ಅಂದು ಬೀದಿ ಬದಿಯಲ್ಲಿ ದೊಡ್ಡ ಜನರ ಗುಂಪು ನೆರೆದಿತ್ತು. ಅಲ್ಲಿ ಹಲ್ಲಿಯೊಂದರ ಹರಾಜು ನಡೆದಿತ್ತು.
ರಾಮಯ್ಯ : ನಾನು 10 ಸಾವಿರ ಕೊಡ್ತೀನಿ!
ಸೋಮಯ್ಯ : ನಾನು 20 ಸಾವಿರ ಕೊಡ್ತೀನಿ!
ಭೀಮಯ್ಯ : ನಾನು 30 ಸಾವಿರ ಕೊಡ್ತೀನಿ!
ಹನುಮಯ್ಯ : ನಾನು 40 ಸಾವಿರ ಕೊಡ್ತೀನಿ!
ಆಗ ಕಾನ್ಸ್ಟೇಬಲ್ ಕರಿಯಣ್ಣ ಅದೇ ದಾರಿಯಲ್ಲಿ ಹಾದು ಬಂದು ಜನರ ಗುಂಪು ಗಮನಿಸಿ ಸೈಕಲ್ ನಿಲ್ಲಿಸಿ ಕೇಳಿದ. “ಇಲ್ಲೇನು ನಡೆಯುತ್ತಿದೆ?”
ಅದಕ್ಕೆ ಜವರಯ್ಯ ವಿವರಿಸಿದ, “ಈ ಹಲ್ಲಿಗೆ ಮಾತ್ರ ಹೆಂಡ್ತೀರು ಹೆದರೋದು!’
‘ಒಂದು ಆರ್ಟ್ ಎಗ್ಸಿಬಿಷನ್ಗೆ ಪತಿಪತ್ನಿ ಇಬ್ಬರೂ ಹೊರಟರು. ಅಲ್ಲಿ ಒಂದು ಸುಂದರ ಸುವರ್ಣ ಚಿತ್ರದಲ್ಲಿ ಹುಡುಗಿಯೊಬ್ಬಳು ತನ್ನ ದೇಹವನ್ನು ಕೇವಲ ಎಲೆಗಳಿಂದ ಮುಚ್ಚಿಕೊಂಡಿದ್ದಳು. ಪತಿ ಅದನ್ನೇ ನೋಡುತ್ತಾ ಅವಾಕ್ಕಾಗಿ ಅಲ್ಲೇ ನಿಂತುಬಿಟ್ಟ.
ಇದನ್ನು ಕಂಡು ಸಾಕಾದ ಪತ್ನಿ ಸಿಡುಕಿದಳು, “ಏನು…. ಮನೆಗೆ ಬರ್ತೀರೋ ಅಥವಾ ಬಿರುಗಾಳಿ ಬರಲಿ ಅಂತ ಕಾಯ್ತಾ ಇಲ್ಲೇ ಇದ್ದುಬಿಡ್ತೀರೋ?”
ಡಾಕ್ಟರ್ : ಕಂಗ್ರಾಜುಲೇಶನ್ಸ್ ಮೇಡಂ ನಿಮ್ಮ ಪತಿಯ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ.
ಸುಂದ್ರಾಂಗಿ : ಅಯ್ಯೋ ಬಿಡಿ ಡಾಕ್ಟರ್, ಆ ಮನುಷ್ಯ ಎಲ್ಲದರಲ್ಲೂ ನೆಗೆಟಿವೇ!
ಸುರೇಶ್ : ನನ್ನ ಹೆಂಡತಿಯ ಟಿಕ್ ಟಾಕ್ ಕಿರಿಕಿರಿ ಕೇಳಿ ಕೇಳಿ ಸಾಕಾಗಿದೆ ಕಣಯ್ಯ.
ಮಹೇಶ : ಆದರೆ ಬೇರೆಯವರ ಹೆಂಡತಿಯ ಟಿಕ್ ಟಾಕ್ ಚೆನ್ನಾಗಿರುತ್ತೆ ಅಲ್ವಾ…..?
ಗುಂಡ : ನಿನಗೆ ಗೊತ್ತಾ? ಆಕಾಶದಿಂದ ಕೆಳಗೆ ಬೀಳುವ ಉಲ್ಕೆಯನ್ನು ಕಂಡು ನಾವೇನಾದರೂ ವರ ಬೇಡಿಕೊಂಡರೆ ಅದು ತಕ್ಷಣ ಫಲಿಸುತ್ತದೆ.
ನಾಣಿ : ಹೌದಾ? ನೀನು ಟ್ರೈ ಮಾಡಿ ನೋಡಿದ್ದೀಯಾ?
ಗುಂಡ : ಆದರೆ ನನ್ನ ವಿಷಯದಲ್ಲಿ ಅದ್ಯಾಕೋ ಉಲ್ಟಾ ಹೊಡೀತು!
ನಾಣಿ : ಯಾಕೆ…. ಏನಾಯ್ತು?
ಗುಂಡ : ಆ ಉಲ್ಕೆ ಬೀಳುವ ಸಮಯದಲ್ಲಿ ನಾನು ನನ್ನ ಹೆಂಡತಿಯನ್ನು ಎದುರಿಸಲು ಧೈರ್ಯ ಕೊಡು ಅಂತ ಪ್ರಾರ್ಥಿಸಿದರೆ, ಅದು ಭೂಮಿಗೆ ಅಪ್ಪಳಿಸುವ ಬದಲು ವಾಪಸ್ಸು ಅಂತರಿಕ್ಷಕ್ಕೇ ಹೋಗಿಬಿಡುವುದೇ?
ಡಾಕ್ಟರ್ : ನಿನಗೇನೂ ಕೊರೋನಾ ರೋಗ ಇಲ್ಲವಮ್ಮ…. ಬಾಕಿ ಎಲ್ಲಾ ಓ.ಕೆ. ಆದರೆ ನಿನ್ನ ದೇಹದಲ್ಲಿ ನೀರಿನ ಕೊರತೆ ಇದೆ.
ಕಮಲಿ : ಹೌದು ಸಾರ್, ಬಹಳ ದಿನಗಳಿಂದ ಪಾನಿಪೂರಿ ತಿಂದಿಲ್ಲ.
ಮಹೇಶ : ನಮ್ಮ ದೇಶದ ವಿವಾಹಿತ ಸ್ತ್ರೀಯರು ತಮ್ಮ ಪತಿಯಲ್ಲೇ ಪರಮೇಶ್ವರನನ್ನು ಕಾಣುವ ಸಾಧ್ವಿಮಣಿಗಳು, ಎಂಥ ಪತಿಪತ್ರೆಯರು ಗೊತ್ತಾ?
ಸುರೇಶ : ಅದೆಲ್ಲ ಸರಿ, ಆದರೆ ಗಂಡನ ಒಂದು ಮಾತೂ ಒಪ್ಪಿಕೊಳ್ಳದೆ ಸದಾ ಅವನನ್ನು ಗೋಳುಗುಟ್ಟಿಸುವುದು ಯಾಕಂತೆ?
ಪತ್ನಿ : ಡಾಕ್ಟರ್ ನನಗೆ ಕೊರೋನಾ ಇಲ್ಲ, ಆದರೆ ರಕ್ತದ ಕೊರತೆ ಇದೆ ಎಂದು ಹೇಳಿದ್ದಾರೆ. ಹಾಗಾದರೆ ಯಾರ ರಕ್ತ ಕುಡಿಯಲಿ…..?
ಪತಿ : ಅಯ್ಯೋ ದಡ್ಡಿ, ಅಷ್ಟೂ ತಿಳಿಯಲಿಲ್ಲವೇ? ನಮ್ಮ ಮಾನ್ಯ ಪ್ರಧಾನಿ ಹೇಳಿದಂತೆ ನಾವು ಸದಾ ಸ್ವಾವಲಂಬಿಗಳಾಗಿ ಇರಬೇಕು ಎಂಬುದನ್ನು ಮರೆಯಬೇಡ.
ಗುಂಡನಿಗೆ ಸದಾ ಪಕ್ಕದ ಮನೆಯ ಪಂಕಜಾಳನ್ನು ಮಾತನಾಡಿಸುವ ಚಪಲ. ವರ್ಕ್ಫ್ರಂ ಹೋಂ ನೆಪದಲ್ಲಿ ಸದಾ ಮನೆಯಲ್ಲೇ ಬಿದ್ದಿರುತ್ತಿದ್ದ. ಏನೂ ಕಾರಣ ಸಿಗದಿದ್ದರೆ ಪಂಕಜಾಳನ್ನು ಮಾತನಾಡಿಸಲು ಹೀಗೊಂದು ನೆಪ ಹುಡುಕುತ್ತಿದ್ದ.
“ರೀ, ಪಂಕಜಾ….. ದಯವಿಟ್ಟು ನಿಮ್ಮ ಮನೆ ಸ್ಯಾನಿಟೈಸರ್ ಕೊಟ್ಟಿರೀಪ್ಪಾ…. ನಮ್ಮ ಮನೆಯಲ್ಲಿ ಖಾಲಿ ಆಗಿಹೋಗಿದೆ. ಈ ಟೈಮಲ್ಲಿ ನೋಡಿ, ಯಾರೋ ಅತಿಥಿಗಳು ಬಂದುಬಿಟ್ಟಿದ್ದಾರೆ!”
ಮಂಜ : ಛೇ…..ಛೇ! ನನ್ನ ಹೆಂಡತಿ ಜೊತೆ ಏಗಿಏಗಿ ಸಾಕಾಗಿ ಹೋಗಿದೆ. ಸದಾ ಕೋಪದಿಂದ ಸಿಡುಕ್ತಾನೆ ಇರ್ತಾಳೆ ಕಣಯ್ಯ.
ವೆಂಕ : ನನ್ನ ಹೆಂಡತಿಯೂ ಹಿಂದೆಲ್ಲ ಹೀಗೆ ಮಾಡುತ್ತಿದ್ದಳು, ಆದರೆ ಈಗ ಆ ದುರ್ಬುದ್ಧಿ ಬಿಟ್ಟಿದ್ದಾಳೆ.
ಮಂಜ : ಅದೇನಂಥ ಜಾಪಾಳ್ ಮಾತ್ರೆ ಕೊಟ್ಟೆ?
ವೆಂಕ : ಅದೇನಿಲ್ಲ, ಹೀಗೆ ಒಂದು ದಿನ ನನ್ನ ಮೇಲೆ ವಿಪರೀತ ಸಿಡುಕುತ್ತಿದ್ದಳು. ಆಗ ನಾನು ಮೆಲ್ಲಗೆ ಅವಳ ಬಳಿ, `ವಯಸ್ಸು ಹೆಚ್ಚಾದಂತೆ ಹೀಗೆ ಸಿಡುಕಾಟ ಹೆಚ್ಚುತ್ತದೆ ಅಂತ ಡಾಕ್ಟರ್ ಹೇಳ್ತಾರೆ,’ ಅಂದೆ. ಅಂದಿನಿಂದ ನೋಡು ಕಂಪ್ಲೀಟ್ ಗಪ್ಚುಪ್. ನನ್ನನ್ನು ಆವತ್ತಿನಿಂದ ಬೈದಿದ್ದರೆ ಕೇಳು ಅಂತೀನಿ!
ಹೊಸದಾಗಿ ಮದುವೆ ಆಗಿದ್ದ ಅಳಿಯನೊಬ್ಬ ಮೊದಲ ಸಲ ಮಾವನ ಮನೆಗೆ ಹೋಗಿದ್ದ. ಆ ಊರಿನ ತರುಣರ ಎದುರು ತನ್ನ ದರ್ಪ ತೋರಿಸಬೇಕು ಎಂದು ಠೀವಿಯಿಂದ ನಡೆದು ಸೋಮಾರಿ ಕಟ್ಟೆ ಬಳಿ ಕುಳಿತಿದ್ದ ಅವರನ್ನು ಕೇಳಿದ.
“ಈ ಊರಲ್ಲಿ ಎಂಟರ್ಟೇನ್ಮೆಂಟ್ ಅಂತ ಏನೂ ಇಲ್ಲವೇನ್ರಿ?”
ಅದಕ್ಕೆ ಅಲ್ಲಿನ ಒಬ್ಬ ಕಿಡಿಗೇಡಿ ಉತ್ತರಿಸಿದ, “ಒಂದೇ ಒಂದು ಇತ್ತು ಸಾರ್, ಅದನ್ನೂ ನೀವು ಕರೆದುಕೊಂಡು ಹೋಗಿಬಿಟ್ರಿ……!”
ಪ್ರಕಾಶ್ : ಅಲ್ಲ, ಈ ಅವಿವಾಹಿತ ತರುಣರು ಮದುವೆ, ಹೆಂಡತಿ ಅಂದ್ರೆ ಯಾಕೆ ಅಷ್ಟು ಬೆಚ್ಚಿ ಬೀಳುತ್ತಾರೆ? ವಿವಾಹಿತ ಗಂಡಸರ ಜೋಲು ಮೋರೆ ನೋಡಿ ಇರಬಹುದೆ?
ಸತೀಶ್ : ನೀನಿನ್ನೂ ಅವಿವಾಹಿತ, ಹೀಗಾಗಿ ಇಂಥ ಡೈಲಾಗ್ ಹೊಡೆಯುತ್ತಿರುವೆ. ಅದಿರಲಿ, ವಿವಾಹಿತರು ಸದಾ, `ನನ್ನ ಹೆಂಡ್ತಿ ಜೊತೆ ಘನಘೋರ ಜಗಳ ಆಗಿ ಹೋಯಿತು’ ಅಂತಾರಲ್ಲ, ಅದರರ್ಥ ಗೊತ್ತೇ?
ಪ್ರಕಾಶ್ : ಇವನು ತುಂಬಾ ಬಾಯಿ ಮಾಡಿರ್ತಾನೆ, ಅವಳೂ ಸರಿಯಾಗಿ ಜವಾಬು ಕೊಟ್ಟಿರುತ್ತಾಳೆ ಅನಿಸುತ್ತೆ.
ಸತೀಶ್ : ಅಲ್ಲೇ ನೀನು ಎಡವಿದ್ದು…. ಅವಳು ಓತಪ್ರೋತವಾಗಿ ಕ್ಯಾಕರಿಸಿ ಉಗಿದಿದ್ರೆ, ಇವನು ಒರೆಸಿಕೊಳ್ಳುತ್ತಾ ಸಾಕಾಗಿ ತೆಪ್ಪಗೆ ಇರುತ್ತಾನೆ. ಆ ಸಂಕಟ ತಡೆಯಲಾರದೆ ಬಂದು ಸರೀಕರೆದುರು ಹೀಗೆ ಹೇಳಿಕೊಳ್ಳುತ್ತಾನೆ. ಕೇಳಿಸಿಕೊಳ್ಳುವ ಆ ಪ್ಯಾದೆಗಳೂ ವಿವಾಹಿತ ಗಂಡಸರೇ ಆದ್ದರಿಂದ ಯಾರೂ ವಿರೋಧಿಸಲು ಹೋಗೋದಿಲ್ಲ. ಈಗ ನಿನ್ನ ಮೊದಲ ಪ್ರಶ್ನೆಗೆ ಉತ್ತರ ಸಿಕ್ಕಿತೇ…..?
ಗೋಪಾಲ : ಈ ಬ್ಯಾಂಕಿನವರು ತುಂಬಾ ಮೋಸದ ಜನ ಕಣ್ರೀ.
ಗೋವಿಂದ : ಅದ್ಯಾಕೆ ಹಾಗೆ ಹೇಳ್ತೀರಿ?
ಗೋಪಾಲ : ಬ್ಯಾಂಕ್ನ್ನು ನಂಬಿ ನಾವು ಲಕ್ಷ ಲಕ್ಷ ಹಣ ಡೆಪಾಸಿಟ್ ಇಟ್ಟಿರುತ್ತೇವೆ. 5 ರೂ. ಪೆನ್ನಿಗೆ ನಮ್ಮನ್ನು ನಂಬದ ಆ ಜನ ಅದನ್ನು ದಾರದಲ್ಲಿ ಕಟ್ಟಿ ಕೌಂಟರ್ಗೆ ತೂಗುಬಿಟ್ಟಿರುತ್ತಾರಲ್ಲ….?
ಗುಂಡ : ಅಲ್ವೇ, ಒಂದು ದಿನ ಅಕಸ್ಮಾತ್ ನಾನು ತಪ್ಪಿಸಿಕೊಂಡು ಕಣ್ಮರೆ ಆದೆ ಅಂತಿಟ್ಕೊ. ಆಗ ನೀನೇನು ಮಾಡ್ತೀಯಾ?
ಇಂದ್ರಿ : ತಕ್ಷಣ ಪೇಪರ್ನಲ್ಲಿ ಜಾಹೀರಾತು ಕೊಡ್ತೀನಿ.
ಗುಂಡ : ವಾಹ್…. ನನ್ನನ್ನು ಹುಡುಕಿಸಲು ಎಂಥ ಕಾಳಜಿ!
ಇಂದ್ರಿ : ಅದಲ್ಲ…. ವಿಧವೆಯೂ ವಿಚ್ಛೇದಿತೆಯೂ ಅಲ್ಲದವಳನ್ನು ಎರಡನೇ ಮದುವೆ ಆಗಲು ವರ ಬೇಕಾಗಿದ್ದಾನೆ ಅಂತ!
ಪ್ರೈಮರಿ ಶಾಲೆಯ ಕೆಲವು ಪ್ರಶ್ನೆಗಳು ಹೀಗಿದ್ದವು.
ಪ್ರಶ್ನೆ : 15 ಹಣ್ಣುಗಳ ಹೆಸರು ಬರೆಯಿರಿ?
ಉತ್ತರ : ಮೂಸಂಬಿ, ಸೇಬು, ಸಪೋಟ ಮತ್ತು ಒಂದು ಡಜನ್ ಬಾಳೇಹಣ್ಣು.
ಪ್ರಶ್ನೆ : ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ?
ಉತ್ತರ : ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ನಮ್ಮ ಭಾರತ….. ಉಳಿದದ್ದೆಲ್ಲ ವಿದೇಶ!
ಪ್ರಶ್ನೆ : ವಾಸ್ಕೋಡಗಾಮ ಭಾರತಕ್ಕೆ ಯಾಕೆ ಬಂದ?
ಉತ್ತರ : ಹಿಂದಿನ ಬೆಂಚಿನವರನ್ನು ಫೇಲ್ ಮಾಡೋಕೆ.