ಇತ್ತೀಚಿನ ದಿನಗಳಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ನಡೆಸೋದು ಸರ್ವೇ ಸಾಮಾನ್ಯವಾಗಿದೆ. ಇಂಥ ಕಾರ್ಯಕ್ರಮಗಳ ಆಯೋಜಕರಾದವರು ಬಹಳ ವ್ಯವಸ್ಥಿತವಾಗಿ ಅದನ್ನು ನಡೆಸುವುದೊಂದು ಕಲೆಯಾಗಿದೆ. ವೇದಿಕೆಯ ಅಲಂಕಾರ, ಮೈಕ್‌ ವ್ಯವಸ್ಥೆ, ಮುಖ್ಯ ಅತಿಥಿಗಳನ್ನು ಆಹ್ವಾನಿಸೋದು, ಸನ್ಮಾನ, ಹೀಗೆ ಹತ್ತು  ಹಲವಾರು. ಇವೆಲ್ಲ ಸರಿಯಾಗಿ ನಡೆಯಬೇಕೆಂದರೆ ನಿರೂಪಣೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಸರಿಯಾಗಿದ್ದು ಅಜೆಂಡಾದಲ್ಲೊಂದು ಮಾತನಾಡುವ ಪರಿವೆಯಲ್ಲೋ ಎಡವಿದರೆಂದರೆ ಇಡೀ ಕಾರ್ಯಕ್ರಮ ಫೇಲ್ಯೂರ್‌. ಹಾಗಾಗಿ ನಿರೂಪಣೆ ಹೇಗಿರುತ್ತೋ ಹಾಗೆ ಕಾರ್ಯಕ್ರಮ ಮೂಡಿಬರೋದು ದಿಟ! ನಿರೂಪಣೆಗೆ ಬೇಕಾದ ಗುಣಗಳೆಂದರೆ ಸ್ವಚ್ಛ ಪದ ಉಚಾರಣೆ, ಪ್ರಚಲಿತ ವಿದ್ಯಮಾನಗಳ ವಿಷಯ ಜ್ಞಾನ, ಮಾತಲ್ಲಿ ಘನತೆ, ಅವುಗಳ ಮೇಲಿನ ಹಿಡಿತವಿದ್ದರೆ ಎಂಥ ಕಾರ್ಯಕ್ರಮವನ್ನೂ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರೂಪಿಸಲು ಸಾಧ್ಯ.

ಇತ್ತೀಚೆಗೆ ಟ್ರೆಂಡ್‌ ಹೇಗಾಗಿದೆಯೆಂದರೆ, ಸಂಘ ಸಂಸ್ಥೆ, ಸಾರ್ವನಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕುಟುಂಬದ, ತೀರಾ ವೈಯಕ್ತಿಕ ಸಭೆ ಸಮಾರಂಭಗಳಲ್ಲೂ ಸಹ ಈ ನಿರೂಪಣಾ ವಿಧಾನ ಬೆಳವಣಿಗೆ ಕಾಣುತ್ತಿರುವುದು ಸ್ವಾಗತಾರ್ಹ.

ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಹೆಸರು ಮಾಡಿರುವವರು ಹಲವರು! ಆ ಸಾಲಿಗೆ ಸೇರುವ ಅಪ್ಪಟ ದೇಸೀ ಪ್ರತಿಭೆ, ಮಲೆನಾಡಿನ ಬೆಡಗಿ, ನಿರೂಪಕಿ, ಕಂಠದಾನ ಕಲಾವಿದೆ, ಲೇಖಕಿ, ಛಾಯಾಗ್ರಾಹಕಿ ಸಂಧ್ಯಾ ಭಟ್‌.

ಪದಗಳೊಟ್ಟಿಗೆ ಆಟವಾಡೋದೂ ಒಂದು ಕಲೆಯೇ. ಇದಕ್ಕೆ ಭಾಷಾ ಜ್ಞಾನವಿರಬೇಕಷ್ಟೆ! ಅಂತಹ ಭದ್ರ ಬುನಾದಿ ಹಾಕಿ ಕೊಡೋದು ನಮ್ಮ ಶಾಲಾ ದಿನಗಳಲ್ಲಿನ ಗುರುಗಳು ಎಂದರೆ ತಪ್ಪಾಗಲಾರದು! ಶಾಲಾ ದಿನಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸುದ್ದಿ ವಾಚನವೊಂದು ಅಜೆಂಡಾ. ಅಲ್ಲಿಂದಲೇ ಇದರ ಪ್ರಾರಂಭ ಆಯಿತೇನೋ. ಗಂಗಮ್ಮ ಹಾಗೂ ಸರೋಜಮ್ಮ ಮೇಡಂರವರುಗಳ ಅಂದಿನ ಆ ಪ್ರೋತ್ಸಾಹವೇ ಇವರ ಇಂದಿನ ಈ ಅಕ್ಷರ ಲೋಕಕ್ಕೆ ನಾಂದಿ ಹಾಡಿತು.

ತೀರ್ಥಹಳ್ಳಿಯ ಹೊರಣೆಬೈಲಿನಲ್ಲಿ ಒಂದು ಬಡ ಕುಟುಂಬ, ಬೇಸಾಯೀ ಆದಾಯ. ತಂದೆ ಶಂಕರ್‌ ಭಟ್‌, ತಾಯಿ ಸುಶೀಲಾ ಭಟ್‌. ಸುಸಂಸ್ಕೃತ ಸಂಪ್ರದಾಯಸ್ಥ ಕೂಡು ಕುಟುಂಬ. ದೊಡ್ಡಪ್ಪನ ಯಜಮಾನಿಕೆ. ಅಕ್ಕ ತಮ್ಮ ಇವರೊಟ್ಟಿಗೆ ಹುಟ್ಟಿದರು. ಆಸೆ ಕನಸುಗಳಿದ್ದರೂ ಸಾಕಾರಗೊಳ್ಳೋದು ವಿರಳವೇ ಆಗಿತ್ತು. ಸಜ್ಜನಿಕೆ ಸೌಹಾರ್ದತೆಗಳಿಗೆ ಕುಟುಂಬದ ಗುರುತಿದ್ದರೂ ಕುಟುಂಬ ಬೇರೆಯಾದ ನಂತರ ಕಷ್ಟಗಳೇ ಜೀವನವಾದವು! ಆದರೂ ಬಾಲ್ಯ ಸುಂದರವಾಗಿತ್ತು. ಆಟೋಟ ನೋಟಗಳು ಖುಷಿಕೊಡುತ್ತಿತ್ತು.

ಮನೆಯಿಂದ ಶಾಲೆಗೆ ದಿನ 4 ಕಿಲೋಮೀಟರ್‌ ನಡೆದೇ ಹೋಗಬೇಕಿತ್ತು.  ಸರ್ಕಾರಿ ಶಾಲೆಯಲ್ಲಿ ಕಲಿಕೆ ಆರಂಭ. ತೀರ್ಥಹಳ್ಳಿಯ  ಸೇವಾಭಾರತಿಯಲ್ಲಿ ನಾಲ್ಕರಿಂದ ಏಳನೇ ತರಗತಿಯವರೆವಿಗೂ ಅಭ್ಯಾಸ. ತುಂಗಾ ಮಹಾವಿದ್ಯಾಲಯದಿಂದ ಪದವಿ! ಕನ್ನಡ ಮಾಧ್ಯಮದ ಕುರಿತಾದ ಭಾಷಾಭಿಮಾನ ಹೆಚ್ಚು! ಸಮಾಜ ಶಾಸ್ತ್ರ ಫೇವರೇಟ್‌, ಗಣಿತ ಕಷ್ಟಕಷ್ಟ! ಎಸ್‌.ಎಸ್‌.ಎಲ್.ಸಿವರೆಗೂ ಚಿಮಣಿ ದೀಪದಲ್ಲೇ ಓದು. ಸೌಲಭ್ಯ ಸವಲತ್ತುಗಳು ಬಹಳವೇ ಕಡಿಮೆ.

ಹೊಸ ಬಟ್ಟೆ, ಶಾಲಾ ಶುಲ್ಕಕ್ಕೂ ಪರದಾಡಿದ ಕ್ಷಣಗಳು ಹಲವು! ಇವೆಲ್ಲ ಆಗ ಏನೂ ಅನಿಸುತ್ತಿರಲಿಲ್ಲ. ಈಗ ನೆನೆಸಿಕೊಂಡರೆ ಒಂಥರಾ ಎನಿಸುತ್ತದೆ ಎನ್ನುತ್ತಾರೆ. ಮತ್ತೊಂದೆಡೆಗೆ ಚುರುಕಾದ ಹುಡುಗಿ ಗುರುಗಳ ನೆಚ್ಚಿನ ಶಿಷ್ಯೆ, ಸ್ನೇಹ ವೃಂದ ಅಷ್ಟಾಗಿರಲಿಲ್ಲ. ಅಪಾರ ಗುರುಭಕ್ತಿ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ರಾಜ್ಯ ಮಟ್ಟದ ವಾಲಿಬಾಲ್ ‌ಆಟಗಾರ್ತಿ, ಶಾಲಾ ಮಟ್ಟದ ಶಾರ್ಟ್‌ಪುಟ್‌ ಬಹುಮಾನಿತೆ. ಡಿಸ್ಕ್ ಥ್ರೋ, ಆಶುಭಾಷಣ ಸ್ಪರ್ಧೆ, ಪ್ರಬಂಧ ಲೇಖನ ಹೀಗೆ ಸಕ್ರಿಯರಾಗಿದ್ದರೂ ಕೂಡಾ ಪದವಿಯೊಂದಿಗೆ ಶಿಕ್ಷಣ ಮುಕ್ತವಾಯಿತು.

ಹೊರಹೊಮ್ಮಿದ ವಿಶಿಷ್ಟ ಕಲೆ

ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟ ಕಲೆ ಇರುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಬಡತನ ಹಳ್ಳಿಯ ಬದುಕಲ್ಲೇ  ಬೆಳೆದ ಈ ಪ್ರತಿಭೆಯೊಳಗಿದ್ದ ಕಲೆ ಅನಾರಣಗೊಳ್ಳಲು ಅಂಥಾ ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ಶಾಲಾ ದಿನಗಳಲ್ಲಿ ಮೇಷ್ಟ್ರರೊಬ್ಬರಿಂದ ಮೂದಲಿಕೆಯ ಅಣಕದ ಮಾತುಗಳಿಂದ ಮನದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಹಠ ಮೂಡಿತು. ಆಗಾಗ ದೊರೆಯುತ್ತಿದ್ದ ಅವಕಾಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತ ನಡೆದಿದ್ದರು.

8ನೇ ತರಗತಿಯಲ್ಲಿದ್ದಾಗ ಸ್ವಂತ ಅಕ್ಕ ರೇಖಾಳನ್ನು ಕುರಿತು ಬರೆದ ಪದ್ಯ ಸ್ಥಳೀಯ ಪತ್ರಿಕೆ `ಪ್ರಚಂಡ’ದಲ್ಲಿ ಪ್ರಕಟಗೊಂಡಾಗ ಅಪ್ಪ ಏನೂ ಮಾತಾಡಲಿಲ್ಲ. ಅಮ್ಮನ ಹೊಗಳಿಕೆಯ ಪ್ರೋತ್ಸಾಹ ದೊರೆಯಿತು. ವಯಸ್ಸಿನ ಸ್ಥಿತಿಗತಿ ಭಾವನೆಗಳ ಮನಸ್ಥಿತಿ, ಕವನ ರೂಪದಿ ಹೊರಹೊಮ್ಮಿ ಪತ್ರಿಕೆಗಳಲ್ಲಿ ಪ್ರಕಟ.

ಕಾಲೇಜು ದಿನಗಳಲ್ಲಿ ಇವರ ಚುರುಕುತನ ನೋಡಿದ ಆಗಿನ `ನಾವಿಕ’ ಪತ್ರಿಕೆಯ ವೈದ್ಯ ಶಿವಮೊಗ್ಗದವರಿಂದ ತೀರ್ಥಹಳ್ಳಿಯ ವರದಿಗಾರ್ತಿಯಾಗುವ ಸುಯೋಗ! ಹಾಗೇ ಸಾಗುತ್ತ ಬಂದ ಹಾದಿಗೆ ಬೆಳಕು ನೀಡಿತು. ಇವರೊಳಗೆ ಸುಪ್ತವಾಗಿ ಅಡಗಿ ಕುಳಿತಿದ್ದ ಮಾತಿನ ತೋರಣ! ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕ್ರಮದ ಮುಖೇನ ನಿರೂಪಣೆಗೆ ಎಂಟ್ರಿ. ಅಳುಕಿನಿಂದ ಪ್ರಾರಂಭವಾಗಿ ಕಾರ್ಯಕ್ರಮ ಮುಗಿಯುವ ವೇಳೆಗೆ ಭರಪೂರ ಶಹಭಾಷ್‌ಗಿರಿ! ಆತ್ಮೀಯರಿಂದ ಮುಂದುವರಿಸಿ ಎಂಬ ಪ್ರೋತ್ಸಾಹದ ನುಡಿಗಳು.

ಇಲ್ಲಿದ್ದರೆ ಅವಕಾಶಗಳು ಕಡಿಮೆ. ಆಕರ್ಷಕ ನಗರಿ ಬೆಂಗಳೂರಿಗೆ ಹೋದರೆ ಸುವರ್ಣಾ, ಉದಯ ಚಾನೆಲ್‌ಗಳಲ್ಲಿ ಖಂಡಿತಾ ಅವಕಾಶಗಳು ದೊರೆಯುತ್ತದೆಂಬ ಹುರಿದುಂಬಿಕೆ ಬೇರೆ. ಬೆಂಗಳೂರಿಗೆ ಹೊರಟೇಬಿಟ್ಟರು. ಮನೆಯಲ್ಲೂ ಯಾರೂ ಪ್ರಶ್ನಿಸಲಿಲ್ಲ! ದೂರದ ಬೆಟ್ಟ ನುಣ್ಣಗೆ ಎಂಬುದು ಅರಿವಾಗಲು ಬಹಳ ಸಮಯ ಬೇಕಾಗಲಿಲ್ಲ. ಆಗಿದ್ದ ಒಂದಷ್ಟು ಚಾನಲ್‌ಗಳಿಗೆ ಅಪ್ಲಿಕೇಶನ್‌ಹಾಕೋದು ರಿಜೆಕ್ಟ್ ಆಗೋದೇ ಒಂದು ಕ್ಯಾಮೆ ಆಗಿಹೋಯಿತು. ಕಡೆಗೆ ಒಂದು ಕಛೇರಿಯಲ್ಲಿ ಕೆಲಸ ದೊರಕಿತು. ಕೈಯಲ್ಲಿ ಪುಡಿಗಾಸಿಲ್ಲದ ದಿನಗಳೆಷ್ಟೊ!

ಮೊದಲ ಕೆಲಸ

ಸ್ವಂತದವರಿದ್ದರೂ ಯಾರ ಮನೆಯ ಬಾಗಿಲಿಗೂ ಹೋಗದ ಸ್ವಾಭಿಮಾನಿ! ಆಗೆಲ್ಲ ಹೊಟ್ಟೆ ತುಂಬಿಸಿದ್ದು ಗಣೇಶ ದೇವಸ್ಥಾನದ ಪ್ರಸಾದ ಪುಳಿಯೋಗರೆ. ಪಿಜಿಯಲ್ಲೊಮ್ಮೆ ಲೋ ಬಿಪಿಯಾಗಿ ಬಿದ್ದು ಅಪ್ಪಅಮ್ಮನಿಗೆ ಫೋನಾಯಿಸಿ ಓನರ್‌ ತಿಳಿಸಿದಾಗಲೇ ಗೊತ್ತಾಯ್ತು ಕಷ್ಟ! ಅಮ್ಮ ಬೈದದ್ದೇ ಬೈದದ್ದು. ಇಲ್ಲಮ್ಮ ನಾನಿಲ್ಲಿದ್ದೇ ಸಾಧಿಸುವೆ ಎಂಬ ಛಲದ ಮಾತುಗಳು ತಾಯಿಯ ಕರುಳಿಗೆ ಪೆಟ್ಟಾಯಿತು! ಪರಿಚಯಸ್ಥರ ಒತ್ತಾಯದ ಮೇರೆಗೆ ಶಂಕರ ಚಾನೆಲ್‌ನವರಿಗೆ ಅಪ್ಲಿಕೇಶನ್‌ ಹಾಕಿದ್ದು…. ಉಡಲು ಸೀರೆ ಇರಲಿಲ್ಲ…. ಊರಿಗೆ ವಿಷಯ ತಿಳಿಸಿದಾಗ ರಾತ್ರಿಯ ಬಸ್ಸಲ್ಲಿ ಅಮ್ಮ ರವಿಕೆಯನ್ನು ಹೊಲಿದು ಸೀರೆಯೊಟ್ಟಿಗೆ ಬಸ್ಸಲ್ಲಿ ಕಳಿಸಿದರು.

ಬೆಳಗಿನ ಜಾವ 5 ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಕಲೆಕ್ಟ್ ಮಾಡಿ ಇಂಟರ್‌ವ್ಯೂಗೆ ಹೋಗಿದ್ದನ್ನು ನೆನೆಸಿಕೊಂಡರು. 47ನೇ ಸ್ಪರ್ಧಾಳು! ಅದಾಗಲೇ ರೋಸಿಹೋಗಿತ್ತು ಜೀವ. ಪ್ರಜಾವಾಣಿ ಪೇಪರ್‌ ಕೊಟ್ಟು ಓದಲು ಹೇಳಿದರು. ಇವರ ಕ್ವಾಲಿಟೀಸ್‌ನಿಂದಾಗಿ ಅಲ್ಲಿ ಉತ್ತೀರ್ಣಳಾಗಿದ್ದು ಹೇಳಿಕೊಳ್ಳಲಾಗದಷ್ಟು ಸಂತಸ ಕೊಟ್ಟಿತು. ಮೊದಲಿಗೆ ಖ್ಯಾತ ಶಿಲ್ಪಿ ಕನಕಮೂರ್ತಿಯವರನ್ನು ಸಂದರ್ಶಿಸಿದ್ದು. ಎರಡನೆಯವರಾಗಿ ಸಂದರ್ಶಿಸಿದ್ದು ಸಿ. ಅಶ್ವತ್ಥ್. ಎಷ್ಟು ಜನ್ಮದ ಪುಣ್ಯವೋ ಅವರೊಟ್ಟಿಗೆ ಕಳೆದ ಆ ಸಮಯ ಎಂದು ಬಹಳ ಹರ್ಷಿತರಾದರು. ಮೂರೂವರೆ ವರ್ಷ ಇಲ್ಲಿ ದುಡಿದರು. ತದನಂತರ ಅದೃಷ್ಟ ಖುಲಾಯಿಸಿತು. ಹಿಂತಿರುಗಿ ನೋಡಲೇ ಇಲ್ಲ. ಅವಕಾಶಗಳ ಮೇಲೆ ಅವಕಾಶಗಳು!

ವಿವಿಧ ವಾಹಿನಿಗಳಲ್ಲಿ ವೇದಿಕೆ ಕಾರ್ಯಕ್ರಮಗಳು, ಬೇರೆ ಚಾನೆಲ್‌ಗಳಲ್ಲೂ ನಿರೂಪಣೆಗೆ ಆಹ್ವಾನ…. ಹೀಗೆ ಬೆಳೆಯುತ್ತಾ ಬಂದರು. ಕರ್ನಾಟಕ ಸರ್ಕಾರದ ಅಡಿಯಲ್ಲಿನ ಹಲವಾರು ಜಾಹೀರಾತುಗಳಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನಕದಾಸರ ಸಾಕ್ಷ್ಯ ಚಿತ್ರದಲ್ಲಿ, ಸಿನಿಮಾಗಳಲ್ಲಿ, ಥಿಯೇಟರ್‌ಗಳಲ್ಲಿ ಚಲನಚಿತ್ರ ಬರುವ ಮುಂಚೆಗೂ ಬರುವ ಕಥೆಗೆ ದನಿಯಾಗಿ, ಸ್ಯಾನ್‌ ಎಂಬ ಚಿತ್ರಕ್ಕೆ ಕುರಿ ಪ್ರತಾಪ್‌ ಜೊತೆಗೆ ದನಿಯಾಗಿ, ತೋಟಗಾರಿಕೆ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳಿಗೇ ಇವರದೇ ದನಿಯಿರುತ್ತಿತ್ತು.

ಜ್ಯೋತಿಷ್ಯ, ದೇಗುಲ ದರ್ಶನ ಕಾರ್ಯಕ್ರಮಗಳ ಜಾಹೀರಾತುಗಳು ಬಿತ್ತರವಾಗೋದು ಇವರ ದನಿಯಲ್ಲೇ! ಹೀಗೆ ಸಾಗಿದ ಜರ್ನಿಯಲ್ಲಿ ಖ್ಯಾತನಾಮರುಗಳು ದೊರೆತರು. ಹವ್ಯಾಸವಾಗಿದ್ದ ಮಾತಿನ ಮಂಪಟವೀಗ ದೇಗುಲದಷ್ಟು ಬೆಳೆಯುವಂತಾಯಿತು. ಇಂದೂ ವಿಶ್ವನಾಥ್‌, ಕಸ್ತೂರಿ ಶಂಕರ್‌, ಎಚ್‌.ಆರ್‌. ಲೀಲಾವತಿ, ಮಾಲತಿಶರ್ಮ ಇವರುಗಳ ಕಾರ್ಯಕ್ರಮದಲ್ಲಿ ಖಾಯಂ ನಿರೂಪಕಿಯಾದರು. ರತ್ನಮಾಲಾ ಪ್ರಕಾಶ್‌ರವರಿಗೆ ಸಂತ ಶಿಶನಾಳ ಶರೀಫ್‌ ಪ್ರಶಸ್ತಿ ದೊರೆತಾಗ ಅವರ ಪರಿಚಯ ಲೇಖನವನ್ನು ಪತ್ರಿಕೆಗೆ ಪ್ರಥಮ ಬಾರಿಗೆ ನೀಡಿದ್ದು ಹೆಗ್ಗಳಿಕೆಯ ವಿಷಯವೇ ಹೌದು!

ಕುವೆಂಪು ಜನ್ಮಶತಾಬ್ದಿ ಕಾರ್ಯಕ್ರಮದ ತುಂಗಾ ಮಹೋತ್ಸವ, ಮುಸ್ಸಂಜೆಯಿಂದ ಮುಂಜಾವಿನವರೆವಿಗೂ ಒಂದು ವಿನೂತನ ಕಾನ್ಸೆಪ್ಟ್ ವುಳ್ಳ ಕಾರ್ಯಕ್ರಮ, ಕೆ.ಎಸ್‌. ನರಸಿಂಹಸ್ವಾಮಿಯವರ ಕಾರ್ಯಕ್ರಮ, ಸುಗಮ ಸಂಗೀತ ಸಮ್ಮೇಳನ, ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮ ಪ್ರತಿ ತಿಂಗಳೂ ವೈ.ಕೆ. ಮುದ್ದುಕೃಷ್ಣರ ಸಾರಥ್ಯದಲ್ಲಿ ನಡೆಯುತ್ತಿದ್ದು ಇದರಲ್ಲೂ ಇವರದೇ ದನಿ!

ವೈವಿಧ್ಯಮಯ ನಿರೂಪಣೆ

ಬಿ.ಕೆ. ಸುಮಿತ್ರಾರವರಿಗೆ 75 ವರ್ಷ ತುಂಬಿದ ಸಂಭ್ರಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಜೊತೆಗೆ ಹೊರತಂದ ಅಭಿನಂದನಾ ಗ್ರಂಥಕ್ಕೆ ಸಹಸಂಪಾದಕಿಯಾಗಿದ್ದು ಮಗದೊಂದು ಅನುಭವ ಕೊಟ್ಟಿತು. ನಾಗಚಂದ್ರಿಕಾ ಭಟ್‌ ಸಾರಥ್ಯದಲ್ಲಿ ನಡೆದ ಎಂ.ಎನ್‌. ವ್ಯಾಸರಾವ್ ಶ್ರದ್ಧಾಂಜಲಿ ಕಾರ್ಯಕ್ರಮ. 70ರ ಸಂಭ್ರಮದ ಬಿ.ಆರ್‌. ಲಕ್ಷ್ಮಣ್‌ ರಾವ್‌ರವರ ಕಾರ್ಯಕ್ರಮ. ಅಮೃತವರ್ಷಿಣಿ ಸಂಸ್ಥೆಯವರು ನಡೆಸುವ ಎಲ್ಲ ಕಾರ್ಯಕ್ರಮಗಳಿಗೂ ಖಾಯಂ ನಿರೂಪಣೆ ಇರದೇ!

ಕುಮಾರ್‌ ಬಂಗಾರಪ್ಪ, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯವರುಗಳಿದ್ದ ಬೃಹತ್‌ ವೇದಿಕೆಗಳು, ನಾಡಿನ ಹೆಸರಾಂತ ಕವಿವರ್ಯರು ಸಾಹಿತಿಗಳಿದ್ದ ವೇದಿಕೆಗಳು, ಚಲನಚಿತ್ರ ನಟರುಗಳಿದ್ದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಇಂದು ಈ ಹೆಣ್ಣುಮಗಳು ಎಲ್ಲರ ನೆಚ್ಚಿನ ಮಗಳಾಗಿದ್ದಾರೆ. ಇತ್ತೀಚೆಗೆ `ಮಗಳು ಜಾನಕಿ’ ಸೀರಿಯಲ್‌ನಲ್ಲೂ ನಿರೂಪಣೆಯ ಪಾತ್ರ ಮಾಡಿದಾಗಿನಿಂದ ಅಭಿಮಾನಿ ಬಳಗ ಹೆಚ್ಚಾಗಿದೆ.

ಬಡಗನಾಡು ಬ್ರಾಹ್ಮಣ ಮಹಾಸಭಾದಲ್ಲಿ ಹರಿಹರಪುರದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಮೈಸೂರಿನ ಮಹಾರಾಜರಾದ ಯದುವೀರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದು ನನ್ನ ಸುಕೃತವೇ ಹೌದೆನ್ನುತ್ತಾರೆ. ಇಂತಹ ಸುವರ್ಣಾವಕಾಶ ಕೊಟ್ಟ ಸಂಘದ ಅಧ್ಯಕ್ಷರಾದ ಜೆ.ಎಸ್‌. ನಾಗೇಶ್‌ರವರಿಗೂ ಅಭಿನಂದನೆಗಳೆನ್ನುತ್ತಾರೆ.

ಒಂದೊಂದು ವೇದಿಕೆಯೂ ಒಂದೊಂದು ಪಾಠ ಕಲಿಸೋದು ಮಾತ್ರ ದಿಟವೇ ಹೌದು ಎನ್ನುತ್ತಾರೆ. ಅತ್ಯಂತ ಖುಷಿಕೊಟ್ಟ ಸಂಗತಿ ಯಾವುದೆಂದಾಗ ಅವರಿಂದ ಬಂದ ಉತ್ತರ, ಅಂದು ಶಾಲಾ ದಿನಗಳಲ್ಲಿ ನನ್ನ ಮೂದಲಿಸಿ, ಅಣಕ ಮಾಡಿದ್ದ ಆ ಶಾಲೆಯ ಮುಖ್ಯಸ್ಥರಾಗಿದ್ದವರೇ ಕರೆದು ಮುಖ್ಯ ಅತಿಥಿಯನ್ನಾಗಿಸಿ ಗೌರವಿಸಿ ಸನ್ಮಾನಿಸಿದ್ದು ಖುಷಿಕೊಟ್ಟರೂ ಬಹಳ ಮುಜುಗರಕ್ಕೆ ಒಳಗಾದವರಂತೆ! ಅದೇ ರೀತಿ ತನ್ನ ಮಗಳು ಓದುತ್ತಿರುವ ಶಾಲೆಗೇ ಗೆಸ್ಟ್ ಆಗಿ ಕರೆದು ಗೌರವಿಸಿದ್ದು ಕೂಡಾ ಹೆಮ್ಮೆಯಾಗಿದೆ.

ಸಾಗರದಲ್ಲಿ ನಡೆದ ಒಂದು ದೊಡ್ಡ ಕಾರ್ಯಕ್ರಮದಲ್ಲಿ `ಸಹೃದಯ ಕಲಾವಿದೆ’ ಎಂದು ಬಿರುದು ನೀಡಿ ಗೌರವಿಸಿರುವರು. ಮಗಳು ಹುಟ್ಟಿದಾಗ 2 ವರ್ಷ ಬ್ರೇಕ್‌! ನಂತರ ಬಹಳಷ್ಟು ಜನಪ್ರಿಯತೆ ಪಡೆದು ಮುಂದೆ ಸಾಗುತ್ತಿರುವ ಈ ದೇಸೀ ಪ್ರತಿಭೆಗೆ, ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಿರೂಪಣೆ ಮಾಡಿ ಎಂಬ ಕನ್ನಡ ಪ್ರೇಮಿಗೆ, ಸಂಧ್ಯಾಕಾಲಂನ ಅಂಕಣ ಬರಹಗಾರ್ತಿಗೆ, `ಪುಟ್ಟಗೌರಿ ಮದುವೆ’ ಧಾರಾವಾಹಿಯ ಪ್ರಮುಖ ಪಾತ್ರಧಾರಿಗೆ ದನಿಯಾದ ಕಂಠದಾನ ಕಲಾವಿದೆಗೆ, 200 ಲೇಖನಗಳನ್ನು ಬರೆದಿರುವ ಲೇಖಕಿಗೆ, ಸೆನ್ಸಾರ್‌ ಬೋರ್ಡ್‌ನಲ್ಲಿ ಸದಸ್ಯೆಯಾಗಿರುವವರಿಗೆ, ಇನ್ನಷ್ಟು ಅವಕಾಶಗಳು ದೊರಕಲಿ. ಪ್ರೋತ್ಸಾಹ ನೀಡುತ್ತಿರುವ ಪತಿ ಅಜೇಯ್ ಕುಮಾರ್‌ ಭಟ್‌, ಅತ್ತೆ ಮಾವ ಹಾಗೂ 2ನೇ ತರಗತಿಯಲ್ಲಿರುವ ಮಗಳು ಆತ್ಮಿಕಾ ಭಟ್‌ ಇವರುಗಳು ಬೆನ್ನೆಲುಬಾಗಿದ್ದಾರೆ. ನಮ್ಮ ನೆಲ ನಾಡು ನುಡಿ ಎನ್ನುವ ಈ ಅಪ್ಪಟ ಕನ್ನಡದ ಹುಡುಗಿಗೆ ಉಜ್ವಲ ಭವಿಷ್ಯ ದೊರೆಯಲಿ. ಆಲ್ ದಿ ಬೆಸ್ಟ್!

ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ