ಬೆಂಗಳೂರು ಆಗಿರಬಹುದು ಅಥವಾ ದೇಶದ ಯಾವುದೇ ಮಹಾನಗರ ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿವೆ. ಧೂಳಿನ ಮಾಲಿನ್ಯದ ಜೊತೆಗೆ, ದೀಪಾವಳಿ ಹಬ್ಬದ ಪಟಾಕಿಗಳ ಮಾಲಿನ್ಯಕಾರಕ ಹೊಗೆಯು ಅನೇಕ ಜನರಿಗೆ ಅಷ್ಟೇ ಅಲ್ಲ, ಪ್ರಾಣಿಪಕ್ಷಿಗಳಿಗೂ ಕೂಡ ಮಾರಕವಾಗಿರುತ್ತದೆ. ಜಗತ್ತಿನ ಅತ್ಯಂತ ಮಾಲಿನ್ಯಕಾರಕ 10 ನಗರಗಳಲ್ಲಿ ಭಾರತದ ಅನೇಕ ನಗರಗಳು ಕೂಡ ಸೇರಿರುವುದು ಅಪಾಯದ ಸಂಕೇತವೇ ಆಗಿದೆ.

ಯಾವುದೇ ಹಬ್ಬದ ಮಹತ್ವ ಯಾವಾಗ ಹೆಚ್ಚುತ್ತದೆಂದರೆ, ಅದು ಖುಷಿಯನ್ನು ಪಸರಿಸಬೇಕು. ವಾಯು ಮಾಲಿನ್ಯ ಇಡೀ ಜಗತ್ತಿನ ಅತ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ. ಇದು ಬರಲಿರುವ ದಿನಗಳಲ್ಲಿ ಇನ್ನಷ್ಟು ದುಸ್ಥಿತಿಯನ್ನು ಬಿಂಬಿಸಬಹುದು. ನಾವು ನಮ್ಮ ಬರಲಿರುವ ಪೀಳಿಗೆಗಾಗಿ ಸ್ವಚ್ಛ ಗಾಳಿ ಮತ್ತು ಸ್ವಚ್ಛ ನೀರು ಕೊಡಲು ಮಾಲಿನ್ಯ ಕೊನೆಗೊಳಿಸಲು ಪ್ರಯತ್ನಿಸಬೇಕಾಗುತ್ತದೆ.

ಮಾಲಿನ್ಯ ಹೆಚ್ಚಿಸುವ ಪಟಾಕಿಗಳು

ದೀಪಾವಳಿ ಖುಷಿಯ ಹಬ್ಬ. ಆದರೆ ಈ ಹಬ್ಬದ ಒಂದು ದುರದೃಷ್ಟಕರ ಸಂಗತಿಯೆಂದರೆ, ತಮ್ಮ ಖುಷಿಯನ್ನು ಸಂಭ್ರಮಿಸಲು ಜನರು ಪಟಾಕಿ, ಹೂಕುಂಡ, ರಾಕೆಟ್‌ಗಳ ಸಹಾಯ ಪಡೆಯುತ್ತಾರೆ. ಅದರಿಂದಾಗಿ ಹೊಗೆ ಹೊರಹೊಮ್ಮಿ, ಇಡೀ ವಾತಾವರಣದಲ್ಲಿ ಪಸರಿಸಿ, ಜನರಿಗೆ ಅದರ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. ಉಸಿರಾಟಕ್ಕೆ ಸಂಬಂಧಪಟ್ಟ ರೋಗಿಗಳಿಗಂತೂ ಅದು ಇನ್ನಷ್ಟು ತೊಂದರೆಯನ್ನುಂಟು ಮಾಡುತ್ತದೆ. ಮಕ್ಕಳಿಗೂ ಅದು ತೊಂದರೆ ತರುತ್ತದೆ.

ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳ ಹೊರತಾಗಿ, ಪಟಾಕಿಗಳ ತೀವ್ರ ಸದ್ದು ಕಿವಿಗಳಿಗೂ ಹಾನಿಯನ್ನುಂಟು ಮಾಡುತ್ತದೆ. ಅದನ್ನು `ಧ್ವನಿ ಮಾಲಿನ್ಯ’ ಎಂದು ಹೇಳಲಾಗುತ್ತದೆ. ಅದೇ ಕಾರಣದಿಂದ ಆಸ್ಪತ್ರೆಗಳು ಹಾಗೂ ಶಾಲೆಗಳನ್ನು `ಸೈಲೆನ್ಸ್ ಝೋನ್‌’ ಆಗಿ ಪರಿವರ್ತಿಸಲಾಗಿದೆ. ಅಲ್ಲಿ ಜೋರಾಗಿ ಹಾರ್ನ್‌ ಬಾರಿಸಲು ನಿರ್ಬಂಧ ಹೇರಲಾಗಿರುತ್ತದೆ.

ದಾರಿಯಲ್ಲಿ ಯಾರಾದರೂ ತೀವ್ರ ಶಬ್ದವನ್ನುಂಟು ಮಾಡುವ ಪಟಾಕಿಗಳು, ಆಟಂಬಾಂಬ್‌ಗಳನ್ನು ಹಾರಿಸುತ್ತಿದ್ದರೆ, ದಾರಿಹೋಕರು ತಮ್ಮ ಮುಖವನ್ನು ಬೇರೆ ಕಡೆ ತಿರುಗಿಸಿ, ಕಿವಿಯ ಮೇಲೆ ಕೈ ಇಟ್ಟುಕೊಂಡು ನಿಂತಿರುತ್ತಾರೆ. ಇದರರ್ಥ ಅವರಿಗೆ ಈ ತೀವ್ರ ಸದ್ದು ಇಷ್ಟವಾಗುವುದಿಲ್ಲ ಎನ್ನುವುದಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಸದ್ದು ಕಿವಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ.

ಯೋಚಿಸಬೇಕಾದ ಸಂಗತಿಯೆಂದರೆ, ನಮ್ಮ ಕಿವಿಗಳಿಗೆ ಹಿತ ಎನಿಸಿದ್ದು, ಬೇರೆಯವರಿಗೆ ಹೇಗೆ ಹಿತ ಎನಿಸಲು ಸಾಧ್ಯ? ಹೀಗಾಗಿ ತೀವ್ರ ಶಬ್ದವನ್ನುಂಟು ಮಾಡುವ ಪಟಾಕಿಗಳನ್ನು ಹಚ್ಚಬಾರದು. ಪಟಾಕಿ ಹಚ್ಚುವವರಿಗಷ್ಟೇ ಅದು ಹಾನಿಯುಂಟು ಮಾಡುವುದಿಲ್ಲ. ಅದು ತಯಾರಿಸುವವರಿಗೂ ಹಾನಿಯನ್ನುಂಟು ಮಾಡುತ್ತದೆ. ಪಟಾಕಿಯಲ್ಲಿ ಮದ್ದನ್ನು ಬಳಸಲಾಗುತ್ತದೆ. ತಯಾರಿಕೆಯ ಹಂತದಲ್ಲಿ ಅದು ಕಾರ್ಮಿಕರ ಕೈಗಳಿಗೆ ಹಾನಿ ಉಂಟು ಮಾಡುತ್ತದೆ. ಇದರ ಹೊರತಾಗಿ ಆ ಮದ್ದು ಮೂಗಿನ ದಾರಿಯಲ್ಲಿ ಶ್ವಾಸಕೋಶದ ತನಕ ತಲುಪಿದರೆ, ಅದು ಗಂಭೀರ ರೋಗಕ್ಕೆ ತುತ್ತಾಗಿಸುತ್ತದೆ.

ದೀಪಾವಳಿಯ ಖುಷಿ ಆಚರಿಸುವ ಮತ್ತೊಂದು ವಿಧಾನವೆಂದರೆ, ವಿದ್ಯುತ್‌ ಮೂಲಕ ಬೆಳಕನ್ನುಂಟು ಮಾಡುವುದು. ಅದಕ್ಕಾಗಿ ಜನರು ಭಾರಿ ಸಂಖ್ಯೆಯಲ್ಲಿ ವಿದ್ಯುತ್‌ ಸರಮಾಲೆ, ಬಲ್ಬ್, ಇತರೆ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಬೇರೆಯವರನ್ನು ನೋಡಿ ಸ್ಪರ್ಧೆಗೆ ಬಿದ್ದವರಂತೆ ತಮ್ಮ ಮನೆಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುತ್ತಾರೆ.

ಅದರಿಂದಾಗಿ ವಿದ್ಯುದ್ದೀಪದ ಖರ್ಚು ಹೆಚ್ಚುತ್ತದೆ. ಇದೆಲ್ಲದರಿಂದಾಗಿ ವಿದ್ಯುತ್‌ ವಿತರಣೆಯಲ್ಲಿ ಬಹಳಷ್ಟು ವ್ಯತ್ಯಯ ಬರುತ್ತದೆ. ಆಸ್ಪತ್ರೆ, ರೈಲು ನಿಲ್ದಾಣಗಳಿಗೆ ವಿದ್ಯುತ್‌ ಕೊರತೆ ಉಂಟಾದರೆ ಸಾಕಷ್ಟು ಸಮಸ್ಯೆಗಳುಂಟಾಗುತ್ತವೆ.

ರಂಗೋಲಿಯಲ್ಲಿ ನೈಸರ್ಗಿಕ ಬಣ್ಣ

ರಂಗೋಲಿ ಹಾಕಲು ನೈಸರ್ಗಿಕ ವಸ್ತುಗಳು ಅಂದರೆ ಹೂ ಹಾಗೂ ಎಲೆಗಳನ್ನು ಬಳಸಬಹುದು. ಅಕ್ಕಿಯನ್ನು ಬಣ್ಣವಾಗಿಸಲು ಅರಿಶಿನದ ಉಪಯೋಗ ಮಾಡಿ. ಹಸಿರು ವರ್ಣಕ್ಕಾಗಿ ಎಲೆಗಳನ್ನು ಬಳಸಿ. ಎಲೆಗಳನ್ನು ಅತ್ಯಂತ ಸಣ್ಣ ಸಣ್ಣ ತುಂಡುಗಳಾಗಿಸಿಕೊಂಡು, ಅದನ್ನು ರಂಗೋಲಿಗೆ ಆಕರ್ಷಕ ರೂಪ ಕೊಡಲು ಬಳಸಿಕೊಳ್ಳಬಹುದು. ಅದೇ ರೀತಿ ಬೇರೆ ಬೇರೆ ಬಣ್ಣಗಳಿಗೆ ಹೂಗಳನ್ನು ಚಿಕ್ಕದಾಗಿ ಪುಡಿ ಮಾಡಿಕೊಂಡು ಬಳಸಿಕೊಳ್ಳಬಹುದು.

ಪರಿಸರಸ್ನೇಹಿ ದೀಪಾವಳಿ ಹಬ್ಬ ಆಚರಿಸಲು ಕೃತಕ ಬಣ್ಣಗಳನ್ನು ದೂರವಿಡಿ. ಈ ತೆರನಾದ ಬಣ್ಣಗಳಿಗೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅದು ಆರೋಗ್ಯಕ್ಕೆ ಹಾನಿಕರಾಗಿರುತ್ತದೆ.

ರಂಗೋಲಿ ಕಲಾವಿದೆ ರತ್ನಾ ಹೀಗೆ ಹೇಳುತ್ತಾರೆ, ನೈಸರ್ಗಿಕ ಬಣ್ಣಗಳಿಂದ ಆಕರ್ಷಕ ಹಾಗೂ ಯಾವುದೇ ಹಾನಿಯುಂಟು ಮಾಡದ ರಂಗೋಲಿ ರೂಪಿಸಬಹುದು. ರಂಗೋಲಿಯಲ್ಲಿ ಅದರ ಡಿಸೈನ್‌ ಮತ್ತು ಬಣ್ಣಗಳ ಬಳಕೆಯೇ ಮಹತ್ವದ್ದಾಗಿರುತ್ತದೆ. ಇತ್ತೀಚೆಗೆ ಬಹಳಷ್ಟು ಬಗೆಯ ಹೂಗಳು ಲಭ್ಯವಾಗುತ್ತಿದ್ದು, ಬಣ್ಣ ಬಣ್ಣದ ರಂಗೋಲಿ ಹಾಕಬಹುದಾಗಿದೆ.

ಈ ರೀತಿಯ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಪರಿಸರಸ್ನೇಹಿ ದೀಪಾವಳಿ ಆಚರಿಸಬಹುದಾಗಿದೆ. ಅದೇ ರೀತಿ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸುವಾಗ ಅದರಲ್ಲಿ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಯಾವುದೇ ಸಾಮಗ್ರಿ ಬಳಸಬೇಡಿ.

– ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ