಪುರುಷನ ಹೆಸರು ಹಾಗೂ ಅವನು ಜೊತೆಗಿರುವ ಅವಶ್ಯಕತೆ ಇಲ್ಲ. ನ್ಯಾಯಾಲಯದ ಇಂತಹ ತೀರ್ಮಾನಗಳು ಅವಿವಾಹಿತೆಯರಲ್ಲಿ ಆತ್ಮವಿಶ್ವಾಸ ತುಂಬುತ್ತವೆ.

ಪುರುಷರ ಮಾನಸಿಕತೆ

ಸಾಮಾನ್ಯವಾಗಿ ಅವಿವಾಹಿತ ಮಹಿಳೆಯರ ಕುರಿತಂತೆ ಪುರುಷರ ಧೋರಣೆ ಸರಿಯಾಗಿರುವುದಿಲ್ಲ. ತಾವು ಯಾವುದೇ ಸಮಯದಲ್ಲಿ ಲಭ್ಯ ಎಂದು ಭಾವಿಸುವ ಅವರು ಅಂತಹ ಮಹಿಳೆಯರೊಂದಿಗೆ ಫ್ಲರ್ಟ್‌ ಮಾಡಲು ಯತ್ನಿಸುತ್ತಾರೆ. ಫ್ಲರ್ಟ್ ಮಾಡುವುದು ಕೆಟ್ಟ ಸಂಗತಿಯೇನಲ್ಲ. ಏಕೆಂದರೆ ವೈಟ್‌ ಫ್ಲರ್ಟಿಂಗ್‌ ಮಹಿಳೆಯರಿಗೂ ಇಷ್ಟವಾಗುತ್ತದೆ. ಆದರೆ ಅದು ಮಿತಿ ಮೀರಿದಾಗ, ಅದಕ್ಕೆ ಗಾಬರಿಯಾಗುವ ಬದಲು ಅದರಿಂದ ದೂರ ಇರುವ ಬಗ್ಗೆ ಯೋಚಿಸಿ ಅಥವಾ ಆ ಬಗ್ಗೆ ನಿರ್ಲಕ್ಷ್ಯ ತೋರಿ. ಏಕೆಂದರೆ ಪುರುಷ ಮಾನಸಿಕತೆಯನ್ನು ನೀವು ಬದಲಿಸಲು ಆಗದು. ಹೀಗಾಗಿ ಇಂತಹ ಮಾತುಗಳ ಬಗ್ಗೆ ಹೆಚ್ಚು ಮಹತ್ವ ಕೊಡದೆ ಮುಂದೆ ಸಾಗಿ. ಆಗಲೇ ಜೀವನ ಸರಿಯಾಗಿ ಸಾಗುತ್ತದೆ. ಧರ್ಮದ ಗುತ್ತಿಗೆದಾರರ ವ್ಯಾಪಾರ ಬುದ್ಧಿಧರ್ಮ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಏಕೆ ಹಸ್ತಕ್ಷೇಪ ಮಾಡುತ್ತದೆ ಎಂದರೆ, ಧರ್ಮದ ಗುತ್ತಿಗೆದಾರರ ಅಂಗಡಿಗಳ ಮೇಲೆ ಹೊಡೆತ ಕೊಡುತ್ತದೆ ಎಂದು. ಈ ಕಾರಣದಿಂದ ಅವರು ಪ್ರೇಮ ವಿವಾಹ, ಸಲಿಂಗ ವಿವಾಹ, ಲಿವ್ ‌ಇನ್‌ ರಿಲೇಶನ್‌ಶಿಪ್‌ ಮುಂತಾದವುಗಳನ್ನು ವಿರೋಧಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಮದುವೆ ಎನ್ನುವುದು ಯುವಕ ಯುವತಿಯರಿಗೆ ವೈಯಕ್ತಿಕ ವಿಷಯ. ಅದರಲ್ಲಿ ಧರ್ಮಕ್ಕೇನು ಕೆಲಸ? ಧರ್ಮ ಯಾವುದೇ ಒಂದು ಮದುವೆಯ ಯಶಸ್ಸಿನ ಗ್ಯಾರಂಟಿಯ ಬಗ್ಗೆ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಆದರೂ ಪಂಡಿತರು ಪುರೋಹಿತರು ಮದುವೆಯ ಸಂಬಂಧದಲ್ಲಿ ಏಕೆ ಕಾಣಿಸಿಕೊಳ್ಳುತ್ತಾರೋ?

ಪ್ರಭಾ

ವಿಶಿಷ್ಟ ಸಾಧನೆಗಾಗಿ…..

ಪ್ರತಿಯೊಬ್ಬ ವ್ಯಕ್ತಿ ಗೃಹಸ್ಥ ಜೀವನಕ್ಕೆ ಪ್ರವಶಿಸಲೇಬೇಕೆಂದೇನಿಲ್ಲ. ಕೆಲವು ವ್ಯಕ್ತಿಗಳು ಜೀವನದಲ್ಲಿ ವಿಶಿಷ್ಟವಾದುದನ್ನು ಸಾಧಿಸಲು ಇಚ್ಛಿಸುತ್ತಾರೆ. ಮನೆಯ ಜವಾಬ್ದಾರಿಗಳ ನಡುವೆ ಯಾವುದೇ ಮಹತ್ತರ ಕೆಲಸ ಮಾಡಲು ಆಗುವುದಿಲ್ಲ ಎಂದು ಅವರಿಗೆ ಅನಿಸುತ್ತಿರುತ್ತದೆ. ಅಂತಹ ಅನೇಕ ವ್ಯಕ್ತಿಗಳಿದ್ದು, ಅವರು ಮದುವೆ ಮಾಡಿಕೊಳ್ಳದೆಯೇ ಸಾಧನೆಯ ಉತ್ತುಂಗಕ್ಕೆ ತಲುಪಿದರು. ಅವರು ಇತರರಿಗೆ ಮಾದರಿಯೂ ಆಗಿದ್ದಾರೆ. ಅಂತಹವರಲ್ಲಿ ಕೆಲವರು :

ಕಿರಣ್ದೇಸಾಯಿ : ಭಾರತೀಯ ಮೂಲದ ಆಂಗ್ಲ ಕಾದಂಬರಿಗಾರ್ತಿ.

ಏಕ್ತಾ ಕಪೂರ್‌ : ಬಾಲಾಜಿ ಟೆಲಿ ಫಿಲ್ಮಂನ ಕ್ರಿಯೇಟಿವ್ ‌ಹೆಡ್‌ ಹಾಗೂ ಜಾಯಿಂಟ್‌ ಡೈರೆಕ್ಟರ್‌.

ಸುನೀತಾ ನಾರಾಯಣ್‌ : ಪರಿಸರ ಕಾರ್ಯಕರ್ತೆ ಹಾಗೂ ರಾಜಕೀಯ ಕಾರ್ಯಕರ್ತೆ.

ದೇಬ್ಜಾನಿ ಘೋಷ್‌ : ಸೌಥ್‌ ಏಷ್ಯಾ ಇಂಟೆಲ್ ‌ಕಾರ್ಪೋರೇಷನ್ನಿನ ಮ್ಯಾನೇಜಿಂಗ್‌ ಡೈರೆಕ್ಟರ್‌.

ಸುಷ್ಮಿತಾ ಸೇನ್‌ : ಹಿಂದಿ ಚಿತ್ರರಂಗದ ನಟಿ, ಮಾಜಿ ಮಿಸ್‌ ಇಂಡಿಯಾ ಹಾಗೂ ಮಿಸ್‌ ವರ್ಲ್ಡ್.

ರಿತು ಡಾಲ್ಮಿಯಾ : ಮೊದಲ ಇಟಾಲಿಯನ್‌ ರೆಸ್ಟೋರೆಂಟಿನ ಶೆಫ್‌ ಹಾಗೂ ಕೋ ಓನರ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ